ಬುಧವಾರ, ಅಕ್ಟೋಬರ್ 26, 2022

ಬತ್ತೀಸಪುತ್ತಳಿ ಕಥೆ.-ಭಾಳಲೋಚನ

 PDF at 

https://archive.org/details/of-battisa-puttali-kathe-of-bhala-lochana-ed.-ramanuja-iyengar-m.-a.-1909


ಭಾಳಲೋಚನ ವಿರಚಿತ


ಬತ್ತೀಸಪುತ್ತಳಿ ಕಥೆ.




ಕೈಲಾಸವಾಸಿ ಕಪಾಲಪಾಣಿಯಾದ ಪರಶಿವನಾದ ಮೂರ್ತಿಯೂ 

ಪಾರ್ವತಿದೇವಿಯೂ ಲೀಲಾವಿನೋದಲ್ಲಿ ಇರುವಂಥ ವೇಳೆಯಲ್ಲಿ ಗಿರಿ 

ಜಾತೆ ಇಂತೆಂದಳು - ದೇವಾಧಿದೇವನಾದ ಮಹಾದೇವನೇ ನನಗೊಂದು 

ಅಪೂರ್ವವಾದ ಕಥೆಯನ್ನು ನಿರೂಪಿಸುವುದೆಂಬುದಾಗಿ ಬಿನ್ನಹಂಗೆಯ್ದು 

ಶ್ರುತಪಡಿಸಲಾಗಿ, ಆ ಗಿರಿಜಯ ವಾಕ್ಕಿಗೆ ಪರಶಿವನು ಪರಿಶಾಮಚಿತ್ತದಿಂದ 

ಇಂತೆಂದನು, 'ಅಹೋ ಪಾರ್ವತಿಯೇ, ಲಾಲಿಸು ಭುವನ ಬ್ರಹ್ಮಾಂಡ 

ದಲ್ಲಿ ಯಾರೂ ಅರೆಯದೆ ಅತಿಶಯವಾಗಿರುವಂದ ಬತ್ತೀಸಪುತ್ತಳಿ ಕಥೆ 

ಗಳನ್ನು ಅರುಹುವೆನು. ನೀನು ಏಕಚಿತ್ತದಲ್ಲಿ ಕೇಳು ಎಂದು ಹೇಳಿದು 

ದಕ್ಕೆ ಜಗದಂಬಿಕೆಯಾದ ಶ್ರೀಗೌರಿ ಮಹಾಪ್ರಸಾದ ನಿರೂಪಿಸಿ ಎನ್ನಲಾಗಿ, 

ಮಹೇಶನು ಇಂತೆಂದನು


ಕಾಂಭೋಜದೇಶದಲ್ಲಿ ಇರುವ ಉಜ್ಜನಿ ಪಟ್ಟಣದ ರಾಜ್ಯಭಾರವನ್ನು 

ಚಂದ್ರಗುಪ್ತರಾಯನು ಸುಖದಿಂದಾಳುತ್ತ ಇರುವಲ್ಲಿ, ಆತನಿಗೆ ಪುತ್ರರಿಲ್ಲದೆ 

ಒಬ್ಬ ಮಾರಿಕಾದೇವಿ ಎಂಬ ಮಗಳು ಇರಲಾಗಿ, ಆ ಮಗಳು ಯೌವನಸ್ಥೆ 

ಯದದುರಿಂದ ಆ  ರಾಯನು ಆಳೋಚಿಸಿದನು ಈ ಮಗಳನ್ನು ರಾಜ 

ಕುಮಾರರಿಗೆ ಕೊಟ್ಟು ವಿವಾಹವಂ ಮಾಡಿದರೆ ತನಗೆ ಸದ್ಗತಿಯಿಲ್ಲವೆಂದು 

ಅರಿತ. ಒಬ್ಬ ವಿಪ್ರಕುಮಾರನಿಗೆ ಕೊಟ್ಟರೆ ಮುಕ್ತಿಯುಂಟೆಬುದಾಗಿ ತಿಳಿ 

ದವನಾಗಿ, ತನ್ನ ಮಂತ್ರಿಯನ್ನು ಕರೆಸಿ ಇಂತೆಂದನು. ನನ್ನ ಮಗಳಿಗೆ 

ತಕ್ಕ ವರವಾದಂಥ ಒಬ್ಬ ದ್ವಿಜಸುತನ ನೋಡಿ ಕರೆದುಕೊಂಡು ಬರಹೇಳ 

................


* ಈ ಪೀಠಿಕೆಯ ಭಾಗವು ಒಂದು ಪ್ರತಿಯಲ್ಲಿ ಮಾತ್ರ ಇರುವುದು.



೨------------------------------------ಕರ್ಣಾಟಕ ಕಾವ್ಯಕಲಾನಿಧಿ.


ಲಾಗಿ; ಆ ಪ್ರಧಾನನು-ಒಳ್ಳೆಯದು ಎಂಬುದಾಗಿ ಅರಮನೆಯಿಂದ ಹೊರಗೆ 

ಬಂದು, ಆ ಪಟ್ಟಣದ ಬ್ರಾಹ್ಮಣರ ಮನೆಗಳಲ್ಲಿ ಹೋಗಿ ನೋಡುತ್ತ ಇರು 

ವಲಿ, ಅಲೋರ್ವ ಗೋವಿಂದಭಗವಾನ್‌ ಎಂಬ ವಿಪ್ರನು ಸಕಲ ಶಾಸ್ತ್ರ 

ಮುಂತಾದ ಚೌಷಷ್ಟಿವಿದ್ಯಾಕಳಾಪ್ರವೀಣನೆಂಬುದನ್ನು  ಕೇಳಿ, ನೋಡಿ, ತಿಳಿ 

ದುಕೊಂಡವನಾಗಿ, ಆ ಗೋವಿಂದಭಗವಾನನೊಡನೆ ಇಂತೆಂದನು- ಕೇಳೈ 

ಯ್ಯಾ ಭೂಸುರೋತ್ತಮನೇ ! ನಿನ್ನನ್ನು ನಮ್ಮ ರಾಯನು ಕರೆತರಹೇಳಿ 

ಕಟ್ಟು ಮಾಡಿಸಿ ಇದ್ದಾನೆ, ಬಾರೆಂದು, ಮಂತ್ರಿಯು ತನ್ನ ಸಂಗಾತ ಕರೆದು 

ಕೊಂಡು ಬಂದು ರಾಯನ ಸಮ್ಮುಖದಲ್ಲಿ ನಿಲ್ಲಿಸಲಾಗಿ, ಆ ರಾಯನಿಗೆ ಆ 

ಗೋವಿಂದಭಗವಾನನು ಅಶೀರ್ವಾದಮಂ ಮಾಡಿದನು.


* ... ... ... ...


ಎಂದು ಆಶೀರ್ವಾದಂಗೆಯ್ದುದು ಕೇಳಿ, ಆ ರಾಯಂ ಮಹಾಹರು 

ಪವಂ ತಾಳಿ ಇಂತಂದನು -ಎಲೈ ಗೋವಿಂದಭಗವಾನನೆ, ನಿನ್ನ ಯೋಗ್ಯ 

ತೆಗೆ ನಮ್ಮ ಮಗಳ ಕೊಟ್ಟು ಮದುವೆಯ ಮಾಡಿ ಕೊಟ್ಟೇವು. ನಿನ್ನಿಂದ 

ನಮ್ಮ ರಾಜ್ಯವುಳಿದು ನಮಗೆ ಸದ್ಗತಿಯಾಗಬೇಕು- ಎಂದ ಮಾತಿಗೆ ಅವನಿಂ 

ತೆಂದನು -ನಾನು ಬ್ರಾಹ್ಮಣನು ನಿತ್ಯವೂ ಕರ್ಮಾನುಷ್ಟಾನುವನ್ನು ಮಾಡಿ 

ಕೊಂಡು ಸುಖವಾಗಿ ಇದ್ದೇನೆ. ಸ್ತ್ರೀಯೆಂಬುವುದು ಪುರುಷನಿಗೆ ಬಂಧ 

ನವಾದುದರಿಂದ ನನಗೆ ಭೀತಿಯಾಗುತ್ತಿದೆ ಎಂದ ಮಾತಿಗೆ ಆ ರಾಯನ 

ಪ್ರಧಾನನಿಂತೆಂದನು - ಕೇಳೈಯ್ಯಾ ವಿಪ್ರೋತ್ತಮನೇ ! ಗೃಹಸ್ಥಾಶ್ರಮವಿ 

ಲ್ಲದವನಿಗೆ ಸಾಯುಜ್ಯವಿಲ್ಲ; ಅದು ನಿಮಿತ್ತ ಗೃಹಸ್ಥಾಶ್ರಮವೇ ಅಧಿಕ 

ವೆಂಬುದಾಗಿ ಅನೇಕವಿಧದಿಂದ ಬೋಧಿಸಿ, ಒಪ್ಪಿಸಿದ ಬಳಿಕ, ಆ ರಾಯನು 

ತನ್ನ ತನುಜೆ ಮಾಲಿಕಾದೇವಿಯನ್ನು ಕೃಷ್ಣಾರ್ಪಣವೆಂದು ಧಾರೆಯನ್ನೆ 

ರೆದು ವಿವಾಹವಂ ಮಾಡಿ, ಸಕಲರಿಗೂ ಭೂರಿಯಂ ಕೊಟ್ಟು, ಚತುರ್ಥದಿನ 

ದಮೇಲೆ ಸತಿಪತಿಗೆ ಬೇಕಾದುದೆಲ್ಲವನ್ನು ಕೊಟ್ಟು ಆತನ ಮನೆಗೆ ಕಳುಹಿ 

ಸಲಾಗಿ; ಆತನು ತನ್ನ ಗೃಹಕ್ಕೆ ಬಂದು ಆಲೋಚಿಸಿದನು - ಸ್ವಜಾತಿ 

................

* ಸುರರೇರಿಪುಭೃತ್ಯಾಸ್ಯಗುರುತಾಪಿತ್ತವಾಹನಾ | 

...........ಕಾತಂತಿಶಿರೋಜವಃ || ಎಂಬ ಅಶುದ್ಧವಾದ ಒಂದು

ಪದ್ಯ ಈ ಕಡೆ ಇದೆ.



ಬತ್ತೀಸಪುತ್ಥಳಿ ಕಥೆ.------------------------------------------------೩


ಸ್ತ್ರೀಯಿಲ್ಲದೆ ಇರುವುದರಿಂದ ಯೋಗ್ಯತೆ, ಗತಿಯಿಲ್ಲವೆಂದು ತನ್ನಲ್ಲಿ 

ತಾನೇ ತಿಳಿದುಕೊಂಡವನಾಗಿ, ಆ ಪಟ್ಟಣದ ಹೇಮವರ್ಮನೆಂಬ ಬ್ರಾಹ್ಮ 

ಣನ ಮಂದಿರಕ್ಕೆ ಹೋಗಲಾಗಿ, ಆ ಮನೆಯ ವಿಪ್ರನು ಕಂಡೆದ್ದು ಮನ್ನ 

ಣೆಯಿಂದ ಕುಳ್ಳಿರಿಸಿಕೊಂಡು ಇಂತೆಂದನು --ನೀವು ಸರ್ವಶಾಸ್ತ್ರಜ್ಞರು. 

ರಾಯನ ಅಳಿಯಂದಿರು. ಏನು ಕಾರಣಾರ್ಥವಾಗಿ ದಯೆಮಾಡಿದಿರಿ ? - 

ಎಂಬುದಾಗಿ ಬೆಸಕೊಳ್ಳಲಾಗಿ, ಆ ಗೋವಿಂದಭಗವಾನನು ಇಂತೆಂದನು : 

ಕೇಳಿರೈಯ್ಯಾ, ಕನ್ಯಾರ್ಥಿಯಾಗಿ ನಾನು ನಿಮ್ಮಾಲಯಕ್ಕೆ ಬಂದೆನು ಎಂದು 

ಪೇಳಿದ ಮಾತ ಕೇಳಿ, ತನ್ನ ತಾನೇ - ಈತನಿಗೆ ತನ್ನ ತನುಜೆ ಹೇಮವರ್ಣಿ 

ನಿಯನ್ನು ಕೊಟ್ಟರೆ ಇದದಲ್ಲಿ ಸುಖ, ಪರದಲ್ಲಿ ಮೋಕ್ಷವಾಗುವುದೆಂದು 

ಅರಿತವನಾಗಿ, ಆ ಕ್ಷಣವೇ - ಮನೆಯ ವಿಪ್ರನು ಗೋವಿಂದಭಗವಾನನ 

ಪಾದಾರ್ಚನೆಯಂಗೆಯ್ದು ತನ್ನ ಪುತ್ರಿ ಹೇಮವರ್ಣಿನಿಯ ಧಾರೆಯೆರೆದನು.


ಚತುರ್ಥದಿನವಾದ ಬಳಿಕ ಆ ಹೇಮವರ್ಣಿನಿಯನ್ನು ಕರೆದುಕೊಂ 

ಡು ಗೋವಿಂದಭಗವಾನನು ತನ್ನಯ ಗೃಹಕ್ಕೆ ಹೋಗಿ ನಿತ್ಯದಲ್ಲೂ ಕೃ 

ತ್ಯವಂ ನಡೆಸಿಕೊಂಡು ಸುಖವಾಗಿ ಇರುತ್ತಿರುವ ಕಾಲದಲ್ಲಿ- ಆ ಪಟ್ಟಣದ 

ಲೊರ್ವ ರತ್ನ ಪಾಲನೆಂಬ ವೈಶ್ಯನು ದ್ರವ್ಯಸಂಪನ್ನನಾಗಿ ತನ್ನ ವೃತ್ತಿ ವಾಣಿ 

ಜದಲ್ಲಿ ಇರುತ್ತಿಹನು. ಆ ಸೆಟ್ಟಿಗೆ ಒಬ್ಬಳು ರತ್ನಳಿಕೆಯೆಂಬ ಸುತೆ 

ಯಿಹಳು. ಮದುವೆಗೆ ಒದಗಿದವಳಂ ಕಂಡು ಆ ವೈಶ್ಯನು ತನ್ನ ಮನದಲ್ಲಿ 

ಯೋಚಿಸಿಕೊಂಡು ಈ ಮಗಳನ್ನು ಒಬ್ಬ ಬ್ರಾಹ್ಮಣೋತ್ತಮಂಗೆ ಕೊ 

ಟ್ಟರೆ ರೆ ಆತನ ಸುಚರಿತೆಯಿಂದ ನನಗೆ ಮೋಕ್ಷವುಂಟಾಗುವುದು ಎಂದು ತಿಳಿ 

ದು, ಗೋವಿಂದಭಗವಾನನು ವಿಪ್ರಶ್ರೇಷ್ಠನೆಂಬುದಂ ಕೇಳಿದ್ದ ಕಾರಣ, ಆತನ 

ಮನೆಗೆ ಹೋಗಿ, ಆತನಿಗೆ ನಮಸ್ಕರಿಸಿ, ಇಂತೆಂದನು - ಸ್ವಾಮಿ! ನನ 

ಗೊಬ್ಬಳು ಸುತೆಯಿರುವಳು. ಅವಳ ನೀವು ಅಂಗೀಕರಿಸಿಕೊಂಡು ನನಗೆ 

ಮುಕ್ತಿಸಾಧನವಂ ಮಾಡಬೇಕೆಂಬುದಾಗಿ, ನಾನಾಬಗೆಯಲ್ಲಿ ಹೇಳಿ ಬೇಡಿ, 

ಶರಣಾಗತನಾಗಲಾಗಿ, ಒಪ್ಪಿಕೊಂಡನು. ಆ ಬಳಿಕ ವೈಶ್ಯನು ತನ್ನ ಮನೆಗೆ 

ಹೋದನು.


ಈತನು ತನ್ನ ಅನುಷ್ಠಾನವಂ ಮಾಡಿಕೊಂಡು ಇರುವಲ್ಲಿ, ಒಂದು 

ದಿನ ಪುರಾಣಾಗಮವ ನೋಡುತ್ತಿರುವ, ನಾಲ್ಕು ಜಾತಿ ನಾರಿಯರ ಮದು



೪ -------------------------------------------ಕರ್ಣಾಟಕ ಕಾವ್ಯಕಲಾನಿಧಿ.


ವೆಯಾಗಬಹುದೆಂದು ಹೇಳಿರುವುದು ಕಂಡು ತನಗೆ ಮೂಲಜಾತಿ ಸತಿಯ 

ರಿಹರು. ಶೂದ್ರ ಜಾತಿ ಯಳಾಗಬೇಕು ಎಂದು ಯೋಚಿಸಿಕೊಂಡು, 

ಆಗ ಆ ಪಟ್ಟಣದಲ್ಲಿರುವ ಕ್ಷೇತ್ರ ಪಾಲನೆಂಬ ಶೂದ್ರನ ಮನೆಗೆ ಹೋದನು. 

ಆ ಕ್ಷೇತ್ರಪಾಲನು ಕಂಡು ಎದ್ದು ಎದುರುಗೊಂಡು ಒಂದು ಕರೆದುಯ್ದು 

ಮರ್ಯಾದೆಯಿಂದ ಕುಳ್ಳಿರಿಸಿಕೊಂಡು ಇಂತೆಂದನು -ನೀವು ಏನುಬಗೆ ಬಂ 

ದಿರಿ ?-ಎಂದು ಬೆಸಕೊಳ್ಳಲಾಗಿ, ಈ ಮಾತಿಗೆ-ಕಾನ್ಯಾರ್ಥಿಯಾಗಿ ನಾವು 

ಬಂದೆನೆಂದು ಹೇಳಲಾಗಿ ನಾನು ಧನ್ಯನಾದೆನೆಂದು ಆಗಳೇ ತನ್ನ ಮಗಳಾದ 

ಸುವರ್ಣಿಕೆಯನ್ನು ಧಾರೆಯೆಂದು ಕೊಟ್ಟನು. ಚತುರ್ದಿನದಮೇಲೆ 

ಅಲ್ಲಿಂದ ಸುವರ್ಣಿಕೆಯ ಕರೆದುಕೊಂಡು ತನ್ನ ಆಲಯಕ್ಕೆ ಹೋಗಿ, ತನ್ನ 

ಕೃತ್ಯಾದಿಗಳನಾಚರಿಸಿಕೊಂಡು, ಪರಿಣಾಮದಲ್ಲಿ ಕೂಡಿಕೊಂಡಿರುತ್ತಿರು 

ವಲ್ಲಿ, ಕೆಲವು ಕಾಲವಾದ ಬಳಿಕ ಆ ಚತುರ್ಜಾತಿ ಸತಿಯರಿಗೂ ಗರ್ಭೋ 

ತ್ಪತ್ತಿಯಾಗಿ ನಾಲ್ಲರಿಗೂ ಪುತ್ರ ಸಂತಾನವಾಯಿತು. *


ಇಂತು ಪೀಠಿಕೆ.


ಕಾಂಭೋಜ ದೇಶದಲ್ಲಿ ಉಜ್ಜಿನಿಯೆಂಬ ಪಟ್ಟದಲ್ಲಿ ಗೋವಿಂದ 

ಭಗವಾನನು ಎಂಬ ಬುಧನಿದ್ದನು. ಆ ಬ್ರಾಹ್ಮಣನು ಬ್ರಹ್ಮ ಕ್ಷತ್ರಿಯ 

ವೈಶ್ಯ ಶೂದ್ರ ಇವು ನಾಲ್ಕು ಜಾತಿಯಲ್ಲಿ ವಿವಾಹವಾಗಿ ಆ ಸ್ತ್ರೀಯರಿಗೆ 

ಪುತ್ರಸಂತಾನವಾಗಿ, ಆ ಪುತ್ರರ ಹೆಸರೇನೆಂದರೆ -ಬ್ರಾಹ್ಮಣ ಸ್ತ್ರೀಯಲ್ಲಿ 

ಜನಿಸಿದನು ವರರುಚಿ, ಕ್ಷತ್ರಿಯ ಸ್ತ್ರೀಯಲ್ಲಿ ಉದಿಸಿದವರು ವಿಕ್ರಮ, 

ವೈಶ್ಯಸ್ತ್ರೀಯಲ್ಲಿ ಉತ್ಪತ್ತಿಯಾದವನು ಭಟ್ಟ, ಶೂದ್ರಯಲ್ಲಿ ಹುಟ್ಟಿ 

ದವನು ಭರ್ತೃಹರಿ.  ಈ ನಾಲ್ಕು ಮಕ್ಕಳು ಸಹಿತವಾಗಿ ಸುಖ 

ದಿಂದ ಇರುವಲ್ಲಿ,  ಆ ಬ್ರಾಹ್ಮಣರಿಗೆ ಅವಸಾನಕಾಲ ಸಮೀಪಿಸಲಾಗಿ, ಒಂ

ದಾನೊಂದು ದಿವಸ ಮಕ್ಕಳ ಕರೆದು ಕುಳ್ಳಿರಿಸಿಕೊಂಡು, ಬ್ರಾಹ್ಮಣಸ್ತ್ರೀಗೆ 

ಹುಟ್ಟಿದ ವರರುಚಿಯನ್ನು ಕರೆದು ಎಲೈಸುಪುತ್ರನೇ ! ನೀನು ಶಾಸ್ತ್ರ 

ಗಳನೋದಿಕೊಂಡು ರಾಜರುಗಳ ಬಳಿಯಲ್ಲಿ ಪ್ರಸಂಗವ ಮಾಡಿಕೊಂಡು 

ಇರು ಎಂದು ನೇಮಿಸಿ, ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದ ವಿಕ್ರಮನಂ ಕರೆದು, 

-ಎಲೈ ಕುಮಾರನೇ, ನೀನು ವಿಂಧ್ಯಪರ್ವತದಲ್ಲಿ ಈಶ್ವರನ ಕುರಿತು ತಪಸ್ಸಂ 




-----------------ಬತ್ತೀಸ ಪುತ್ಥಳಿ ಕಥೆ.-----------------------------೫


ಮಾಡಿ ಸಕಲ ಇಷ್ಟಾರ್ಥಮಂ ಪಡೆದು, ಈ ಉಜ್ಜಿನಿ ಪಟ್ಟಣದ ರಾಜ್ಯಭಾ 

ರಮಂ ಮಾಡೆಂದು ಕಟ್ಟಳೆಯಂ ಮಾಡಿ, ಅಬಳಿಕ ವೈಶ್ಯನಿಗೆ ಹುಟ್ಟಿದ 

ಭಟ್ಟಿಯಂ ಕರೆದು-ಎಲೈ ತನುಜನೆ, ನೀನು ವಿಕ್ರಮನ ಬಳಿಯಲ್ಲಿ ಮಂತ್ರಿ 

ತನವ ಮಾಡಿಕೊಂಡು ಇರು ಎಂದು ಬುದ್ದಿಗಲಿಸಿ, ಆಮೇಲೆ ಶೂದ್ರಸ್ತ್ರೀಗೆ 

ಮಗನಾದ ಭರ್ತೃಹರಿಯಂ ಕರೆದು-ಎಲೈಮಗನೇ, ನೀನು 1ಮಲಯ1 

ಪರ್ವತದಲ್ಲಿ ಶಿವನ ಕುರಿತು ತಪಸ್ಸ ಮಾಡಿ ಮುಕ್ತಿಯಂ ಪಡೆ ಎಂದು 

ನಾಲ್ವರಿಗೂ ಪೇಳಿ, ಆತ 2ಮರಣಹೊಂದಲಾಗಿ2 ; ಆ ಕುಮಾರರು ತಂದೆಗೆ 

ಉತ್ತರಕ್ರಿಯೆಗಳು ಮಾಡಿದರು,


ಆ ಬಳಿಕ ತಂದೆಯ ಅನುಗ್ರಹದಮೇರ ವಿಕ್ರಮನು ವಿಂಧ್ಯಪರ್ವ 

ತದಲ್ಲಿ ಈಶ್ವರನಂ ಕುಳಿತು ತಪಸ್ಸಂ ಮಾಡಲು, ಈಶ್ವರನು ಪ್ರಸನ್ನ 

ನಾಗಿ-ಎಲೈ ರಾಯನೇ, ನಿನ್ನ ಭಕ್ತಿಗೆ ಮೆಚ್ಚಿದೆನು, ವರವ ಬೇಡು, 

ಎನ್ನಲು ; ಎಲೈ ದೇವನೆ, ನನಗೆ ಧೈರ್‍ಯ , ಸಾಹಸ, ಪರಾಕ್ರಮ, 

ಔದಾರ್‍ಯ, ಮೊದಲಾದ ಮಹದೈಶ್ವರವ ಕೊಟ್ಟು ರಕ್ಷಿಸಬೇಕು ಎನ್ನಲಾಗಿ; 

ಈಶ್ವರನು ಕರುಣಚಿತ್ತನಾಗಿ ಅದೇಪ್ರಕಾರಕ್ಕೆ ಕರುಣದಿಂ ಆ ವರವ ಕೊಟ್ಟು 

ಕೈಲಾಸಶಿಖರಕ್ಕೆ ಹೋದನು.


ಇತ್ತಲು ವಿಕ್ರಮನು ಉಜ್ಜಿನಿಪಟ್ಟಣಕ್ಕೆ ಬಂದು ರಾಯನಾಗಿ, ಮಹ 

ದೈಶ್ವರ್‍ಯ ತೇಜಸ್ಸಿನಿಂದ ಭಟ್ಟಿ ಸಮೇತನಾಗಿ ಕೆಲವು ಕಾಲ ರಾಜ್ಯವನಾಳು 

ತಿರ್ದು, ಆ ಬಳಿಕ ದೇರಾಧಿಪತಿಗಳಾದ ದೊರೆಗಳ ಮೇಲೆ ದಿಗ್ವಿಜಯಕ್ಕೆ 

ಹೊರಟು, ದೊರೆಗಳಂ ಜಯಿಸಿ, ನವರತ್ನ ಧನಕನಕ ವಾಹನಾದಿಯಾಗಿ 

ಮಹಾ ಬಿರುದುಗಳ ತೆಗೆದುಕೊಂಡು, ಪರಾಕ್ರಮದಿಂದ ಸೇನೆ ಸಹಿತ ಪುರು 

ಹೂತನಂತೆ ತನ್ನ ಉಜ್ಜಿನಿ ಪಟ್ಟಣಕ್ಕೆ ಬಂದು ರಾಜ್ಯವನಾಳುತಿರ್ದು, ಪುನಃ 

ಅಮೇಲೆ ಸೂರನ ಬಳಿಗೆ ಹೋಗಿ 3ಅಯುಷ್ಯಮಂ3 ಪಡೆಯಬೇಕೆಂದು 

ರಥಾರೂಢನಾಗಿ ಹೊರಟು ಪರಾಕ್ರಮದಿಂ ಲಕ್ಷಯೋಜನದಲ್ಲಿರುವ ಸೂ 

ರ್‍ಯನಂ ಕಂಡು, ಆತನ ಪಾದಗಳಿಗೆ ನಮಿಸಿ ನುತಿಸಲು, ದಿವಾಕರನಾದ ಆದಿ 

ತ್ಯನಾರಾಯಣನು ಪ್ರಸನ್ನಮೂರ್ತಿಯಾಗಿ ಇಂತೆಂದನು --ಎಲೈ ರಾಯ! 

ನಿನ್ನ ಮನೋಭೀಷ್ಟ ತಿಳಿಯಿತು. ಸಿಂಹಾಸನಾರೂಢನಾಗಿ ಸಾವಿರ ವರುಷ 

................

1. ಮಾಲ್ಯ, 2. ದೇವರಯಾತ್ರೆಯ ಮಾಡಲಾಗಿ, 3. ಆಯುಷ್ಯಕೀರ್ತಿಯಂ 



೬--------------------------------------------ಕರ್ಣಾಟಕ ಕಾವ್ಯಕಲಾನಿಧಿ.


ರಾಜ್ಯವನಾಳೆಂದು ಪರಸಿ, ಮತ್ತು ತನ್ನ ಅಂಕಿತ ನೇಮಿಸಿ, ವಿಕ್ರಮಾದಿತ್ಯರಾ 

ಯನೆಂಬ ನಾಮಾಂಕಿತನಂ ಕೊಟ್ಟು, ಮಹಾಲಕ್ಷ್ಮಿಯು ಅವನಿಗೆ ಪ್ರಸನ್ನವಾ 

ಗುವಹಾಗೆ ವರವ ಕೊಟ್ಟು, ಚೌಷಷ್ಟಿ ವಿದ್ಯೆಗಳ ಉಪದೇಶವಿತ್ತು, ದಿವ್ಯಾ 

ಯುಧಾಭರಣಗಳ ಪಾಲಿಸಿ, ಸುಖದಿಂದಿರು ಎಂದು ನಿರೂಪಿಸಿ, ಅನುಗ್ರಹ 

ಮಾಡಿ ಕಳುಹಲು; ಅಲ್ಲಿಂ ಬಳಿಕ ವಿಕ್ರಮಾದಿತ್ಯರಾಯನು ಸಂಭ್ರಮ 

ದಿಂದ ಅಷ್ಟದಿಕ್ಷಾಲಕರ ಜಯಿಸಬೇಕೆಂದು ಇಂದ್ರಲೋಕಕ್ಕೆ ಹೋಗಿ, 

ದೇವೇಂದ್ರರ ಕಂಡು ವಂದಿಸಲಾಗಿ, ಆ ಇಂದ್ರನು ವಿಕ್ರಮಾದಿತ್ಯರಾಯನ 

ರೂಪು ರೇಖೆ ಲಾವಪರಾಕ್ರಮ ವಿದ್ಯಾತಿತಯಗಳ ಕಂಡು, ಮೆಚ್ಚಿ, 

ಆತನಿಗೆ ದೇವನಿರ್ಮಿತವಾದ ಮೂವತ್ತೆರಡು ಪುತ್ಥಳಿಯುಕ್ತವಾದ ನವರ 

ತ್ನಖಚಿತವಾದ ಸಿಂಹಾಸನವ ವಜ್ರಾಯುಧ ಸಹ ಕೊಟ್ಟು ಕಳುಹಿಸಲು; 

ಈ ಮೇರೆಗೆ ಅಷ್ಟದಿಕ್ಕಿಗೂ ಹೋಗಿ, ಅವರವರ ಕೈಯಲ್ಲಿ ದಿವ್ಯಾಯುಧ 

ದಿವ್ಯಾಭರಣವ ತೆಗೆದುಕೊಂಡು, ಮಾರ್ಗದಲ್ಲಿ ಸುಶೀಲಮುನಿಯ ಮುಖ 

ದಿಂದ ಯಕ್ಷನಲ್ಲಿ ಅಷ್ಟಮಹಾನಿ ನವನಿಧಿಗಳಂ ಗ್ರಹಿಸಿ, ಬೇತಾಳನ 

ವಶವ ಮಾಡಿಕೊಂಡು, ಅಲ್ಲಿಂದ ಈಶ್ವರನ ರಜತಾದಿಗೆ ಹೋಗಿ, ಈಶ್ವ 

ರನಿಗೆ ನಮಸ್ಕರಿಸಿ ಸ್ತುತಿಸಲಾಗಿ; ಈಶ್ವರನು ಮೆಚ್ಚಿ ಎಲೈ ರಾಯಾ ! -  

ನಿನಗೆ ಬೇಕಾದ ವರವಂ ಕೇಳಿಕೊ ಎಂದು ನಿರೂಪಿಸಲು, ಎಲೈ ಹರ 

ನೇ ! ನನಗೆ ದೀರ್ಘಾಯುಷ್ಯವ ಕೊಟ್ಟು ಸಲಹಬೇಕೆನ್ನಲಾಗಿ ; ಈಶ್ವ 

ರನು ರಾಯನಿಗೆ, ಸಿಂಹಾಸನಾರೂಢನಾಗಿ ಸಾವಿರವರ್ಷ ಭಟ್ಟಿಯೊಡನೆ 

ರಾಜ್ಯವಾಳಿ ಕಲಿಪುರುಷನ ಜಯಿಸೆಂದನುಗ್ರಹಿಸಿ ಕಳುಹಿಸಲು ; ಬರುವ 

ಮಾರ್ಗದಲ್ಲಿ ಕಲಿಪುರುಷನಂ ಕಂಡು, ಮಹಾಕೋಪಾರೂಢನಾಗಿ - ಎಲೇ 

ಕಲಿಪುರುಷನೆ ! ನನ್ನ ದೊರೆತನವಿರುವತನಕ ನನ್ನ ರಾಜ್ಯದಲ್ಲಿ ನೀನು 

ಸಂಚರಿಸೆ ಕಾರಣವೇನೆಂದು ಕೋಪಿಸಿ, ವಜ್ರಾಯುಧದಿಂದ ಹೊಡೆಯುವು 

ದಕ್ಕೆ ಹೋಗಲಾಗಿ, ಅವನಾಗ ಭಯಪಟ್ಟು-ಎಲೈ ರಾಯನೇ ! ನಾನು 

ನಿನ್ನ ಸಭೆಯಲ್ಲಿ ಬರುವುದಿಲ್ಲವೆಂದು ಉಂಗರವ ಕೊಟ್ಟು ಹೊರಟು 

ಹೋಗಲಾಗಿ, ಆ ಬಳಿಕ ರಾಯನು ತನ್ನ ಪಟ್ಟಣಕ್ಕೆ ಬಂದು ಭಟ್ಟ ಸಹಿತ 

ಧೈರ್‍ಯ ಶೌರ್‍ಯದಾರ್‍ಯ ಸಾಹಸ ಕೀರ್ತಿಯಿಂದ ರಾಜ್ಯವಾಳುತ್ತಿದ್ದನು.



---------------------ಬತ್ತೀಸಪುತ್ತಳಿ ಕಥೆ.----------------------------------೭ 


ಇತ್ತಲಾ ವರರುಚಿಯು ಶಾಸ್ತ್ರಂಗಳ ಪಾಠ ಹೇಳುತ್ತ ವಿಕ್ರಮಾ 

ದಿತ್ಯನ ಬಳಿಯಲ್ಲಿ ಪ್ರಧಾನಿಯೆನಿಸಿಕೊಂಡಿದ್ದನು. 


ಆ ಬಳಿಕ ಭರ್ತೃಹರಿಯು ಅಣ್ಣಂದಿರ ಅಪ್ಪಣೆ ತೆಗೆದುಕೊಂಡು 

'ಮಲಯ' ಪರ್ವತಕ್ಕೆ ಹೋಗಿ, ಮಹಾ ಜ್ಞಾನಿಯಾಗಿ ತಪಸ್ಸಿನಿಂದ 

ಇರುತ್ತಿದ್ದನು.


ಆ ಬಳಿಕ ವಿಕ್ರಮಾದಿತ್ಯರಾಯನು ಎರಡುಸಾವಿರ ವರ್ಷ ರಾಜ್ಯ 

ಭಾರವಂ ಮಾಡಿ ಕೀರ್ತಿಯಿಂದ ಇರುತ್ತಿರ್ದು ತನ್ನ ಶಕೆ ತೀರಿದ ಬಳಿಕ 

ಶಾಲಿವಾಹನನಿಂದ ಪರಾಜಿತನಾಗಿ ಸುರಲೋಕವನ್ನೈದಿದಮೇಲೆ ಆತನ 

ಮಂತ್ರಿಗಳು ಮೂವತ್ತೆರಡು ಪುತ್ತಳಿಯುಕ್ತವಾದ ಆ ರತ್ನಖಚಿತವಾದ 

ಆತನ ಸಿಂಹಾಸನವನ್ನು ಒಳ್ಳೆಯ ಭೂಮಿಯಲ್ಲಿ ಚಂದ್ರಕಾಂತದ ಶಿಲೆಯ 

ಕಾಶೀಕಲ್ಲಿನ ಮಂಟಪದಲ್ಲಿ ಇರಿಸಿ, ನಿಕ್ಷೇಪಮಾಡಿದರು.


ಆ ಬಳಿಕ ಆ ಕಾಂಯೋಜಠದ ರಾಜ್ಯಾಧಿಪತ್ಯ ರಾಜೋತ್ತಮನಾದ 

ಭೋಜರಾಯನಿಗಾಗಲಾಗಿ ಆತನು ಪರಾಕ್ರಮಯುಕ್ತಿ ಚಾತುರ್‍ಯಧರ್ಮ 

ದಿಂದ ರಾಜ್ಯಭಾರ ಮಾಡುತ್ತಿರಲು ;


ಆ ಪಟ್ಟಣದ ಒಂದು ಅಗ್ರಹಾರದ ರುದ್ರಶರ್ಮನೆಂಬ ದ್ವಿಜನು 

ದಿನಚರಿ ಬಂದು, ತನಗೆ ಅರ್ವಾದವ ಮಾಡಿ, ಸುಮ್ಮನೆ ಹೋಗುತ್ತಿರು 

ವುದ ಕಂಡು, ರಾಯಂ ಒಂದು ದಿನ ತನ್ನ ಪ್ರಧಾನ ಚಿತ್ರಶರ್ಮನೊಡನೆ 

ಈ ಬ್ರಾಹ್ಮನು ನಿತ್ಯದಲ್ಲೂ ಒಂದು ಅತೀರ್ವಾದ ಮಾಡಿ ಬರಿದೆ 

ಹೋಗುತ್ತಿದ್ದಾನೆ. ಈ ಬ್ರಾಹ್ಮಣನ ಮನೊಭೀಷ್ಟವೇನೆಂದು ಕೇಳಿ 

ತಿಳಿದರೆ ಇಷ್ಟಾರ್ಥವ ಕೊಡಿಸಿಕೊಡಬಹುದೆಂದು ವಿವರಿಸಲಾಗಿ : ಚಿತ್ರ 

ಶರ್ಮನು ಮರುದಿವಸ ಬ್ರಾಹ್ಮಣನು ಬಂದು ಆಶೀರ್ವಾದವ 

ಮಾಡಿ ಹೋಗುವ ಸಮಯದಲ್ಲಿ, ಆ ಬ್ರಾಹ್ಮಣನ ಕರೆದು - -ಎಲೈ, 

ನೀನು ದಿನಂಪ್ರತಿ ಬಂದು ರಾಯನಿಗಾಶೀರ್ವಾದವ ಮಾಡಿ ಬರಿದೆ ಹೋ 

ಗುವ ವಿವರವೆನೆಂದು ಕೇಳಲು , ಆ ಬ್ರಾಹ್ಮಣನು-ಎಲೈ ಪ್ರಧಾನಿಯೇ, 

ನನ್ನ ಮನೊಭೀಷ್ಟವೇನೆಂದರೆ ಒಂದು ಕಂಡುಗದ ಹೊಲವನ್ನು ದಾನ 

ಪೂರ್ವಕವಾಗಿ ಕೊಡಿಸಿಕೊಟ್ಟರೆ ಅದರಲ್ಲಿ ಜೀವನವ ಮಾಡಿಕೊಂಡು 

ಅಗ್ರಹಾರದಲ್ಲಿ ಅಗ್ನಿ ಹೋತ್ರಗಳ ಮಾಡಿಕೊಂಡಿರುವೆನೆಂದು ಹೇಳಲಾಗಿ 

..............

ಪಾ-1, ಮಾಲ್ಯ



೮ -----------------ಕರ್ಣಾಟಕ ಕಾವ್ಯಕಲಾನಿಧಿ.------------------------


ಇದನೇನು ಕೇಳಿದೆ ! ಇನ್ನೂ ನಿನಗೆ ಬೇಕಾದಷ್ಟು ದ್ರವ್ಯವ ಕೇಳಿದರೂ 

ರಾಯಂ ಕೊಡುವನು, ಎಂದು ಆ ಬ್ರಾಹ್ಮಣನ ಜರೆಯಲಾಗಿ; ಆ ಬ್ರಾಹ್ಮ 

ಣನು-ಎಲೈ ಪ್ರಧಾನಿಯೇ ! ತಪ್ಪದೆ ಈ ಹೊಲ ನನಗೆ ಕೊಡಿಸಿಕೊಟ್ಟರೆ 

ಅದೇ ನನಗೆ ಸಾಕು ಎಂದು ಹೇಳಲಾಗಿ, ಆ ಮಾತ ಕೇಳಿ ಬಂದು, ರಾಯ 

ನಿಗೆ ವಿಸ್ತಾರವಾಗಿ ಅರಿಯಂ ಮಾಡಲಾಗಿ; ರಾಯನು ಆತ ಕೇಳಿದ ಬಳಿ 

ಯಲ್ಲಿ ಭೂಮಿಯಂ ಕೊಡಿಸಿಕೊಟ್ಟನು


ಅನಂತರ ಆ ಬುಧನು ಆ ಸ್ಥಳದಲ್ಲಿ ನಾನಾ ಫಲವೃಕ್ಷಂಗಳ ಹಾಕಿ, 

ಕಡಲೆ, ಜೋಳ, ಮುಂತಾದ ಪೈರುಗಳ ಮಾಡಿ, ಆನಿಕ್ಷೇಪದಮೆಲೆ ಒಂದು 

ಮಂಚಿಕೆ ಮಾಡಿ ಅದರಲ್ಲಿ ಕುಳಿತುಕೊಂಡು, ಪಕ್ಷಿಗಳ ಹೊಡೆಯು 

ತಿರ್ದು ಅಲ್ಲಿ ಮಾರ್ಗದಲ್ಲಿ ಸಂಚಾರ ಮಾಡುವ ಜನರಂ ಕಂಡು - ಎಲೆ 

ಪ್ರಾಣಿಗಳಿರಾ ' ನೀವು ಬಿಸಿಲಲ್ಲಿ ಶ್ರಮಪಟ್ಟು ಏಕೆ ಸುಮ್ಮನೆ ಹೋಗು 

ತ್ತೀರಿ? ಈ ಹೊಲದಲ್ಲಿ ಬೇಕಾದಷ್ಟು ಹಣ್ಣುಗಳು ಹೇರಳವಾಗಿವೆ, ಈ 

ಹಣ್ಣುಗಳೆಲ್ಲವಂ ತಿಂದು ನೀರ ಕುಡಿದು, ಶ್ರಮಪರಿಹಾರವ ಮಾಡಿಕೊಂಡು 

ಹೋಗಿ ಎಂದು ನುಡಿಯಲಾಗಿ; ಈ ಜನರುಗಳು ಬಂದು ಹೊಲಕ್ಕೆ ನುಗ್ಗ 

ಲಾಗಿ, ಈ ಬ್ರಾಹ್ಮಣನು ಕೆಳಕ್ಕೆ ಇಳಿದು-ಎಲೈ ಮನುಷ್ಯರುಗಳಿರಾ ! 

ನೀವು ನಮ್ಮೊಡವೆಯನ್ನು ಮುಟ್ಟಬೇಡಿ, ಎಂದು ಕೋಪವ ಮಾಡಿ ಮೊರೆ 

ಯಿಡಲು, ಅವರು-ಇದೇನಾಶ್ಚರ್‍ಯವೆಂದು ಸುಮ್ಮನೆ ಹೋಗಲಾಗಿ, ಆ 

ಬ್ರಾಹ್ಮಣನು ತಿರಿಗಿ ಮಂಚಿಕೆಯನೇರಿ ಕುಳಿತಿರಲಾಗಿ, ಈ ವೇಳೆಯಲ್ಲಿ 

ಭೋಜರಾಯನು ತನ್ನ ಸೇನೆ ಸಹಿತ ಬೇಂಟೆಯಾಡಿ ಬಳಲಿ ಬಿಸಿಲಲ್ಲಿ 

ಬರುವುದಂ ಕಂಡು-ಎಲೈರಾಜೇಂದ್ರನೇ ' ನೀವು ಸೇನೆ ಸಹಿತ ಬಳ 

ಲಿದಿರಿ. ನನ್ನ ಹೊಲದಲ್ಲಿ ದಿವ್ಯೋದಕ, ಪರಿಪರಿ ಫಲಗಳಿವೆ. ತರಿಸಿ 

ಕೊಂಡು ಭಕ್ಷಿಸಿಕೊಂಡು ಜಲವಂ ತೆಗೆದುಕೊಂಡು ನೆಳಲಲ್ಲಿ ವಿಶ್ರಮಿಸಿ 

ಕೊಂಡು, ದಯೆಮಾಡಬೇಕೆನಲುಗಿ; ರಾಯನ ಸೇನೆ ಹೊಲಕ್ಕೆ ನುಗ್ಗಲು, 

ಅವನು ಮಂಚಿಕೆಯಿಂದಿಳಿದು -ಎಲೈ ರಾಯ ! ನೀನು ನಿನ್ನ ಬಲವೆಲ್ಲ ನನ್ನ 

ಹೊಲ ಯಾವತ್ತು ಪೈರುಫಲ ಹಲಾಕು ಮಾಡಿದರುಂಟೆ ? ಎನ್ನಲಾಗಿ ; 

ರಾಯನು ಆ ಜನವನ್ನು ಹಿಂದಕ್ಕೆ ಕರೆಸಿ, ವೃಕ್ಷದ ಕೆಳಗೆ ಕುಳಿತನು. ಅಬ 

ಳಿಕ ಅವನು ಮತ್ತೆ ಮಂಚಿಕೆಯ-ಎಲೈ ಭೂಪಲನೇ ! ಸುಮ್ಮನೆ



-------------------ಬತ್ತೀಸಪುತ್ತಳಿ ಕಥೆ.-------------------------೯


ಏತಕ್ಕೆ ಕುಳಿತಿದ್ದೀರಿ ? ಬೇಕಾದ ಸುಫಲ ತರಿಸಿಕೊಂಡು ಶ್ರಮ ಪರಿ 

ಹರಿಸಿ ದಯೆಮಾಡಿಸಬಹುದೆನ್ನಲಾಗಿ ;


ಪುನಃ ಜನಗಳು ಹೋಗಿ ಫಲಗಳ ನೋಡುತ್ತಿರಲು ; ಆ ಬ್ರಾಹ್ಮ 

ಣನು ಮಂಚಿಕೆಯನಿಳಿದು ರಾಯನ ಸಮೀಪಕ್ಕೆ ಬಂದು ಎಲೈರಾಯಾ! 

ನೀನು ಮಹಾ ದುಷ್ಟನು. ನನ್ನ ಹೊಲವ ಹಾಳುಮಾಡಿಬಿಟ್ಟೆಯಲ್ಲಾ, 

ಎಂದು ಕೋಪಿಸಲಾಗಿ,


ಆ ಮಾತ ಕೇಳಿ, ರಾಯ ಆತನ ಸಂತೈಸಿ, ಜನರ ಕರೆಸಿ, ಹೊಲಕ್ಕೆ 

ಹೋಗದಂತೆ ನೇಮಿಸಿ, ತನ್ನ ಪ್ರಧಾನ ಚಿತ್ರಶರ್ಮನೊಡನೆ ಅಶ್ಚರ್‍ಯಪಟ್ಟು 

ಇಂತೆಂದನು -ಈ ಬ್ರಾಹ್ಮಣನಿಗೆ ಮಂಚಿಕೆಯೇಳಿದಾಗ ಒಂದು ಬುದ್ಧಿ ; 

ಕೆಳಯಿಂಕೆ ಇಳಿದಾಗ ಬಂದು ಬುದ್ಧಿ, ಇದೇನೆಂದು ಕೇಳಲಾಗಿ; ಚಿತ್ರಶ 

ರ್ಮನು-ಇವ ಹಾಕಿರುವ ಮಂಚಿಕೆಯ ಕೆಳಗೆ ಏನಾದರೂ ಒಂದು ವಿಶೇಷ 

ವುಂಟಾಗಿರುವುದೆಂದು ರಾಯನಿಗೆ ಬಿನ್ನಿಸಲಾಗಿ, ರಾಯನು ಅವನ ಕರೆಸಿ 

ನಿನಗೀಭೂಮಿಯಲ್ಲಿ ಏನು ಲಾಭವುಂಟೆನಲು; ಅವನು ವರುಷಕ್ಕೆ ನೂರು 

ವರಹ ಉತ್ಪತ್ತಿಯಾಗುತ್ತದೆ ಎನ್ನಲು - ಇಷ್ಟು ಮಾತ್ರ ಕಷ್ಟಪಡುವುದೇ 

ತಕ್ಕೆ? ನಿನಗೆ ಬೇಕಾದಷ್ಟು ದ್ರವ್ಯವಂ ಕೊಡುವೆ. ಈ ಭೂಮಿ ನಮಗೆ 

ಬಿಟ್ಟುಕೊಡು-- ಎಂದು ಕೇಳಿದುದಕ್ಕೆ, ಅವನು ಆ ಭೂಮಿಯನೊಪ್ಪಿಸಿದನು. 

ಆಗ ಅವನಿಗೆ ಸವಾಲಕ್ಷ ವರದ ಕೊಡಿಸಿ ಸಾವಿರ ಕಂಡುಗ ಧಾನ್ಯ ಬರು 

ವಂಥ ಭೂಮಿ ಸಹ ಕೊಟ್ಟು ಕಳುಹಿಸಿ ಬಿಟ್ಟು, ಬಳಿಕ ಆ ಹೊಲದ ಸುತ್ತ 

ಸರವತ್ತಿಗೆ ಬಿಡಿಸಿ ಮಂಚಿಕೆಯ ಕೀಳಿಸಿ ಶೋಧಿಸಲಾಗಿ; ಪುರುಷಪ್ರಮಾ 

ಣದ ಕೆಳಗೆ ಕಲ್ಲುಮಂಟಪದಲ್ಲಿ ಕೋಟಿಸೂರಪ್ರಕಾಶಕಾಂತಿಯಿಂದ ನವ 

ರತ್ನಮಯವಾದ ಮೂವತ್ತೆರಡು ಪುತ್ಥಳಿಯುಕ್ತವಾದ ಸಿಂಹಾಸನ ಮಹಾ 

ಅರ್ಭಟಿಸುವುದ ಕಂಡು, ಭೋಜರಾಯನು ಬಹುಪರ್ಷದಿಂದ ಅದಕ್ಕೆ ಬಲಿ 

ಯಂ ಕೊಡಿಸಿ, ಮೇಲಕ್ಕೆ ತಗೆಸಿ, ಉತ್ಸಾಹದಿಂದ ಪಟ್ಟಣಕ್ಕೆ ಕೊಂಡು 

ಹೋಗಿ, ಅಸ್ಥಾನಮಂಟಕ್ಕೆ ಇರಿಸಿ, ಷೋಡಶೋಸಚಾರದಿಂದ ಪೂಜೆಯಂ 

ಮಾಡಿಸಿ, ಬಹುದೇವಬ್ರಾಹ್ಮಣರಿಗೆ ಸಂತರ್ಪಣೆಯಂ ಮಾಡಿಸಿ, ಧನಕನಕ 

ವಸ್ತುವಾಹನಗಳ ದಾನವ ಕೊಟ್ಟು, ತಾನು ನವರತ್ನಾಭರಣಾಲಂಕೃತ

ನಾಗಿ, ತನ್ನ ಪುರಜನ ಪರಿಜನ ವಿದ್ವಾಂಸಜನ ಮುಂತಾದ ಜನಕೆಲ್ಲ ದಿವ್ಯಾ



೧೦---------------------ಕರ್ಣಾಟಕ ಕಾವ್ಯ ಕಲಾನಿಧಿ.-------------------------------


ಭರಣ ದುಕೂಲಂಗಳ ಕೊಟ್ಟು, ಸರ್ವರ ಸಂತೋಪಪಡಿಸಿ, ತಾನು 

ಶುಚಿರ್ಭೂತನಾಗಿ, ಗಂಧಕುಸುಮ ವಸ್ತ್ರಾ ಭರಣ ಭೂಷಿತನಾಗಿ, ತನ್ನ 

ಪ್ರಧಾನ ಚಿತ್ರಶರ್ಮನ ಕೈವಿಡಿದು ನಾನಾವಾದ್ಯ ಮುಂತಾಗಿ ಓಲಗಸಾಲೆಗೆ 

ಬಂದು, ನವರತ್ನಖಚಿತವಾದ ಮೂವತ್ತೆರಡು ಪುತ್ತಳಿಯುಳ್ಳ ಆ ಸಿಂಹಾಸ 

ನದ ಬಳಿಯಲ್ಲಿ ನಿಂತು, ಅದನೇರುವುದಕ್ಕೆ ತನ್ನ ಬಲಗಾಲ ನೀಡುವ ಸಮ 

ಯದಲ್ಲಿ ಸಕಲ ಜನ ಜಯಜಯ ಎನ್ನಲು ; ಆಗ ಆ ಸಿಂಹಾಸನದ ಮೂವ 

ತ್ತೆರಡು ಬೊಂಬೆಗಳಿಗೆ ಜೀವವುಂಟಾಗಿ ಅವು ಅತಿ ಅರ್ಭಟಿಸಿ- ಎಲೈ 

ಭೋಜರಾಯನೇ ! ಈ ಸಿಂಹಾಸನ ಹತ್ತಬೇಡ ಹತ್ತಬೇಡ ಎಂದು ಒದ 

ರುತ್ತಿರಲಾಗಿ ; ರಾಯನು ವಿಸ್ಮಿತನಾಗಿ ಇಂತೆಂದನು' -ಎಲೆ ಪುತ್ತಳಿಗಳ 

ರಾ ! ನೀವು ಯಾರು ? ಈ ಅಟ್ಟಹಾಸಂಗೆಯ್ಯುವುದೇನು ? ಈ ಸಿಂಹಾಸನ 

ವಾರದು ? ನಿಮ್ಮ ಹೆಸರೇನು? ಎಂದು ಕೇಳಲಾಗಿ, ಪುತ್ತಳಿಗಳಿ೦ತೆಯುವು-- 

ಎಲೈ ರಾಯನೆ ! ಕೇಳು. ಇದು ದೇವದತ್ತ ಸಿಂಹಾಸನ, ನಾವು ದೇವ 

ಕನ್ನಿಕೆಯರು; ನಮ್ಮ ಹೆಸರೇನೆಂದರೆ : -೧ ಜಯವತಿ, ೨ ವಿಜಯವತಿ, 

೩. ಇಳೆಯವತಿ, ೪. ಸುರತಪ್ರಿಯೆ, ೫ ಆನಂದಸಂಜೀವಿನಿ, ೬. ರತಿಪ್ರಿ 

ಯೆ, ೭. ನವಮೋಹಿನಿ, ೮. ಪದ್ಮಾವತಿ, ೯ ಪ್ರಭಾವತಿ, ೧೦. ವಿಷ್ಣು 

ವಂದಿನಿ, ೧೧, ಆನಂಗಜೆ, ೧೨, ಇಂದ್ರವತಿ, ೧೩. ಕುರಂಗಸೇನೆ, ೧೪. 

ಲಾವಣ್ಯವತಿ, ೧೫. ಮೋಹಿನಿ, ೧೬, 1ಕುರಂಗಲೋಚನೆ 1 ೧೭. ಕಾಮ 

ಕಳೆ, ೧, ರತ್ನಚಂಡಿಕೆ, ೧೯. ವಿದ್ಯಾಧರಿ, ೨೦. ರತ್ನಾವತಿ, ೨೧ ಮದ 

ನಮೋಹಿನಿ ೨೩, ರತಿರೂಪಿಣಿ, ೨೪ ಹಂಸಗಮನೆ, ೨, ಇಂದ್ರಜಿತೆ, 

೨೬. ತ್ರಿಲೋಕಮೋಹಿನಿ, ೨೭, ಕನಕಾವತಿ, ೨೮, ಅನಂಗಶಯನೆ, 

೨೯. ಸಂಧ್ಯಾವಳಿ, ೩೦. ಕಾಮಕರ್ಣಿಕೆ, ೩೧, ಕರ್ಣಾವತಿ, ೩೨. ವಾಮ 

ಲೋಚನೆ, ಈ ಹೆಸರುಗಳು ನಮಗೆ. ನಾವು ವಿಕ್ರಮಾದಿತ್ಯನ ಸೇವಕರಲ್ಲ. 

ಮತ್ತೊಬ್ಬರ ಸೇವೆ ಮಾಡಿದವರಲ್ಲ ನಾವು ಸರವನ ಸೇವಕರು. ಅಬ 

ಳಿಕ ದೇವೇಂದ್ರನ ಊಳಿಗಮಾಡಿದರು. ಈ ಸಿಂಹಾಸನವನ್ನು ವಿಕ್ರಮಾ 

ದಿತ್ಯರಾಯನಿಗೆ ದೇವೇಂದ್ರನು ಕೊಟ್ಟುದರಿಂದ ಅಬಳಿಕ ವಿಕ್ರಮಾದಿತ್ಯನ 

ಸೇವೆ ಮಾಡಿದವರು. ಇದನೇರುವುದಕ್ಕೆ ನನ್ನ ವಿಕ್ರಮಾದಿತ್ಯರಾಯನ 

...........


ಪಾ-1, ತುರಂಗವದನೆ



---------------------ಬತ್ತೀಸ ಪುತ್ಥಳಿ ಕಥೆ.------------------------೧೧


ಲ್ಲದೆ ಮಿಕ್ಕ ರಾಯರುಗಳು ಯೋಗ್ಯರಲ್ಲ. ನಮ್ಮ ರಾಯನಿಗೆ ಸರಿಯಾ 

ದವರು ಚಪ್ಪನ್ನದೇಶ ಸಪ್ತದ್ವೀಪಗಳಲ್ಲಿಯೂ ಇಲ್ಲ. ವಿಕ್ರಮಾದಿತ್ಯರಾ 

ಯಂಗೆ ವಿಕ್ರಮಾದಿತ್ಯರಾಯನೇ ಹೊರತು ಮತ್ತೆಯಾರೂ ಸರಿಯಿಲ್ಲ. 


ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ 

ಚರಿತ್ರೆಯಲ್ಲಿ ಪುತ್ತಳಿಗಳು ವಿಕ್ರಮಾದಿತ್ಯರಾಯನ ಚರಿತ್ರೆಯ 

ವಿಸ್ತರಿಸಿದ ಪ್ರಕರಣ

..............


೧ ನೆ ಯ ಕ ಧೆ .


ಮೊದಲು ದಿನದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ ಭೋ 

ಜನ ತೀರಿಸಿ, ತಾಂಬೂಲ ಸ್ವೀಕರಿಸಿ, ಸಕಲ ಪರಿಮಳ ಕುಸುಮಸುಗಂ 

ಧವಂ ಧರಿಸಿ, ನವವಿಧದುಕಲಾಭರಣಭೂಷಿತನಾಗಿ ತನ್ನ ಪ್ರಧಾನ ಚಿತ್ರ 

ಶರ್ಮನ ಕೈವಿಡಿದು ಸಿಂಹಾಸನದೆಡೆಗೆ ಒಂದು, ತನ್ನ ಬಲಗಾಲಂ ನೀಡುವ 

ಸಮಯದಲ್ಲಿ ಒಂದನೆಯ ಸೋಪಾನದ ಜಯವತಿಯೆಂಬ ಪುತ್ತಳಿ ಹೋ 

ಹೋ ' ನಿಲ್ಲು ನಿಲ್ಲು' ನಮ್ಮ ವಿಕ್ರಮಾದಿತ್ಯರಾಯನ ಸಾಹಸಪರಾಕ್ರ 

ಮವೀರವಿತರಣೌದಾರ್‍ಯ ಧೈಯ್ಯರ್ಯವುಳ್ಳವನಾದರೆ, ಎಲೈ ಭೋಜರಾ 

ಯನೇ ! ಈ ಸಿಂಹಾಸನವನ್ನೇರು. ಇಲ್ಲದೆ ಇದ್ದರೆ ಕೆಲಸಾರು. ಮೀರಿ 

ಕುಳಿತರೆ ನಿನ್ನ ತಲೆ ಸಹಸ್ರ ಹೋಳಾಗುವುದೆನ್ನಲಾಗಿ; ಭೋಜರಾಯನು 

ಖಿನ್ನನಾಗಿ ಬೇರೆ ಬದಲು ಸಿಂಹಾಸನವ ತರಿಸಿ ಅದರಲ್ಲಿ ಕುಳಿತು ಚಿತ್ರಶ 

ರ್ಮನ 1ತನ್ನ1 ವೃತ್ತಾಂತವ ವಿವರಿಸೆನ್ನಲಾಗಿ, ಚಿತ್ರಶರ್‍ಮ ಪೇಳಿದ  

ಕಥೆ: -


ಎಲೆ ಪುತ್ತಳಿಯೆ ! ಕೇಳು. ನಮ್ಮ ಭೋಜರಾಜನು ಧಾರಾಪುರ 

ದಲ್ಲಿ ಸುಖಾಜ್ಯಂಗೈನಲ್ಲಿ ಒಂದು ದಿನ ಒಬ್ಬ ಅಹಿತುಂಡಿಕನೆಂಬ ಹಾವಾ 

ಡಿಗ ಬಂದು ಲಕ್ಷವೂ ತೊಂಬತ್ತುಸಾವಿರ ಕವಿಗಳು ವಿದ್ವಾಂಸರು ಸಹಿತ 

............

1. 'ಈ' ಎಂದು ಪ್ರತಿಗಳಲ್ಲಿದೆ.



೧೨---------------------ಕರ್ಣಾಟಕ ಕಾವ್ಯಕಲಾನಿಧಿ,---------------------------


ರಾಯನು ಸದರಿನಲ್ಲಿ ಕುಳಿತಿರುವಾಗ, ಅನೇಕ ಹಾವಿನ 2 ಪೆಟ್ಟಿಗೆಯಂ2 

ಬಿಟ್ಟು, ಡಕ್ಕೆಗಳಂ ಬೆಳಗಿ, ನಾಗಸರದ ಧ್ವನಿಯಂ ತೋ, 3ಹಾವುಗಳ ವಿಚಿ 

ತ್ರದಿಂದಾಡಿಸಿ, ಹಾವಿನ ಮಣಿ ಹೆಡೆ ವಿಷವ ತೋರಿಸಿ, ಹಾವುಗಳ ಕಚ್ಚಿಸಿ 

ಮುದ್ದಾಡಿಸಿ ಮುದ್ದಿಸಿ3 ಈ ಮೇರೆಯಲ್ಲಿ ತನ್ನ ಅನೇಕವಿದ್ಯೆಯ ತೋರಿಸ 

ಲಾಗಿ, ರಾಯನು ಇಂತೆಂದನು.-ಎಲೋ ಅಹಿತುಂಡಿಕನೇ ' ಸಕಲಜೀವರಾಶಿ 

ಗಳಿಗೂ ಕಿವಿಗಳುಂಟಷ್ಟೆ, ಈ ಸರ್ಪಜಾತಿಗೆ ಏನುಕಾರಣ ಕಿವಿಗಳಿಲ್ಲ? 

ಎಂದು ಕೇಳಲಾಗಿ ಅವನು ಅದಕ್ಕೆ ಹೇಳಿದುದು -ಎಲೈ ಮಹಾರಾಯನೇ ! 

ಬ್ರಹ್ಮದೇವನು ಕಿವಿಗಳುಂಟುಮಾಡಿದರೆ ಮುಂದೆ ಭೂಲೋಕದಲ್ಲಿ 

ಭೋಜಚಕ್ರವರ್ತಿಯ ಕೀರ್ತಿ ಸ್ವರ್ಗಮರ್ತ್ಯ ಪಾತಾಳ ತುಂಬುವುದರಿಂದ 

ಈ ಉರಗಜಾತಿಗಳ ಒಡೆಯನಾದ ಭೂಮಿಯ ಹೊತ್ತಿಹ ಮಹಾಶೇಷನು 

ಕೇಳಿದರೆ, ಆ ಮಹಾಶೇಷನ ಮಕುಟದ ಮೇಲಿರುವ ಲೋಕಂಗಳು ಮಡ 

ಕೆಯ ಅಡಿಕಲು ಬಿದ್ದೋಪಾದಿಯಲ್ಲಿ ಕೀಲು ಸಡಲಿ ಕೆಳಯಿಂಕೆ ಬೀಳು 

ವುವು. ಇದ ತಿಳಿದವನಾಗಿ ಅಜನು ಈ ಜಾತಿಗೆ ಕಿವಿಗಳ ಮಾಡಲಿಲ್ಲ-- 

ಎಂದು ಅರಿಕೆಯಂ ಮಾಡಲಾಗಿ ; ರಾಯನು ಮೆಚ್ಚಿ, ಅವನಿಗೆ ಸವಾಲಕ್ಷ 

ವರಹವು ಕೊಟ್ಟು ಕಳುಹಿಸಿದನು. ಇಂತಹ ಉದಾರತ್ವ ನಿಮ್ಮ ರಾಯ 

ನಿಗೆ ಉಂಟೆ ? ಎನ್ನಲಾಗಿ, ಪ್ರಥಮ ಸೋಪಾನದ ಜಯವತಿ ಎಂಬ ಪುತ್ತಳಿ 

ನಸುನಕ್ಕು ಮುಖವಂ ನೋಡಿ, ಐಸಲೆ  ' ನಿಮ್ಮ ರಾಯನ ಉದಾರ ಇದೆ ' 

ಎಂದು, ಹಾಸ್ಯವ ಮಾಡಿ ಹೇಳಿದ ಉಪಕಥೆ. ಅದಂತೆಂದರೆ-- 


ಕೇಳೈಯ ಚಿತ್ರಶರ್ಮನೇ ! ಚಕ್ರೇಶ್ವರನಾದ ಈ ನಮ್ಮ ವಿಕ್ರ 

ರ್ಮಾದಿತ್ಯರಾಯನು ಸಿಂಹಾಸನಾರೂಢನಾಗಿ ಈ ರಾಜ್ಯಪ್ರಜೆಗಳ ಪರಿ 

ಪಾಲನೆ ಮಾಡುತ್ತಿರುವಲ್ಲಿ ಆತನ ವೀರವಿತರಣವನು ಬಣ್ಣಿಸಿ ಪೇಳುವು 

ದಕ್ಕೆ 4ಸಹಸ್ರ ಪಡೆ ಅ ಗಳಿಗೆ ತೀರದು4. ಅದೆಂತೆಂದರೆ ಹಿಮವತ್ಪ 

ರ್ವತ, ಗೋಕರ್ಣ, ಕೇದಾರ, ಗಯೆ, ಕಾಶಿ, ಕಾಂಚಿ, ಶ್ರೀರಂಗ, ಮಧುರೆ, 

................

2, ವಿಟೆಗೆಗಳಂ, 3. ಹಾವಿನ ವಿಷವಂತೋರಿಸುವ, ಹಾವುಗಳಂ ಮುದ್ದಿ 

ಸುವ, ಹಾವುಗಳಂ ವಿಚಿತ್ರದಿಂದಾಡಿಸುವ, ಹಾವಿನ ಮಣಿ ಹೆಡೆಗಳಂ ತೋರಿ 

ಸುವ, ಹಾವುಗಳ ರಾಶಿಯಂ ತುಳಿವ, ಹಾವುಗಳಂ ಗೀತಗಳಿಂದ ಆಡಿಸುವ, ಬಂಧ 

ಗಳಂ ತೋರಿಸುವ 4, ಸಹ ಹೆಡೆಯುಳ್ಳ ಆದಿಶೇಷನಿಗೆ ಅಳವಲ್ಲ.



------------------------ಬತ್ತೀಸಪುತ್ಥಳಿ ಕಥೆ.-----------------------೧೩


ದ್ವಾರಾವತಿ, ಅಯೋಧ್ಯೆ, ರಾಮೇಶ್ವರ ಮುಂತಾಗಿರುವ ಪುಣ್ಯಸ್ಥಳಗಳಲ್ಲಿ

ಒಂದೊಂದು ಯೋಜನಪ್ರಮಾಣದ ಮಂಟಪಗಳನ್ನು ಕಟ್ಟಿಸಿ, ಆ ಮಾರ್ಗ 

ದಲ್ಲಿ ಸಂಚರಿಸುವಂಥ ಜನರುಗಳಿಗೆ ಅನ್ನೋದಕ ನಡೆಸುವಂತೆ ದಾನಸತ್ರ 

ಗಳಂ ಮಾಡಿಸಿ, ಬಂದು ಕೇಳಿದವರಿಗೆ ಮನೋಭಿಷ್ಟಾರ್ಥಗಳಂ ಸದಾ 

ಕಾಲದಲ್ಲೂ ಸರ್ವತ್ರ ತಪ್ಪದೆ ಕೊಡುತ್ತ ಇರುವನು. ಇದು ಹೊರತಾಗಿ 

ಅರಮನೆಯ ಒಳವಾಗಿಲ ಬಳಿಯಲ್ಲಿ ಒಂದು ಮಹಾನಾದವಾಗುವಂಥ 

ಗಂಟೆಯಂ ಕಟ್ಟಿಸಿರುವನು. ಅದೆಂತೆಂದರೆ ಒಂದು ಕೋಟ ಬ್ರಾಹ್ಮಣರಿಗೆ 

ಭೋಜನವಾಗುವುದು, ಒಂದು ಸಾರಿ ಧಣಾರೆಂದು ಧ್ವನಿಯಾಗುವುದು. ಈ 

ಮೇರೆಗೆ ಹಗಲು ರಾತ್ರಿ ಸದ ಹದಿನೆಂಟು ಸರಿ ಸಾದ್ದಾಗುವುದು. ರಾಯನ 

ದರ್ಶನ ಮಾಡಿದವರಿಗೆ ಬಡತನ ಬಯಲಾಗುವುದು. ರಾಯನ ಮುಖವ 

ನೋಡಿದ ಮಾತ್ರಕ್ಕೆ ಸಕಲ ವಿದ್ಯೆ ಬರುವುದು. ಯಾರಾದರೂ ಬಂದು 

ಕಾಣಿಸಿಕೊಂಡರೆ ಸಾವಿರ ವರದ ಕೊಡುವ ; ಮಾತನಾಡಿಸಿದವರಿಗೆ ಲಕ್ಷ 

ವರಹ ಕೊಡುವ, ತ್ಯಾಗವ ಕೊಟ್ಟರೆ ಹತ್ತು ಲಕ್ಷ ವರಹ ಕೊಡುವ ; 

ಮೆಚ್ಚಿದರೆ ಒಂದು ಕೋಟಿವರ ಕೊಡುವ ಈ ಪ್ರಕಾರ ಉಚಿತಾರ್ಧ 

ಕೊಡುವ ಉದಾರ ದಯಾಗುಣ ಚತುರ ನೀತಿ ಮಹಿಮ ನಮ್ಮ ವಿಕ್ರಮಾದಿತ್ಯ 

ರಾಯಂಗಲ್ಲದೆ ಅನ್ಯರಾಯರಿಗಿಲ್ಲವೆಂದು ಭುಜವಂ ತಟ್ಟಿ, ಶಾಭಾಸೆನುತ್ತ, 

ಬಳಿಕ 1ಧಸಿಕತನದಲ್ಲಿ ಕುಬೇರರಂತೆ, ದಾತೃತ್ವದಲ್ಲಿ ಕರ್ಣನಂತ, ಸತ್ಯ 

ದಲ್ಲಿ ಹರಿಶ್ಚಂದ್ರನಂತ. ಭೋಗದಲ್ಲಿ ಇಂದ್ರನಂತೆ, ವಿವೇಕ ಜಾಣ್ಮೆಯಲ್ಲಿ 

ಸರಸ್ವತಿಯಂತೆ, ರೂಪಿನಲ್ಲಿ ರತೀಶನಂತೆ, ದಾನದಲ್ಲಿ ಬಲೀಂದ್ರನಂತೆ, 

ಕೀರ್ತಿಯಲ್ಲಿ ಷೊಡಶಮಹಾರಾಯರಂತೆ,1 ಷಟ್ಚಕ್ರವರ್ತಿಗಳ ಸದೃಶ 

ವಾದವ ನಮ್ಮ ವಿಕ್ರಮಾದಿತ್ಯರಾಯ ಒಬ್ಬನಲ್ಲದೆ ಲೋಕಂಗಳಲ್ಲಿ ಬೇರಿಲ್ಲ, 

ಕಣಾ '


ಇಂತು ಕರ್ಣಾಟಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಜಯವತಿ ಪೇಳಿದ ಪ್ರಥಮಕಥೆ,

..................

ಪಾ-1, ಧನಿಕನೆಂಬರೆ ಕುಬೇರಂಗೆಣೆ, ದಾನಿಯೆಂಬರೆ ಕರ್ಣಂಗೆಣೆ, ಸತ್ಯ 

ನಿಧಿಯೆಂಬರೆ ಹರಿಶ್ಚಂದ್ರಂಗೆಣೆ.


೧೪-----------------ಕರ್ಣಾಟಕ ಕಾವ್ಯಕಲಾನಿಧಿ. -----------------

೨ ನೆಯ ಕಥೆ.


ಎರಡನೆಯ ದಿವಸದಲ್ಲಿ ಭೋಜರಾಯನು ಸದರಿಮೆರೆ ಸಿಂಹಾಸನ 

ದೆಡೆಗೆ ಬಂದು ಬಲದ ಕಾಲಂ ನೀಡುವಲ್ಲಿ ಆ ಸೋಪಾನದ ವಿಜಯವತಿ 

ಯೆಂಬ ಪುತ್ತಳಿಯು ಧಿಕ್ಕರಿಸಲು, ಭೋಜರಾಯನು ಹಿಂದಿನಂತೆ ಬೇರೆ 

ಸಿಂಹಾಸನದಲ್ಲಿ ಕುಳಿತುಕೊಂಡು, ಚಿತ್ರಶರ್ಮನಿಂದ ಪೇಳಿಸಲು, ಚಿತ್ರ 

ಶರ್ಮ ಹೇಳಿದ ಕಥೆ -


ಎಲೆ ಪುತ್ತಳಿಯೇ ಕೇಳು. ನಮ್ಮ ರಾಯನು ಧಾರಾಪುರದಲ್ಲಿ ಸುಖ

ರಾಜ್ಯಂಗೆಯ್ಯುವಲ್ಲಿ ಒಂದು ದಿನ ಕುದುರೆಯ ಲಾಯವ ಹೊಕ್ಕು ಅಶ್ವಂ 

ಗಳ, ನೋಡುತ್ತ, ಅದಳಲ್ಲಿ ಲಕ್ಷಣವಾದ ತನ್ನ ಪಟ್ಟದ ಕುದುರೆಯನ್ನು 

ಕೊರಲ ಸವುರುತ್ತ-ಹರಿ ಪವಡಿಸಿದೆ ಏಕೆ ? ಎಂದು ನುಡಿದುದಕ್ಕೆ, ಆ ಕುದು 

ರೆದ ಬಳಿ ಹುಲ್ಲಿನಲ್ಲಿ ಪರಶೀಮೆಯಿಂದ ಬಂದ ಯಾರೂ ಕಾಣದಂತಿದ್ದ 

ಒಬ್ಬ ಕಳ್ಳನು ರಾಯನಾಡಿದ ಮಾತಿಗೆ-ಹರಿ ಪವಡಿಸಿ ನಿದ್ದೆಗೆಯ್ವದೇ 

ನತಿಶಯವೆನ್ನಲಾಗಿ, ರಾಯ-ನೀನಾರೆಂದು ಕೇಳಲು, ಆ ಕಳ್ಳ ರಾಯನ 

ಮುಖವ ನೋಡಿ, ಈ ತೇಜಿಯಂ ಕದ್ದುಕೊಂಡು ಹೋಗಿ ನಮ್ಮ ರಾಯ 

ನಿಗೆ ಕೊಟ್ಟು ಬಹುಮಾನವಂ ಪಡೆಯಬೇಕೆಂದು ಬಂದವನೆಂದು ಆಡಿದ ಮಾ 

ತಿಗೆ ರಾಯನು ಮೆಚ್ಚಿ ಅವನಿಗೆ ಸವಾಲಕ್ಷ ವರದವನ್ನಿತ್ತು ಕಳುಹಿದನೆಂದು 

ನುಡಿಯಲು: ವಿಜಯವತಿ ನಗುತ್ತ ಹಾಸ್ಯಂಗೆಯು ಪೇಳಿದ ಉಪಕಥೆ -


ಕೇಳೈಯ ಚಿತ್ರಶಕರ್ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯವ ಪಾಲಿಸುತ್ತ ಸುಖವಾಗಿ ಇರುವಲ್ಲಿ ಒಂದು ದಿನ ಒಬ್ಬ ದೇಶಾಂ 

ತರಿಕ ಸಿದ್ದನು ಬಂದು ಕಾಣಿಸಿಕೊಂಡು, ರಾಯನು ಪೀಠವಂ ತೋರಿ ಕುಳ್ಳಿ 

ರಿಸಿ- ನಿವೆಲ್ಲಿಂದ ಬಂದಿರಿ ಎಂದು ಕೇಳಲಾಗಿ, ಎಲೈ ಮಹಾರಾಯನೇ ! 

ನಿನ್ನ ಕೀರ್ತಿ ಅದಿತ್ಯನಂತೆ ಬಹು ಪ್ರಜ್ವಲಿಸುತ್ತಿರುವುದು ಕೇಳಿ ನಿನ್ನ ದರ್ಶನ 

ವಾಗಬೇಕೆಂದು ಬಂದೆವು ಎನ್ನಲಾಗಿ, ರಾಯಂ ಸಂತೋಷದಿಂದ ನೀವು 

ಚರಿಸಿದ ಸ್ಥಳಗಳಲ್ಲಿ ವಿಶೇಷವೇನೆಂದು ಕೇಳಲಾಗಿ, ಅದಕ್ಕಾ ಸಿದ್ಧನು-ಚಿತ್ರ 

ಕೂಟವೆಂಬ ಪರ್ವತಲ್ಲಿ ಒಂದು ಕೂಟೋತ್ತರವುಂಟು. ಅದರಲ್ಲಿ 

ದೇವರ ಗಂಗೆಯುಂಟು ; ಅಲ್ಲಿ ಸ್ನಾನವ ಮಾಡಿ ಆ ತೀರ್ಥ ಸೇವಿಸಲು ದಿವ್ಯ 



-----------------ಬಸಪುತ್ತಳಿ ಕಥೆ.-------------------------೧೫ 


ಶರೀರವಾಗುವುದು ; ಆ ನದೀತೀರದಲ್ಲಿ ಕಾಳಿಕಾದೇವಿಯ ಗುಡಿಯಿರುವುದು. 

ಅಲೋಬ್ಬ ಜಗಚ್ಚಕ್ಷುವೆಂಬ ಮುನಿಯು - ದೇವಿಯ ಕುರಿತು ದೇವಸಾ 

ಹಸ್ರ ವರ್ಷದಿಂದ ನಿರಂತರಹೋಮವು ಮಾಡುತ್ತ ಪೂರ್ಣಾಹುತಿಯಲ್ಲಿ 

ತನ್ನ ಶಿರವ ಛೇದಿಸಿ ಸಮರ್ಪಿಸಲು ಆ ಕ್ಷಣವೇ ಅ ಶಿರಸ್ಸು ಹುಟ್ಟುವುದು. 

ಈಮೇರೆ ಮಾಡಿದ ಪ್ರೇಮದ ವಿಭೂತಿ ಶ್ವೇತಾದ್ರಿಯಾಗಿರುವುದು. ಹೀಗೆ 

ಮಾಡುತ್ತಿದ್ದರೂ ಆತನಿಗೆ ಫಲಸಿದ್ಧಿಯಿಲ್ಲ ಎನ್ನಲಾಗಿ; ರಾಯ ಕೇಳಿ, ಅದ 

ನೋಡಬೇಕೆಂದು ಭೇತಾಳಾರೂಢನಾಗಿ ಆ ಸಿದ್ಧ ಸಹಿತ ಖೇಚರಮಾರ್ಗದಿಂದ 

ಚಿತ್ರಕೂಟಪರ್ವತಕ್ಕೆ ಹೋಗಿ, ಆ ಗಂಗಾನದಿಯ ಸ್ನಾನವ ಮಾಡಿ ಆದ ಸೇ 

ವಿಸಿ, ಆ ದೇವಿಯ ಪೂಜಿಸಿ, ಜಗಚ್ಛಕ್ಷು ಮುನಿಗೆ ವಂದಿಸಿ ಅಲ್ಲಿರಲಾಗಿ; ಆ 

ಮುನಿ ಜಲಸ್ತಂಭದಲ್ಲಿ ಹೊಮವ ಮಾಡಿ ಪೂರ್ವಾಹುತಿಗೆ ತನ್ನ ಶಿರಮಂ 

ಕೊಡುವ ವೇಳೆಯಲ್ಲಿ ರಾಯಂ ತನ್ನ ಶಿರನು ಕತ್ತರಿಸಿ ಅಗ್ನಿಗೆ ಸಮರ್ಪಿಸ 

ಲಾಗಿ; ಅದಕ್ಕೆ ಆ ಕಾಳಿಕಾ ಅಮ್ಮನವರ ಮೆಚ್ಚಿ ರಾಯನಿಗೆ ಆಗಲೇ ಶಿರ 

ವನ್ನಿತ್ತು, ನಿಜರೂಪವ ತೋರಿ,-ಎಲೈ ರಾಯನೆ' ನಿನ್ನ ದೃಢಕ್ಕೆ ಮೆಚ್ಚಿ 

ದನು, ವರವಂ ಬೆಡೆನ್ನಲಾಗಿ, ರಾಯನು-ಓ ದೇವಿಯೆ ' ದೇವಸಹಸ್ರ 

ವರ್ಷದಿಂದ ಹೊಮವ ಮಾಡುವ ಜಗಚ್ಛಕ್ಷುವಿಗೆ ವರವ ಕೊಡದೆ ನನಗೆ 

ಕೊಡುವ ಕಾರಣವೇನೆಂದು ಕೇಳಲಾಗಿ, ಆ ದೇವಿಯು ಅತ ದೃಡ ಚಿತ್ತದಿಂದ 

ಹೋಮವ ಮಾಡಲಿಲ್ಲ, ನಿನ್ನ ದೃಢ ಅವನಿಲ್ಲ ಆದರೂ ನೀನು ಕೊಡ 

ಬೇಕೆಂದರೆ ಹೋಮಫಲ ನಿನಗೆ ಕೊಡುವೆ, ನೀನು ಆತನಿಗೆ ಕೊಡು 

ಎನ್ನುತ್ತ, ಸಾಯುಜ್ಯದ ವರವನು ನವರತ್ನಾಭರಣಸಹ ದಯೆಪಾಲಿಸಿ ದೇವಿ 

ಮಾಯವಾದಳು. ಆ ಬಳಿಕ ರಾಯ ಆ ಮುನಿಯಂ ಕರೆದು-- ಎಲೈ, ಮಹಾ 

ಮುನಿಯೇ ! ನೀವು ಬಹುಕಾಲದಿಂದ ಮಾಡಿದ ಹೋಮಫಲ ದೇವಿ ಕೃಪೆ 

ಮಾಡಿದರು ತೆಗೆದುಕೊಳ್ಳಿ ಎಂದು ಆ ಫಲ ಕೊಟ್ಟು, ಅಲ್ಲಿಂದ ಇಲ್ಲಿಗೆ 

ಬಂದು, ದೇವಿ ಕೊಟ್ಟ ಅಭರಣ ಹತ್ತು ಸಾವಿರದ್ರವ್ಯಸಹ ಆ ಸಿದ್ದನಿಗೆ 

ಕೊಟ್ಟು ಕಳುಹಿಸಿ, ಸುಖವಾಗಿ ಇದ್ದನು. 


ಇಂತು ಕರ್ಣಾಟಭಾಪಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ವಿಜಯವತಿ ಹೇಳಿದ ಎರಡನೆಯ ಕಥೆ.

.........

=========================

೧೬ ಕರ್ಣಾಟಕ ಕಾವ್ಯಕಲಾನಿಧಿ, 

೩ ನೆಯ ಕಥೆ.


ಮೂರನೆಯ ದಿವಸದಲ್ಲಿ ಎಂದಿನಂತೆ ಭೋಜರಾಯನು ಸ್ನಾನ ದೇವ 

ತಾರ್ಚನೆಯಂ ಮಾಡಿಕೊಂಡು, ಭೋಜನವಂ ತಿರಿಸಿ ತಾಂಬೂಲವಂ ಸೇವಿ 

ಸಿಕೊಂಡು, ಸಿಂಹಾಸನದ ಬಳಿಗೆ ಬಂದು ಬಲದ ಕಾಲಂ ನೀಡುವ ಸಮಯ 

ದಲ್ಲಿ ಆ ಸೋಪಾನದ ಇಳೆಯವತಿಯೆಂಬ ಮರನೆಯ ದಂತದ ಪುತ್ತಳಿಯು 

ಅಟ್ಟಹಾಸಂಗೆಯ್ದು,-ಎಲೈ ಭೋಜರಾಯನೇ 'ಹೋಹೋ ! ನಿಲ್ಲು ನಿಲ್ಲು 

ನಮ್ಮೊಡಯನಾದ ವಿಕ್ರಮಾದಿತ್ಯರಾಯನ ಧೈರ್‍ಯ ಶೌರ್ಯಾದಿ ಗುಣಗಳುಳ್ಳಳ್ಳೊ 

ಡೆ ಈ ಸಿಂಹಾಸನವನೇರು, ಇಲ್ಲದಿದ್ದರೆ ಕೆಲಸಾರು. ಮೀರಿ ಕುಳತೆ 

ಯಾದರೆ ನಿನ್ನ ತಲೆ ಸದಸ್ರಹೋಳಾಗುವುದು ಎಂದು ಧಿಕ್ಕರಿಸಲಾಗಿ, ಭೋ 

ಜಾರಾಜನು ಬೇರೆ ಸಿಂಹಾಸನದಲ್ಲಿ ಕುಳಿತುಕೊಂಡು ಚಿತ್ರಶರ್ಮನಿಂದ ಕೇಳಿ 

ಸಿದ ಕಥೆ--


ಎಲೈ ಪುತ್ತಳಿಯೇ ಕೇಳು. ನಮ್ಮ ರಾಯನು ಧಾರಾಪುರದಲ್ಲಿ 

ಸುರರಾಜ್ಯಂಗೆಯ್ಯುವಲ್ಲಿ, ಒಂದು ದಿನ ಮಂಧರೆಯೆಂಬ ವೇಶಿಯು ತನ್ನ 

ವಿಟನಾದ ಚಿತ್ರಚೋರನೆಂಬ ಕಳ್ಳನ ಇಟ್ಟುಕೊಂಡು ಇರಲು, ಆ ಕಳ್ಳ 

ನು ಆ ವೇಶ್ಯಾಸ್ತ್ರೀಗೆ ಹೊರಗೆಲ್ಲಾ ಕಳ್ಳತನ ಮಾಡಿದ ಅಭರಣಗ 

ತಂದು ಕೊಡುತ್ತಾ ಇರಲು, ಒಂದಾನೊಂದು ದಿವಸದಲ್ಲಿ ಚಿತ್ರಚೋರನೊ 

ಡನೆ ಇಂತೆಂದಳು - -ಎಲೈ ಕಾಂತನೆ, ಚೋರನಾದ ನೀನು ಎನಗೆ ಪ್ರಾಣ 

ಕಾಂತನೆಂಬುವುದು ಲೋಕಪ್ರಸಿದ್ದವಾದುದು. ಆದರೂ ನನಗೊಂದಭಿಲಾ 

ಷೆಯುಂಟು. ಅದನೇನೆಂಬೆಯಾ ಕೇಳು. ಭೋಜರಾಯನ ಪತ್ನಿ ಪುಷ್ಪ 

ಧನ್ವಿನಿ ಕೊರಳಲ್ಲಿ ಹಾಕಿಯಿರುವ ರತ್ನಪದಕವ ತಂದುಕೊಟ್ಟೆಯಾದರೆ 

ನನ್ನ ಮನಸ್ಸಿಗೆ ಬಹಳ ಸಂತೋಷವಾದೀತು ಎಂದು ಹೇಳಲು ಆದ ತಂದು 

ಕೊಟ್ಟೇನೆಂದು ಹೊರಟು, ರಾಯನರಮನೆಯ ಬಳಿಗೆ ಬಂದು, ಕನ್ನವಿಕ್ಕಿ 

ಒಳಹೊಕ್ಕು, ಚಂದ್ರಶಾಲೆಯ ತೂಗುಮಂಚದಲ್ಲಿ ಮಲಗಿರುವ ರಾಯನ 

ಸತಿಯಂ ನೋಡಿ, ಸೌಂದರ್‍ಯ ರೂಪ ಕಂಡು, ಆಕೆಯ ಕೊರಳ ಮಧ್ಯದಲ್ಲಿ 

ರುವ ರತ್ನಪದಕವು ಕಂಡು, ಆಶ್ಚರ್‍ಯಗೊಳುತ್ತ ಮರೆಯಾಗಿ ನಿಂದಿರುವ 

ವೇಳೆಯಲ್ಲಿ ಚಂದ್ರೋದಯವಾಗಿ ಚಂದ್ರಕಿರಣ ಜಾಳಾಂದ್ರರಂಧ್ರದಲ್ಲಿ 



-------------------ಬತ್ತೀಸಪುತ್ತಳಿ ಕಥೆ.------------------------೧೭



ಬಂದು, ಎಸೆಯುವ ರಾಣಿಯ ಸ್ತನದ ಮಧ್ಯದಲ್ಲಿರುವುದ ರಾಯ ನೋಡಿ, 

1 ಅತಿತಯವಂ ಮಾಡಿ, ಈ ಚಂದ್ರಹೀಗೆ ಇರೆ ಕಾರಣವೇನೆಂದು1 ಯೋಚ 

ನೆಯಂ ಮಾಡುವುದ ಚೊರ ತಿಳಿದು ಇಂತೆಂದನು - ಎಲೈ ರಾಯನೇ ? 

ಪರಸ್ತ್ರೀಯರಿಗೆ ಮನಸ್ಸು 2ಉಂಟಾದ ನಿಮಿತ್ತ ಚಂದ್ರ ಛಿದ್ರನಾದ2ನೆಂದು 

ಹೇಳಿದ ಮಾತ ಕೇಳಿ, ಮೆಚ್ಚಿ, ಎಲೋ ನಿನಾರು ? ಎಂದು ರಾಯಂ ಕೇಳ 

ಲಾಗಿ,-- ನಾನು ಚಿತ್ರಚೋರನೆಂಬ ಕಳ್ಳನು, ನನ್ನ ವೇಶಿ ಮಂದರೆ ನಿಮ್ಮ 

ರಸಿಯ ಕೊರಲ ರತ್ನಪದಕವು ಬಯಸಿ ತರಹೇಳಿದುದರಿಂದ ಬಂದೆ 

ಎಂದೆದ ಮಾತಿಗೆ ಮೆಚ್ಚಿ, ಅವಗಾರದಕ ಸವಾಲಕ್ಷವರದ ಸಹ ಕೊಟ್ಟು 

ಮನ್ನಿಸಿ ಕಳುಹಿದನು. ಅದಕಾರಣ ನಮ್ಮ ರಾಯನಔದಾರ್‍ಯವೆಂತು ' ಎಂದು 

ಪೇಳಿದುದಕ್ಕೆ ಇಳೆಯವತಿಯು ನಸುನಗುತ್ತ ಹಾಸ್ಯಂಗೈದು ನಿನ್ನೊಡೆಯನೌ್ 

ದಾರ್‍ಯವೈಸೆ! ಎನ್ನೊಡೆಯನೌದಾರ್‍ಯಮಂ ಕೇಳಂದು ಪೇಳಿದ ಉಪಕಥೆ:-


ಕೇಳೈ ಚಿತ್ರಶರ್‍ಮನೇ! ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯ 

ವ ಸುಖದಿಂದ ಪಾಲಿಸುವಲ್ಲಿ ಒಂದುದಿನ ಬ್ರಹ್ಮರ್ಷಿಗಳು ಬ್ರಾಹ್ಮಣರು 

ವಿದ್ವಾಂಸರುಗಳ ಕರೆಸಿ, -ದೆವತೆಗಳಿಗೆ ತೃಪ್ತಿ ಪಡಿಸುವುದಕ್ಕೆ ಏನ ಮಾಡ 

ಬೇಕೆನ್ನಲಾಗಿ, ಸರ್ವರೂ-ಎಲೈ ರಾಯನೆ' ನೀನು ಮಹಾವುರುಷ ; 

ಕ್ಷತ್ರಿಯೋತ್ತಮನಾದ ನಿಮಿತ್ತ ರಾಜಸೂಯಯಾಗವ ಮಾಡಿದರೆ ದೇವತಾ 

ತೃಪ್ತಿಯಾಗಿ ಪಿತೃಗಳಿಗೆ ಸಂತೋಷವಾಗುವುದೆನ್ನಲಾಗಿ, ರಾಯನು ಒಪ್ಪಿ, 

ಅಶ್ವಮೇಧಯಾಗವ ಕೈಕೊಂಡು, ತನ್ನ ದೇಶದಮೇಲೆ ಕುದುರೆಯಂ 

ಬಿಟ್ಟು, ದಿಗ್ವಿಜಯಮಾಡಿ, ಗಂಗಾತೀರಕ್ಕೆ ಹೋಗಿ, ಯಾಗಶಾಲೆಯ ಕಟ್ಟಿಸಿ, 

ತನ್ನ ಪ್ರರೋಹಿತನಾದ ಇಂದ್ರನನ ಕರೆದು, ಸಮುದ್ರ ಮಧ್ಯಕ್ಕೆ 

ಹೋಗಿ, ಬಹು ಜ್ಞಾನರಕ್ತನಾಗಿ ತಪಸ್ಸು ಮಾಡುವ ಸತ್ಯಜ್ಞಾನಋಷಿಯಂ 

ಕರತರಹೇಳಿ ಕಳುಹಿಸಲಾಗಿ, ಆ ಪುರೋಹಿತರು ಸಮುದ್ರದ ಸಮೀಪಕ್ಕೆ 

ಹೊರಟುಬಂದು, ಸಮುದ್ರರಾಜನ, ಸ್ತುತಿಸಲು ; ಸಮುದ್ರರಾಜ ಪ್ರಸನ್ನ 

ನಾಗಿ-ಎಲೈ ವಿಪ್ರ ' ನಿನಗೇನು ಬೇಕು, ಕೇಳು-ಎನ್ನಲು ; ಅದಕ್ಕೆ ಅವನು 

...........

ಪಾ -1, ಪೂರ್ಣಚಂದ್ರನ ತೇಜಸ್ಸು ಈ ಸ್ತನದ ಮೇಲೆ ಏಕೆ ಖಿನ್ನ

ವಾಗಿದೆಯೋ, 2, ಮನಸ್ಸು ಮಾಡಿದವನು ತಾನೇ ಖಿನ್ನನಾದಾನು.



೧೮----------------ಕರ್ಣಾಟಕ ಕಾವ್ಯಕಲಾನಿಧಿ,------------------------


ಸತ್ಯಜ್ಞಾನಋಷಿಯಿರುವ ಸ್ಥಳ ತೋರಿಸಬೇಕೆನ್ನಲಾಗಿ ; ಸಮುದ್ರ ರಾಜ 

ಆರುಷಿಯ ತಪೋವನವಂ ತೋರಿಸಲು ; ಆ ದ್ವಿಜನು ಮುನಿಯ ಬಳಿಗೆ 

ಬಂದು, ನಮಿಸಿ ರಾಯ ಕಳುಹಿದ ವೃತ್ತಾಂತವಂ ಹೇಳಲಾಗಿ ; ಆರುಷಿ 

ಕೇಳಿ ಸಂತೋಷಪಟ್ಟು ಇಂತೆಂದನು'-ಎಲೋ ಬ್ರಾಹ್ಮಣ !  ನನಗೂ ವಿಕ್ರ 

ಮಾದಿತ್ಯರಾಯನಿಗೂ ಅತಿಸ್ನೇಹ. ಆತನಲ್ಲಿ ನಾನು, ನನ್ನಲ್ಲಿ ಆತ, ಎಲ್ಲಿ 

ಇದ್ದಾಗ್ಯೂ ಗಂಡಭೇರುಂಡದಂತೆ ಶಿರಸ್ಸೆರಡಾಗಿ ದೇಹ ಏಕವಾಗಿ ಇದ್ದೇವೆ. 

ನಾನು ಬರುವುದಕ್ಕೇನು ? ಬಂದೇನು. ಅಲ್ಲಿ ಯಜ್ಞಪೂರ್ತಿಯಾಗಿದೆ. 

ನಾನು ಬಂದು ಪ್ರಯೋಜನವಿಲ್ಲ, ನೀನು ಹೋಗು-ಎಂದು ಹೇಳಿ ರಾಯ 

ನಿಗೆ ಐದು ರತ್ನನಂ ಕೊಟ್ಟು, ಅರತ್ನಗಳ ಪರೀಕ್ಷೆಯ ಪೇಳಿ, ಕಳುಹಿ 

ಸಲು ; ಅಪುರೋಹಿತ ರಾಯನ ಬಳಿಗೆ ಬಂದು, ಆ ರುಷಿಯೆಂದ ಮಾತಿನ 

ವಿವರ ಹೇಳಿ, ಐದು ರತ್ನವಂ ಮುಂದಿರಿಸಲಾಗಿ ; ಅಷ್ಟದಲ್ಲಿ ಯಜ್ಞಪೂರ್ತಿ 

ಯಾಗಿ ಮಂಗಳಾವಭೃಥಸ್ನಾನವು ತೀರಿ, ಸಕಲರಿಗೆ ದಾನದಕ್ಷಿಣೆಗಳ 

ಕೊಟ್ಟು, ಬಳಿಕ ರಾಯನೈದು ರತ್ನದ ಪರೀಕ್ಷೆ ಕೇಳಲಾಗಿ, ಪುರೋಹಿತ 

ಇಂತೆಂದನು -ಈ ಪಂಚರತ್ನದಲ್ಲಿ ಈರತ್ನ ಸುವರ್ಣದ್ರವ್ಯ ಕೊಡುವುದು; 

ಈರತ್ನ ಚತುರಂಗಸೇನೆ ವಾಹನಗಳ ಕೊಡುವುದು ; ಈರತ್ನ ದಿವ್ಯ 

ದುಕಲಾಭರಣಗಳ ಕೊಡುವುದು, ಈರತ್ನ ಸುಂದರಸ್ತ್ರೀಯರಂ ಕೊಡು 

ವುದು : ಈರತ್ನ ಮೃಷ್ಟಾನ್ನ ಶಾಕವಂ ಕೊಡುವುದು ಎಂದು ಋಷಿ ಅನು 

ಗ್ರಹಿಸಿ ಕೊಟ್ಟು ಇದ್ದಾರೆ ಎಂದು ಅರಿಕೆಯಂ ಮಾಡಲಾಗಿ, ರಾಯ 

ಪರಿತೋಷಮಂ ಮಾಡಿಕೊಂಡು ಎಲೈ ಪುರೋಹಿತನೇ ! ಯಜ್ಞದ ದಾನ 

ದಕ್ಷಿಣೆ ನಿನಗೆ ಕೊಡಲಿಲ್ಲ ; ಈಐದು ರತ್ನದಲ್ಲಿ ನಿನಗೆ ಬೇಕಾದ ಒಂದು 

ರತ್ನವ ತೆಗೆದುಕೊ ಎನ್ನಲಾಗಿ ; ಅವ, ತನ್ನ ಮನೆಗೆ ಹೋಗಿ ಬಂದು ತೆಗೆ 

ದುಕೊಳ್ಳುವೆನೆಂದು ರಾಯನಿಗೆ ಬಿನ್ನೈಸಿ, ತನ್ನ ಮನೆಗೆ ಹೋಗಿ, ನಾಲ್ವರು 

ಮಕ್ಕಳು ಪತ್ನಿ ಸಹ ಕರೆದು, ಅವರ ಕೂಡೆ ಈವಿವರವ ವಿರಚಿಸಲಾಗಿ; 

ಪತ್ನಿ-ಎಲೈ ಪುರುಷನೇ ! ಬಹುಕಾಲ ಕಷ್ಟ ಪಟ್ಟಿರುವುದರಿಂದ ದುಕೂ 

ಲಾಭರಣ ಕೊಡುವ ರತ್ನ ತಾರೆಂದುದ, ಹಿರಿಯಮಗ ಕೇಳಿ-ಅದು ಬೇಡ 

ಸುವರ್ಣದ್ರವ್ಯ ಕೊಡುವ ರತ್ನ ತಾರೆಂದುದ, ಎರಡನೆಯ ಮಗ ಕೇಳಿ-ಚತು 

ರಂಗಸೇನೆ ವಾಹನ ಕೊಡುವ ರತ್ನ ತಾರೆಂದುದ, ಮೂರನೆಯ ಮಗ ಕೇಳಿ



------------------ಬತ್ತೀಸಪುತ್ತಳಿ ಕಥೆ.-----------------------೧೯ 


ಮೃಷ್ಟಾನ್ನಶಾಕ ಕೊಡುವ ರತ್ನ ತಾರೆಂದುದ, ನಾಲ್ಕನೆಯ ಮಗ ಕೇಳಿ-- 

ಸುಂದರ ಸ್ತ್ರೀಯಂ ಕೊಡುವ ರತ್ನ ತಾರೆಂದು ಐವರೂ ಮನಬಂದ ರೀತಿ 

ಯಲ್ಲಿ ಹೇಳಲಾಗಿ; ಅವಿಪ್ರನು ಬಹುಕಿಂಕೃತಿಯಿಂದ ರಾಯನ ಬಳಿಗೆ 

ಬಂದು, ತನ್ನ ಮನೆಯ ವಿಚಾರ ಶ್ರುತಪಡಿಸಲಾಗಿ ; ರಾಯ ಕೇಳಿ ಸಂತೋ 

ಷಚಿತ್ತನಾಗಿ, ಆತನ ಸತಿಸುತರಂ ಕರೆಸಿ, ಅವರವರು ಕೇಳಿದ ರತ್ನವಂ 

ಅವರವರಿಗೆ ಕೊಡುವಂತೆ ಹೇಳಿ, ಕೊಟ್ಟು, ಪುರೋಹಿತನಿಗೆ ಬೇಕಾದಷ್ಟು 

ದ್ರವ್ಯ ಕೊಡಿಸಿ, ಕಳುಹಿಸಿ ಸುಖದಿಂದಿದ್ದನು, ಕಣಾ! ನಮ್ಮ ವಿಕ್ರಮಾದಿ 

ತ್ಯನ ಉದಾರಗುಣಗಳುಂಟೆ ! ಎಂದು ನಸುನಕ್ಕು ಕೈ ಹೊಯ್ದು ಕೆಲಸಾ 

ರೆಂದುದು.


ಇಂತು ಕರ್ಣಾಟಕಭಾವಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಇಳೆಯವತಿ ಹೇಳಿದ ಮನೆಯ ಕಥೆ ಸಂಪೂರ್ಣ.

.........


              ೪ ನೆಯ ಕಥೆ.


ನಾಲ್ಕನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆಯ 

ಮಾಡಿಕೊಂಡು, ಪೋಡಶ ಮಹಾದಾನಗಳ ಮಾಡಿ, ಗಂಧಮಾಲ್ಯಾಭರಣಾ 

ಲಂಕೃತನಾಗಿ, ಚಿತ್ರಶರ್ಮನ ಕೈಲಾಗಿನಲ್ಲಿ ಓಲಗಲೆಗೆ ಬಂದು ಸಿಂಹಾಸ 

ನದೆಡೆಗೆ ಬಂದು, ತನ್ನ ಬಲದ ಕಾಲಂ ನೀಡುವ ಸಮಯದಲ್ಲಿ, ಆ ಸೋಪಾ 

ನದ ಸುರತಪ್ರಿಯೆ ಎಂಬ ಪುತ್ತಳಿಯು-ಹೋ ಹೋ ! ನಿಲ್ಲು ನಿಲ್ಲು, 

ನನ್ನೊಡೆಯನಾದ ವಿಕ್ರಮಾದಿತ್ಯರಾಯನ ಸಹನಾದಿಗುಣಗಳುಳ್ಳಡೆ 

ಸಿಂಹಾಸನವನೇರು, ಇಲ್ಲವಾದರೆ ಕೆಲಸಾರು. ಮೀರಿ ಕುಳಿತೆಯಾದರೆ 

ನಿನ್ನ ತಲೆ ಸಹಸ್ರ ಹೋಳಾಗುವುದು ಎಂದು ಧಿಕ್ಕರಿಸಲಾಗಿ ; ಭೋಜರಾ 

ಯನು ಖಿನ್ನನಾಗಿ ಬದಲು ಸಿಂಹಾಸನದಲ್ಲಿ ಕುಳಿತುಕೊಂಡು, ಚಿತ್ರಶರ್ಮ 

ನಿಂದ ಪೇಳಿಸಿದ ಕಥೆ ..


ಎಲೈ ಪುತ್ಳಿಯೇ ! ಕೇಳು, ನಮ್ಮ ರಾಯನು ಧಾರಾಪುರದಲ್ಲಿ 

ಸುಖರಾಜ್ಯಂಗೆಯ್ಯುವಲ್ಲಿ ಒಂದುದಿನ ಒಬ್ಬ ಲೋಕಯಾತ್ರಿಕನೆಂಬ ಕವೀ 

ರನು ಬಂದು, ಆಶೀರ್ವಾದಮಾಡಿ ಕಾಣಿಸಿಕೊಳ್ಳಲು ; ಆತನ ಸತ್ಕರಿಸಿ 


೨೦-----------------------ಕರ್ಣಾಟಕ ಕಾವ್ಯಕಲಾನಿಧಿ.-------------------------


ಕುಳ್ಳಿರಿಸಿಕೊಂಡು, ಕುಶಲಪ್ರಶ್ನೆ ಮಾಡಿ, - ಎಲೈ ನೀವೆಲ್ಲಿಂದ ಬಂದಿರಿ ? 

ಎಂದು ರಾಯಂ ಕೇಳಲು -ಎಲೈಮಹಾರಾಯನೇ ! ಕೈಲಾಸವೆಂಬ ರಜ 

ತಾದ್ರಿಯಿಂದ ಬಂದೆವು, ಎನಲಾಗಿ ; ಅಲ್ಲಿಗೆ ಒಡೆಯನಾದ ಶಿವನು ಕ್ಷೇಮ 

ದಲ್ಲಿದ್ದಾರೆಯೆ? ಎಂದು ಕೇಳಲು ; ಅಮಾತಿಗವನು ಇಂತಂದೆನು - 

ಕೇಳೈಯ್ಯಾ ರಾಯ " ಶಿವನು ಮೃತನಾದ, ಕೈಲಾಸದಲ್ಲಿಲ್ಲ ಎನಲು - ರಾಯ 

-ಅದು ಹೇಗೆ ? ಎಂದರೆ, ಹರಿಗರ್ಧಶರೀರ, ಗಿರಿಜೆಗರ್‍ಧದೇಹ ಕೊಟ್ಟು ತೀರಿ 

ಹೋದುದರಿಂದ ಅವನಲ್ಲಿದ್ದ ಗಂಗೆ ಸಮುದ್ರನ ಹೊಕ್ಕಳು, ಚಂದ್ರ ಖೇಚ 

ರದಲ್ಲಿ ಚರಿಸುತ್ತಿದ್ದಾನೆ : ಶೇಷ ಪಾತಾಳವ ಸೇರಿದ, ಐಶ್ವರ್ಯ ನಿನಗಾಯ್ತು : 

ಅತನ ಭಿಕ್ಷಾಟನ ಎನಗಾಯ್ತು ಎಂದು ಹೇಳದದಕ್ಕೆ ರಾಯಂ ಮೆಚ್ಚಿ 

ಅವನಿಗೆ ಸವಾಲಕ್ಷವರಹನಂ ಕೊಟ್ಟು ಕಳುಹಿಸಿದನು ಕಣಾ ' ನಮ್ಮ 

ರಾಯನೌದಾರಗುಣಗಳು ಇಲ್ಲಾದರುಂಟೆ' ಎಂದು ಹೇಳದ ಮಾತಿಗೆ 

ಸುರತಪ್ರಿಯ ಎಂಬ ಪುತ್ತಳಿ ನಗುತ್ತ ಹಾಸ್ಯಂಗೈದು 1ಪೇಳಿದ ಉಪಕಥೆ1 - 


ಕೇಳೈ-ಚಿತ್ರಶರ್‍ಮನೇ' ನಮ್ಮ ವಿಕ್ರಮಾದಿತ್ಯರಾಯನು ಸುಖ 

ದಿಂದ ರಾಜ್ಯನ ಪಾಲಿಸುತ್ತಿರುವಲ್ಲಿ ಒಂದು ದಿನ ಬೇಡರು ಬಂದು-ಎಲೈ 

ಮಹಾರಾಯನೆ! ಮುನಿಗಳಾಶ್ರಮಗಳಲ್ಲಿ ನದೀತೀರಗಳಲ್ಲಿ ಕ್ರೂರ ಮೃಗಗಳ 

ಉಪದ್ರವಾಗಿದೆ, ಆದಂ ಪರಿಹರಿಸಬೇಕೆಂದು ವಿಜ್ಞಾಪಿಸಲಾಗಿ : 

ರಾಯನು ಅಕ್ಷಣವೇ ಅಯುಧಂಗಳ ತೆಗೆದುಕೊಂಡು ಹೊರಟು, ವನಗ 

ಳಲ್ಲಿ ಬೇಂಟೆಯನಾಡುತ ಬರುವಲ್ಲಿ, ಸೇನೆ ಹಿಂದೆ ಸಿಕ್ಕಿ ರಾಯನು ಓರ್ವನೆ 

ಕ್ಷುತ್ತಿನಿಂದ ಬಳಲಿ, ಒಂದು ವಟವೃಕ್ಷದ ಕೆಳಗೆ ಕುಳಿತಿರುದಲ್ಲಿ, ಈ ಪಟ್ಟ 

ಣದ ಅಗ್ರಹಾರದಿಂದ ದೇವರ್ಮನೆಂಬ ಬ್ರಾಹ್ಮಣ ಅಗ್ನಿಹೋತ್ರವಂ 

ಮಾಡಿ ಯಾಗಾದಿ ಕೃತ್ಯಗಳಂ ತೀರಿಸಿ ಶುಚಿರ್‍ಭೂತನಾಗಿ ದಎರ್‍ಭೆಯ ನಿಮಿತ್ತ 

ವನಕ್ಕೆ ಬಂದು ದರ್ಭೆಯ ಕೊಯ್ದು ಪಿಂಡಿಯಂ ಕಟ್ಟಿ ತಗೆದುಕೊಂಡು 

ಬರುವಲ್ಲಿ, ವೃಕ್ಷದಡಿಯಲ್ಲಿ ಕುಳತಿರ್ದ ರಾಯಸಂ ಕಂಡು. ಸಮೀಪಕ್ಕೆ 

ಹೋಗಿ-ಎಲೈತೇಜಸ್ವಿಯೆ' ' ಈ ಅರಣ್ಯಕ್ಕೆ ಬಂದ ಕಾರಣವೆನೆಂದು 

ಕೇಳಲಾಗಿ: ರಾಯು--ಎಲೈ ಶ್ರೋತ್ರಿಯನೆ ನಾನು ಮೃಗಯಾರ್ಧವಾಗಿ 

...............

ಪಾ - 1, ಇಂತೆಂದುದು. ಹೀಗೆ ಎಲ್ಲಾ ಹೀಗೆ ಎಲ್ಲಾ ಕಥೆಯಲ್ಲಿ ಇದೆ.



----------------------ಬತ್ತೀಸ ಪುತ್ಥಳಿ ಕಥೆ.---------------------------೨೧ 


ಬಂದೆ, ಸೇನೆ ಹಿಂದದುದು; ಬಳಲಿ, ನಾನು ಕುಳಿತಿದ್ದೇನೆ ಏನ್ನಲಾಗಿ 

ಆವಿಪ್ರ ತನ್ನ ಗಿಂಡಿಯ ತೀರ್‍ಥವವನ್ನೆರೆದು, ಪಾತ್ರೆಯೊಳಿದ್ದ ಅನ್ನವಂ 

ಬಡಿಸಿ, ಉಪಚರಿಸಲಾಗಿ, ರಾಯನು ಕರುಣಚಿತ್ತದಿಂದ-ಎಲೈ ಬ್ರಾಹ್ಮ 

ಣೊತ್ತಮನೇ ! ನಿನ್ನ ಉಪಚಾರದಿಂದ ನಾನು ಚೈತನ್ಯನಾದೆ . ನಿನಗೆ 

ಬೇಕಾದುದ ಕೆಳಿಕೊ ಕೊಡುವೆ ಎನ್ನಲಾಗಿ, ಎಲೈ ರಾಜೇಂದ್ರನೇ ! 

ನನಗೆ ಕೊಡುವುದುಂಟಾದರೆ ನನ್ನ ಆಶ್ರಮದ ಬಳಿಯಲ್ಲಿ ಅಗ್ರಹಾರವಂ 

ಕಟ್ಟಿಸಿ, ಒಬ್ಬೊಬ್ಬ ಬ್ರಾಹ್ಮಣರಿಗೆ ಕೊಟಿಕೋಟಿ ದ್ರವ್ಯ ಕೊಟ್ಟರೆ ನನ್ನ 

ಅಭೀಷ್ಟ ಸಲುವುದೆನ್ನಲಾಗಿ, ರಾಯು ಒಪ್ಪಿ, ಹಾಗೆಯೇ ಮಾಡುವೆನೆಂದು 

ಮಾತುಕೊಟ್ಟು, ಅವನ ಕಳುಹಿಸಿ, ಅಲ್ಲಿಂದ ಬಂದು, ಆ ವಿಪ್ರನಾಶ್ರಮದಡೆ 

ಯಲ್ಲಿ ಅಗ್ರಹಾರವ ಕಟ್ಟಿಸಿ, ಜನಮೇರ ಕೋಟಿಕೋಟಿ ವರಹ ಕೊಟ್ಟು 

ಸುಖವಾಗಿ ಇರಿ-ಎಂದು ಹೇಳಿ, ರಾಯನು ಇರುತ್ತಿರಲು ಅದೇವಶರ್‍ಮ 

ನೆಂಬ ದ್ವಿಜನು ರಾಯನ ಧೈರ್‍ಯ ನೋಡಬೇಕೆಂದು ರಾಯನ ಕುಮಾರ 

ಚಂದ್ರಶೇಖರರಾಯನ ಆರೂ ಕಾಣದಂತೆ ತನ್ನ ಮನೆಗೆ ಕರೆದುಕೊಂಡು 

ಹೋಗಿ ಇರಿಸಿಕೊಳ್ಳಲು, ರಾಯರು ಮಗುವಿಲ್ಲವೆಂಬುದನ್ನು ಕೇಳಿ ವ್ಯಸನ 

ಪಡುತ್ತ. ಊರನಲ್ಲಿ ಹುಡುಕಿಸುತ್ತಿರಲು ಆ ವೇಳೆಯಲ್ಲಿ ದೇವಶರ್‍ಮ ಆ 

ಮಗುವಿನಾಭರಣದ ತಂದು ಪೇಟೆಯಲ್ಲಿ ಕ್ರಯಮಾಡುವುದಂ ಕಂಡು, ತಳ 

ವಾರರು ರಾಯನ ಬಳಿಗವನ ಕರೆತರಲಾಗಿ ರಾಯನು- ಎಲೋ ಬ್ರಾ 

ಹ್ಮಣಾ!  ನನ್ನ ಮಗುವಿನ ಭಂಗಾರ ನಿನಗೆಲ್ಲಿ ಬಂದಿತೆಂದು ಕೇಳಲು ; 

ಎಲೈ ರಾಯನೇ' ಈಒಡವೆಗಾಶೆಪಟ್ಟು ಮಗುವಂ ಕೊಂದೆನೆನ್ನಲಾಗಿ, 

ರಾಯನು ವಿಸ್ಮಿತನಾಗಿ -ನಾವು ಇವನ ಮಾಡುವುದೇನು ? ನನ್ನ ಕರ್‍ಮಾ 

ನುಗುಣ್ಯದಿಂದ ಇವನಿಗೆ ಈ ದುರ್‍ಬುದ್ಧಿ ಹುಟ್ಟಿತೆಂದು ಧೈರ್‍ಯವಿಡಿದು, 

ಎಲೋ ವಿಪ್ರ' ನೀನು ದ್ರವ್ಯಾಪೇಕ್ಷೆಯಿಂದ ಈ ಕೆಲಸ ಮಾಡಿದವನು 

ಹೊರತು ಮತ್ತು ಬೇರೆ ಇಲ್ಲವೆಂದು. ಆದಾಗ್ಯೂ ಮುಂದೆ ಇಂತಹ ಕಾರ್‍ಯ 

ವಂ ಮಾಡದಿರು ಎಂದು, ಅವನಿಗೆ, ಕೋಟಿ ಕೋಟಿ ಧನವಂ, ಕೊಟ್ಟು ಕಳುಹಿ 

ಸಲು ; ತರುವಾಯ ಅವ ತನ್ನ ಮನೆಗೆ ಬಂದು ಮಗುವಂ ಕರಕೊಂಡು 

ಹೋಗಿ ರಾಯನಿಗೊಪ್ಪಿಸಿ , ಎಲೈಮಹಾರಾಯ' ನಿನ್ನ ಧೈರ್‍ಯ ಪರೀಕ್ಷೆಗಾಗಿ 

ನಾ ಕೆಲಸ ಮಾಡಿದೆ ಎನ್ನಲು: ರಾಯ ಮೆಚ್ಚಿ ಮತ್ತು ಹತ್ತು ಕೋಟಿ 


೨೨------------------ಕರ್ಣಾಟಕ ಕಾವ್ಯ ಕಲಾನಿಧಿ------------------------------


ವರಹನ ಕೊಟ್ಟು ಕಳುಹಿಸಿದನು, ಕಣಾ! ನಮ್ಮ ರಾಯನೌದಾರ್‍ಯ 

ಧೈಯ್ಯಾದಿ ಗುಣಗಳುಂಟೆ !


ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ 

ಚರಿತ್ರೆಯಲ್ಲಿ ಸುರತಪ್ರಿಯೆಯೆಂಬ ಪುತ್ತಳಿ ಪೇಳಿದ ನಾಲ್ಕನೆಯ ಕಥೆ 

***


೫ ನೆಯ ಕಥೆ.


ಐದನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ 

ಭೋಜನ ತಾಂಬೂಲಮಂ ತೀರಿಸಿಕೊಂಡು, ಸಿಂಹಾಸನದ ಬಳಿಗೆ ಎಂದಿನಂತೆ 

ಚಿತ್ರಶರ್‍ಮನ ಕೈಲಾಗಿನಿಂದ ಬಂದು, ನವರತ್ನಮಯವಾದ ಹಾವುಗೆಯ 

ಬಲದ ಕಾಲಂ ನೀಡುವ ಸಮಯದಲ್ಲಿ, ಆಸೋಪಾನದ ಆನಂದಸಂಜೀವಿನಿ 

ಯೆಂಬ ಪುತ್ತಳಿಯು-ಹೋ ಹೋ ! ನಿಲ್ಲು ನಿಲ್ಲು, ಎಲೈ ಭೋಜರಾಜನೆ! 

ನಮ್ಮ ಒಡೆಯನಾದ ವಿಕ್ರಮಾದಿತ್ಯರಾಯನ ಸಾಹಸಾದಿ ಗುಣಗಳುಂಟಾದರೆ 

ಈ ಸಿಂಹಾಸನವನೇರು, ಅಲ್ಲದೆ ಕೆಲಸಾರು, ಮೀರಿ ಕುಳಿತರೆ ತಲೆ 

ಸಹಸ್ರಹೋಳಾಗುವುದು, ಎನ್ನಲಾಗಿ; ರಾಯನು ಖಿನ್ನನಾಗಿ ಬೇರೆ ಸಿಂ 

ಹಾಸನದಲ್ಲಿ ಕುಳಿತುಕೊಂಡು, ಚಿತ್ರಶರ್ಮನಿಂದ ಕೇಳಿಸಿದ ಕಥೆ :


ಎಲೈ ಪುತ್ತಳಿಯೇ ! ಕೇಳು. ನಮ್ಮ ರಾಯನು ಧಾರಾಪುರದಲ್ಲಿ 

ಸುಖರಾಜ್ಯಂಗೆಯ್ಯುವಲ್ಲಿ ಅಪುರದ ಬಹುದರಿದ್ರನಾದ ವೀರಸೇನನೆಂಬ 

ವಿಪ್ರನಿಗೆ ಭವಭೂತಿಯೆಂಬ ಮಗನು, ಬಹು ಪುಣ್ಯವಂತನಾದ ಪುಷ್ಪದತ್ತ

ನೆಂಬ ದ್ವಿಜನಿಗೆ ಪಿಪ್ಪಲೀಶನೆಂಬ ಮಗನು, ಅವರಿಬ್ಬರೂ ತಮ್ಮ ತಮ್ಮ ತಂದೆ 

ಗಳಿಗೆ ಪಂಚಪ್ರಾಣವಾಗಿ ಇದ್ದರು. ಅವರಿಗೆ ಒಂದು ಅಕ್ಷರವೂ ಬಾರದ 

ನಿಮಿತ್ತ ವಿದ್ಯವಿಲ್ಲದ ಮಕ್ಕಳು ಇದ್ದು ಪ್ರಯೋಜನವಿಲ್ಲವೆಂದು ತಂದೆ 

ಗಳು ಆಡಿದ ಮಾತ ಕೇಳಿ, ಅವರಿಬ್ಬರೂ ಏಕವಾಗಿ ಹೊರಟು, ಮಂಡಲ 

ಮೂರ್ತಿಯೆಂಬ ಪಟ್ಟಣಕ್ಕೆ ಹೋಗಿ, ಕಾಳಶರ್ಮನೆಂಬ ಗುರುವಂ ಕಂಡು, 

ನಮಿಸಿ-ಎಲೈಗುರುವೇ ನಮಗೆ ಸರ್ವವಿದ್ಯವಂ ಹೇಳಿ ರಕ್ಷಿಸಬೇಕೆ 

ನ್ನಲು ; ಆಗುರುವು-ಎಲೈ ಶಿಷ್ಯರುಗಳಿರ ! ವಿದ್ಯೆ ಕಲಿಯಬೇಕಾದರೆ



----------------------ಬತ್ತೀಸಪುತ್ತಳಿ ಕಥೆ.----------------------೨೩


(ಇಲ್ಲ ದ್ರವ್ಯವ ಕೊಟ್ಟು ಕಲಿಯಬೇಕು, ಇಲ್ಲ ವಿದ್ಯವಂ ಕೊಟ್ಟು ಕಲಿ 

ಯಬೇಕು,) ಇಲ್ಲ ಸೇವೆಯಂ ಮಾಡಿ ಕಲಿಯಬೇಕು. ಇದೊಂದೂ ಇಲ್ಲ 

ದವನಿಗೆ ವಿದ್ಯೆ ಬಾರದೆಂದು ಗುರು ಆಡಿದ ಮಾತ ಕೇಳಿ, ಪಿಪ್ಪಲೀಶ ಬಹಳ 

ದ್ರವ್ಯವ ಕೊಟ್ಟು ತನಗೆ ವಿದ್ಯ ಹೇಳಿ ಎಂದನು ; ಭವಭೂತಿ, ನಾನು 

ನಿಮ್ಮ ಪಾದಸೇವೆ ಮಾಡುವೆನು ಎಂದನು. ಆ ಮಾತಿಗೆ ಗುರು ಒಡಂಬ 

ಟ್ಟನು. ಪಿಪ್ಪಲೀಶನಿಗೆ ಸಕಲವಿದ್ಯ ಬರಲಾಗಿ, ಅವನು ಗುರುಪೂಜೆಯನ್ನು 

ಮಾಡಿ, ಗುರುದಕ್ಷಿಣೆಯಂ ಕೊಟ್ಟು, ಗುರುವಿನ ಅಪ್ಪಣೆ ತೆಗೆದುಕೊಂಡು 

ಊರಿಗೆ ಹೊಡಲಾಗಿ ; ಭವಭೂತಿ-ತನಗೇನಪ್ಪಣೆ ಎಂದು ಕೇಳಿದುದಕ್ಕೆ 

ನೀನು ಇನ್ನು ಹತ್ತುದಿವಸ ಸೇವೆಮಾಡುತ್ತಿದ್ದು ಬಳಿಕ ಹೋಗು ಎನ್ನ 

ಲಾಗಿ ; ಭವಭೂತಿ ನಿಂತನು. ಪಿಪ್ಪಲೀಶ ಹೋದನು. ಮೇಲೆ ಗುರು 

ಸೇವೆ ಹತ್ತು ದಿನಮಾಡಿಕೊಂಡಿದ್ದಂದ ಭವಭೂತಿಯ ಕಂಡು, ಗುರುವಿಗೆ 

ಕಟಾಕ್ಷ ಬಂದು, ಚಂಡಿಕಾಮಂತ್ರವನ್ನು ಉಪದೇಶವಂ ಮಾಡಿ, ಅನುಗ್ರ 

ಹಿಸಿ ಊರ ಮುಂದಿರುವ ಚಂಡಿಕಾಲಯಕ್ಕೆ ಹೋಗಿ, ಈಮಂತ್ರವ 

ಭಜಿಸೆಂದು ಗುರುವು ನಿರೂಪಿಸಿ ಕಳುಹಲಾಗಿ ; ಭವಭೂತಿ ಅಜ್ಞಾ 

ನುಸಾರ ಚಂಡಿಕಾದೇವಿಯ ಗುಡಿಗೆ ಬಂದು, ತದೇಕಧ್ಯಾನದಿಂದ ಮೂರು 

ದಿನ ಉಪವಾಸದಿಂದ ಭಜಿಸಲಾಗಿ ಅದೇವಿ ಪ್ರಸನ್ನಳಾಗಿ ವಾಕ್ಸಿದ್ಧಿಯನ್ನು 

ಸಮಸ್ತವಿದ್ಯೆ ಬರುವ ವರವನ್ನು ಕೊಟ್ಟು ಮಾಯವಾದಳು. ಅಲ್ಲಿಂದ 

ಭವಭೂತಿ ಊರಿಗೆ ಬರುವಲ್ಲಿ ದಾರಿಯಲ್ಲಿ ಪಿಪ್ಪಲೀಶನು ಸಿಕ್ಕಿ ಇಬ್ಬರೂ 

ಜತೆಗೂಡಿ ಬರುತ್ತಿರುವಲ್ಲಿ, ಮಧ್ಯಮಾರ್ಗದ ಘೋರಾರಣ್ಯದಲ್ಲಿ ಪಿಪ್ಪಲೀ 

ಶನಿಗೆ ಬಹಳ ದಾಹ ಕಂಡು, ಅಲ್ಲಿ ನೀರು ಇಲ್ಲದುದರಿಂದ ಪಿಪ್ಪಲೀಶನು 

ಪರ್ಜನ್ಯ ಜಪವಂ ಮಾಡಲಾಗಿ, ಮೋಡಗಟ್ಟಿ ಮಳೆ ಬರುವಂತೆ ಅದುದ 

ರಿಂದ, ಭವಭೂತಿ ಕಂಡು ದಿಗ್ಭಂಧನ ಮಂತವಂ ಜಪಿಸಲು, ಬರುವ ಮಳೆ 

ಬಾರದುದರಿಂದ ಭವಭೂತಿಯೊಡನೆ ಈ ಪಿಪ್ಪಲೀಶನು ಇಂತೆಂದನು ;-- 

ಎಲೋ ಭವಭೂತಿ ! ಅದಿರಲಿ ! ನೀನು ಮಳಯ ಬರಿಸು ; ನಾನು ಬಾರ 

ದಂತೆ ಮಾಡೇನು ಎನ್ನಲಾಗಿ ; ಭವಭೂತಿ ಹೂಂಕರಿಸಲು ಮಳೆ ಬಹಳ 

ಹೊಯ್ಯಿತು. ಉದಕ ಸಮೃದ್ಧಿಯಾಗಲು, ಉದಕಮಂ ಕೊಂಡು ಪಥ 

ಶ್ರಾಂತರಾಗಿ ಮಲಗಲು ; ಪಿಪ್ಪಲೀಶನು ಕಟ್ಟಿದ ದಿಬ್ಬಂಧನ ತಪ್ಪಿದಕಾರಣ 



೨೪-----------------ಕರ್ಣಾಟಕ ಕಾವ್ಯಕಲಾನಿಧಿ.-------------------------


-ನಾನು ದ್ರವ್ಯ ಕೊಟ್ಟು ಕಲಿತ ವಿದ್ಯೆ ಪ್ರಯೋಜನವಿಲ್ಲವಾಯಿತು, ಇವ 

ನಿಗೆ ಫಲಿಸಿತೆಂದು ಮನದಲ್ಲಿ ಮತ್ಸರ ಹುಟ್ಟಿ ಕೊಲಲುದ್ಯೋಗಿಸಿ ಮಲಗಿದ್ದ 

ವನ ಮಂಡೆಯಂ ಕಾಲಲ್ಲಿ ಮೆಟ್ಟಿಕೊಂಡು ಇಂತೆಂದನು:-ಕೇಳೈ, ಗೌಳಿಯೂ 

ಗೊರವನ ಕೀರನೂ ಸೂಳಯ ಕವಿಗಳೂ ವಿದ್ಯಾವಂತರೂ ಇವರು 

ತಮಗಿಂತ ಅಧಿಕರನ್ನು ಕಂಡರೆ ಸೈರಿಸರು. ವೈರವಿಲ್ಲದೆ ಕಪಿಯೂ 

ಕಾಗೆಯೂ ನರಿಯ ಸ್ಪಜಾತಿಯ ಕೂಡಿರುವುವು. ಶ್ವಾನವು, ಸಿಂಹವು, 

ಆನೆಯು, ಬ್ರಾಹ್ಮಣರು ಸಹ ಸ್ವಜಾತಿಯ ಸೇರರೆಂಬ ನೀತಿಯಿರುವುದ 

ರಿಂದ ನಾನು ನಿನ್ನ ತಲೆಯ ತರೆಯದೆ ಬಿಡನೆಂದು ಭವಭೂತಿಯ ಶಿಖೆಯ 

ಪಿಡಿದು ಕೊರಲ ಹರಿಯಬರಲು, ಭವಭೂತಿಯು-ವಿದ್ಯಾಪರೀಕ್ಷೆಗಾಗಿ 

ನಾ ಮಾಡಿದುದು ನನ್ನ ಪ್ರಾಣಕ್ಕೆ ಬಂದಿತು' ಎಂದು ಖಿನ್ನನಾಗಿ-ಕೇಳೈ ಪಿಪ್ಪ 

ಲೀಶನೇ ' ಕೋಲುವವನಂತೂ ಕೊಲುವೆ ? ನನಗೂ ನಿನಗೂ ಬಾಲ್ಯದಾರಭ್ಯ 

ಅತಿಸ್ನೇಹ. ನಾವಿಬ್ಬರೂ ಒಬ್ಬತಾಯಿ ಮಕ್ಕಳಂತೆ ಇದ್ದವರು. ಇದ 

ಲ್ಲದೆ ಒಬ್ಬ ಗುರುವಿನ ಶಿಷ್ಯರು ನನ್ನ ತಾಯಿತಂದೆ ಮುಪ್ಪಿನವರು. 

ನಾನಲ್ಲದೆ ಇನ್ನು ಬೇರೆ ಮಕ್ಕಳಲ್ಲ ಆದರೂ ಅವರಿಗೆ “ ಅಪ್ರಶಿಖ ” 

ಎಂಬ ನಾಲ್ಕು ಅಕ್ಷರ ಬರೆದುಕೊಟ್ಟನು. ಅ ಚೀಟಿಯನ್ನು ನನ್ನ 

ತಾಯಿತಂದೆಗಳಿಗೆ ತಪ್ಪದೆ ಕೊಡು ಎಂದು ಬೇಡಿ, ನಂಬುಗೆಯಂ ತೆಗೆದು 

ಕೊಂಡು, ಚೀಟರಲ್ಲಿ ಅಕ್ಷರಗಳ ಬರದುಕೊಟ್ಟ ಬಳಿಕ ಪಿಪ್ಪಲೀಶ ಭವಭೂಧ 

ತಿಯ ಶಿಖೆಯಂ ಹಿಡಿದು, ತನ್ನ ಕಯ್ಯ ಖಡ್ಗದಿಂ ಕೊರಲ ಹರಿದು, ಒಂದು ಗುಡಿಯ 

ಬಳಿಯಲ್ಲಿ ಇರಿಸಿ, ಆ ಬಳಿಕ ಊರಿಗೆ ಬಂದನು. ಈತ ಬಂದ 

ಸುದ್ದಿಯಕೇಳಿ ಭವಭೂತಿಯ ತಾಯಿತಂದೆಗಳು ಬಂದು ನಮ್ಮ ಮಗನೆಲ್ಲಿ ? 

ಎಂದು ಕೇಳಲಾಗಿ ; ಅದಕ್ಕೆ ಪಿಪ್ವಲೀಶನು --ಬರುವ ದಾರಿಯಲ್ಲಿ ಅವನಿಗೆ 

ಹೊಟ್ಟೆಶೂಲೆಯು ಬಂದು ಸತ್ತನು. ಸಾಯುವಾಗ ಒಂದು ಚೀಟಿ ಬರೆದು 

ಕೊಟ್ಟಿದ್ದಾನೆ, ಎಂದು ಆಚೀಟಿಯನ್ನು ಕೊಟ್ಟನು. ಅವರು ಅದಂ 

ನೋಡಿ, ಏನು ಮಾತೂ ಇಲ್ಲದೆ, “ ಅಪ್ಶಿಖ ' ಎಂಬ ಅಕ್ಷರ ಬರೆದಿರ 

ಲಾಗಿ ; ಅದರರ್ಧ ತಿಳಿಯದೆ ಅವರು ರಾಯನ ಬಳಿಗೆ ಬಂದು, ಎಲ್ಲ ವರ್ತ 

ಮಾನ ಶ್ರುತಪಡಿಸಿ, ಆಚೀಟಿ ಮುಂದಿರಿಸಲಾಗಿ ; ರಾಜನು ಅದ ನೋಡಿದ 

ಬಳಿಕ, ಆದರು-ಎಲೈಮಹಾರಾಯ: ಈ ಅಕ್ಷರಾರ್ಧವ ಹೇಳಿಸಿ ನಮ್ಮ



---------------------ಬತ್ತೀಸ ಪುತ್ಥಳಿ ಕಥೆ.----------------------- ೨೫ 



ದುಃಖ ಪರಿಹರಿಸಿದರೆ ಸರಿ; ಇಲ್ಲದೆ ಇದ್ದರೆ ಊರ ಮುಂದಲ ಮಹಾಕಾಳಿ 

ಯೆದುರಾಗಿ ನಮ್ಮ ವಿತ್ತವಾರಯಾವತ್ತೂ ದಾನವಂ ಮಾಡಿ, ದಂಪತಿಸಹ 

ಅಗ್ನಿಪ್ರವೇಶಮಾಡುತ್ತ ಇದ್ದೇವೆ ಎನ್ನಲಾಗಿ; ರಾಯ ತನ್ನ ಸದರಿನಲ್ಲಿ ಇರುವ 

ಲಕ್ಷವೂ ತೊಂಬತಾರುಸಾವಿರಕವಿಗಳ ಇದರರ್ಥ ಹೇಳಿ, ಎಂದು ಅಚೀಟಂ 

ಕೊಟ್ಟನು. ಯಾವತ್ತು ಕವಿಗಳೂ ಚೀಟ ನೋಡಿ ಸುಮ್ಮನಿದ್ದರು. ಅಷ್ಪ 

ರಲ್ಲೇ ರಾಯ ಎದ್ದು ಹೋದನು. ಹೀಗೆ ಐದಾರು ದಿನವಾದರೂ ಅದರರ್ಥ 

ಹೇಳದಿರಲು; ರಾಯನು ಮಹಾಕೋಪದಿಂದ 'ನಾಳೆ ಈಅಕ್ಷರಾರ್ಥ ಹೇಳಿ 

ದರೆ ಸರಿ; ಇಲ್ಲದೆ ಇದ್ದರೆ ನಿಮ್ಮನ್ನೆಲ್ಲಾ ಕಲ್ಲುಗಾಣಕ್ಕೆ ಹಾಕಿಸುವೆ' ನೆಂದು 

ಕಟ್ಟಳೆಯಂ ಮಾಡಲಾಗಿ, ವರರುಚಿ ಮುಂತಾದ ಕವಿಗಳೆಲ್ಲಾ ಹರಹರ ' 

ನಮಗೆ ಮರಣಕಾಲ ಬಂತೇ ', ಎಂದು ಯೋಚಿಸುವಲ್ಲಿ ಕಳಿಂಗದೇಶದಿಂದ 

ಒಬ್ಬ ವಿದ್ವಾಂಸವಿಪ್ರನು ಬಂದು, ಈ ಸಮಾಚಾರವ ಕೇಳಿ, ಆ ಕ್ಷಣವೇ 

ಆ ಮಹಾಕಾಳಿಯ ಗುಡಿಯ ಬಳಿಗೆ ಹೋಗಿ, ಸ್ನಾನವಂ ಮಾಡಿ, ಆ ದೇವಿ 

ದರ್ಶನವಂ ಮಾಡಿಕೊಂಡು ಬರುವಷ್ಟಲ್ಲೇ, ಸಾಯಂಕಾಲವಾಗಲಾಗಿ, 

ಅವನು ಅಲ್ಲೇ ಇರಲಾಗಿ, ಅರ್ಧರಾತ್ರಿಯಲ್ಲಿ ದೇವಿ ಬೇಂಟೆನಿಮಿತ್ತ ಹೊರ 

ಟುದನ್ನು ಭೂತಗಣವೆಲ್ಲ ಕಂಡು ಎಲೆ ತಾಯೆ ! ನಮಗೆ ಆಹಾರವಿಲ್ಲ 

ವೆಂದು ಬಿನ್ನಯಿಸಲಾಗಿ, ದೇವಿಯು ಸೈರಿಸಿ, ನಾಳೆ ಭೋಜರಾಯ ತನ್ನ 

ಬಳಿಯಲ್ಲಿ ಇರುವ ಕವಿಗಳೆಲ್ಲರನೂ ಕಲ್ಲುಗಾಣಕ್ಕೆ ಹಾಕಿಸುವನು. ಆಗ 

ನಿಮಗೆ ಆಹಾರಕೊಡಿಸುವನು ಎಂದು ಹೇಳಲಾಗಿ; “ ಇದು ನಿಜವೇ? ಆ 

ರಾಯ ಕವಿಗಳಿಗೆ ಬದುಕುವಂಥವನು ; ಕಲ್ಲು ಗಾಣಕ್ಕೆ ಹಾಕಿಸುವ ಕಾರಣ 

ವೇನು?” ಎಂದು ಕೇಳಲಾಗಿ, “ಈ ಮಾತು ಅಬದ್ಧವಲ್ಲವಲ -ಎಂದು 1ಎಲ್ಲ 

ವಿವರವಂ1 ಹೇಳಿ, ಆಬಳಿಕ ಅಕ್ಷರಾರ್ಥ ಹೇಳಿದಳು. ಅದೇನೆಂದರೆ-- 

"ಅನೇನ ತವ ಪುತ್ರಸ್ಯ ಪ್ರಸುಪ್ತಸ್ಯ ವನಾಂತರೇ | 

2 ಶಿಖಾಮಾತ್ರಮ2- ಪಾದೇನ ಖಡ್ಗೇನೋಪಹತಂ ಶಿರಃ ||"

................


ಪಾ --1. ಪಿಪ್ಪಲೀಶನೆಂಬಾತನು ಭವಭೂತಿಯೆಂಬವನ ಕೊರಲಂ ಕೊಯ್ದುದ 

ತಿಳಿಸೆ " ಅಪ್ರಶಿಖ ” ವೆಂಬ ನಾಲ್ಕು ಅಕ್ಷರವಂ ಬರೆದು ಕಳಿಸಿದನು. ಅದರ 

ಅರ್ಧವಂ ಹೇಳಲರಿದವರಿಲ್ಲ. ಆದುದರಿಂದ ರಾಯನು ಎಲ್ಲರನ್ನು ಕಲ್ಲುಗಾ 

ಣಕ್ಕೆ ಇಕ್ಕಿಸುವನೆಂದು ಕಟ್ಟು ಮಾಡಿದ್ದಾನೆ ಎಂದು. 

2. ಶಿಖಾಯಾಂ ಕ್ರೌಂಚ,



೨೬---------------------ಕರ್ಣಾಟಕ ಕಾವ್ಯ ಕಲಾನಿಧಿ,--------------------------


ಎಂದು ಪೂರ್ತಿ ಮಾಡಿ ಪೇಳಿದುದ,ಅಲ್ಲಿದ್ದಬ್ರಾಹ್ಮಣ ಕೇಳಿ,ಬೆಳಗಾಗೆ 

ರಾಯನ ಆಸ್ಥಾನಕ್ಕೆ ಬಂದು ಕವಿಗಳ ಸಮೀಪದಲ್ಲಿ ಕುಳಿತಿರುವಾಗ, ಕಳಿಂಗ 

ದೇಶದ ಬ್ರಾಹ್ಮಣ ಎದ್ದು ರಾಯನಿಗೆ ಆಶೀರ್ವಾದಮಾಡಿ ನುಡಿದನು:-ಕೇಳೈ 

ರಾಯ, ಅಕ್ಷರಾರ್ಥದ ವಿವರವೇನೆಂದರೆ-ಪಿಪ್ಪಲೀಶ ಭವಭೂತಿ ಇವರಿರ್ವರು 

ವಿದ್ಯಾಭ್ಯಾಸವ ಮಾಡಿ ಜತೆಗೂಡಿ ಅರಣ್ಯದಲ್ಲಿ ಬರುವಾಗ ವಿರೋಧಹುಟ್ಟಿ 

ಪಿಪ್ಪಲೀಕ ಭವಭೂತಿಯ ಶಿಖೆಯಂ ಪಿಡಿದು ಅವನ ಕೊರಲಂ ಹರಿದನು, 

ಎಂದು ಅಕ್ಷರಾರ್ಥ ಹೇಳಿದುದ ರಾಯ ಕೇಳಿ, ದಂಪತಿಗಳಿಗೆ ಹೇಳಲಾಗಿ; 

ಅವರು ಕೇಳಿ ಪ್ರಳಾಪದಿಂದ ಮಹಾಕಾಳಿಯ ಗುಡಿಯಬಳಿಗೆ ಹೋಗಿ, ಸ್ನಾನ 

ವಂ ಮಾಡಿ ಅಗ್ನಿಕೊಂಡವಂ ತೆಗೆದು ಬೆಂಕಿಯ ಹಾಕಿಸಿ ಹರಿದ್ರಾವಸ್ತ್ರವಂ 

ಧರಿಸಿ ತಮ್ಮ ಸರ್‍ವಸ್ವದಾನವಂ ಮಾಡಿ, ಅಗ್ನಿಗೆ ಬೀಳುವ ವೇಳೆಯಲ್ಲಿ ಆ 

ದೇವಿ ಪ್ರತ್ಯಕ್ಷವಾಗಿ, ಕೈವಿಡಿದು-"ಎಲೈ ದಂಪತಿಗಳರಾ! ಏತಕ್ಕೆ ಅಗ್ನಿಗೆ 

ಬಿದ್ದೀರಿ?" ಎಂದು ಕೇಳಲಾಗಿ, ಅವರಿಂತೆಂದರು: “ಓದೇವಿ! ನಮಗಿದ್ದ ಒಬ್ಬ 

ಮಗನ ಈ ಮೇರೆ ನೀನು ಮೂಡಿಸಿದ ಬಳಿಕ ನಮ್ಮ ದೇಹಗಳನ್ನೂ ನಿನಗೊ 

ಪ್ಪಿಸಿ ಪುಣ್ಯವಂ ಪಡೆಯಬೇಕೆಂದು ಈಕೆಲಸ ಮಾಡಿದೆವು" ಎನ್ನಲಾಗಿ; ಆದೇ 

ವಿಯು ಮೆಚ್ಚಿ ಅಗ್ನಿಗೆ ಏತಕ್ಕೆ ಬಿದ್ದೀರಿ? ನಿಮ್ಮ ಮಗ ಇಂಥ ವನದ ಗವಿಯ 

ಬಳಿಯಲ್ಲಿ ಮಲಗಿ ಇದ್ದಾನೆ. ಅಲ್ಲಿಗೆ ನೀವು ಹೋಗಿ ನಮ್ಮ ತೀರ್ಥವ ಹಾಕಿ 

ಕೈಯಲ್ಲಿ ನಮ್ಮ ಪ್ರಸಾದ ಕೊಟ್ಟರೆ ನಿಮ್ಮ ಮಗ ಎದ್ದು ನಿಮ್ಮ ಸಂಗಡ 

ಬರುವನು" ಎಂದು ಗುರುತ ಹೇಳಿ ಮಾಯವಾದಳು. ದಂಪತಿಗಳು ದೇವಿ 

ಹೇಳಿದ ವನದ ಗವಿಯೆಡೆಗೆ ಹೋಗಿ ಮಲಗಿರುವ ಮಗನಂ ಕಂಡು, ಅವನ 

ಮೇಲೆ ತೀರ್ಥವಂ ಹಾಕಿ, ಕೈಯಲ್ಲಿ ಪ್ರಸಾದ ಕೊಡಲು, ಭವಭೂತಿಗೆ ಜೀವ 

ಬಂದು, ಎದ್ದು, ತಾಯಿತಂದೆಗೆ ನಮಿಸಿ ನಿಂದಿರುವ ಮಗನ ನೋಡಿ, ಅತಿಸಂ 

ತೋಪದಿಂದ ಮಗನ ಕರೆದುಕೊಂಡು ಊರಿಗೆ ಬಂದು, ರಾಯನಿಗೆ ತಮ್ಮ 

ಮಗನ ತೋರಿಸಿದುದರಿಂದ, ರಾಯನು ಆ ಪಿಪ್ಪಲೀಶನ ಕರೆಸಿ, ಸಂಗಡ 

ಬಂದವನ ಹೀಗೆ ಕೊಲ್ಲಬಹುದೇ! ಎಂದು, ಅವನಿಗೆ ತಕ್ಕಶಿಕ್ಷೆಯಂ ಮಾಡಿಸಿ, 

ದಂಪತಿ ಮಗನ ಸಹ ಮನ್ನಿಸಿ, ಅಕ್ಷರಾರ್ಥ ಹೇಳಿದ ಬ್ರಾಹ್ಮಣನಿಗೆ ಸವಾ 

ಲಕ್ಷ ವರಹವಂ ಕೊಟ್ಟು ಕಳುಹಿಸಿದನು ಎಂದು ಹೇಳಿದುದಕ್ಕೆ ಆನಂದ 

ಸಂಜೀವಿನಿ ಎಂಬ ಪುತ್ತಳಿಯು ನಗುತ್ತ ಹಾಸ್ಯಗೈದು ಪೇಳಿದಉಪಕಥೆ:--



----------------ಬತ್ತೀಸವುತ್ತ ಕಥೆ.----------------------------೨೭ 


 ಕೇಳೈಯ ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯನು ಸುಖ 

 ದಿಂದ ರಾಜ್ಯಪಾಲಿಸುವಲ್ಲಿ ಒಂದುದಿನ ಒಡೋಲಗಕೊಟ್ಟು ಕುಳಿತಿರು 

 ವಾಗ ಅಲಂಬಕೀರ್ತಿ ಎಂಬ ಪುರದ ರನ್ನವರದನೆಂಬ ವ್ಯಾಪಾರಿ ಬಂದು, ಐ 

 ದು ರತ್ನವಂ ಕಾಣಿಕೆಯಿತ್ತು ರಾಯನ ಕಾಣಿಸಿಕೊಳ್ಳಲಾಗಿ ; ರಾಯನು 

 ಅವನ ಕುಳ್ಳಿರಿಸಿಕೊಂಡು, ''ಈ ರತ್ನಗಳಿಗೇನು ಕ್ರಯ ಹೇಳು" ಎನಲಾಗಿ, 

 ಅದಕ್ಕವನು-ಇನ್ನು ಹತ್ತು ರತ್ನ ಊರಲ್ಲಿ ಇದೆ, ಅದನ್ನು ತರಿಸಿದರೆ 

 ಆಬಳಿಕ ಕ್ರಯವಂ ಹೇಳುವೆ ” ಎಂದ ಕಾರಣ, ರಾಯನು ಗಾಳಿಯನೆಂಬ 

 ಮಣಿಯಗಾರ ಬಂಟನಂ ಕರೆದು, ಅಲಂಬಕೀರ್ತಿಯೆಂಬ ಪುರಕ್ಕೆ ಹೋಗಿ, 

 ಈ ರನ್ನವರದನ ಮನೆಯಲ್ಲಿ ಹತ್ತು ರತ್ನವಿದೆಯಂತೆ. ಅದ ತೆಗೆದು 

 ಕೊಂಡು ಮರುದಿನಕ್ಕೆ ಬಾರೆಂದು" ಕಟ್ಟಳೆ ಮಾಡಿ ಆವಾಣಿಜನ ಗುರುತಂ 

 ಕೊಟ್ಟು ಕಳುಹಿಸಲಾಗಿ ; ಅವನಾಪುರಕ್ಕೆ ಹೋಗಿ, ಅ ಸೆಟ್ಟಿಗುರುತ 

 ಅವನ ಮನೆಯವರಿಗೆ ಕೊಟ್ಟು ಹತ್ತು ರತ್ನ ತೆಗೆದುಕೊಂಡು ಬಹುವೇ 

 ಗದಿಂದ ಬರುವಾಗ, ಮಾರ್ಗದಲ್ಲಿ ಹುಸುಗಿಯೆಂಬ ಹೊಳೆ ಪೂರ್ಣಪ್ರವಾ 

 ಹದಿಂದ ಹರಿಯುತ್ತಿರುವುದಂ ಕಂಡು, ರಾಯನ ಕಟ್ಟು ಮೀರಿದರೆ ಶಿಕ್ಷೆ 

 ಯಾದೀತೆಂದು ಅಂಜಿ, ಅಂಬಿಗನ ಕರೆದು-ಈ ನದಿ ದಾಟಿಸೆನ್ನಲು, ಅಂಬಿ 

 ಗನು-'ತುಂಬಿದ ನದಿ ದಾಟಿಸುವುದು, ಮಹಾಪುರುಷರಲ್ಲಿ ವಿರೋಧಿಸು 

 ವುದು ಎರಡೂ ಆಗದು ಎಂಬ ನೀತಿಯಿರುವುದರಿಂದ ದಾಟಿಸಕೂಡದು" 

 ಎಂದನು. ಆ ಮಾತಿಗೆ, ನನ್ನ ಜೀವ ಹೋದರೂ ಹೋಗಲಿ, ಬೇಗ ದಾ 

 ಟಿಸು” ಎನ್ನಲಾಗಿ ; ಅಂಬಿಗ ಸುಮ್ಮನೆ ದಾಟಿಸುವುದಿಲ್ಲ” ಎನ್ನಲಾಗಿ, ಆ 

 ಹತ್ತು ರತ್ನದಲ್ಲಿ ಐದು ರತ್ನವ ಕೊಟ್ಟು, ಆನದಿಯಂ ದಾಟ, ರಾಯನ 

 ನೇಮಕದ ಮೇರೆ ಬಂದು, ರಾಯನೊಡನೆ, ತಾನು ಹೋಗಿ ಬಂದ ವೃತ್ತಾಂ 

 ತವರ ಶ್ರುತಪಡಿಸಿ, ಉಳಿದ ಐದು ರತ್ನವು ಮುಂದಿರಿಸಿ, ಭಯದಿಂ ನಿಂದಿ 

 ರಲು; ಆರಾಯನು ಐದು ರತ್ನವಂ ತೆಗೆದುಕೊಂಡು, ನೀನು ಕೊಟ್ಟು ಬಂದ 

 ಪಂಚರತ್ನದ ಕ್ರಯಕೊಡಿಸುವೆ ಹೆದರಬೇಡ” ಎಂದನು. ಅದುಕಾರಣ

 " ರಾಯ ರಾಜ್ಯಭಾರವಂ ಮಾಡಿದುದಕ್ಕೆ ಕಟ್ಟಲೆ ತಪ್ಪದೆ ನಡೆವುದೇ ಫಲ; 

 ತಪಸಿಗೆ ಚರ ತಪ್ಪದೆ ನಡೆವುದೇಫಲ ; ವಿದ್ಯೆ ಕಲಿತುದಕ್ಕೆ ಜ್ಞಾನೋದಯ 

 ವಾಗುವುದೆ ಫಲ ; ಧನಾಡ್ಯನಾದುದಕ್ಕೆ ದಾನ ಕೊಡುವುದೇ ಫಲ ” ಎಂಬ 



೨೮----------------ಕರ್ಣಾಟಕ ಕಾವ್ಯ ಕಲಾನಿಧಿ.-------------------


ನೀತಿಯಿಂ ನಮ್ಮ ಆಜ್ಞೆ ತಪ್ಪದಂತೆ ತನ್ನ ಜೀವ ಉಳಿಸಿಕೊಂಡು ಬಂದ 

ಬಂಟನಿಗೆ ಅವ ತಂದು ಒಪ್ಪಿಸಿದ ಐದು ರತ್ನವು ಅವನಿಗೆ ಕೊಟ್ಟು, ವರ್ತ 

ಕನಾದ ರನ್ನವರದನಿಗೆ ಹದಿನೈದು ರತ್ನದ ಕ್ರಯವು ಇನಾಮುಗಳು ಸಹ 

ಕೊಟ್ಟು ಮನ್ನಿಸಿ ಕಳುಹಿಸಿದನು ಕಣಾ!


ಇಂತು ಕರ್ಣಾಟಕಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಆನಂದಸಂಜೀವಿನಿ ಎಂಬ ಪುತ್ತಳಿ ಹೇಳಿದ ಐದನೆಯ ಕಥೆ.

.............

೬ ನೆಯ ಕಥೆ.


ಆರನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ 

ಭೋಜನ ತಾಂಬೂಲವ ತೀರಿಸಿಕೊಂಡು ಸಾಲಂಕಾರಭೂಷಿತನಾಗಿ 

ಚಿತ್ರಶರ್ಮನ ಕೈಲಾಗಿನಲ್ಲಿ ರತ್ನಖಚಿತವಾದ ಪಾವುಗೆ೦ ಮೆಟ್ಟಿಕೊಂಡು 

ಸಿಂಹಾಸನದ ಬಳಿಗೆ ಬಂದು, ಬಲದ ಕಾಲಂ ನೀಡುವ ಸಮಯದಲ್ಲಿ, ಆ 

ಸೋಪಾನದ ರತಿಯೇ ಎಂಬ ಪುತ್ತಳಿಯು-"ಹೋ ಹೋ ! ನಿಲ್ಲುನಿಲ್ಲು 

ಭೋಜರಾಯನೇ ! ನಮ್ಮ ರಾಯನಂತ ವೀರವಿತರಣಗಳುಡೆ ಏರು, 

ಇಲ್ಲದಿದ್ದರೆ ಕೆಲಸಾರು, ಮೀರಿ ಕುಳಿತೆಯಾದರೆ ತಲೆ ಸಹಸ್ರ ಹೋಳಾಗು 

ವುದು' ಎಂದು ಧಿಕ್ಕರಿಸಲಾಗಿ, ಭೋಜರಾಯನು ಬೇರೆ ಸಿಂಹಾಸನದಲ್ಲಿ ಕಾಳಿತು 

ಚಿತ್ರಶರ್‍ಮನಿಂದ ಪೇಳಿಸಿದ ಕಥೆ.


ಎಲೆ ಪುತ್ತಳಿಯೇ ಕೇಳು. ನಮ್ಮ ರಾಯನು ಧಾರಾಪುರದಲ್ಲಿ ಸುಖ 

ರಾಜ್ಯಂಗೆಯ್ಯುವಲ್ಲಿ ಬಂದುದಿನ ವೈಹಾಳಿಗೆ ಹೋಗಿ, ಶಿವನಸಮುದ್ರ ನೋ 

ಡುತ್ತ ಇರಲು, ಒಬ್ಬ ವಿಪ್ರನು ಕಟ್ಟಿಗೆಯ ಹೊರೆಯಂ ಹೊತ್ತುಕೊಂಡು 

ಹೊಳೆಯ ಕಷ್ಟದಿಂದ ದಾಂಟಿ ಬರುತ್ತಿರುವುದ ಕಂಡು, ಆತನು ದಾಂಟಿ ಈ 

ಚಿಗೆ ಬಂದಬಳಿಕ ರಾಯ ಇಂತೆಂದನು -"ಎಲಾ ಬ್ರಾಹ್ಮಣ! ಕಟ್ಟಿಗೆಯ 

ಹೊತ್ತು ಕಷ್ಟ ಪಡುವುದೇನು? ” ಎನ್ನಲಾಗಿ ; ಅವ-"ನನ್ನ ಪೂರ್ವಾರ್ಜಿತ" 

ವೆಂದು ಹೇಳಿದ ಮಾತಿಗೆ, ರಾಯನು ಮರುಗಿ, ಅವನಿಗೆ ಸವಾಲಕ್ಷವರಹ 

ಕೊಡಹೇಳಿ ನನಗೆ ಕಟ್ಟುಮಾಡಿಸಿದ. ಅದಿನ ಕೊಡದಿರಲು ಮರುದಿನ 



----------------------ಬತ್ತೀಸಪುತ್ತಳಿ ಕಥೆ,-----------------------೨೯ 


ಆತ ಬಂದು ರಾಯನ ಕೇಳಲು, ನನ್ನ ಕರೆದು "ಕೊಡಲಿಲ್ಲವೆ?” ಎಂದು ಕೇಳಿ 

ಅವನಿಗೆ "ಎರಡು ಸವಾಲಕ್ಷ ವರಹ ಕೊಡು” ಎಂಬದಾಗಿ ಹೇಳಿದನು. ಆ 

ದಿನವೂ ಕೊಡದೆ ಇರಲು, ಬೆಳಗಾಗಿ ಅವ ಬಂದು ಕೇಳಲು, ರಾಯನು 

“ಮೂರು ಸವಾಲಕ್ಷ ವರಹ ಕೊಡು" ಎಂಬುದಾಗಿ ಹೇಳಿದನು. ಆ ದಿನವು 

ಕೊಡದೆ ಇರಲು, ಮುರುದಿನ ಆತ ಬಂದು ರಾಯನ ಕೇಳಲು, ನಾಲ್ಕುಸವಾ 

ಲಕ್ಷ ವರಹ ತಾನೇ ಕೊಟ್ಟು ಮನ್ನಿಸಿ ಕಳುಹಿದನು. ಹೀಗೆ ಒಂದು 

ಮಾತಿಗೆ ಇಷ್ಟು ದ್ರವ್ಯ ಕೊಡುವರುಂಟೆ ! ಇಂಥ ವಿತರಣವುಳ್ಳವ ನಮ್ಮ 

ರಾಯನು, ಎಂದುದಕ್ಕೆ ರತಿಪ್ರಿಯೆ ಎಂಬ ಪುತ್ತಳ ನಗುತ್ತ ಹಾಸ್ಯಂಗೆಯ್ದು 

ಪೇಳಿದ ಉಪಕಥೆ :-


ಕೇಳೈಯ ಚಿತ್ರಶರ್ಮನೇ! ನಮ್ಮ ಒಡೆಯನಾದ ವಿಕ್ರಮಾದಿತ್ಯ 

ರಾಯನ ಪ್ರತಾಪವ, ಅದೆಂತೆನೆ-ನಮ್ಮ ವಿಕ್ರಮಾದಿತ್ಯರಾಯನು ರತ್ನಸಿಂ 

ಹಾಸನಾರೂಢನಾಗಿ ಸುಖದಿಂದ ರಾಜ್ಯಪಾಲಿಸುವಲ್ಲಿ ಬಂದುದಿನ ರಾಯ 

ಭೂಸಂಚಾರ ನಿಮಿತ್ತವಾಗಿ ಭಟ್ಟಿಯಂ ಕರೆದು, ''ನಾನು ಬರುವ ಪರಿಯಂ 

ತಕೂ ನೀನು ರಾಜ್ಯಭಾರವಂ ಮಾಡಿಕೊಂಡಿರು" ಎಂದು ನೇಮಿಸಿ, ತಾನು 

ಹೊರಟು ಪರಸಂಸ್ಥಾನಕ್ಕೆ ಹೋಗಿ, ಅಲ್ಲಿ ಅರಸನ ಕಾಣಿಸಿಕೊಳ್ಳಲಾಗಿ, 

ಅರಸು-ನಿನಾರೆಂದು ಕೇಳಿದುದರಿಂದ ಇಂತೆಂದನು -"ನಾನು ವಿಕ್ರಮ ; 

ನನಗೆ ಏನಾದರೂ ಊಳಿಗ ನೇಮಕ ಮಾಡಿಸಿದರೆ ಇರುವೆ ಎನ್ನಲಾಗಿ, 

ಅರಸು -“ನಿನಗೇನು ಸಂಬಳ? ” ಎಂದು ಕೇಳಲಾಗಿ ; ''ಎಲೈ ಅರಸೇ ! ನನ್ನ 

ಇರಿಸಿಕೊಳ್ಳುವುದುಂಟಾದರೆ ಬಲಗೈಗೆ ಸಾವಿರ ವರಹ ; ಎಡಗೈಗೆ ಸಾವಿರ 

ವರಹ. ಈ ಮೇರೆಗೆ ಎರಡುಸಾವಿರ ವರಹ ಸಂಬಳ ಮಾಡಿಕೊಟ್ಟರೆ 

ಇರುವೆನು” ಎನಲಾಗಿ ; ಆ ಮಾತ ಸಮ್ಮುಖದಲ್ಲಿ ಇದ್ದವರೆಲ್ಲಾ ಕೇಳಿ--“

"ಇವನಿಗೆ ಏತಕ್ಕೆ ಇಷ್ಟು ಸಂಬಳ ?” ಎಂದು ಜರಿಯಲಾಗಿ; ಅರಸು "ಇವ 

ನಲ್ಲಿ ಅಂಥ ಪರಾಕ್ರಮವಿಲ್ಲದೆ ಇಷ್ಟು ಸಂಬಳ ಏತಕ್ಕೆ ಕೇಳಾನು? ” ಎಂದು 

ಇರಿಸಿಕೊಂಡು, ಅರಮನೆಯ ಒಳಬಾಗಿಲಲ್ಲಿ ಕಾದಿರುವ ಚಾಕರಿಗೆ ನೇಮ 

ಕಮಾಡಿದನು. ಒಂದು ತಿಂಗಳಾದುದರಿಂದ ಸಂಬಳ ಕೇಳುವುದಕ್ಕೆ ಅರ 

ಸಿನ ಬಳಿಗೆ ಬರಲಾಗಿ ; ಅಷ್ಟಲ್ಲೇ ಅರಸು ಎದ್ದು ಅರಮನೆಗೆ ಹೋಗ 

ಲಾಗಿ, ವಿಕ್ರಮನು ಸಂಬಳ ತೆಗೆದುಕೊಂಡಲ್ಲದೆ ಹೋಗಬಾರದೆಂದು, ಆ


೩೦-------------------------ಕರ್ಣಾಟಕ ಕಾವ್ಯಕಲಾನಿಧಿ,----------------------------


ರಾತ್ರಿ ಅಲ್ಲಿ ಕಾದಿದ್ದನು. ಆದಿನ ಮಳ, ಗುಡುಗು, ಮಿಂಚು, ಸಿಡಿಲಿನಾ 

ರ್ಭಟೆ-ಬಹಳವಾದುದರಿಂದ ಅರಮನೆಯ ಬಾಗಿಲ ಕಾವಲಜನರು ಯಾರೂ 

ಬಾರದೆ ಅಲ್ಲಿ ಒಬ್ಬನೇ ಕಾದಿರಲು | ಅರ್ಧರಾತ್ರಿಯಲ್ಲಿ ಅರಸು ಎದ್ದು 

ಅಂಗಳಕ್ಕೆ ಬರಲಾಗಿ, ಆ ವೇಳೆಯಲ್ಲಿ ಊರ ಹೊರಗೆ ರೋದನೆಯಂ 

ಕೇಳಿ, ಈ ಸಮರಾತ್ರಿಯಲ್ಲಿ ಹೆಣ್ಣು ಬಾಲೆ ದುಃಖಪಡ ಕಾರಣವೇನು ? 

ಅವಳಿಗೇನು ಉಪಾಧಿಯೋ ? ತಿಳಿಯಲಿಲ್ಲವೆಂದು, ಅರಮನೆಯಬಾಗಿಲಲ್ಲಿ 

ಯಾರು ಇದ್ದೀರಿ?” ಎಂದು ಅರಸು ಕರೆಯಲಾಗಿ; ವಿಕ್ರಮ-ನಾನೊಬ್ಬನೇ 

ಇದ್ದೇನೆ” ಎಂದನು. “ಎಲೋ ವಿಕ್ರಮ ! ಈ ಮಧ್ಯರಾತ್ರಿಯಲ್ಲಿ ಊರಾಚೆ 

ಯಾರೋ ಸ್ತ್ರೀಯ ಪ್ರಳಾಪವಾಗಿಯಿದೆ, ಅದೇನೆಂದು ತಿಳಿದುಬಾ” ಎಂದು 

ಅಪ್ಪಣೆಯಾದುದರಿಂದ, ವಿಕ್ರಮ ಹೊರಗೆ ಹೊರಟು ರೋದಿಸುವ ಬಳಿ 

ವಿಡಿದು ಹೋಗಲಾಗಿ; ಆ ಮಾಯಾಂಗನೆ ನಿಂತುಕೊಂಡು-ಈ ನಡುರಾತ್ರಿ 

ಯಲ್ಲಿ ಭೀತಿಯಿಲ್ಲದೆ ನನ್ನ ಬೆಂಬತ್ತಿ ಬಂದವನು, ನೀನು ಯಾರು? "ಎಂದು 

ಕೇಳಲು ; ಆಮಾತಿಗೆ ವಿಕ್ರಮನು “ನೀನುಯಾರು ? ಪಟ್ಟಣದ ಸಮೀಪಕ್ಕೆ 

ಬಂದು ರೋದನ ಮಾಡುವುದು ಇದೇನು ??” ಎಂದು ಕೇಳಲು ; ''ಎಲೊ 

ವೀರನೇ ! ಕೇಳು. ನನ್ನ ಗಂಡ ಏಳುಮಂದಿ ಗೆಣೆಯರು ಸಹಿತ ಈ ಪಟ್ಟ 

ಣದಲ್ಲಿ ಕಳ್ಳತನ ತನ ಮಾಡುತಿರಲು, ಒಂದುದಿನ ಕಳವು ಸಿಕ್ಕಿ ಎಂಟು ಜನ 

ರನ್ನು ಹಿಡಿದು, ಸಾಲುಮೇಲೆ ಶೂಲಕ್ಕೆ ಹಾಕಲಾಗಿ, ನನ್ನ ಗಂಡನಿಗೆ 

ಒಂದಿಷ್ಟು ಅನ್ನ ವಿಕ್ಕಬೇಕೆಂದು ನಾ ಬಂದೆ. ಆ ಶೂಲವು ಕೈಗೆ ಸಿಲು 

ಕದೆ ಇರುವುದರಿಂದ ಇದಕ್ಕೂ ನನಗೆ ಪ್ರಾಪ್ತಿಯಿಲ್ಲವೇ ! ಎಂದು ಪ್ರಳಾ 

ಪಿಸುತ್ತಿದ್ದೇನೆ” ಎನ್ನಲಾಗಿ, ವಿಕ್ರಮನು ಮರುಗಿ, “ ಎಲ್ -ಸ್ತ್ರೀಯೆ ! 

ನನ್ನ ಹೆಗಲನೇರಿ ನಿನ್ನ ಗಂಡನಿಗೆ ಅನ್ನ ವಿಕ್ಕು” ಎಂದನು. “ಹಾಗಾದರೆ 

ಅನ್ನವನಿಕ್ಕುವೆ" ಎನಲು ಶೂಲದ ಬಳಿಗೆ ಬಂದು,ಅವಳ ಹೆಗಲನೇರಿಸಿಕೊಳ್ಳ 

ಲಾಗಿ ; ಅವಳು ಬಲುಬಾರವಾಗಿ ಕಂಡುದರಿಂದ ವಿಕ್ರಮನು-ಇವಳು 

ಹೆಂಗಸಲ್ಲ, ಮಾಯಾಂಗನೆ ಎಂದು ತಿಳಿದು, ತನ್ನ ಬಲಗೈಯಲಿದ್ದ ಖಡ್ಗ 

ದಿಂದ ಅವಳ ಮುಂದಲ ಕಾಲ ಕತ್ತರಿಸಲಾಗಿ, ಅವಳು, ಖೋ ? ಎಂದು 

ಆರ್ಭಟಿಸುತ್ತ ಖೇಚರಕ್ಕೆ ಹಾರಿಹೋಗಲಾಗಿ, ಆ ಕಾಲಿನ ತುಂಡಂ ತಂದು 

ತನ್ನ ಮನೆಯ ಮುಂದೆ ಹಾಕಿ, ಆ ರಾತ್ರಿ ಕಳೆದು, ಬೆಳಗಾಗಿ ಬಂದು, 



---------------------ಇತ್ತೀಸುತ್ತಳೆ ಕಥೆ.------------------------೩೧


ಅರಸನ ಕಾಣಿಸಿಕೊಳ್ಳಲಾಗಿ ; ರಾತ್ರಿಯ ವಿವರವೇನು” ಎಂದು 

ಅರಸು ಕೇಳಲಾಗಿ; ಆ ವಿಕ್ರಮ-"ಅವಳು ಮಾಯಾಂಗನೆ,” ಎಂದು ಅವಳ ವೃತ್ತಾಂ 

ತವ ಹೇಳ,ಅವಳದೊಂದು ಕಾಲ ಕತ್ತರಿಸಿ ತಂದು ನನ್ನ ಮನೆಯ ಬಳಿಯಲ್ಲಿ 

ಇರಿಸಿ ಇದ್ದೇನೆ. ತರಿಸಿ ಪರಾಂಬರಿಸ ಬಹುದು' ಎನ್ನಲಾಗಿ; ಅರಸು ನಾಲ್ಕು 

ಜನ ಕಾಮಾಟದವರಂ ಕರೆದು, ಆ-ಕಾಲ ತುಂಡಂ ತರಹೇಳಿ ಕಳುಹಿಸಲಾಗಿ; 

ಆ ಜನ ಬಂದು ನೋಡಿ ಚೋದ್ಯಂಬಟ್ಟು, ಅರಸಿನ ಬಳಿಗೆ ಬಂದು, ಆಕಾಲ 

ತುಂಡ ತರುವುದಕ್ಕೆ ಒಂಬತ್ತು ಬಂಡಿ ನೂಲು ಎತ್ತು ನೂರು ಜನವಾದರೆ 

ತರಬಹುದು" ಎಂದು ಹೇಳಿದುದಕ್ಕೆ, ಅದೇ ಮೆರಿಗೆ ಅರಸಿನ ಅಪ್ಪಣೆಯಾಗ 

ಲಾಗಿ; ಆ ಜನ ಎತ್ತು ಬಂಡಿ ಸಹಿತ ತೆಗೆದುಕೊಂಡು ಬಂದು, ಸನ್ನೆಯಿಂದ 

ಬಂಡಿಯಮೇಲೆ ಹೇರಿ ಎತ್ತುಗಳ ಕಟ್ಟಿ ಹೊಡೆತರುವಲ್ಲಿ, ಊರ ಬಾಗಿಲು 

ಹಿಡಿಯದಿರಲಾಗಿ, ಅರಸಿಗೆ ಬಂದು ಬಿನ್ನಿಸಿದರು. ಅರಸು ಊರ ಬಾಗಿಲ 

ಕೆಡಹಿ ತರಹೇಳಿದುದರಿಂದ ಅದೇ ಪ್ರಕಾರಕ್ಕೆ ಬಾಗಿಲ ಕೆಡಹಿ ಅರಮನೆಯ 

ಬಳಿಗೆ ತಂದು ನಿಲ್ಲಿಸಲಾಗಿ, ಆ ಜನ ಯಾವತ್ತೂ ತಲೆಬಾಗಿದವರಾದರು. 

ಕೋಟಿಸೂರ್‍ಯಪ್ರಕಾಶಮಾನವಾಗಿ ಆ ಕಾಲಿನಲ್ಲಿ ಇರುವ ಅಂದುಗೆಯನ್ನು 

ಅರಸು ಕಂಡು, ಕಳತರಿಸಿ ನೋಡಿ, ಅತಿಸಂತೋಷದಿಂದ ತೆಗೆದುಕೊಂಡು 

ಹೋಗಿ, ತನ್ನ ಪಟ್ಟದ ಸತಿಗೆ ಕೊಡಲಾಗಿ; ಪಟ್ಟದರಸಿ ತನ್ನ ಕಾಲಿಗಿಟ್ಟು 

ನೋಡಲಾಗಿ, ಇನ್ನೊಂದು ಕಾಲಿಗೆ ಇಂಥ ಅಂದುಗೆ ಆಗಬೇಕೆಂದು ಅರಸಿನ 

ಕೂಡೆ ಹೇಳಲಾಗಿ, “ಒಳ್ಳೆಯದು" ಎಂದು ಅರಸು ತನ್ನ ಬೊಕ್ಕಸದಲ್ಲಿದ್ದ 

ರತ್ನಂಗಳು ಯಾವತ್ತೂ ತೆಗೆಸಿ ಅಕ್ಕಸಾಲಿಗರಂ ಕರೆಸಿ, ಅಂದುಗೆಯ 

ತರಿಸಿ ಇದು ಮೇರೆಗೆ ಇನ್ನೊಂದು ಮಾಡ ಹೇಳಲಾಗಿ; ಅಕ್ಕಸಾಲಿಗರು 

ಈ ಅಂದುಗೆಯಂ ನೋಡಿ ಇಂತೆಂದರು :-"ಎಲೈ ಸ್ವಾಮಿಯೇ ! ಇದ 

ರಲ್ಲಿ ಕೆತ್ತಿರುವುದಕ್ಕೆ ಸಮನಾದ ರತ್ನವ ಕೊಟ್ಟರೆ ಕೆತ್ತಿ ಇದರ ಜತೆ ಮಾ 

ಡೇವು. ನಿಮ್ಮ ಭಂಡಾರದಲ್ಲಿರುವ ರತ್ನಂಗಳಲ್ಲಿ ಈ ಅಂದುಗೆಯ ತುದಿಗೆ 

ಕೆತ್ತಿ ಇರುವ ರತ್ನದ ಸಮಾನವಿಲ್ಲ” ಎಂದ ಮಾತಂ ಅರಸಿ ಕೇಳಿ, ಅತಿ 

ವ್ಯಾಕುಲದಿಂದ ಇಂತೆಂದಳು:-ಇದರ ಜತೆಗೆ ಇನ್ನೊಂದು ನೀವು ಮಾಡಿಸಿ 

ಕೊಟ್ಟರೆ ಸರಿ, ಇಲ್ಲದೇ ಇದ್ದರೆ ಪ್ರಾಣಬಿಡುವೆನು” ಎಂದು ನಿಶ್ಚಯದ ಮಾತ 

ನಾಡಲಾಗಿ; ಅರಸು ಅನೇಕ ಯೋಚನೆ ಮಾಡಿ ಹರಿಯದೆ, ಇದಕ್ಕೇನುಮಾಡ



೩೨-------------------------ಕರ್ಣಾಟಕ ಕಾವ್ಯಕಲಾನಿಧಿ.----------------------------


ಬೇಕು?” ಎಂದು ತನ್ನ ಪ್ರಧಾನನ ಕೇಳಲಾಗಿ, ಅವನಿಂತೆಂದನು:-ಈ ಜತೆಗೆ 

ಇನ್ನೊಂದು ಬೇಕಾದರೆ ವಿಕ್ರಮನಿಗೆ ಹೇಳಿದರೆ ಅದೀತು” ಎಂದ ಮಾತು 

ಸಹಜವೆಂದು ಆಗ ಅರಸು ಪ್ರಧಾನ ಸಹ ವಿಕ್ರಮನ ಮನೆಗೆ ಬಂದು ಇಂ 

ತೆಂದರು.-“ಎಲೋ ವಿಕ್ರಮ ! ನೀನು ತಂದ ಕಾಲಿನಲ್ಲಿದ್ದ ಅಂದುಗೆಯನ್ನು 

ಅರಸಿತಿಗೆ ಕೊಡಲಾಗಿ, ಇದು ಜತೆ ಅಂದುಗೆಯ ತರಿಸಿ ಕೊಟ್ಟರೆ ಸಮ, 

ಇಲ್ಲದೆ ಇದ್ದರೆ ದೇಹವಿರಿಸುವುದಿಲ್ಲವೆಂದು ನಿಶ್ಚಯವಂ ಮಾಡಿ ಹೇಳಿ ಇ 

ದ್ದಾಳೆ, ಇದಕ್ಕೇನು ಮಾಡಬೇಕು? ” ಎಂದು ಬಹುತರದಿಂದ ಅರಸು ಪ್ರಧಾ 

ನನು ಸಹ ಕೇಳಲಾಗಿ; ವಿಕ್ರಮ-"ಎಷ್ಟು ದಿನಕ್ಕೆ ಕೊಡಬೇಕು ?” ಎಂದ 

ಮಾತಿಗೆ ಅರಸು "ಇಪ್ಪತ್ತೊಂದು ದಿನಕ್ಕೆ ತಂದುಕೊಟ್ಟರೆ ಸರಿ, ಇಲ್ಲದೆ 

ಇದ್ದರೆ ಪುತ್ರ ಮಿತ್ರಾದಿಗಳೆಲ್ಲಾ ಅಗ್ನಿ ಪ್ರವೇಶವಂ ಮಾಡುತ್ತೇನೆ' ಎನ 

ಲಾಗಿ; ಆ ಮಾತಿಗೆ ವಿಕ್ರಮ ಒಪ್ಪಿ ಅಂದುಗೆಯ ತರುತ್ತೇನೆಂದು ಅರಸನ 

ಅಪ್ಪಣೆ ತೆಗೆದುಕೊಂಡು, ಅಲ್ಲಿಂದ ಹೋಟು, ಆ ದಿನ ಮಧ್ಯಾಹ್ನದ ಹೊ 

ತ್ತಿಗೆ ಬಹುದೂರ ಬಂದು, ಬಿಸಿಲಿನಿಂದ ಬಳಲಿ, ಒಂದು ಚೂತವೃಕ್ಷದ 

ಕೆಳಗೆ ಕುಳಿತುಕೊಂಡು, ಮಾರ್ಗದಲ್ಲಿ ಹೋಗುವವರ ಕರೆದು-"ನೀರು 

ಎಲ್ಲಿ ಇದೆ? ” ಎಂದು ಕೇಳಲಾಗಿ ಅವರು ಎದುರಾಗಿರುವ ಬೆಟ್ಟಕ್ಕೆ ಮೂಡ 

ಲಾಗಿ ಕಲ್ಲು ಕಟ್ಟಿದ ಕೊಳದಲ್ಲಿ ಶೈತ್ಯೋದಕ ಸಮೃದ್ಧಿಯಾಗಿ ಇದೆ" ಎನ 

ಲಾಗಿ ; ಆ ಕೊಳದ ಬಳಿಗೆ ಹೋಗಿ, ತೃಪೆಯಿಂಗಿಸಿಕೊಂಡು, ಮೇಲಕ್ಕೆ 

ಹತ್ತಿ ಬರುವಲ್ಲಿ ಸೋಪಾನದಮೇಲೆ ಶಾಸನ ಬರೆದಿರುವುದಂ ಕಂಡು, ಓದಿ 

ನೋಡಿದನು. ಅದೇನೆಂದರೆ -ಈ ಕೊಳದ ಏರಿಯಮೇಲೊಂದು ಯೋ 

ಜನ ಉನ್ನತದ ಮಾವಿನಮರದ ಕೊನೆ ಕೊಳದ ಮೇಲೆ ಬಂದಿರುವುದು. ಅದ 

ಕ್ಕೆ ಬಂದು ನೆಲುವು ಕಟ್ಟಿ ಇರುವುದು. ಆ ಕೊಳದೊಳಗೆ ಅನೆಯ ಗಾತ್ರ 

ಅಗ್ನಿ ಕುಂಡವಿರುವುದು. ಅದರ ಆಳ ನಾಗಲೋಕವ ಮುಟ್ಟಿಯಿರುವುದು. 

ಆವನಾನೊಬ್ಬ ವೀರನಾದವನು ಆಮರವನ್ನೇರಿ ಆನೆಲುವಿನೊಳಗೆ ಕು 

ಳಿತು, ನೆಲುವಿನ ಕಟ್ಟನ್ನು ತನ್ನ ಕೈಯ ಕತ್ತಿಯಿಂದ ಹರಿದರೆ, ಆ ನೆಲುವು 

ಕೊಳದೊಳಗೆ ಬೀಳುವ ಸಮಯದಲ್ಲಿ ಅವನ ವೀರತ್ವಕ್ಕೆ ಮೆಚ್ಚಿ ಪಾರ್ವ 

ತೀಪತಿಯಾದ ಪರಶಿವನು ಪ್ರಸನ್ನನಾಗಿ ಎತ್ತಿಕೊಂಡು ಅವೀರನಿಗೆ ವಜ್ರ 

ಮಕುಟರಾಯನ ಮಗಳಾದ ಸುಲಭಾವತಿಯನ್ನು ವಿವಾಹಮಾಡಿಸಿ, ಸಕಲ 



---------------------ಬತ್ತೀಸ ಪುತ್ತಳಿ ಕಥೆ,---------------------------೩೩ 


ಇಷ್ಟಾರ್ಥಮಂ ಪಾಲಿಸುವನೆಂದು ಬರೆದಿರ್‍ಪ ಶಾಸನವನೋದಿಕೊಂಡು 

ವಿಕ್ರಮನಿಗಲ್ಲದೆ ಇನ್ನಾರಿಗೆ - ಎಂದು ನಿಶ್ಚಯದಿಂದ ಅಮರವನ್ನೇರಿ ಆ 

ನೆಲುವಿನಲ್ಲಿ ಕುಳಿತು ತನ್ನ ಕೈಯ ಕತ್ತಿಯಿಂದ ನೆಲುವ ಕತ್ತರಿಸಲು ; 

ಆನೆಲುವು ಖೋ ಎಂದು ಕೂಗುತ್ತ ಕೊಳದೊಳಗೆ ಬೀಳುವ ವೇಳೆ 

ಯಲ್ಲಿ ಈಶ್ವರನು ಬಂದು ಹಿಡಿದೆತ್ತಿಕೊಂಡು "ಎಲೈ ! ನಿನ್ನ ಮನೋ 

ನಿಶ್ಚಯಕ್ಕೆ ಮೆಚ್ಚಿದೆನು” ಎಂದು, ವಿಕ್ರಮನ ಕರೆದುಕೊಂಡು ಹೋಗಿ, 

ವಜ್ರ ಮಕುಟರಾಯನ ಮಗಳಾದ ಸುಲಭಾವತಿಯನ್ನು ಮದುವೆ ಮಾಡಿಸಿ, 

ಬೇಕಾದ ಇಷ್ಟಾರ್ಧಂ ಪಾಲಿಸಿ, ದಂಪತಿ ಸಹ ಕಳುಹಿಸಲಾಗಿ; ಅಲ್ಲಿಂದ 

ಸತಿಯ ಕರೆದುಕೊಂಡು ಬರುವ ಮಾರ್ಗದಲ್ಲಿ ಶಾಂಭವೆಯೆಂಬ ನದಿಯು 

ಪೂರ್ಣಪ್ರವಾಹದಿಂದ ಹರಿಯುವುದ ಕಂಡು, ಅಬಳಿಯಲ್ಲಿ ಇರುವ ಅಂ 

ಬಿಗನಂ ಕರೆದು-ನಮ್ಮೀರ್ವರನ್ನು ದಾಂಟಿಸಿ, ಕೊಡು ಎನಲಾಗಿ ; ಅಮಾ 

ತಿಗೆ ಅಂಬಿಗನು ಈಹರಿಗೊಲು ಒಬ್ಬರನಲ್ಲದೆ ಇಬ್ಬರ ಹಿಡಿಯದು ಎಂದ 

ಮಾತಿಗೆ-ಮುಂಚೆ ನನ್ನ ಸಾಗಿಸಿ ಆಮೇಲೆ ಹೆಂಗಸ ಸಾಗಿಸೆನ್ನಲಾಗಿ ; 

ಅದೇ ಪ್ರಕಾರಕ್ಕೆ ಮುಂಚೆ ವಿಕ್ರಮನ ಆಚೆಗೆ ಸಾಗಿಸಿಬಿಟ್ಟು, ಈಚಿಗೆ 

ಬಂದು, ಹರಿಗೋಲಲ್ಲಿ ಹೆಂಗಸ ಹತ್ತಿಸಿಕೊಂಡು ಬರುತ್ತ ಅವಳ ರೂಪು 

ಲಾವಣ್ಯವ ಕಂಡು, ಸೈರಿಸಲಾದೆ, ಅಂಬಿಗನು ಬೇರೆ ಮಾರ್ಗದಲ್ಲಿ ಕರೆದು 

ಕೊಂಡು ಹೋಗಿ, ಅಲ್ಲೊಂದು ಗಟ್ಟದಲ್ಲಿ ನಿಂತು, ಅವಳ ತನ್ನಲ್ಲಿ ಕ್ರೀಡಿ 

ಸುವುದಕ್ಕೆ ಬಹಳ ಬಗೆಯಲ್ಲಿ ಬಡಂಬಡಿಸುತ್ತಿದ್ದನು. 


ಇತ್ತಲಾವಿಕ್ರಮ ತನ್ನ ಸತಿಯ ಅಂಬಿಗ ಎತ್ತ ಕಡೆ ಕರೆದುಕೊಂಡು 

ಹೋದನೋ ತಿಳಿಯಲು ಇಲ್ಲದೆ ವ್ಯಸನಪಡುತ್ತ, ತಾನವರಂ ತಡಕುತ್ತ 

ಹೋದರೆ ಅನ್ನ ಕೊಟ್ಟಂಥ ಅರಸಿನ ಕೆಲಸ ಕೆಟ್ಟಿತು ಎಂದು ಯೋಚಿಸಿ, 

ದೃಢವಿಡಿದು ಮುಂದಕ್ಕೆ ನಡೆದು, ಬರುವ ದಾರಿಯಲ್ಲಿ ಒಂದು ಪಟ್ಟಣವ ಕಂ 

ದು, ಅಲ್ಲಿಗೆ ಹೋಗಿ ನೋಡಲಾಗಿ; ಜನರೊಬ್ಬರೂ ಇಲ್ಲದಿರುವುದ ಕಂಡು, 

ಆಶ್ಚರ್ಯಪಟ್ಟು ನೋಡುತ್ತ ಹೋಗುವಲ್ಲಿ ಒಂದು ಉಪ್ಪರಿಗೆಯ ಕಂಡು, 

ಅದು ಮೇಲೆ ಹತ್ತಿ ಹೋಗಲಾಗಿ, ಅಲ್ಲಿ ಅತಿರೂಪಯೌವನಸಂಪನ್ನೆ 

ಯಾದ ಒಬ್ಬ ಸ್ತ್ರೀಯಂ ಕಂಡು, ಅವಳನೀನು ದೇವತೆಯೋ, ದೈವ 

ವೋ, ಕಾಮರೂಪಿಯೋ ? ನೀನು ಯಾರು ? ಎಂದು ಕೇಳಿದುದಕ್ಕೆ ಅವ 



೩೪-----------------------ಕರ್ಣಾಟಕ ಕಾವ್ಯಕಲಾನಿಧಿ,--------------------------


ಳು-ನಾನು ದೇವತೆಯೂ ಅಲ್ಲ, ದೈವವೂ ಅಲ್ಲ, ಕಾಮರೂಪಿಯೂ ಅಲ್ಲ, 

ಈ ಪಟ್ಟಣದ ರಾಯನ ಕುಮಾರ್ತಿ, ಎನ್ನಲಾಗಿ;-ನೀನು ಒಬ್ಬಳೇ ಇರು 

ವುದಕ್ಕೆ ಕಾರಣವೇನು ? ಎಂದು ಕೇಳಲಾಗಿ, ಅವಳು-ಎಲೈ ವೀರನೇ ! 

ಈ ಪುರದ ರಾಯನ ಒಬ್ಬ ಕಾಳ ರಾಕ್ಷಸನೆಂಬವನು ಬಂದು ಕೊಂದನು. 

ಅವನು ಈ ಪಟ್ಟಣದ ಪರಿವಾರ ಜನಂಗಳನ್ನು ತನ್ನ ಬಾಯೊಳಗಿರಿಸಿಕೊಂ 

ಡು, ದಿನಚರಿಯ ಬೇಂಟೆಗೆ ಹೋಗಿ, ಬೇಂಟೆತೀರಿಸಿಕೊಂಡು ಸಾಯಂ 

ಕಾಲದ ವೇಳೆಗೆ ಬಂದು, ತನ್ನ ಬಾಯಿಂದ ಎಲ್ಲರನ್ನು ಉಗುಳಿ, ಅವರವರ 

ಮನೆಗೆ ಕಳುಹಿಸಿ, ತಾನೀಯುಪ್ಪರಿಗೆಯ ಮೇಲೆ ಬಂದು, ರಾತ್ರಿಯಲ್ಲಿ ನನ್ನ 

ಕೂಡೆ ಸರಸವಾಡುತ್ತ ಇದ್ದಾನೆ. ಎಂದಿನಂತೆ ಈಗ ಅವನು ಬೇಂಟೆಗೆ ಹೋ 

ಗಿ ಇದ್ದಾನೆ. ಈಪ್ರಕಾರ ಅವನಿಗೆ ಸಿಕ್ಕಿರು, ಎಂದು ವಿರಂಚಿ ಎನ್ನಪಣೆಯಲ್ಲಿ 

ಬರೆಯಬಹುದೇ !-ಎಂದು ಅನೇಕವಾಗಿ ರೋದಿಸುವುದಂ ಕಂಡು ಇಂತೆಂದ 

ನು :-ಎಲೆ ಸ್ತ್ರೀಯೇ, ಈ ರಾತ್ರಿ ರಾಕ್ಷಸ ಬರುತ್ತಲೆ ಅವನ ಬಹಳ 

ಉಪಚರಿಸಿ-ನಿನ್ನ ಪ್ರಾಣ ಎಲ್ಲಿ ಇದೆ ಎಂದು ಕೇಳಿ ತಿಳಿದು ಹೇಳಿದರೆ ಅವನ 

ಕೊಂದು ನಿನ್ನ ಕರೆದುಕೊಂಡು ಹೋಗುತ್ತೇನೆ ಎಂದು ಅವಳಿಗೆ ಹೇಳಿದು 

ದಕ್ಕೆ ಅವಳು-ನೀನಾರೆಂದು ಕೇಳಲು ಅದಕ್ಕೆ ತನ್ನ ವೃತ್ತಾಂತವೆಲ್ಲ ಹೇಳ 

ಲಾಗಿ: ಅವಳು ಸಂತೋಷಪಟ್ಟು, ಹೇಳದ ಮಾತಿಗೆ ಒಡಂಬಟ್ಟು, ಕೇಳಿ ಹೇ 

ಳುವೆನೆಂದು, ಅಬಳಿಕ-ರಾಕ್ಷಸ ಬರುವ ವೇಳೆಯಾಯಿತು, ಇನ್ನು ಇರಬೇ 

ಡವೆಂದು ನುಡಿಯಲಾಗಿ ; ವಿಕ್ರಮನು ಊರ ಹೊರಗೆ ಬಂದು, ಒಂದು ಗುಡಿ 

ಯಲ್ಲಿ ಆ ರಾತ್ರಿ ಇದ್ದನು. ಆದಿನ ಸಾಯಂಕಾಲಕ್ಕೆ ರಾಕ್ಷಸ ಊರಿಗೆ 

ಬಂದು ಬಾಯಿಂದೆಲ್ಲರನ್ನೂ ಉಗುಳಿ ಬಿಟ್ಟು, ಉಪ್ಪರಿಗೆಯನೇರಿ, ಮಡ್ಡಿ 

ಮಾಂಸ ಭಕ್ಷಿಸಿ ಬಂದ ಸಂತೋಷದಿಂದಿರುವಲ್ಲಿ ಆ ಸ್ತ್ರೀಯು ಸಮೀಪಕ್ಕೆ 

ಬಂದು ಕುಳಿತುಕೊಂಡು, ಕೈಕಾಲುಮೆಯ್ಯನೊತ್ತುತ್ತ ಉಪಚರಿಸುತ್ತ 

ಖಿನ್ನಳಾಗಿ ಇರುವಳಂ ಕಂಡು ಇಂತೆಂದನು:-ಎಲ್ ಸ್ತ್ರೀಯೇ ! ನೀನು 

ಚಿಂತೆಮಾಡುವುದೇನು ? ಎನ್ನಲಾಗಿ; ಅವಳಿಂತೆಂದಳು :-ಎಲೈ ಮಹಾಪುರು 

ಷನೇ ! ನಾನು ಎಲ್ಲರನ್ನೂ ಕಳೆದು ನಿನ್ನವಳಾದುದರಿಂದ ಸರ್ವಕಾಲವೂ 

ನಿನಗೆ ನಾ ನಂಬಿರಬೇಕೆಂದು ಇರುವ ಕಾರಣ ನಿನ್ನ ಆಯುಷ್ಯವೆಷ್ಟಿದೆ, ನಿನ್ನ

ಪ್ರಾಣದ ನೆಲೆ ಎಲ್ಲಿ ಎಂಬುದ ಹೇಳಬೇಕು. ಅದೇತಕ್ಕೆ ಎಂದರೆ, ನೀನು ಅರಣ್ಯ



--------------------ಬತ್ತೀಸ ಪುತ್ತಳಿ ಕಥೆ.----------------------------೩೫


ದಲ್ಲಿ ಸಂಚರಿಸುವವನು. ಆದುದರಿಂದ ಅಲ್ಲಿ ಏನೋ ಎಂದು ಮನಸ್ಸು ದಿಗಿ 

ಲಾಗಿ ಚಿಂತಿಸುವೆನು-ಎನ್ನಲು : ಅದಕ್ಕೆ ಅದೈತ್ಯನು-ಎಲೆ ಸ್ತ್ರೀಯೇ ! ಆ 

ವ್ಯಸನ ನಿನಗೆ ಬೇಡ, ನನ್ನ ಜಯಿಸುವುದಕ್ಕೆ ಬ್ರಹ್ಮ ವಿಷ್ಣು ಮಹೇಶ್ವರರಿಂದ 

ಆಗದು. ಬತ್ತೀಸ ಆಯುಧಗಳಿಂದ ಆಗದು. ನನ್ನ ಪ್ರಾಣವಿರುವ ಜಾಗ 

ಯಾರಿಗೂ ತಿಳಿಯದು. ಅಸ್ಥಳ ಇಲ್ಲಿಗೆ ಮುನ್ನೂಲು ಯೋಜನದಲ್ಲಿ ಪಾಟ 

ಲಾವತೀಪಟ್ಟಣದ ಮುಂದೆ ಕಾಳಿಕಾದೇವಿಯ ಗುಡಿಗೆ ಎದುರಾಗಿ ಮಹಾ 

ಬೆಟ್ಟದ ಗಾತ್ರ ಒಂದು ಕಲ್ಲುಗುಂಡು ಇರುವುದು. ಅದರ ಕೆಳಗೊಂದು 

ಬಿಲದ್ವಾರವಿದೆ. ಅದಲ್ಲಿ ಹೋದರೆ ಪಾತಾಳಲೋಕಕ್ಕೆ ಕೊಂಡುಹೋಗು 

ವುದು. ಅಲ್ಲಿ ಚಂಡಿಕಾದೇವಿಯ ಗುಡಿಯ ಬಳಿಯಲ್ಲಿ ಬಂದು ಚೂತವೃ 

ಕ್ಷದ ಮೇಲೆ ಪಂಚಗಿಣಿಗಳು ಇರುವುವು. ಆಗಿಣಿಗಳಲ್ಲಿ ನನ್ನ ಜೀವವಿರು 

ವುದು. ಆ ಗಿಣಿಗಳನ್ನು ಹಿಡಿದು ಒಂದೇ ಸಾರಿ ಕೊರಲ ಮುರಿದರೆ ಆಗ 

ನಾನು ಮೃತನಾಗುವೆ. ಇಲ್ಲದೆ ಇದ್ದರೆ ನನಗೆ ಮೃತಿಯಿಲ್ಲ ಎನ್ನಲಾಗಿ ; 

ಅವಳಾಮಾತಿಗೆ ಸಂತೋಷದಿಂದ ಇನ್ನು ಯೋಚನೆಯಿಲ್ಲದೆ ಇರುವೆನು 

ಎಂದು ಅವನ ಕೂಡೆ ಹೇಳಿ, ಅರಾತ್ರಿ ಕಳೆದು, ಬೆಳಗಾಗುತ್ತಲೆ ಎಂದಿನಂತೆ 

ರಾಕ್ಷಸ ಬೇಂಟೆಗೆ ಹೋಗಲಾಗಿ, ಅಬಳಿಕ ವಿಕ್ರಮ ಬಂದು-ನಿನ್ನ ಕೂಡೆ 

ಹೇಳಿದ ಮಾತೇನ ಮಾಡಿದೆ ? ಎನ್ನಲಾಗಿ ; ರಾತ್ರಿ ರಾಕ್ಷಸ ಹೇಳಿದುದೆಲ್ಲ 

ಕೇಳಿ, ವಿಕ್ರಮ ಅವಳಿಗೆ ಭರವಸಂ ಕೊಟ್ಟು, ವಾಯುವೇಗದಲ್ಲಿ ಪಾಟ 

ಲಾವತೀಪಟ್ಟಣಕ್ಕೆ ಹೋಗಿ, ಕಾಳಿಕಾದೇವಿಯ ಗುಡಿಯ ಮುಂದಣ ಕಲ್ಲು 

ಗುಂಡನ್ನು ಕಾಲಿನಲ್ಲಿ ನೂಂಕಿ, ಅದ್ವಾರದಲ್ಲಿ ಪಾತಾಳಲೋಕಕ್ಕೆ ಹೋಗಿ, 

ಚಂಡಿಕಾದೇವಿಯ ಗುಡಿಯ ಬಳಿ ಚೂತವೃಕ್ಷದ ಮೇಲೆ ಇದ್ದ, ಐದು ಗಿಣಿ 

ಯಂ ಹಿಡಿದು ಒಂದೇ ಸಾರಿ ಕೊರಲ ಮುರಿಯಲು, ರಾಕ್ಷಸನ ಪಂಚೆ 

ಪ್ರಾಣವೂ ಹಾಲಿಹೋಗಲಾಗಿ; ಕುಂಟು ಜೀವದಿಂದ ಊರ ಬಾಗಿಲಿಗೆ ಬರು 

ವಷ್ಟರಲ್ಲೇ ಹಾರಿಹೋಗಿ ಬಿದ್ದನು. ಅವೇಳೆಗೆ ವಿಕ್ರಮನು ಬಂದು 

ನೋಡಿ, ಸ್ತ್ರೀಯಂ ಕರೆತಂದು ತೋರಿಸಿ, ಅವನ ಸೀಳಿ, ಪೂರ್ವದ ಅರ 

ಸಿನ ಮಗನಿಗೆ ಪಟ್ಟವಂ ಕಟ್ಟಿ, ಯಥಾಪ್ರಕಾರಕ್ಕೆ ಅಪಟ್ಟಣವ ತುಂಬು 

ಮಾಡಿ, ಅಸ್ತ್ರೀಯ ಕರೆದುಕೊಂಡು ಬರುವ ಮಾರ್ಗದಲ್ಲಿ ಅವಳಿಗೆ 

ಬಹಳ ಬಾಯಾರಿಕೆ ಕಂಡು ಹೇಳಲಾಗಿ, ನೀರು ಏನೂ ಇಲ್ಲದೆ ಅರ



೩೬------------------ಕರ್ಣಾಟಕ ಕಾವ್ಯಕಲಾನಿಧಿ.---------------------------


ಸುತ್ತ ಬರುವಲ್ಲಿ-ಅಲ್ಲೊಬ್ಬ ಋಷಿಯಂ ಕಂಡು ನಮಿಸಿ,-ಎಲೈಋಷಿ 

ಯೇ ! ಸ್ತ್ರೀಯಳಿಗೆ ಬಲು ದಾಹವಾಗಿದೆ, ಜಲವೆಲ್ಲಿ ಇರುವುದು ? ಎನ್ನ 

ಲಾಗಿ ; ಅರುಷಿಯು- ಪೂರ್ವದಿಕ್ಕಿನಲ್ಲಿ ಒಂದು ಸರೋವರವಿದೆ. ಅದರಲ್ಲಿ 

ಸ್ವಾದೂದಕ ಇರುವುದು ಎನ್ನಲಾಗಿ ;-ಸತಿ ಇಲ್ಲಿ ಇರಲಿ ಎಂದು, ಇರಸಿ, 

ತಾನು ನೀರು ತರುವುದಕ್ಕೆ ಹೋದನು. ಆರುಷಿಯು ಅವಳ ಸೌಂದ 

ರ್ಯವಂ ನೋಡಿ ಅವಳ ಕೈವಿಡಿದು, ಮನೋವೇಗದಿಂದ ತನ್ನ ರನ್ನದ ಹಾ 

ವುಗೆಯ ಮೆಟ್ಟಿಕೊಂಡು ಕರೆದುಕೊಂಡು ಹೋಗಲಾಗಿ : ವಿಕ್ರಮನು ನೀರ 

ತಂದು ತನ್ನ ಸ್ತ್ರೀಯನ್ನು ಋಷಿಯನ್ನು ಕಾಣದೆ ವಿಸ್ಮಿತನಾಗಿ, ಕಳವಳ 

ಗೊಂಡು ಅಂಬಿಗನೋಪಾದಿ ಈ ಋಷಿಯೂ ಮಾಡಿದನೆಂದು ತಿಳಿದು, ನಾನು 

ಇವರ ಹುಡುಕುತಿದ್ದರೆ ಅರಸಿನ ಕಾರ್‍ಯತಪ್ಪಿತು ಎಂದು ಅಲ್ಲಿಂದ ಮುಂದಕ್ಕೆ 

ನೂರು ಗಾವುದ ಹೋದುದರಿಂದ ಸಾಯಂಕಾಲವಾಗಲಾಗಿ --


ಅಘೋರಾರಣ್ಯದಲ್ಲಿ ಒಂದು ವಟವೃಕ್ಷದ ಕೆಳಗೆ ಆರಾತ್ರಿ ಇರ 

ಲಾಗಿ, ಅಮರದ ಮೇಲೆ ಗಂಡುಹೆಣ್ಣು ಎರಡು ಗಿಣಿಗಳು ನಾಲ್ಕು ಮರಿ 

ಗಳು ಸಹಿತ ಗೂಡ ಕಟ್ಟಿಕೊಂಡಿರಲಾಗಿ, ಅನಾಲ್ಕು ಮರಿಗಳೂ ತಮ್ಮ 

ತಂದೆಯಾದ ಗಿಣಿಗಳನ್ನು ಗೂಡಿನಲ್ಲಿ ಇರಿಸಿ ನಾಲ್ಕು ದಿಕ್ಕಿಗೆ ಹೋಗಿ ತಮ್ಮ 

ಆಹಾರವಂ ಮಾಡಿಕೊಂಡು, ನೀರು ಮುಂತಾಗಿ ಹಣ್ಣು ಹಂಪಲಗಳ ತಂದು 

ತಂದೆಯಿತಾಯಿಗಳಾದ ಗಿಣಿಗಳಿಗೆ ಕೊಟ್ಟು ದಿನಚರಿಯಲ್ಲೂ ಉಪಚರಿಸು 

ತಿರ್ದಗಿಣಿಯ ಮರಿಗಳಲ್ಲಿ ದಿನ ಪೂರ್ವದಿಕ್ಕಿಗೆ ಹೋಗಿ ಇದ್ದ ಮರಿಯು 

ಏನೂ ತಾರದೆ ಬರಲಾಗಿ-ಬರದೆ ಬಂದ ಕಾರಣವೆನೆಂದು ತಂದೆತಾಯಿಗಳಾದ 

ಗಿಣಿಗಳು ಕೇಳಲಾಗಿ, ಅಮರಿಯು-ಈದಿನ ನಾನೊಂದತಿಶಯವಂ ಕಂಡೆ, 

ನೋಡುತ್ತಿದ್ದೆ ಎನ್ನಲಾಗಿ, ಅದೇನೆಂದರೆ-ವಿಕ್ರಮ ಎಂಬುವನ ಪತ್ನಿಯ 

ನ್ನು ಒಬ್ಬ ಅಂಬಿಗೆ ಕರೆತಂದು ನದಿಯ ಗಟ್ಟದಲ್ಲಿ ಇರಿಸಿಕೊಂಡು, 

ತನ್ನಲ್ಲಿ ಕೂಟಕ್ಕೆ ಬರಹೇಳಿ ಬಾಧಿಸುತ್ತಿದ್ದನು. ಅವಳು ಅನೇಕ ದುಃ 

ಖಪಡುವುದ ನೋಡುತ್ತ ನನಗೆ ಮನಸು ಬೇಡವಾಗಿ ಬಂದೆ ಎನ್ನಲಾಗಿ, 

ಅಷ್ಟಲ್ಲಿ ದಕ್ಷಿಣದಿಕ್ಕಿಗೆ ಹೋಗಿದ್ದ ಮರಿಯು ಬರುಗಯ್ಯಲ್ಲಿ ಬರಲಾಗಿ, 

ಆಮರಿಯು ನೀನು ಬರಿದೆ ಬಂದದೇನು ? ಎನ್ನಲಾಗಿ ; ಒಬ್ಬ ಖುಷಿ 

ವಿಕ್ರಮನ ಪತ್ನಿಯನ್ನು ಕರೆತಂದು ಖೇಚರದಲೊಂದು ಬಳಿಯಲ್ಲಿ ಮಡಗಿ



೩೭-----------------ಬತ್ತೀಸಪುತ್ತಳಿ ಕಥೆ.-------------------------



ಕೊಂಡು ತನ್ನಲ್ಲಿ ಇರುವುದಕ್ಕೆ ಕರೆಯುತ್ತ ನಿರ್ಬಂಧಪಡಿಸುತ್ತಿದ್ದನು. ಅವ 

ಳು ಅತಿವ್ಯಾಕುಲ ಪಡುವುದಂ ಕಂಡು ಮನಸು ಒಡಂಬಡದೆ ಬಂದೆನು ಎಂದಿ 

ತು. ಅಷ್ಟರಲ್ಲಿ ಪಶ್ಚಿಮದಿಕ್ಕಿಗೆ ಹೋಗಿ ಇದ್ದ ಮಣಿಯು ರಿಕ್ತಹಸ ದಿಂದ 

ಬರಲಾಗಿ-ನೀನು ಬರಿದೆ ಬಂದ ನಿಮಿತ್ತವೇನೆಂದು ಕೇಳಲಾಗಿ, ಇಲ್ಲಿಗೆ 

ಬಲುದೂರದಲ್ಲಿ ಬಂದು ಪಟ್ಟಣದಲ್ಲಿ ಒಬ್ಬ ಅರಸು ಆತನ ಸತಿಸುವರು 

ನಂಟರಿಷ್ಟರೆಲ್ಲಾ ಯೋಚಿಸುತ್ತ ಇದ್ದರು. ಅದೇನೆಂದರೆ-ವಿಕ್ರಮನೆಂಬ 

ವರು ಅರನಿಗೆ ಮಾತುಕೊಟ್ಟು ಗೊತ್ತು ಮಾಡಿ ಹೋಗಿ ಇದ್ದನಂತೆ ; ಆ 

ಗೊತ್ತಿನ ಒಳಗೆ ಬಂದರೆ ಸಮ, ಇಲ್ಲದೆ ಇದ್ದರೆ ನಾವೆಲ್ಲ ಅಗ್ನಿಪ್ರವೇಶ 

ವಂ ಮಾಡುತ್ತೇವೆ ಎಂದು ಅವರ ಅರಸಿನ ವಸ್ತ್ರವಂ ಧರಿಸಿ ಅಗ್ನಿಗೆ 

ಬೀಳುವುದಕ್ಕೆ ಯತ್ನೀಕರಿಸಿ ಇರುವುದ ಕಂಡು, ಅವರ ನೋಡುತ್ತ ನನ 

ಗೇನೂ ಸೊಗಸದೆ ವೃಥಾ ಬಂದೆ ಎಂದಿತು. ಅಷ್ಟರಲ್ಲಿ ಉತ್ತರದಿಕ್ಕಿಗೆ 

ಹೋಗಿದ್ದ ಮರಿಯು ಬಂದಿಷ್ಟು ಹಣ್ಣು ಹಂಪಲುಗಳ ತರಲಾಗಿ, ಅದ 

ಭಕ್ಷಿಸಿ, ಆಬಳಿಕ ಕೆಳಗಾರಾದರೂ ಅರದೇಸಿ ಪರದೇಸಿಗಳಿದ್ದರೆ ಕರೆದು 

ಫಲವನ್ನು ಕೊಡದೇ ತಂದೆತಾಯಿಗಳಾದ ಗಿಣಿಗಳು ಹೇಳಿದುದರಿಂದ ಆ 

ಮರಿಗಳು-ಕೆಳಗೆ ಯಾರಿದ್ದೀರಿ? ಉಪವಾಸವಿರಬೇಡಿ. ಹಣ್ಣು ಹಂಪಲುಗಳ 

ಕೊಟ್ಟೆವು, ಎಂದು ಕೂಗಲಾಗಿ ; ಕೆಳಗಿದ್ದ ವಿಕ್ರಮ-ನಾನೊಬ್ಬ ಪರ 

ದೇಸಿ ಇದ್ದೇನೆ ಎನ್ನಲು ; ಮರಿಗಳಾಗ ಫಲವನ್ನು ಕೊಡಲಾಗಿ; ಅದ ತೆಗೆ 

ದುಕೊಂಡು ಭಕ್ಷಿಸಿ ಬಳಿಕ ಎಲೈ ಗಿಣಿರಾಜನೇ ! ನಿನ್ನ ಮಕ್ಕಳಾಡಿದ 

ಮಾತೆಲ್ಲ ನನ್ನದೆಂದು ಹೇಳಿ, ಆ ಸ್ತ್ರೀಯಿರುವ ಸ್ಥಳವನ್ನು ನನಗೆ ತೋರಿ 

ಸುವುದಕ್ಕೆ ಬೆಳಗಾಗಿ ನಿಮ್ಮ ಮರಿಗಳ ಕಳುಹಿಸಿಕೊಟ್ಟರೆ ನಿಮಗೆ ಬಹಳ 

ಪುಣ್ಯವುಂಟು ಎಂದು ಕೇಳಿಕೊಳ್ಳಲಾಗಿ ;-ಎಲೆ ನೀನಾರು ? ಎಂದು 

ಿಣಿರಾಜ ಕೇಳದ ಕಾರಣ, ವಿಕ್ರಮನು ತನ್ನ ವೃತ್ತಾಂತವೆಲ್ಲವನ್ನು ಹೇಳ 

ಲಾಗಿ, ಆಗಿಣಿರಾಜನು ಕೇಳಿ ಮನಮರುಗಿ, ಅಬೆಳಿಗ್ಗೆ ತನ್ನ ಮರಿಗಳಿಗೆ 

ಸತಿಯರು ಇರುವ ಸ್ಥಳ ತೋರಿಸುವಂತೆ ನೇಮಿಸಿ ಕಳುಹಿಸಲಾಗಿ ; ವಿಕ್ರ 

ಮ ಆಮರಿಗಳ ಕೂಡೆ ವಾಯುವೇಗದಿಂದ ಸ್ತ್ರೀಯಿರುವ ಬಳಿಗೆ ಹೋಗಿ 

ಅಂಬಿಗನ ಕೊಂದುಬಿಟ್ಟು ತನ್ನ ಸ್ತ್ರೀಯನ್ನು ಕರೆದುಕೊಂಡು, ಋಷಿಯ 

ಬಳಿಗೆ ಹೋಗಿ ಅವನ ರನ್ನದ ಹಾವುಗೆಯ ತೆಗೆದುಕೊಂಡು ಆಸ್ತ್ರೀಯ 



೩೮------------------ಕರ್ಣಾಟಕ ಕಾವ್ಯಕಲಾನಿಧಿ-----------------------


ಕರೆದುಕೊಂಡು, ಗಿಣಿರಾಜನ ಬಳಿಗೆ ಬಂದು, ನಿನ್ನ ಸುತರಿಂದ ನನ್ನ ಸತಿ 

ಯರು ಸಿಕ್ಕಿದರು ಎಂದು ತೋರಿಸಿ, ಅಲ್ಲಿಂದ ಬರುತ್ತಿರುವಲ್ಲಿ ಪೂರ್ವದ 

ಮಾಯಾಂಗನೆ ಆಕಾಶಕ್ಕೆ ಹದಿನಾರು ಬಣ್ಣದ ಚಿನ್ನದ ಸರಪಣಿ ಉಯ್ಯಾಲೆ 

ಹಾಕಿಕೊಂಡು ಉಯ್ಯಾಲೆಮೇಲೆ ಮೊಂಡುಗಾಲ ಮುಚ್ಚಿ ಒಳ್ಳೆಯ ಕಾಲ 

ನೀಡಿ ಉಯ್ಯಾಲೆಯಾಡುವುದಂ ಕಂಡು, ವಿಕ್ರಮನು ಅವಳು ಕಾಣದಂತೆ 

ಹಿಂದುಗಡೆಯಲ್ಲಿ ಹೋಗಿ ಅಕಾಲ ಕತ್ತರಿಸಲು, ಅವಳು ಖೋ ಎಂದಾ 

ರ್ಭಟಿಸುತ್ತ ಖೇಚರಕ್ಕೆ ಹಾಕಿದಳು. ಅಬಳಿಕ ಅಕಾಲಿನಲ್ಲಿರ್ದ 

ಅಂದುಗೆಯಂ ಕಳೆದುಕೊಂಡು ತನ್ನ ಸ್ತ್ರೀಯರು ಸಹಿತ ವಾಯುವೇಗ 

ದಲ್ಲಿ ಅರಸಿನ ಪಟ್ಟಣದ ಬಳಿಗೆ ಬಂದು ಹೇಳಿ ಕಳುಹಿಸಲು; ಅರಸು ಅಗ್ನಿ 

ಪ್ರವೇಶವಂ ಬಿಟ್ಟು ಮಂತ್ರಿ ಸಾಮಾಜಿಕರು ಸಹಿತವಾಗಿ ಎದುರುಗೊಂಡು 

ಬಂದು, ಕರೆದುಕೊಂಡು ಹೋಗಲಾಗಿ ; ಆಪಟ್ಟದರಸಿಗೆ ವಿಕ್ರಮ ಅಂದುಗೆ 

ಯಂ ಕೊಟ್ಟುದುರಿಂದ ಅರಸು ಸಕಲರೂ ಸಹಿತ ಸಂತೋಷಪಟ್ಟು, ಆಗ 

ಅರಸು ತನ್ನ ಅರಸಿತಿಗೆ ಆಅಂದುಗೆಯಂ ಕೊಟ್ಟು, ವಿಕ್ರಮನಿಗೆ ಬಹುಮಾನ 

ಮಂ ಮಾಡಿ, ತನ್ನ ಬಳಿಯಲ್ಲಿ ಪ್ರಧಾನವಾಗಿರಬೇಕೆಂದು ಒಡಂಬಡಿಸಲಾಗಿ; 

ವಿಕ್ರಮನು ತನ್ನ ಊರಿಗೆ ಹೋಗಿ ಬರುವೆನೆಂದು ಹೇಳಿ, ಅಲ್ಲಿಂದ ಸ್ತ್ರೀ 

ಯರು ಸಹಿತ ಹೊರಟು ಇಲ್ಲಿಗೆ ಬಂದು ಸುಖವಾಗಿ ಇದ್ದನು, ಕಣಾ!


ಇಂತು ಕರ್ಣಾಟಕಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ರತಿಪ್ರಿಯೆಯೆಂಬ ಪುತ್ತಳಿ ಹೇಳಿದ ಆರನೆಯ ಕಥೆ.


*** 

ಏಳನೆಯ ಕಥೆ.


ಏಳನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ 

ಭೋಜನ ತಾಂಬೂಲವಂ ತೀರಿಸಿಕೊಂಡು ತನ್ನ ಪ್ರಧಾನಿಯಾದ ಚಿತ್ರ 

ಶರ್ಮನ ಕೈಲಾಗಿನಿಂದ ಸಿಂಹಾಸನದ ಬಳಿಗೆ ಬಂದು ಬಲದ ಕಾಲಂ ನೀಡು 

ವ ಸಮಯದಲ್ಲಿ ಹೋ! ಹೋ! ನಿಲ್ಲು ನಿಲ್ಲು, ನಮ್ಮ ಒಡೆಯನಾದ ವಿಕ್ರ 

ಮಾದಿತ್ಯರಾಯನ ವೀರವಿತರಣಗಳುಳ್ಳಡೆ ಏರು, ಇಲ್ಲವಾದರೆ ಕೆಲ 

ಸಾರು, ಮೀರಿ ಕುಳಿತೆಯಾದರೆ ನಿನ್ನ ತಲೆ ಸಹಸ್ರ ಹೋಳಾಗುವುದು,



----------------------ಬತ್ತೀಸುತ್ತಳಿ ಕಥೆ.--------------------------೩೯ 


ಎಂದು ಅಸೋಪಾನದ ನವಮೋಹಿನಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ ; 

ಭೋಜರಾಯನು ಬದಲು ಸಿಂಹಾಸನದಲ್ಲಿ ಕುಳಿತು ಚಿತ್ರಶರ್‍ಮವಿಂದ ಹೇಳಿ ಸಿದ ಕಥೆ:


ಎಲೆ ಪುತ್ತಳಿಯೇ ಕೇಳು. ನಮ್ಮ ಒಡೆಯನಾನ ಭೋಜರಾಜನು 

ಧಾರಾಪುರದಲ್ಲಿ ಸುಖರಾಜ್ಯಂಗೆಯ್ಯುವ ಒಂದುದಿನ ಸುಖದಿಂದ ಎಣ್ಣೆ 

ಯಂ ಒತ್ತಿಸಿಕೊಳ್ಳುತ್ತ ಮೂಡ ಮುಖವಾಗಿ ಕುಳಿತಿರುವ ಸಮಯದಲ್ಲಿ 

ಒಬ್ಬ ಭಿಕ್ಷು ಕವಿಯೆಂಬ ಬ್ರಾಹ್ಮಣ ನಾಲ್ಕು ಶ್ಲೋಕ ಬರೆದು ಓಲೆಯಂ 

ಕೈಯಲ್ಲಿ ಹಿಡಿದು, ಅರಮನೆಯ ಬಾಗಿಲ ಬಳಿಗೆ ಬಂದು, ಕಾವಲಕಾದಿರುವ 

ಗೊಲ್ಲರ ಸೇರುಗಾರನಂ ಕರೆದು, ರಾಯನ ಕಡೆ-ನಾನು ಬಂದಿರುವ 

ವರ್ತಮಾನವನ್ನು ಹೋಗಿ ನೀನು ಅರಿಕೆ ಮಾಡು ನಿನಗೆ ಹನ್ನೆರಡು ಸಾ 

ವಿರ ವರಹವ ಕೊಡುವೆ, ಎನ್ನಲಾಗಿ; ಆಸೇರುಗಾರ ಬಂದು ಕೈಮುಗಿದು, 

-ಎಲೈ ಮಹಾರಾಯನೇ ! ಭಿಕ್ಷು ಕವಿ ನಾಲ್ಕು ಶ್ಲೋಕವಂ ಬರೆದ ಓಲೆ 

ಯಂ ಕೈಯಲ್ಲಿ ಹಿಡಿದುಕೊಂಡು ಅರಮನೆಯ ಬಾಗಲಿಗೆ ಬಂದು ನನ್ನ 

ಕರೆದು ತನ್ನ ಬಂದು ಇದ್ದಾನೆ ಎಂಬ ವರ್ತಮಾನವನ್ನು ಶ್ರುತಪಡಿಸಿದರೆ 

ನಿನಗೆ ಹನ್ನೆರಡುಸಾವಿರ ವರಹ ಕೊಡುವೆನು ಎಂದು ಹೇಳಿದ ಅಮಾತ 

ರಾಯ ಕೇಳ, ಅಕವಿಯ ಕರತರಹೇಳಿ ಆಜ್ಞೆಯಂ ಮಾಡಿ ಹೇಳಲಾಗಿ ; 

ಆಸೇರುಗಾರ ಬಂದು ಅಕವಿಯಂ ಕರೆದುಕೊಂಡು ಹೋಗಿ, ರಾಯನ 

ಎದುರಾಗಿ ನಿಲ್ಲಿಸಲು ; ಆಕವಿಯು ರಾಯನ ಮುಖವಂ ನಿರೀಕ್ಷಿಸಿ, ಒಂದ 

ನೆಯಕವ ಹೇಳಿದನು. ಅದಂ ರಾಯಂ ಕೇಳಿ ಅದಿಕ್ಕಿನ ರಾಜ್ಯವನ್ನು 

ತನ್ನ ಮನಸ್ಸಿನಲ್ಲಿ ಧಾರೆಯೆರೆದುಕೊಟ್ಟು, ತೆಂಕಮುಖವಾಗಿ ಕುಳಿತುಕೊ 

ಳ್ಳಲಾಗಿ : ಆಕವಿಯ ಆದಿಕ್ಕಿನಲ್ಲಿ ಹೋಗಿ ಎದುರಿಗೆ ನಿಂತು ಎರಡನೆಯ 

ಶ್ಲೋಕವ ಪೇಳಿದನು. ಅದು ಕೇಳಿ ರಾಯ ಪಡುವಣದಿಕ್ಕಿಗೆ ತಿರಿಗಿಕೊ 

ಳ್ಳಲು, ಆಕವಿಯು ಆದಿಕ್ಕಿನಲ್ಲಿ ಹೋಗಿ ಎದುರಿಗೆ ನಿಂತು ಮೂರನೆಯ 

ಶ್ಲೋಕನ ಹೇಳಿದನು. ಅದಂ ಕೇಳಿ ರಾಯ ಬಡಗಣದಿಕ್ಕಿಗೆ ತಿರುಗಿ ಕುಳಿ 

ತುಕೊಳ್ಳಲಾಗಿ, ಆ ಕವಿಯು ಆ ದಿಕ್ಕಿನಲ್ಲಿಯೂ ಹೋಗಿ ಎದುರಾಗಿ ನಿಂತು 

ನಾಲ್ಕನೆಯ ಶ್ಲೋಕನ ಹೇಳಿದನು. ಅದನ್ನು ರಾಯನು ಕೇಳಿ ಚೌದಿಕ್ಕಿನ

ರಾಜನಂ ಧಾರೆಯೆರೆದು ಕೊಟ್ಟು, ಮೇಲುಮುಖವಾಗಿ ಎದ್ದು ನಿಂತು, ಆ



೪೦----------------ಕರ್ಣಾಟಕ ಕಾವ್ಯ ಕಲಾನಿಧಿ.----------------------------


ಕವಿಗೆ ಉತ್ತರಂಗುಡದೆ ಅಭ್ಯಂಗನದ ಮನೆಗೆ ಹೋಗಿ, ಎರೆದುಕೊಳ್ಳು 

ತ್ತಿರಲು ; ಇತ್ತ-ರಾಯನು ನನಗೇನೂ ಉತ್ತರಕೊಡದೆ ಸುಮ್ಮಗೆ ಎದ್ದು 

ಹೋದನೆಂದು ಮಹಾಸಂತಾಪದಿಂದ ಹೋಗುವ ಕವಿಯನ್ನು ಪ್ರಧಾನ ಕಂಡು 

ರಾಯನೊಡನೆ ಹೇಳಿದುದ ಕೇಳಿದನು. ಆಬಳಿಕ-- ಎಲೈಕವಿಯೇ ! ರಾಯ 

ನಿನಗೆ ಕೊಟ್ಟ ತ್ಯಾಗ ನನಗೆ ಕೊಡುತ್ತೀಯಾ ? ಎಂದು ಕೇಳಲಾಗಿ, ಅವಶ್ಯ 

ಕೊಡುವೆ. ನನ್ನ ಗ್ರಾಸೋಪಾಯಕ್ಕೆ ನೀವೇನು ಕೊಡುತ್ತೀರೋ ನೋಡಿ 

ಎನ್ನಲಾಗಿ; ಪ್ರಧಾನನು ಅಕವಿಗೆ ನಾಲ್ಕು ಲಕ್ಷ ವರಹಂ ಕೊಟ್ಟು, 

ರಾಯನ ತ್ಯಾಗ ನನಗೆ ಸಂದಿತು ಎಂದು ಪ್ರಧಾನ ಪೇಳಿದುದಕ್ಕೆ, ಅಕವಿ 

ಯು-ಹಾಗೆಯೇ ಸರಿ ಎಂದು ಹೇಳಿ, ಅಪ್ರಧಾನಕೊಟ್ಟ ನಾಲ್ಕು ಲಕ್ಷ ದ್ರವ್ಯ 

ವಂ ತೆಗೆದುಕೊಂಡು ಹೋಗುತ್ತಿದ್ದನು. ಅಷ್ಟಯಲ್ಲೇ ರಾಯನು ಮಿಂದು, 

ದೇವತಾರ್ಚನೆ ಭೋಜನ ತೀರಿಸಿಕೊಂಡು, ಓಲಗಳಲೆಗೆ ಬಂದು, ಸಿಂಹಾ 

ಸನದಲ್ಲಿ ಕುಳಿತುಕೊಂಡು, ಊಳಗದವರ ಕರೆದು, ಭಿಕ್ಷು ಕವಿಯಂ ಕರೆದು 

ತರಹೇಳಿ ಎಣ್ಣೆ ಮಂಡೆಯಲಿದ್ದಾಗ ಬಂದು ಕಾಣಿಸಿಕೊಂಡು ಶ್ಲೋಕವ 

ಹೇಳಿದುದರಿಂದ ಅವನಲ್ಲಿ ಮಾತನಾಡುವುದಕ್ಕೆ ಇಲ್ಲದೆ ಚತುಸ್ಸೀಮೆಯನ್ನು 

ಮನಸ್ಸಿನಲ್ಲಿ ಧಾರೆಯೆರೆದು ಕೊಟ್ಟೆ ಎಂದ ಮಾತಿಗೆ ಪ್ರಧಾನನಿಂತೆಂದನು:-- 

ನೀವು ಅಕವಿಗೆ ಕೊಟ್ಟ ರಾಜ್ಯತ್ಯಾಗವನ್ನು ನನಗೆ ನಾಲ್ಕು ಲಕ್ಷ ವರಹ 

ಕ್ಕೆ ಮಾರಿದನೆಂದ ಮಾತಿಗೆ, ರಾಯ ಆಕವಿಯಂ ಕರೆಸಿ ಕೇಳಲಾಗಿ - ಎಲೈ 

ರಾಯನೇ ! ಚಿನ್ನದ ಮಳೆ ಹೊಯ್ಯುವಾಗ ಅಭಾಗ್ಯದ ಕೊಡೆಯನ್ನು ಹಿಡಿದೆ 

ಎನ್ನಲಾಗಿ; ಅಕವಿಗೆ ಪುನಃ ಸವಾಲಕ್ಷವರಹವಂ ಕೊಡಿಸಿ, ಕಳುಹಿದನೆಂದು 

ಪೇಳಲಾಗಿ-ನವಮೋಹಿನಿ ಎಂಬ ಪುತ್ತಳಿ-ಐಸಲೇ ನಿಮ್ಮ ಒಡೆಯನ ವಿತ 

ರಣವು ! ಎಂದು ನಗುತ್ತ ಹಾಸ್ಯಂಗೆಯ್ದು ಹೇಳಿದ ಉಪಕಥೆ -


ಕೇಳೈಯ ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯವನ್ನು ಸುಖದಿಂದ ಪಾಲಿಸುವಲ್ಲಿ ಒಂದು ದಿನ ಮತ್ಸ್ಯಪುರದ ವರ್ತಕ 

ಬಂದು, ರಾಯನೊಡನೆ-ನಮ್ಮ ದ್ವೀಪಾಂತರಕ್ಕೆ ಹೋಗಿ ವ್ಯಾಪಾರ ತೆಗೆದು 

ಕೊಂಡು ಬರುವಲ್ಲಿ ಸಮುದ್ರ ಮಧ್ಯದಲ್ಲಿ ಹಡಗೊಡೆದು ತಂದ ವ್ಯಾಪಾರ 

ವೆಲ್ಲಾ ಹೋಗಿ ಬರಿದೆ ಬಂದೆ, ಎನ್ನಲಾಗಿ ; ರಾಯನು-ಹಡಗೊಡೆದ ಬಗೆ 

ಹೇಗೆ ? ಎಂದು ಕೇಳಲು ; ಅವನು ಪಾತಾಳಲೋಕದಿಂದ ಸಮುದ್ರ ಮಧ್ಯ



--------------------------ಬತ್ತೀಸುತ್ತಳಿ ಕಥೆ--------------------------೪೧ .


ದಿಂದ ಮೇಲಕ್ಕೆ ಬಂದು ಉಪ್ಪರಿಗೆ ಬಂದುದು. ಅದರಲ್ಲಿ ಒಬ್ಬ ಸೀಮಂ

ತಿನಿಯೆಂಬ ಸ್ತ್ರೀಯು ಇದ್ದಳು. ಅವಳು ಹೇಗಿದ್ದಳೆಂದರೆ ಮುತ್ತಿನ 

1ಕಂಠಮಾಲೆಯಲ್ಲಿ 1 ರತ್ನವಿದ್ದಂತೆ, ತಾರೆಗಳ ಮಧ್ಯೆ ಚಂದ್ರನಿದ್ದಂತೆ, 2ನಯ 

ನದಲ್ಲಿ ಅಲೆಯಿದ್ದಂತೆ,2 ಮುಗಿಲಲ್ಲಿ ಮಿಂಚು ಹೊಳೆದಂತೆ. ಇಂಥ ಲಾವಣ್ಯ 

ವತಿಯಂ ಕಂಡೆ ಎನ್ನಲಾಗಿ; ರಾಯನು ವಿಸ್ಮಿತನಾಗಿ ತೋರು ಎಂದನು. 

ರಾಯನು ಅವನ ಕರೆದುಕೊಂಡು 3ಅಕಾಶಮಾರ್ಗದಲ್ಲಿ ಅಂಬುಧಿಗೆ3 

ಹೋಗಿ, ಶಂಖಪಾಲನೆಂಬ ನಾಗೇಂದ್ರನ ಅರಮನೆಯೊಳು ಅಸೀಮಂತಿನಿ 

ಯಂ ಕಂಡು, ಅವಳ ಕೂಡೆ ಪಗಡೆಯಾಡಿ, ಅವಳ ಸೋಲಿಸಿದ ಕಾರಣ, 

ಅವಳು ರಾಯನ ಕೈವಿಡಿದು-ನೀನು ಯಾರು ? ನಿನ್ನ ಹೆಸರೇನು ? 

ಎಂದು ಕೇಳಲಾಗಿ ; ನನ್ನ ಹೆಸರು ವಿಕ್ರಮಾದಿತ್ಯರಾಯನೆಂದು ಹೇಳಿ, ಆ 

ಬಳಿಕ-ನೀನಾರು ? ನಿನ್ನ ಹೆಸರೇನು ? ಎನ್ನಲಾಗಿ ; ಶಂಖಪಾಲನಾಗೇಂ 

ದನ ಮಗಳು, ನನ್ನ ಹೆಸರು ಸೀಮಂತಿನಿ, ನನ್ನ ತಂದೆ ನಿನಗೆ ಬೇಕಾದ 

ಪುರುಷನ ಭೂಲೋಕದಲ್ಲಿ ನೋಡಿಕೊ ಎಂದು ನನಗೆ ಹನ್ನೆರಡು ನೆಲೆಯ 

ಉಪ್ಪರಿಗೆಯಂ ಕಟ್ಟಿಸಿ ಕೊಟ್ಟಿರುವ ನಿಮಿತ್ತ ದಿನವೊಂದಕ್ಕೆ ಒಂದು ವೇಳೆ 

ಸಮುದ್ರದ ಮೇಲೆ ಬಂದು ಹೋಗುತ್ತಿದ್ದೆ. ಈಗಿನ ನನ್ನ ಪುಣ್ಯದಿಂದ 

ನಿನ್ನಂಥ ಪುರುಷರತ್ನ ದೊರಕಿತು, ಎಂದು ರಾಯನ ತನ್ನ ತಂದೆಯ ಬಳಿಗೆ 

ಬಾರೆಂದು ಕರೆದುಕೊಂಡು ಹೋಗಿ, ಅವಳಂತೆಂದಳು:- ಎಲೈ ಪಿತನೇ ! 

ಈ ಪುರುಷರತ್ನ ನಿಮ್ಮಳಿಯನೆಂದು ತೋರಿಸಲಾಗಿ ; ಅಶಂಖಪಾಲನಾ 

ಗೇಂದ್ರ ರಾಯನ ಲಾವಣ್ಯವ ಕಂಡು ಸಂತೋಷಚಿತ್ತನಾಗಿ-ನಿನಗೀತ 

ನೊಪ್ಪೆ ? ಎಂದು ಮಗಳ ಕೇಳಲಾಗಿ ; ಅವಳು ಈತನೇ ಪತಿ, ನಾನೇ 

ಸತಿ, ಎಂದ ಮಾತಂ ಕೇಳಿ, ರಾಯನು ಅವಳ ಸುಲಗ್ನದಲ್ಲಿ ಧಾರೆಯೆರೆದು 

ವಿವಾಹವಂ ಮಾಡಿ, ಮಗಳಿಗೆ ಅಷ್ಟೈಶ್ವರ್‍ಯವಂ ಕೊಟ್ಟು, ಗರುಡೋದ್ಗಾರಿ 

ಲೋಕೋಪಕಾರಿ ರತ್ನವಂ ಅಳಿಯನಿಗೆ ಕೊಟ್ಟು, ಅರತ್ನದ ಫಲವಂ ಹೇಳಿ 

ದನು. ಅದೇನೆಂದರೆ-ಇದು ರಸರಸಾಯನಪಂಚಾಕಪರಮಾನ್ನ ಕೊಡುವು 

ದೆಂದು ಗರುಡ ಮಂತ್ರಸಿದ್ಧಿಯಂ ಹೇಳಿ, ಅನೆಲವಾಡದಲ್ಲಿ ಕುಳ್ಳಿರಿಸಿ, ದಂ 

.................

ಪಾ-1, ಖಂಡದಲ್ಲಿ. 2. ಕಣ್ಣಿನೊಳು ಎಲೆ ಇಪ್ಪಂತೆ. 3. ಆಗಿರಿ ಮಾಡದೆ 

ಬಳಬಂಕೆ .


೪೨------------------ಕರ್ಣಾಟಕ ಕಾವ್ಯಕಲಾನಿಧಿ.---------------------------


ಪತಿ ಸಹಿತ ಕಳುಹಿಸಲಾಗಿ ; ಆನೆಲವಾಡ ನಾಗಲೋಕದಿಂದ ಶರಧಿಯೊ 

ಳಗೆ ಬಂದು, ಭೂಲೋಕಕ್ಕೆ ಪುಟನೆಗೆದು ತಂದು ಬಿಡಲಾಗಿ, ಅಲ್ಲಿಂದ ವರ್ತ 

ಕ ಸಮೇತವಾಗಿ ಬರುವ ದಾರಿಯಲ್ಲಿ ಒಬ್ಬ ಸಾಧುಕನ ಹಾವು ಕಚ್ಚಿ ಬಿದ್ದಿ 

ರುವನು ಕಂಡು, ಗರುಡಮಂತ್ರದಿಂದವನ ಏಳಿಸಿ, ಇಲ್ಲಿ ನೀನು ಬಿದ್ದಿರ 

ಕಾರಣವೇನೆಂದು ಕೇಳಲಾಗಿ ; ದಾರಿದ್ರ ದೋಪದಿಂದ ಈ ಅರಣ್ಯದಲ್ಲಿ 

ತಪಸ್ಸ ಮಾಡಬೇಕೆಂದು ಬರಲಾಗಿ, ಹಾವು ಕಚ್ಚಿ ಬಿದ್ದೆನು ಎಂದ ಕಾರಣ ; 

ರಾಯನು ಕರುಣಚಿತ್ತನಾಗಿ, ಅವನಿಗೆ ರಸರಸಾಯನ ಪಂಚಭಕ್ಷ ಪರ 

ಮಾನ್ನ ಕೊಡುವ ರತ್ನವು ಕೊಟ್ಟು, ಇಲ್ಲಿಗೆ ಬಂದು, ಆವರ್ತಕನಿಗೆ 

ಹತ್ತು ಕೋಟಿ ದ್ರವ್ಯ ದಿವ್ಯರತ್ನಂಗಳಂ ಐನೂರು ಸ್ತ್ರೀಯರಂ ಕೊಟ್ಟು 

ಉಪಚರಿಸಿ, ಕಳುಹಿಸಿ, ತಾನು ಅಸೀಮಂತಿನಿ ಸಹಿತ ಸುಖದಿಂದ್ದನು 

ಕಣಾ !


ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ನವಮೋಹಿನಿ ಎಂಬ ಪುತ್ಥಳಿ ಹೇಳಿದ ಏಳನೆಯ ಕಥೆ.


***** 

        ಎಂಟನೆಯ ಕಥೆ.


ಎಂಟನೆಯ ದಿವಸದಲ್ಲಿ ಭೋಜರಾಜನು ಸ್ನಾನ ದೇವತಾರ್ಚನೆ 

ಭೋಜನ ತಾಂಬೂಲವ ತಿರಿಸಿಕೊಂಡು ಸಾಲಂಕಾರಭೂಷಿತನಾಗಿ 

ಚಿತ್ರವರ್ಮನ ಕೈಲಾಗಿನಲ್ಲಿ ರತ್ನಖಚಿತವಾದ ಮಾವುಗೆಯಂ ಮೆಟ್ಟಿಕೊಂಡು 

ಸಿಂಹಾಸನದ ಬಳಿಗೆ ಬಂದು ಹೊಗಳುವ ಭಟರ ಸಂಭ್ರಮದಲ್ಲಿ ಬಲಗಾಲ೦ 

ನೀಡುವ ಸಮಯದಲ್ಲಿ ಅಸೋಪಾನದ ಪದ್ಮಾವತಿಯೆಂಬ ಪುತ್ತಳಿಯು 

ಹೋ ! ನಿಲ್ಲುನಿಲ್ಲು ಭೋಜರಾಯನೇ ! ನಮ್ಮ ಒಡೆಯನಾದ ವಿಕ್ರ 

ಮಾದಿತ್ಯರಾಯನಂತೆ ವೀರವಿತರಣಗುಣಗಳುಳ್ಳಡೆ ಈಸಿಂಹಾಸನವ

ನೇರು, ಇಲ್ಲವಾದರೆ ಕೆಲಸಾರು, ಮೀರಿಕುಳಿತೆಯಾದರೆ ನಿನ್ನ ತಲೆ ಸಹಸ್ರ 

ಹೋಳಾಗುವುದು ಎಂದು ಧಿಕ್ಕರಿಸಲಾಗಿ; ಭೋಜರಾಯನು ಬೇರೆ ಸಿಂಹಾ 

ಸನದಲ್ಲಿ ಕುಳಿತು ಚಿತ್ರಶರ್‍ಮನಿಂದ ಪೇಳಿಸಿದ ಕಥೆ:



----------------------ಬತ್ತೀಸ ಪುತ್ತಳಿ ಕಥೆ.---------------------------೪೩


ಎಲೆ ಪುತ್ತಳಿಯೇ | ಕೇಳು. ನಮ್ಮ ಭೋಜರಾಯನು ಸುಖದಿಂದ 

ಧಾರಾಪುರದಲ್ಲಿ ರಾಜ್ಯಂಗೆಯ್ಯುವಲ್ಲಿ ಒಂದು ದಿನ ಸದರಿನಲ್ಲಿರುವ ಮುನ್ನೂ 

ರು ಮುಖ್ಯ ಕವಿಗಳಲ್ಲದೆ ಲಕ್ಷವೂ ತೊಂಬತ್ತಾಟು ಸಾವಿರ ಕವಿಗಳೂ 

ಕುಳ್ಳಿರುವಲ್ಲಿ!  ರಾಯ-ದಾನಂಗಳಲ್ಲಿ ಅಧಿಕವಾದ ದಾನಂಗಳು ಅವುವು ? 

ಎಂದು ಕೇಳಲು; ವರರುಚಿ ಹೇಳಿದನು -ಅನ್ನೋದಕ ದಾನವೇ ಅಧಿಕ 

ಎಂದು ಹೇಳಿದುದಕ್ಕೆ ; ರಾಯನು-ಅದು ಹೇಗೆ ? ಎಂದು ಕೇಳಲಾಗಿ ; 

ವರರುಚಿಯೆಂಬೊಬ್ಬ ಇಂತೆಂದನು :- ಕೇಳೈಯಾ ರಾಯನೇ ! ಚಿತ್ರಸೇನ 

ರಾಯನಿಗೆ ಮೂರು ತಿಂಗಳ ಕುಮಾರ ಹುಟ್ಟಿರುವನು. ಅಮಗುವನ್ನು 

ಕೇಳಿದರೆ ಅನ್ನೋದಕದಾನದ ಮಹತ್ತನ್ನು ಹೇಳುವುದು ಎನ್ನಲಾಗಿ ; 

ರಾಯನು ವರರುಚಿಸುತ ಚಿತ್ರನಾಯನ ಮನೆಗೆ ಹೋಗಲಾಗಿ, 

ಅವನು ಎದುರುಗೊಂಡು ಕರೆದುಕೊಂಡು ಹೋಗಿ ಬಹುವಿನಯದಿಂದ ಉಪ 

ಚರಿಸಿ-ಏನು ಕಾರಣ ದಯೆಮಾಡಿದಿರಿ ? ಎನ್ನಲಾಗಿ ; ರಾಯನು--ನಿನ್ನ 

ಮೂರು ತಿಂಗಳ ಮಗನ ಕೂಡೆ ಮಾತನಾಡಬೇಕು ? ಎನ್ನಲಾಗಿ : ತೊ 

ಟ್ಟಿಲು ಸಹಿತ ಮಗುವ ತಂದು ಮುಂದಿರಿಸಲಾಗಿ, ರಾಯನು ಎಲೈ ಶಿಶುವೇ ! 

ದಾನದೊಳಧಿಕದಾನವಾವುದು ? ಎನ್ನಲಾಗಿ : ಅಮಗುವು ತಂದೆ ತಾಯಿಗೆ 

ಉನ್ನತವಾದ ದೇವರಿಲ್ಲ ; ಅನ್ನೋದಕದಾನಕ್ಕಿಂತ ಮಿಗಿಲಾದ ದಾನವಿಲ್ಲ, 

ಎನ್ನಲಾಗಿ ; ರಾಯನು--ಅದು ಹೇಗೆ ? ಎನ್ನಲು ಕೇಳೈಯಾ ರಾಯನೇ ! 

ಪೂರ್ವದಲ್ಲಿ ಮುನ್ನೊಂದು ಜನ್ಮದಲ್ಲಿ ನಾನು ಪುಳಿಂದನೆಂಬ ರಾಕ್ಷಸನಾಗಿ, 

ಒಂದು ಘೋರಾರಣ್ಯದಲ್ಲಿ ಗೋಬ್ರಾಹ್ಮಣ ಪಕ್ಷಿ ಮೃಗಗಳನ್ನು ಭಕ್ಷಿಸಿ 

ಕೊಂಡು ನಾನು ಒಬ್ಬ ಸ್ತ್ರೀಯೂ ಸಹಿತವಾಗಿ ಒಂದು ಗವಿಯಲ್ಲಿ ಇರು 

ವಲ್ಲಿ ಬಂದುದಿನ ಅಲ್ಲಿಗೆ ಒಬ್ಬ ಬ್ರಾಹ್ಮಣ, ತನಗೆ ಹಣ್ಣು ಹಂಪಲ ಬೇಕಾ 

ದುದನ್ನು ಹುಡುಕುತ್ತ ಗವಿಯ ಬಾಗಿಲಿಗೆ ಬರಲಾಗಿ ; ಅವೇಳೆಯಲ್ಲಿ 

ನಾನು ಸಂಚಾರಕ್ಕೆ ಹೋಗಿದ್ದ ಕಾರಣ, ಅವನ ನನ್ನ ಸತಿ ಕಂಡು- 

"ಎಲೋ ಬ್ರಾಹ್ಮಣ ! ಇಲ್ಲಿಗೆ ಏಕೆ ಬಂದೆ ? ನನ್ನ ಪತಿ ನಿನ್ನ ಕಂಡರೆ 

ತಿಂದಾನು,” ಎಂದು ಹೇಳಿ ಅವನ ಒಂದು ಕಲ್ಲು ಬಂಡೆಯಲ್ಲಿ ಕುಳ್ಳಿರಿಸಿ 

ಮೇಲೆ ಸೊಪ್ಪುಸೆದೆಯ ಮುಚ್ಚಿ ಮರೆಯಂ ಮಾಡಿ, ನಾನು ಬಂದ ಬಳಿಕ, 

ನನ್ನ ಪಾದವಿಡಿದು ನನ್ನೊಡನೆ ತಾನು ಒಂದು ಕಾರ್‍ಯವ ಮಾಡಿ ಇದ್ದೇನೆ, 


-------------------

೪೪---------------------ಕರ್ಣಾಟಕ ಕಾವ್ಯ ಕಲಾನಿಧಿ.---------------------------


ಎನ್ನಲು ;-ಅದೇನೆಂದು ನಾನು ನಾನು ಕೇಳಲಾಗಿ;-ನಾನೊಬ್ಬ ಬ್ರಾಹ್ಮಣನ 

ಬಚ್ಚಿಟ್ಟು ಇದ್ದೇನೆ, ಅವನ ನೀನು ತಿನ್ನದೆ ರಕ್ಷಿಸಬೇಕೆಂದು ಬಹಳ ಬಗೆ 

ನನಗೆ ಹೇಳಿ, ನಂಬುಗೆಯ ತೆಗೆದುಕೊಂಡ ಬಳಿಕ, ಅವನ ಕರೆತಂದು 

ಮುಂದೆ ನಿಲ್ಲಿಸಲಾಗಿ ; ಅವನು ಕುತ್ತಿನಿಂದ ಬಳಲಿ ಇರುವುದಂ ಕಂಡು, 

ಆಗ ಅವನಿಗೆ ಸಣ್ಣಕ್ಕಿ ಮುಂತಾದ ಬೇಕಾದುದನೆಲ್ಲವ ಕೊಟ್ಟು, ಚೆನ್ನಾಗಿ 

ಭೋಜನಮಾಡಿ ಬಾರೆಂದು ಕಳುಹಿಸಲಾಗಿ; ಆತ ಅಡಿಗೆ ಊಟ ತೀರಿಸಿ 

ಬರುವ ಹೊತ್ತಿಗೆ ಸಂಜೆಯಾದುದರಿಂದ, ಈಬ್ರಾಹ್ಮಣನು ಒಬ್ಬನೇ 

ಹೋದರೆ ಹುಲಿ ಕರಡಿ ತಿಂದಾವು ಎಂದು ಆರಾತ್ರಿ ಅಗವಿಯಲ್ಲಿ ಇರಿಸಿ 

ಕೊಂಡು, ಆತನಿಗೆ ಫಲಾಹಾರಕ್ಕೆ ಖರ್ಜೂರ ದ್ರಾಕ್ಷಿ ಬಾಳೆಯಹಣ್ಣು ಎಳ 

ನೀರು ಮುಂತಾದುದು ಎಲ್ಲವನ್ನೂ ಕೊಟ್ಟು, ಬೆಳಗಾಗುತ್ತಲೆ ಅವನಿಗೆ 

ಬೇಕಾದುದೆಲ್ಲವನ್ನೂ ಕೊಟ್ಟು ದಾರಿ ತಪ್ಪದಂತೆ ಸಂಗಡ ಹೋಗಿ, ಅವನ 

ಅವನಾಶ್ರಮಕ್ಕೆ ಕಳುಹಿದ ಕಾರಣ, ಆಬ್ರಾಹ್ಮಣನಿಗೆ ಒಂದು ದಿನ ಅನ್ನ 

ವಂ ಕೊಡಲಾಗಿ ಅಜನ್ಮದ ಕ್ರೂರಕರ್ಮಗಳಲ್ಲಿ ಹೋಗಿ, ಈಗ ದೊರೆಯ 

ಮಗನಾಗಿ ಸಕಲ ರಾಜ್ಯಕ್ಕೂ ಅರಸುವಾಗಿ, ಅಷ್ಟಭೋಗಭೋಗ್ಯಂಗಳಿಗೆ 

ಒಡೆಯನಾಗಿ, ಹುಟ್ಟಿರುವೆನು. ಅದುದರಿಂದ ಅನ್ನದಾನಕ್ಕೆ ಪ್ರತಿಯಿಲ್ಲ 

ಎಂಬುದನ್ನು ಹೇಳಿ, ಮರಳಿ, ರುದ್ರಕೇತುವೆಂಬ ರಾಯನಿಗೆ ಒಂದು ಹೆಣ್ಣು 

ಹುಟ್ಟಿ ತಿಂಗಳಾಯಿತು. ಅದ ಕೇಳಿದರೆ ನಿಮ್ಮ ಸಂಶಯ ನಿಸ್ಸಂದೇಹವಾಗಿ 

ತೀರುವುದೆನ್ನಲಾಗಿ ; ಅಲ್ಲಿಂದ ರಾಯ ವರರುಚಿ ಸಹಿತ ರುದ್ರಕೇತುವಿನ 

ಮನೆಗೆ ಬರಲಾಗಿ ; ಅವನು ಎದ್ದು ಇದಿರುಗೊಂಡು ಕರೆದುಕೊಂಡು ಹೋ 

ಗಿ, ಅತಿ ಉಪಚರಿಸಿ ಬಳಿಕ,-ಏನು ಕಾರಣ ಬಂದಿರಿ ? ಎನ್ನಲಾಗಿ ; ರಾ 

ಯನು-ನಿನ್ನ ತಿಂಗಳ ಮಗುವಿನ ಕೂಡ ಮಾತನಾಡಬೇಕೆಂದು ಬಂದೆವು 

ಎನ್ನಲಾಗಿ; ಆಮಗುವಂ ತಂದು ಇರಿಸಲು; ರಾಯನು-ದಾನದೊಳು ಉನ್ನತ 

ವಾದ ದಾನ ಯಾವುದು ? ಎನ್ನಲಾಗಿ ; ಆಮಗುವು ನಾನು ಪೂರ್ವ ಜನ್ಮ 

ದಲ್ಲಿ ಪುಳಿಂದನೆಂಬ ರಾಕ್ಷಸನ ಸತಿಯಾಗಿದ್ದೆನು. ಆಕಾಲದಲ್ಲಿ ಒಬ 

ಬ್ರಾಹ್ಮಣನು ಹೊಲಬು ತಪ್ಪಿ ಬರಲಾಗಿ, ಆತನಿಗೆ ಅನ್ನ ಕೊಡಿಸಿದುದರಿಂದ 

ಅನನ್ನ ಪತಿ ಚಿತ್ರಸೇನನ ಸುತನಾಗಿ ಹುಟ್ಟಿದ. ನಾನು ರುದ್ರಕೇತುರಾಯನ 

ತನುಜೆಯಾಗಿ ಹುಟ್ಟಿದೆ. ಅವಿವರವನ್ನು ದೊರೆಯಮಗ ನಿಮಗೆ ಹೇಳಿ 



---------------------------ಬತ್ತೀಸುತ್ತ ಕಥೆ.-----------------------------೪೫ 


ಇದ್ದಾನು. ಅದುಕಾರಣ ಅನ್ನದಾನಕ್ಕೆ ಸಮಾನವಾದ ದಾನವಿಲ್ಲ. 

ಇದು ಅಲ್ಲದೆ ಇನ್ನೂ ಒಂದು ಉಂಟು. ಅದೇನೆಂದರೆ-ಉದಕದಾನದಿಂದ 

ಅಧಿಕಫಲವುಂಟು ಕೇಳು. ಒಬ್ಬ ವಸುಪಾಲನೆಂಬ ವರ್ತಕನ ಕೈಯಲ್ಲಿ ಜ 

ಯಪಾಲನೆಂಬ ವ್ಯಾಪಾರಿ ಹತ್ತು ಸಾವಿರ ವರಹವನ್ನು ಕಡ ತೆಗೆದುಕೊಂಡು 

ತನ್ನ ಮನೆಗೆ ಹೋದನು. ಆಜಯಪಾಲನ ಹಟ್ಟಿಯಲ್ಲಿ ಬಂದು ಎತ್ತು 

ಇರುವುದು. ಆಯೆತ್ತು ಜಯಪಾಲನ ನೋಡಿ ನಗುವುದು ಅದಂ ಕಂಡು-- 

ಓ ಎತ್ತೇ ! ನನ್ನ ನೋಡಿ ನಗುವುದೇನು ? ಎಂದು ಜಯಪಾಲ ಕೇಳಲಾಗಿ 

ಆಯೆತ್ತು-ಪೂರ್ವದಲ್ಲಿ ನಿನ್ನಲ್ಲಿ ನಾನು ತೆಗೆದ ಸಾವಿರ ವರಹ ಸಾಲ 

ಏನುಮಾಡಿದರೂ ತೀರದೆ ಈಗ ನಿನ್ನ ಮನೆಯೆತ್ತಾಗಿ ಹುಟ್ಟಿ ಇರುವ 

ನಿಮಿತ್ತ ನೀನು ಹತ್ತು ಸಾವಿರ ವರಹದ ಸಾಲ ಯಾವ ಜನ್ಮಾಂತರಕ್ಕೆ ತೀರಿ 

ಸುವೆ ? ಎಂದು ನಿನ್ನ ನೋಡಿ ನಾನು ನಗುತ್ತೇನೆ-- ಎಂದ ಎತ್ತಿನ ಮಾತಂ 

ಕೇಳಿ, ಜಯಮಾಲ ವಸುಪಾಲನ ಮನೆಗೆ ಹೋಗಿ ನನಗೆ ನೀನು ಕೊಟ್ಟ 

ಸಾಲದ ಹಣ ತೆಗೆದುಕೊ ಎನ್ನಲಾಗಿ ; ವಸುಪಾಲ-ನಿನಗೊಂದು ವರುಷದ 

ಗಡುವನ್ನು ಮಾಡಿ ಸಾಲ ಕೊಟ್ಟೆ. ವರುಷವಾದ ಬಳಿಕ ಹಣ ತೆಗೆದುಕೊ 

ಳ್ಳುವುದೇ ಹೊರತು ಈಗ ತೆಗೆದುಕೊಳ್ಳುವುದಿಲ್ಲ-- ಎನ್ನಲಾಗಿ : ಜಯಪಾ 

ಲನು ಚಿಂತಿಸುತ್ತ ತನ್ನ ಮನೆಗೆ ಬಂದು ತನಗಾರ ಕೂಡೆ ಎಲ್ಲ ವಿವರವಂ 

ಹೇಳಲಾಗಿ ; ಅವರು ಈಹಣ ಮಿಗಿಸಿಕೊಳ್ಳದೆ ದೆ ಬಂದು ಕೆರೆ ಕಟ್ಟಿಸು 

ಎನ್ನಲಾಗಿ ; ಅದೇ ಮೇರೆಗೆ ಜಯಮಾಲ ಹತ್ತು ಸಾವಿರ ವರಹದಲ್ಲಿ ಒಂದು 

ಕಾಸೂ ಇರಿಸಿಕೊಳ್ಳದೆ ಬಂದು ಕೆರೆಯ ಕಟ್ಟಿಸಿದನು. ಆಬಳಿಕ ವರು 

ಷದ ಮೇಲೆ ವಸುಪಾಲ ಬಂದು-- ನನ್ನ ಅಸಲು ಚುಂಗಡಿ ಸಹವಾಗಿ ಹಣ 

ಕೊಡು ಎನ್ನಲಾಗಿ: ಅಜಯಪಾಲ-ನಾನು ಬಂದು, ನಿನ್ನ ಹಣ ತೆಗೆದು 

ಕೋ ಎಂದರೆ, ನೀನು ತೆಗೆದುಕೊಳ್ಳದೆ ಹೋದುದಂದ ಅಹಣದಲ್ಲಿ ಒಂದು 

ಕೆರೆಯ ಕಟ್ಟಿಸಿ ಇದ್ದೇನೆ ಎಂದು, ತಾ ಮಾಡಿದ ಕೆಲಸವ ಕಂಡ ಕಂಡ 

ವರ ಬಳಿಗೆ ವಸುಪಾಲನ ಕರೆದುಕೊಂಡು ಹೋಗಿ ಹೇಳಿಸಲಾಗಿ; ಅಜನರು 

-ಎಲೈವಸುಪಾಲ : ನಿನಗೇನಾಗಬೇಕೆಂದು ಕೇಳಲು ; ಅವರ ಮಾತಿಗೆ 

-ನನ್ನ ಹಣ ಬಡ್ಡಿ ಸಹ ಕೊಡಿಸಿ, ಇಲ್ಲವೇ ಕೆರೆಯ ಕಟ್ಟಿದ ಫಲ ಕೊ 

ಡಿಸಿ-- ಎನ್ನಲಾಗಿ ; ಆಜನರು ಈತನ ಹಣಕ್ಕೆ ಎಷ್ಟು ಫಲ ಕೊಡಬೇಕೆಂದು



೪೬----------------ಕರ್ಣಾಟಕ ಕಾವ್ಯಕಲಾನಿಧಿ.--------------------------


ಆಲೋಚಿಸಿ, ವೇದಶಾಸ್ತ್ರವಂ ತೆಗೆದು ನೋಡಲಾಗಿ, ಅದರಲ್ಲಿ ಒಂದು 

ಬಸವ ನೀರಂ ಕುಡಿದರೆ ಹಣ ತೀರೀತು ಎಂದು ಇರುವುದಂ ನೋಡಿ, ಅದೇ 

ಮೆರೆಗೆ ಗೋವುಗಳ ಆಕೆರೆಯ ಬಳಿಯಲ್ಲಿ ನಿಲ್ಲಿಸಿ ಪರೀಕ್ಷೆ ಮಾಡಲಾಗಿ ; 

ಯಾವತ್ತು ಗೋವುಗಳ ನೀರ ಕುಡಿಯದೆ ಸುಮ್ಮನೆ ಇರಲಾಗಿ : ಅದರ 

ಲ್ಲೊಂದು ಗೂಳಿ ತನ್ನ ಬಾಲ ನೆನೆಯದಂತೆ ನೀರಿಗಿಳಿದು ಕಂಠಪೂರ್ತಿಯಾಗಿ 

ನೀರ ಕುಡಿದುದನ್ನು ಸರ್ವಜನರೂ ಕಂಡು, ವಸುಪಾಲನ ಹಣ ಬಡ್ಡಿ ಸಹ 

ತೀರಿತೆನ್ನಲಾಗಿ ; ಅವಸುಪಾಲ-ಹೇಗೆ ತೀರಿತೆನ್ನಲಾಗಿ ;-ನೀನು ಕೊಟ್ಟ 

ಹಣ, ಅದು ಬಡ್ಡಿಗೆ ಬಂದು ಬಸವ ನೀರ ಕುಡಿಯಲಾಗಿ ನಿನ್ನ ಹಣ ಬಡ್ಡಿ 

ಸಹ ತೀರಿತು. ಅವೊಂದು ಬಸವ ನೀರ ಕುಡಿದ ಫಲ ನಿನ್ನದು. ಕಡಿಮೆ 

ಗೋವು ನೀರು ಕುಡಿದ ಫಲ ಜಯಪಾಲನದು ಎಂದು ಎಲ್ಲರೂ ಆಡಿದ ಬಳಿಕ, 

ಉಳಿದ ಗೋವುಗಳನ್ನೂ ನೀರ ಕುಡಿದುದನ್ನು ವಸುಪಾಲನು ಕಂಡು, ತನ್ನ 

ಬಾಯಿಂದ ಜಯಪಾಲನಿಗೆ-ನಾನು ಕೊಟ್ಟ ಹಣ ಬಡ್ಡಿ ಸಹ ತೀರಿತೆಂದು, ಸಕ 

ಲರ ಮುಂದೆ ಹೇಳಿ, ಪತ್ರ ಸೀಳಿ ಹೋದನು. ಅದುಕಾರಣ ಅನ್ನೋದಕ 

ದಾನಕ್ಕೆ ಉನ್ನತವಾದ ದಾನವಿಲ್ಲ ಎಂದು ಹೆಣ್ಣು ಮಗು ಹೇಳಿದುದ ರಾ 

ಯನು ಕೇಳಿ, ಆಶ್ಚರದಿಂದ ತನ್ನ ಅರಮನೆಗೆ ಬಂದು, ಬಹಳ ಅನ್ನಸತ್ರ 

ವಂ ಹಾಕಿಸಿ ಕೆರೆ ಕಟ್ಟೆ ಮಿತಿಯಿಲ್ಲದೆ ಕಟ್ಟಿಸಿ, ಇದ ಹೇಳಿದ ವರರುಚಿಗೆ 

ಸವಾಲಕ್ಷ ವರಹ ಕೊಟ್ಟನು ಎಂದು ಹೇಳಲು; ಪದ್ಮಾವತಿಯೆಂಬ ಪತ್ತ 

ಳಿಯು ನಗುತ್ತ ಹಾಸ್ಯಗೈದು ಹೇಳಿದ ಉಪಕಥೆ :-


ಕೇಳೈಯ ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯವ ಸುಖದಿಂದ ಪಾಲಿಸುವಲ್ಲಿ ಒಂದು ದಿನ ಕಾಲಕೇತು ಎಂಬ ವಿದೂ 

ಷಕ ಸರ್ವಾಂಗಕ್ಕೆ ಭಸಿತವಂ ಧರಿಸಿ, ಮೋಸಕಟ್ಟಿಗೆ ನೆಲಮನೆಯೆಂಬ `

ಮಾತಿನಿಂದ ಪರಿಹಾಸ್ಯಂಗಳಾಡುತ್ತ ರಾಯನ ಎದುರಿಗೆ ಬರಲಾಗಿ : ರಾಯ 

ನು ಮೆಚ್ಚಿ ಕೋಟಿ ದ್ರವ್ಯವ ಕೊಟ್ಟು, ನೀನು ಯಾವ ದೇಶ ? ಎನ್ನ 

ಲಾಗಿ ; ಅವನು-ನಾನಾದೇಶವಂ ಚರಿಸುವವನಿಗೆ ಒಂದು ಸ್ಥಳವೆ ? ಎನ್ನ 

ಲಾಗಿ ; ರಾಯ-ನೀ ಚರಿಸಿದ ದೇಶದಲ್ಲಿ ಅತಿಶಯವೇನು ? ಎಂದು ಕೇಳ 

ಲು ; ಅದಕ್ಕೆ ಅವನು-ದ್ರಾವಿಡದೇಶದಲ್ಲಿ ಒಬ್ಬ ವಾಣಿಜನೆಂಬ ಚಾರು 

ದತ್ತನು ಮೂರು ಯೋಜನ ವಿಸ್ತೀರ್ಣವಾದುದೊಂದು ಕೆರೆಯಂ ನಿರ್ಮಿ 



-----------------------ಬತ್ತೀಸಪುತ್ತಳಿ ಕಥೆ----------------------------೪೭ 


ಸಿ, ಪಾತಾಳ ಪರ್‍ಯಂತರಕ್ಕೂ ತೋಡಿಸಿದರೂ ನೀರುಬಾರದೆ ಪಾಳಾಗಿ ಇರು 

ವುದು ಅಲ್ಲಿ ಒಂದು ಭುಜಂಗಿ ಎಂಬ ದುರ್ಗಿಯಿರುವಳು. ಆ ದುರ್ಗಿಗೆ 

ಅವನಾದರೂ ಮನಸ್ಸು ಚಂಚಲವಿಲ್ಲದೆ ಏಕಚಿತ್ತದಿಂದ ತನ್ನ ತಿರಸ್ಸಂ 

ಛೇದಿಸಿ ನರಬಲಿಯಂ ಕೊಟ್ಟರೆ ಆಕೆರೆಗೆ ನೀರು ಬರುವುದು; ಇಲ್ಲ 

ದಿದ್ದರೆ ಹೀಗೆ ಪಾಳಾಗಿ ಇರುವುದು ಎಂದು ಆಚಾರುದತ್ತನ ಸ್ಪಪ್ನದಲ್ಲಿ 

ಆದುರ್ಗಿಯು ಬಂದು ಹೇಳಲಾಗಿ ; ಆವಾಣಿಜ ನಾನು ಮಾಡಿದ ಕೆಲಸ 

ಸಾರ್ಥಕವಿಲ್ಲವಾಯಿತೆಂದು ಚಿಂತಿಸುತ್ತಿರುವನು, ಎನ್ನಲಾಗಿ ; ರಾಯನು-- 

ಅದ ನೋಡಬೇಕೆಂದು, ಆಕಾಲಕೇತು ಸಹಿತ ಖೇಚರ ಮಾರ್ಗದಲ್ಲಿ ಅದೇ 

ಶಕ್ಕೆ ಹೋಗಿ, ಅಲ್ಲಿರುವ ಚಾರುದತ್ತನ ಕಂಡು ಕೇಳಲಾಗಿ ; ಅವನು 

ಮರುಗುತ್ತ ತನ್ನ ವಿಚಾರ ಹೇಳಲಾಗಿ; ಅವನೊಡನೆ ರಾಯನು ಆಕೆರೆಯ 

ಬಳಿಗೆ ಬಂದು ಅಲ್ಲಿರುವ ದುರ್ಗಾದೇವಿಗೆ ನಮಿಸಿ, ತನ್ನ ಶಿರವಂ ಕತ್ತರಿ 

ಸಲು : ಅದೇವಿ ಮೆಚ್ಚಿ ಪ್ರಸನ್ನಳಾಗಿ ಯಥಾಪ್ರಕಾರ ಶಿರವಂ ಕೊಟ್ಟು 

-ನೀನೇತಕ್ಕೆ ಶಿರವಂ ಕೊಟ್ಟೆ? ನಿನಗೆ ಬೇಕಾದ ವರವ ಕೇಳು, ಕೊಡುವೆ 

ಎನ್ನಲಾಗಿ : ಅರಾಯನು ಚಾರುದತ್ತನು ಕಟ್ಟಿಸಿರುವ ಕೆರೆಗೆ ನೀರು 

ಬರುವುದಕ್ಕೆ ವರಕೊಡು ಎನ್ನಲಾಗಿ: ಅದೇವಿ-ಎಲೈರಾಯನೇ ! 

ನೀನು ಕೆರೆಯಮೇಲೆ ನಡೆದು ಹೋದರೆ, ಅಕೆರೆಗೆ ನೀರು ತುಂಬಿ ಕೊಡಿ 

ಹರಿಯುವುದು ಎಂದು ದೇವಿಯು ಹೇಳಿ ಮಾಯವಾಗಲಾಗಿ ; ಆ ಬಳಕ 

ರಾಯನು ಕೆರೆಯೆಯಮೇಲೆ ನಡೆದು ಹೋಗಲಾಗಿ, ಅಕ್ಷಣವೇ ಆ 

ಕೆರೆ ನೀರು ತುಂಬಿ ಕೋಡಿ ಹರಿದುದನ್ನು ಚಾರುದತ್ತ ಕಂಡು ವಿಸ್ಮಿತ 

ನಾಗಿ, ರಾಯನಿಗೆ ವಂದನೆಯಂ ಮಾಡಿ, ಸಕಲವಸ್ತುಗಳಂ ಕೊಡುವ ರತ್ನ 

ವಂ ಕೊಟ್ಟು ಕೈಮುಗಿಯಲಾಗಿ, ರಾಯ ಆರತ್ನವಂ ವಿದೂಪಕನಿಗೆ 

ಕೊಟ್ಟು ಕಳುಹಿಸಿ, ಅಲ್ಲಿಂದ ಇಲ್ಲಿಗೆ ಬಂದು ಸುಖವಾಗಿ ಇದ್ದನು, ಕಣಾ ! 


ಇಂತು ಕರ್ಣಾಟಕಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ

ಪದ್ಮಾವತಿಯೆಂಬ ಪುತ್ತಳಿ ಹೇಳಿದ ಎಂಟನೆಯ ಕಥೆ.

..............


೪೮--------------ಕರ್ಣಾಟಕ ಕಾವ್ಯಕಲಾನಿಧಿ.----------------------------- 

ಒಂಬತ್ತನೆಯ ಕಥೆ.


ಒಂಬತ್ತನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ 

ಭೋಜನ ತಾಂಬೂಲವಂ ತೀರಿಸಿಕೊಂಡು ಸಿಂಹಾಸನದ ಬಳಿಗೆ ಎಂದಿನಂತೆ 

ಬಂದು, ರತ್ನಖಚಿತವಾದ ಬಲದಕಾಲಂ ನೀಡುವ ಸಮಯದಲ್ಲಿ, ಅಸೋ 

ಪಾನದ ಪ್ರಭಾವತಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ ; ಭೋಜರಾಯನು 

ಬೇರೆ ಸಿಂಹಾಸನದಲ್ಲಿ ಕುಳಿತು ಚಿತ್ರಶರ್‍ಮನಿಂದ ಹೇಳಿಸಿದ ಉಪಕಥೆ :-


ಎಲೆ ಪುತ್ತಳಿಯೇ ಕೇಳು ! ನಮ್ಮ ರಾಜನು ಸುಖರಾಜ್ಯಂಗೆಯ್ಯು 

ವಲ್ಲಿ ಒಂದು ದಿನ ಧಾರಾಪುರದಲ್ಲಿ ರಾಜಬೀದಿಯಲ್ಲಿ ಸ್ವಾರಿ ಬರುವಾಗ 

ಒಬ್ಬ ಕವೀಶ್ವರ ಕೌಂಕುಳೊಳಗೆ ದೊಡ್ಡದಾದಂಥ 1ವಸ್ತ್ರವನ್ನು ಇರು 

ಕಿಕೊಂಡು ಬರುವುದು ರಾಯಂ ಕಂಡು ಕಕ್ಷೆಕಿಂ ? ಎಂದು ಕೇಳಲು; 

ಅವ-ಮಮಪುಸ್ತಕಂ ಎನ್ನಲಾಗಿ; ರಾಯ-ಕಿಂ ಪುಸ್ತಕಂ ? ಎಂದುದಕ್ಕೆ, 

ಅವಂ ಕಾವ್ಯಪುಸ್ತಕಂ ಸಾರ (?) ಎಂದುದಕ್ಕೆ ರಾಯನು ಮೆಚ್ಚಿ-- ಅವನಿಗೆ 

ಸವಾಲಕ್ಷವರಹವಂ ಕೊಟ್ಟು ಕಳುಹಿಸಿದನು ಕಣಾ' ಎಂದಮಾತಿಗೆ ಪ್ರಭಾ

ವತಿಯೆಂಬ ಪುತ್ತಳಿಯು ನಗುತ್ತ ಹಾಸ್ಯಂಗೆಯು ಹೇಳಿದ ಉಪಕಥೆ :-1 


ಕೇಳೈಯಾ ಚಿತ್ರಶರ್ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯ ಪಾಲಿಸುವ ವೇಳೆಯಲ್ಲಿ ಒಂದು ದಿನ ಒಬ್ಬ ವಿಪ್ರನು ಬಂದು ರಾ 

ಯನ ಎದುರಿಗೆ ತನ್ನ ವಿದ್ಯೆಯಂ ತೋರಿಸಲಾಗಿ; ರಾಯನು ಮೆಚ್ಚಿ ಅವ 

ನಿಗೆ ಕೋಟಿ ವರಹಮಂ ಕೊಟ್ಟು, ಅಬಳಕ-ಎಲೈ, ನೀನು ಯಾವ ದೇ 

ಶದಲ್ಲಿ ಚರಿಸಿದೆ ? ಎನ್ನಲಾಗಿ; ಅವನು ಕೇಳೋ ಮಹಾರಾಯನೇ ! ನನ 

ಗೊಂದು ಬಳಿ ಸಂಚಾರವೇ ? ಎನ್ನಲಾಗಿ; ರಾಯಂ-ನೀನು ಚರಿಸಿದ ಸ್ಥಳ 

ಗಳಲ್ಲಿ ಏನತಿಶಯ ? ಎನ್ನಲು; ಅವನು-ದರ್ಪಣಾವತಿ ಎಂಬ ಪಟ್ಟಣ 

ದಲ್ಲಿ ಕೃಷ್ಣಶರ್ಮನೆಂಬ ದ್ವಿಜನಿಗೆ ರೋಮಜಂಘೆಯೆಂಬ ಸ್ತ್ರೀ. ಆಕೆ 

ಯು ಮಹಾಕೋಪಿಷ್ಠೆಯಾಗಿ ದುರ್ನಡತೆ ನಡೆಯುತ್ತಿದ್ದಳು. ಅದ ನಾನು 

ತಿಳಿದು, ಅವಳ ಮನೆಗೆ ಹೋಗಿ, ಊಟಕ್ಕೆ ಇಕ್ಕು ಎನ್ನಲಾಗಿ: ಆಕೆಯು 

..............

ಪಾ-1, ಮಂಚವನ್ನು ಇರಿಸಿಕೊಂಡು ಬರುತ್ತಿರಲು, ರಾಯ- ಕಿಂಪುಸ್ತಕ,

ಎನ್ನಲು; ಕಾವ್ಯೇಷು ಸಾಮೋದಕಂ ಎನ್ನಲು;- ಈ ಕಥೆ ಬಹಳತಪ್ಪೆಂದು 

ತೋರುತ್ತದೆ; ಅರ್ಧವಾಗುವುದಿಲ್ಲ.



------------------------ಬತ್ತೀಸಪಳಿ ಕಥೆ,-----------------------------೪೯


ಊಟಕ್ಕೆ ಇಕ್ಕಲು; ನಾನು ಊಟವಂ ಮಾಡಿ, ಆಕೆಯ ಹಟ್ಟಿ ಜಗಲಿಯ 

ಮೇಲೆ ಮಲಗಿ ಇರಲಾಗಿ; ಅರ್ಧರಾತ್ರಿಯಲ್ಲಿ ಒಂದು ವೀರಪಿಶಾಚಿ 

ಬಂದು ಆಕೆಯಂ ಪಿಡಿದು ತೆಗೆದುಕೊಂಡು ಹೋಗುವುದ ಕಂಡು, ನಾನೂ 

ಹಿಂದೆ ಹೋಗಿ ನೋಡಲಾಗಿ ; ಅದು ಆಕೆಯ ಸುಡುಗಾಡಿಗೆ ಕೊಂಡು 

ಹೋಗಿ ಒಂದು ಮರಕ್ಕೆ ಕಟ್ಟಿ ಚಿಮುಟದಿಂದ ಮಯ್ಯನ್ನೆಲ್ಲಾ ಕಿತ್ತು ಗಾಯ

ವಂ ಮಾಡಿ ಪುನಃ ಆಕೆಯ ಮನೆಗೆ ತಂದು ಬಿಟ್ಟು ಹೋಯಿತು. ಈ  

ಮೇರೆಯಲ್ಲಿ ದಿನಚರಿಯಲ್ಲಿ ಹೆಣ್ಣು ಮಗಳು ಕಷ್ಟ ಪಡುತ್ತಾಳೆ --ಎಂದುದ 

ಕೇಳಿ, ರಾಯನು-ಅದ ನೋಡಬೇಕೆಂದು, ಅವನ ಕರೆದುಕೊಂಡು, ಆಕಾಶ 

ಮಾರ್ಗದಲ್ಲಿ ಅಪಟ್ಟಣಕ್ಕೆ ಹೋಗಿ, ಅವಳ ಮನೆಗೆ ಈರ್ವರೂ ಹೋಗಿ, 

-ಊಟಕ್ಕೆ ಇಕ್ಕು ಎನ್ನಲು; ಅವಳು ಊಟಕ್ಕೆ ಇಕ್ಕಲಾಗಿ ; ಇಬ್ಬರೂ 

ಊಟಮಾಡಿ ಅಲ್ಲಿ ಮಲಗಿರಲಾಗಿ ; ಸಮರಾತ್ರಿಯಲ್ಲಿ ಯಥಾಪ್ರಕಾರಕ್ಕೆ 

ಅವೀರಪಿಶಾಚಿಯು ಬಂದು ಅವಳ ತೆಗೆದುಕೊಂಡು ಹೋಗಿ, ಮರಕ್ಕೆ 

ಕಟ್ಟಿ, ಚಿಮುಟದಲಿ ಕೀಳುವುದ ರಾಯಂ ಕಂಡು, ಇಬ್ಬರ ನಡುವೆ ಹೊ 

ಕ್ಕು, ಅದು ಕೈಯಲ್ಲಿದ್ದ ಚಿವುಟವ ಕಿತ್ತುಕೊಳ್ಳಲಾಗಿ ; ಅವೀರಪಿಶಾ 

ಚಿಯು ಅತಿ ಕೋಪದಿಂದ ಬಂದು, ರಾಯನನ್ನು ಶೂಲದಿಂದ ತಿವಿಯಲು ; 

ರಾಯನು ಅದನ್ನು ಕಿತ್ತುಕೊಂಡು ಮುಖದುಹಾಕಿ, ಅದು ಕೂಡೆ ಸೆಣಸಿ 

ಅದನ್ನು ಸಂಹರಿಸಲಾಗಿ ; ಅವಳು ಅದ ನೋಡಿ ರಾಯನಿಗೆ ನಮಸ್ಕಾರವಂ 

ಮಾಡಿ-ಎಲೈಮಹಾಪುರುಷರೇ ! ಈದಿನ ನಿನ್ನಿಂದ ನನ್ನ ಬಾಧಕ ಬಿಟ್ಟಿತು. 

ನಾನು ನಿನ್ನ ಹೊಟ್ಟೆಯಲ್ಲಿ ಬಂದವಳು ಎಂದು ನಮಸ್ಕರಿಸಿ ನಿಲ್ಲಲಾಗಿ ; 

ರಾಯನು--ನಿನಗೀಮೇರೆಯಲ್ಲಿ ಬರ ಕಾರಣವೇನು ? ಎಂದು ಕೇಳಲಾಗಿ; 

ಅವಳು-ನನ್ನ ಪತಿಕೃಷ್ಣತರ್ಮನ ಸೇವೆಯ ಮಾಡದೆ ಮೀರಿ ನಡೆದುದ 

ರಿಂದ, ಪತಿಯು ಕೋಪಿಸಿ, ಕಿಡಿಕಿಡಿಯಾಗಿ ವೀರಪಿಶಾಚಿಯಂ ಕರೆದು 

ನನ್ನ ಒಪ್ಪಿಸಲಾಗಿ; ಅದರಿಂದದು ನಿತ್ಯ ಹೀಗೆ ಬಾಧಿಸುತಲಿದ್ದಿತು. “ಪತಿ 

ದ್ರೋಹಿಗೆ ಇಹಪರವಿಲ್ಲ” ಎಂದು ಹೇಳಿ, ಅಬಳಿಕ ಕೇಳೈ, ನಿನ್ನಂಥ ವೀರ 

ಪುರುಷ ಸ್ವರ್ಗಮರ್ತ್ಯಪಾತಾಳದಲ್ಲಿಯೂ ಇಲ್ಲ ಎಂದು ಕೊಂಡಾಡಿ, 

--ಒಡೆದ ಕೆರೆಯ ಕಟ್ಟಿದಂತೆ ನನ್ನ ಪತಿಯಲ್ಲಿ ಒಡಗೂಡಿಸಬೇಕು ಎಂದು 

ಬಲುಬಗೆಯಲ್ಲಿ ಬೇಡಿಕೊಳ್ಳಲಾಗಿ; ರಾಯನು ಕರುಣಚಿತ್ತನಾಗಿ, ಕೃಷ್ಣ



೫೦-------------------ಕರ್ಣಾಟಕ ಕಾವ್ಯಕಲಾನಿಧಿ.--------------------------


ಶರ್ಮನ ಬಳಿಗೆ ಹೋಗಿ, ಆತನ ನಾನಾಪ್ರಕಾರದಿಂದ ಒಡಂಬಡಿಸಿ, ಅವನ 

ಕರೆತಂದು, ರೋಮಜಂಘೆಯಲ್ಲಿ ಕೂಡಿಸಿ, ಇನ್ನು ನೀನು ನಿನ್ನ ಮನವಂ 

ಚನೆಯಿಲ್ಲದೆ ಪತಿಸೇವೆಯಂ ಮಾಡಿಕೊಂಡು ಇರು ಎಂದು ಅವಳಿಗೆ ಬುದ್ದಿ 

ಗಲಿಸಿ, ಇಂಥ ದುರ್ನಡತೆಯನ್ನು ಮನಸ್ಸಿನಲ್ಲಿ ಇರಿಸಲಾಗದು ಎಂದು ಆತ 

ನಿಗೂ ಹೇಳಿ, ಇರ್ವರನ್ನೂ ಒಂದುಮಾಡಲಾಗಿ ; ಆಕೃಷ್ಣಶರ್ಮರಾಯ 

ಇವನಿಗೆ ಹದಿನೆಂಟು ಪೆಟ್ಟಿಗೆಯ ದ್ರವ್ಯವಂ ಕೊಡಲು, ಅಹಣವನ್ನು ಸಂಗಡ 

ಇದ್ದ ಬ್ರಾಹ್ಮನಿಗೆ ಕೊಟ್ಟು ಕಳುಹಿಸಿ, ಅಲ್ಲಿಂದ ಇಲ್ಲಿಗೆ ಬಂದು 

ಸುಖವಾಗಿ ಇದ್ದನು ಕಥಾ ! 


ಇಂತು ಕರ್ಣಾಟಭಾಷಾವಿರಚಿತವಾದ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಪ್ರಭಾವತಿಯೆಂಬ ಪುತ್ತಳಿ ಹೇಳಿದ ಒಂಬತ್ತನೆಯ ಕಥೆ.


   **** 

ಹತ್ತನೆಯ ಕಥೆ.


ಹತ್ತನೆಯ ದಿವಸದಲ್ಲಿ ಭೋಜರಾಜನು ಸಿನ ದೇವತಾರ್ಚನೆ ಭೋ 

ಜನ ತಾಂಬೂಲ ತೀರಿಸಿಕೊಂಡು ಎಂದಿನಂತೆ ಚಿತ್ರಶರ್ಮನ ಕೈಲಾಗಿನಲ್ಲಿ 

ಸಿಂಹಾಸನದ ಬಳಿಗೆ ಬಂದು ಬಲದ ಕಾಲಂ ನೀಡುವ ಸಮಯದಲ್ಲಿ ಆ  

ಸೋಪಾನದ ವಿಷ್ಣುವಂದಿನಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ, ಭೋಜರಾ 

ಜನು ಬೇರೆ ಸಿಂಹಾಸನದಲ್ಲಿ ಕುಳಿತು, ಚಿತ್ರಶರ್‍ಮನಿಂದ ಪೇಳಿಸಿದ ಕಥೆ


ಎಲೆ ಪುತ್ತಳಿಯೇ, ಕೇಳು. ನಮ್ಮ ಭೋಜರಾಯನು ಧಾರಾಪುರ 

ದಲ್ಲಿ ಸುಖರಾಜ್ಯಗೆಯ್ಯುವಲ್ಲಿ ಬಂದುದಿನ ಜಲಕ್ರೀಡೆಗಾಗಿ ರಾಯನು ಹೊರ 

ಟು, ತನ್ನ ಸಂಗಡ ಪಟ್ಟದರಸಿಯರು ಬಂಗಾರದ ಸ್ತ್ರೀಯರು ಪರಿಚಾರಕ 

ವನಿತೆಯರು ಸಹಿತ ಶೃಂಗಾರತೋಟದ ಸರೋವರದಲ್ಲಿ ತರತರದಿಂದ 

ಜಲಕ್ರೀಡೆಯಾಡಿ, ಮೇಲೆ ಬರುವಲ್ಲಿ, ಅಲ್ಲೊಂದು ತಾವರೆಯ ಮೊಗ್ಗ 

ಕಂಡು, ಇದಕೊಂದು ಶ್ಲೋಕ ಹೇಳಿಸಬೇಕೆಂದು ಮನಸ್ಸಿನಲ್ಲಿ ಯೋಚಿಸಿ 

ಅರಮನೆಗೆ ಬಂದು, ಆ ಮಾರನೆಯ ದಿವಸ ವರರುಚಿ ಮುಂತಾದ ಕವಿಗಳು 

ಮಂತ್ರಿಗಳು ಸಹಿತವಾಗಿ ಓಲಗಸಾಲೆಯಲ್ಲಿ ಕುಳಿತಿರುವ-ರಾಯನು 

ಇಂತೆಂದನು:



----------------------------ಬತ್ತೀಸವುಳಿ ಕಥೆ.--------------------------೫೧ 


"ಕುಸುಮೇ ಕುಸುಮೋತ್ಪತ್ತಿಃ ಶ್ರೂಯತೇ ನಚ ದೃಶ್ಯತೇ" 

ಎಂದು ಒಂದು ಪದ್ಯದ ಅರ್ಧ ಹೇಳಿ-ಈ ಸಮಸ್ಯೆ ಪೂರ್ತಿ ಮಾಡಿ 

ಎನ್ನಲಾಗಿ ; ಪೂರ್ತಿ ಮಾಡಿ ಯಾರೂ ಹೇಳದೇ ಇರುವುದ ಸಮ್ಮುಖದ 

ಶೃಂಗಾರವಿಳಾಸಿನಿಯೆಂಬ ಸೂಳೆಯು ಕಂಡು, ರಾಯನಿಗೆ ಕೈ ಮುಗಿದು, 

-ಇದ ನಾನು ಪೂರ್ತಿಮಾಡುವೆನೆಂದು ಆಚರಣವನ್ನು ಒಂದು ಹಲ 

ಗೆಯ ಮೇಲೆ ಬರೆದು ತಂದು, ತಾನು ಮಲಗುವ ಮನೆಯ ಮಂಚದ ವನೋದಿ 

ಬಳಿಯಲ್ಲಿ ಇರಿಸಿರಲು ; ಅಷ್ಟಲ್ಲೇ ಕಾಳಿದಾಸ ಬರಲಾಗಿ, ಆತನ ಪಾದವ 

ತೊಳದು, ಕರೆದುಕೊಂಡು ಹೋಗಿ, ಮಂಚದ ಮೇಲೆ ಕುಳ್ಳಿರಿಸಿ, ಆಗ ಅವ 

ನಿಗೆ ಸುಗಂಧವಂ ಲೇಪಿಸಿ, ಪುಪ್ಪವ ಮುಡಿಸಿ, ತಂಬೂಲವನಿತ್ತು ಸಂತೋ 

ಷಪಡಿಸಿ ಅವಳು ಈಚೆಗೆ ಬರಲಾಗಿ ; ಕಾಳಿದಾಸನು ಅಲ್ಲಿ ಇರಿಸಿರುವ ಹಲ 

ಗೆಯಂ ತೆಗೆದುಕೊಂಡು, ಅದರಲ್ಲಿ ಬರೆದಿರುವ ಶ್ಲೋಕಾರ್‍ಥನೋದಿ 

ನೋಡಿ ಬದಲು ಚರಣವಂ ಬರೆದನು. ಅದೆಂತೆಂದರೆ:-


* " ಕುಸುಮೆ ಕುಸುಮೋತ್ಪತ್ತಿ ಶ್ರೂಯತೇ ನ ಚ ದೃಶ್ಯತೇ || 

ಎಂದು ಬರೆದಿದ್ದ ಪೂರ್ವಾರ್ಧಕ್ಕೆ ಇ


" ಬಾಲೇ ತವ ಮುಖಾಂಭೋಜೇ ದೃಷ್ಟಮಿಂದೀವರದ್ವಯಂ ||


ಎಂದು ಉತ್ತರಾರ್ಧವಂ ಬರೆದು, ಸಮಸ್ಯೆಯ ಪೂರ್ತಿ ಮಾಡಿ ಇರಿ 

ಸಲಾಗಿ ; ಆವೇಶಿಯು ಬಂದು, ಹಲಗೆಯ ಓದಿ ನೋಡಿ, ತಿಳಿದುಕೊಂಡು 

-ಇದು ಪುರುಷ ಗೆ ಹೇಳಿದಂತಿದೆ. ಇದ ಹೀಗೆ ಕೊಂಡುಹೋಗಿ 

ರಾಯನಿಗೆ ತೋರಿಸಿದರೆ ಕಾಳಿದಾಸ ಹೇಳಿದುದು ಎಂದು ತಿಳಿವನು-ಎನು 

ತ್ತ ಯೋಚಿಸಿ, ಕಾಳಿದಾಸ ಮರೆತು ಮಲಗಿ ನಿದ್ರೆಗೆಯ್ಯುವಾಗ, ಅವಳಿಗೆ 

ಕಾಳಿದಾಸನ ಮೇಲೆ ದ್ವೇಷಹುಟ್ಟಿ, ದೊಡ್ಡದೊಂದು ಕಲ್ಲ ತಂದು ತಲೆಯ

..............

ಟೀಕು-ಕುಸುಮೇ = ಪುಷ್ಪದಲ್ಲಿ, ಕುಸುಮೋತ್ಪತ್ತಿಃ = ಪುಷ್ಪದ ಹುಟ್ಟೋ 

ಣವು, ಉಂಟೆಂದು, ಶೂಯತೇ = ಕಿವಿಯಿಂದ ಕೇಳಲ್ಪಡುತ್ತದೆ; ನಚದೃಶ್ಯತೇ = 

ಕಣ್ಣಿನಿಂದ ನೋಡಲ್ಪಡುವುದಿಲ್ಲ; ಅದೇನು ? ಎಂದು ಸಮಸ್ಯೆ. ಅದಕ್ಕೆ ಉತ್ತರ 

- ಎಲೆ ಬಾಲೆಯೇ, ತವ ಮುಖಾಂಭೋಜೇ = ನಿನ್ನ ಮುಖವೆಂಬ ತಾವರೆಯ 

ಪುಪ್ಪದಲ್ಲಿ, ಇಂದೀವರದ್ವಯ೦ದೃಷ್ಟಂ : ಕಣ್ಣುಗಳೆಂಬ ಏರಡು ಕನ್ನೈದಿಲೆ ಪುಷ್ಪ 

ಗಳು ನೋಡಲ್ಪಟ್ಟವು-ಎಂದು ಕೇಳಿದುದಲ್ಲದೆ ನೋಡುತ್ತಲೂ ಇದ್ದೇವೆ ಎಂದು 

ಅಭಿಪ್ರಾಯ.



೫೨-------------------ಕರ್ನಾಟಕ ಕಾಡ್ಯಕಲಾನಿಧಿ------------------------------


ಮೇಲೆ ಎತ್ತಿಹಾಕಿ, ಜೀವ ಕೊಂದು, ತನ್ನ ಹಿತ್ತಿಲ ಬಳಿಯಲ್ಲಿ, ಆಹೆಣ 

ವನ್ನು ತಿಪ್ಪೆಯಲ್ಲಿ ಸುತ್ತಿರಿಸಿ, ಆಬಳಿಕ ಹಲಗೆಯಲ್ಲಿ ಬರೆದಿದ್ದ ಬಾಲೇ ” ಎಂಬ 

ಅಕ್ಷರವನ್ನು ತೆಗೆದು "ರಾಜನ್‌” ಎನ್ನುವ ಅಕ್ಷರ ಬರೆದುಕೊಂಡು 

ಇರಿಸಿದಳು. ಅದುಕಾರಣ ಸೂಳೆಯರು, ಮುಂದೆ ಮೋಹದಿಂದ ಬೆರಸು 

ವವರ ಮನಸ್ಸಿಗೆ ತಕ್ಕ ಹಾಗೆ ಇರುವರು; ಕೊನೆಗೆ ಕೊರಲ ಹುವರು ಎಂಬ 

ನೀತಿಲಕ್ಷಣವು ವೇಶಿಯರಿಗುಂಟಾದುದರಿಂದ ಕಾಳಿದಾಸನ ಕೊಂದು, ಹಲಗೆ 

ಯಂ ತಂದು, ರಾಯನಿಗೆ ಕೊಡಲಾಗಿ ; ರಾಯನು ಅದಂ ಓದಿನೋಡಿಕೊಂ 

ಡು, "ಸ್ತ್ರೀ ಪುರುಷನಿಗೆ ಹೇಳಿದಂತಿದೆ. ಹಲಗೆ ಹೊಲಸು ಹೊಡೆಯುತಿದೆ. 

ಕಾಳಿದಾಸ ಹೇಳ ಬರೆದುದ ತಿದ್ದಿ ಬರೆದು ತಂದೆಯೇ ? ಕಾಳಿದಾಸನ ಕೊಂ 

ದೆಯೋ ? ಜೀವದಲ್ಲಿದ್ದಾನೆಯೇ ? ನಿಜವಾಗಿ ಹೇಳು,” ಎಂದು ರಾಯನು 

ಗರ್‍ಜಿಸಿ- ಕೇಳಲಾಗಿ ; ಅವಳಿಗೆ ಕಂಪನ ಹುಟ್ಟಿ ಅಡ್ಡಬಿದ್ದು,-- ನನ್ನ ಅಪ 

ರಾಧ ಪಾಲಿಸಬೇಕೆಂದು ಕೇಳಿಕೊಂಡು ಕೊಂದೆನು ಎನ್ನಲಾಗಿ ; ರಾಯನು 

ಕೇಳಿ-ಶಿವಶಿವಾ! ನಿನ್ನಂಥ ಬ್ರಹ್ಮಹತ್ಯವ ಮಾಡಬಹುದೇ ! ಕಾಳಿದಾಸನು 

ಹೋದನೇ ! ನನ್ನ ದೇಹ ಏತಕ್ಕೆ? ಆತನು ಸತ್ತಬಳಿಕ ಈದೊರೆತನ 

ವೇಕೆ?-ಎಂದು ಅಕ್ಷಣವೇ ಅಗ್ನಿಕೊಂಡವಂ ತೆಗೆಸಿ, ಅದರಲ್ಲಿ ಬೆಂಕಿ 

ಹಾಕಿಸಿ, ರಾಯನು ಕುಚಿರ್ಭೂತನಾಗಿ ಅಗ್ನಿ ಪ್ರವೇಶಕ್ಕೆ ಹೊರಡುವುದನ್ನು 

ಪ್ರಧಾನರು ಮುಂತಾಗಿ ಎಲ್ಲರೂ ಕಂಡು- ರಾಯನೇ ! ಒಬ್ಬ ಕವಿ 

ಗೋಸ್ಕರ ನೀನು ಅಗ್ನಿಗೆ ಬೀಳುವುದು ಟೇ' ಎಂದು ನಾನಾತನದಲ್ಲಿ ಒಡಂ 

ಬಡಿಸಿ, ತಿಳಿಯ ಹೇಳಿದರೂ ಕೇಳದೆ, ರಾಯನು ಅನೇಕ ದಾನ ಧರ್ಮಗ 

ಳನ್ನು ಮಾಡಿ, ಅಗ್ನಿಕೊಂಡವನ್ನು ಪ್ರದಕ್ಷಿಣ ಬಂದು, ಸಾಕ್ಷಿಯ ಕಲ್ಲ 

ಮೇಲೆ ನಿಂತು,-ಜನ್ಮಜನ್ಮಾಂತರಕ್ಕೂ ಕಾಳಿದಾಸನ ಸ್ನೇಹವ ಕೊಡು ಪರ 

ಶಿವನೇ! ಎಂದು ನುಡಿದು, ಬೀಳುವ ವೇಳೆಯಲ್ಲಿ-ಪರಮೇಶ್ವರನು ಪ್ರಸ 

ನ್ನನಾಗಿ---ಎಲೈ ರಾಯನೇ , ನಿನ್ನ ಮನೋನಿಶ್ಚಯಕ್ಕೆ ಮೆಚ್ಚಿದೆನು. ನಿನಗೆ 

ಬೇಕಾದ ವರವನ್ನು ಬೇಡಿಕೊ ಎನ್ನಲಾಗಿ; ರಾಯನು-ಎಲೈ ಸ್ವಾಮಿಯ ! 

ನನಗೆ ಕಾಳಿದಾಸನ ಜೀವವ ಪಾಲಿಸು ಎನ್ನಲಾಗಿ ; ಪರಮೇಶ್ವರನು ಕಾಳಿ 

ದಾಸನ ಜೀವನ ಕೊಟ್ಟು ಮಾಯವಾದನು. ಅಬಳಿಕ ಕಾಳಿದಾಸ ಎದ್ದು 

ರಾಯನ ಬಳಿಗೆ ಬರಲಾಗಿ, ರಾಯನು ಕಂಡು ಅಂಗನವ ಮಾಡಿಕೊಂಡು, -



-------------------------------ಬತ್ತೀಸವುತ್ತ ಕಥೆ.-----------------------೫೩ 


ಅತಿ ಸಂತೋಷದಿಂದ ಭೂರಿದಾನವನ್ನು ಕೊಟ್ಟು, ಅವೇಶಿಯನ್ನು ಕರೆದು- 

ಸವಾಲಕ್ಷ ಹೊನ್ನಿಗಾಗಿ ಕಾಳಿದಾಸನ ಕೊಂದೆ. ಅವನಿಗಾಗಿ ನಿನ್ನನ್ನು 

ಮನ್ನಿಸಿರುವೆನು. ಮುಂದೆ ಇಂಥ ದುರ್ಬುದ್ಧಿ ಮಾಡಿದರೆ ತಕ್ಕ ಶಿಕ್ಷೆ ಮಾಡಿ 

ಸುವೆ ಎಂದು ಹೇಳಿ ಅವಳಿಗೆ ಸವಾಲಕ್ಷವರಹವ ಕೊಟ್ಟು ಕಳುಹಿಸಿದನು, 

ಕಣಾ ! ಎಂದ ಮಾತಿಗೆ ವಿಷ್ಣುವಂದಿನಿಯೆಂಬ ಪುತ್ತಳಿಯು ನಗುತ್ತ ಹಾಸ್ಯಂ 

ಗೈದು ಹೇಳಿದ ಉಪಕಥೆ:--


ಕೇಳೈಯ್ಯ  ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯ ಈ 

ರಾಜ್ಯ ಪಾಲಿಸುವ ವೇಳೆಯಲ್ಲಿ ಒಂದುದಿನ ಒಬ್ಬ ಸಿದ್ಧನು ವಿಭೂತಿಯಂ 

ಪೂಸಿ, ರುದ್ರಾಕ್ಷಿಸರವಂ ಧರಿಸಿ, ಕೌಂಕುಳಲ್ಲಿ ಜೋಗವಟ್ಟಿಗೆಯನಿರುಕಿ, 

ಗೆಜ್ಜೆ ಕಪನಿಯಂ ಪೊದೆದು, ಕೈಯಲ್ಲಿ ಪುಸ್ತಕ ದಂಡಕೋಲ ಪಿಡಿದು, 

ರಾಯನೆದುರಿಗೆ ಒಂದು ಇಂತೆಂದನು:-ಎಲೈಮಹಾರಾಯನೇ ! 1ಉದಾರ 

ಕೀರ್ತಿ ಪರಪುರುಷಾರ್ಥ ಮುಂತಾದ ನಿನ್ನ ಸಕಲ ಸದ್ಗುಣವಂ ಕೇಳಿ,1 ನಿನಗೆ 

ಅತಿಶಯವಾದುದೊಂದು ವಸ್ತುವಂ ಕೊಡಬೇಕೆಂದು ಬಂದೆನು ಎನ್ನಲಾಗಿ ; 

ರಾಯನು -- ಅದೆಂಥ ವಸ್ತು ? ಕೊಡು, ಎಂದುದರಿಂದ ಅವನಿಂತೆಂದನು:-- 

“ನಾನು ಜಂಬೂದ್ವೀಪಕ್ಕೆ ಹೋಗಿ, ಪುಷ್ಕರ, ನರ್ಮದೆ, ಯಮುನೆ, ಗೋದಾ 

ವರಿ, ಗೋಮುಖಿ, ತುಂಗಭದ್ರೆ, ದ್ವಾರಾವತಿ, ಗಯ, ಪ್ರಯಾಗ, ಬದರಿ, 

ಕಾಶಿ, ಕನ್ಯಾಕುಮಾರಿ, ಸೇತುಬಂಧ, ರಾಮೇಶ್ವರ, ಸಿಂಧು, ಸರಸ್ವತಿ ಮುಂ 

ತಾದ ಅನೇಕ ತೀರ್ಥಗಳಲ್ಲಿ ಸ್ನಾನಮಾಡಿ, ಸಕಲದೇವರ ದರ್ಶನಂಗೆಯ್ದು 

ಬರುತ್ತ ಇರಲಾಗಿ; ಒಂದು ಘೋರವಾದ ಸ್ಥಳದಲ್ಲಿ ಭಾಳಲೋಚನ 

ನೆಂಬ ಸಿದ್ಧನ ಕಂಡು ಆತನಲ್ಲಿ ಅಮರತ್ವ ಪಡೆವ ಮಂತ್ರಮಂ ಕಲಿತಿರು 

ವುದ ನಿನಗುಪದೇಶವ ಮಾಡುವೆನು. ಅದರಂದ ನೀನು ಅಮರತ್ವವ 

ಪಡೆ ” ಎನ್ನಲಾಗಿ ಅಮಾತಿಗೆ ರಾಯ ಊರ ಹೋಗಿರುವ ಕಾಳಿಕಾದೇವಿ 

ಯೆದುರಾಗಿ ಬಂದು ಮಾಸ ಹೋಮವು ಮಾಡಲಾಗಿ, ಆಹೋಮಕೊಂ 

ಡದಲ್ಲಿ ಒಂದು ಮಾವಿನ ಹಣ್ಣು ಹುಟ್ಟಿದುದಂದ ಅಹಣ್ಣಂ ತೆಗೆದುಕೊಂಡು 

...............

ಪಾ-1, ಸಮಸ್ತ ಗುಣಗಳಲ್ಲಿ ಕೀರ್ತಿಯಲ್ಲಿ ಉದಾರತ್ವದಲ್ಲಿ ಪುರುಷಾರ್ಥಕ್ಕೆ 

ಮೊದಲಾಗಿ ಸಕಲ ಕಲೆಗಳಲ್ಲಿ ಪರಿಪೂರ್ಣನೆಂಬುದನ್ನು ಎಲ್ಲರ ಕೈಯಲ್ಲಿ

ಕೇಳಿ.



೫೪---------------ಕರ್ಣಾಟಕ ಕಾವ್ಯಕಲಾನಿಧಿ.-------------------------


ರಾಯನೂ ಸಿದ್ಧನ ರಾಜಬೀದಿಯಲ್ಲಿ ಬರುವಾಗ ಒಬ್ಬ ಕುಷ್ಠ ರೋಗಿ 

ರಾಯನ ಕಂಡು-ಎಲೈಮಹಾರಾಯನೇ ! ನಾನು ಗರುಡನ ಧ್ವನಿಗೆ 

ಶೇಷನು ಬಳಲಿದಂತೆ ಈರೋಗದಿಂದ ಕಷ್ಟಪಡುತ್ತ ಇದ್ದೇನೆ. ಈ ದಿನ 

ನನ್ನ ಶ್ರಮ ನಿನ್ನ ಸಂದರ್ಶನದಿಂದ ರಸ ಮುಟ್ಟಿದ ಲೋಹದಂತೆ ಇರಬೇಕು, 

ಎನ್ನಲಾಗಿ ; ಅವನ ಮಾತಿಗೆ ರಾಯನು ಹೋಮಕೊಂಡದಲ್ಲಿ ಹುಟ್ಟಿದ 

ಮಾವಿನ ಹಣ್ಣಂ ಕೊಡಲು; ಆಗ ಅವನ ರೋಗವು ಹೋಗಿ ಶರೀರ ಸುವ 

ರ್ಣವಾಗಲಾಗಿ; ಆಬಳಿಕ ಅರಮನೆಗೆ ಬಂದು ಆ ಸಿದ್ಧನಿಗೆ ಹತ್ತು ಸಾವಿರ 

ವರಹದ ಕೊಟ್ಟು ಕಳುಹಿಸಿ, ತಾನು ಸುಖವಾಗಿ ಇದ್ದನು, ಕಣಾ ! ಇಂಥ 

ವೀರ ವಿತರಣವುಳ್ಳಡೆ ಸಿಂಹಾಸನವನೇರು, ಇಲ್ಲವೆ ಕೆಲಸಾರು.


ಇಂತು ಕರ್ಣಾಟಭಾಷಾವಿರಚಿತವಾದ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ವಿಷ್ಣುವಂದಿನಿಯೆಂಬ ಪುತ್ತಳಿ ಹೇಳಿದ ಹತ್ತನೆಯ ಕಥೆ.

.......

      ಹನ್ನೊಂದನೆಯ ಕಥೆ.


ಹನ್ನೊಂದನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚ 

ಣೆ ಭೋಜನ ತಾಂಬೂಲವನ್ನು ತೀರಿಸಿಕೊಂಡು ಎಂದಿನಂತೆ ಸಿಂಹಾಸನದ 

ಬಳಿಗೆ ಬಂದು ಬಲಗಾಲಂ ನೀಡುವ ಸಮಯದಲ್ಲಿ, ಆ ಸೋಪಾನದ ಅನಂ 

ಗಜೆಯೆಂಬ ಪುತ್ತಳಿಯು ಧಿಕ್ಕರಿಸಲಾಗಿ, ಭೋಜರಾಯನು ಬೇರೆ ಸಿಂಹಾಸ 

ನದಲ್ಲಿ ಕುಳಿತು ಚಿತ್ರಶರ್‍ಮನಿಂದ ಹೇಳಿಸಿದ ಕಥೆ :--


1ಎಲೆ ಪುತ್ತಳಿಯೇ, ಕೇಳು. ನಮ್ಮ ಭೋಜರಾಯನು ಧಾರಾಪುರ 

ದಲ್ಲಿ ಸುಖರಾಜ್ಯಂಗೆಯ್ಯುವಲ್ಲಿ ಒಂದು ದಿನ ಒಬ್ಬ ಮುನೀಶ್ವರನು ಪುಲಿಯ 

ತೊವಲಂ ಪೊದೆದು, ಹಾವುಗೆಯಂ ಮೆಟ್ಟಿ, ಜಡೆಗಳಂ ಬಿಟ್ಟು, ದಂಡಕೋಲು 

ಕಮಂಡುಲವಂ ಪಿಡಿದು, ರಾಯನ ಎದುರಿಗೆ ಬಂದು, ಆಶೀರ್ವಾದವಂ ಮಾಡ

............

ಪಾ-1, ಎಲೆ ಪುತ್ತಳಿ ! ಕೇಳು. ಧಾರಾಪುರದಲ್ಲಿ ನಮ್ಮ ಭೋಜ 

ರಾಯನು ದೊರೆತನವಂ ಮಾಡುತ್ತ ಒಂದುದಿನ ಒಡೋಲಗಂಗೊಟ್ಟು ಕುಳಿತಿರುವ 

ಸಮಯದಲ್ಲಿ ಕಾಳಿದಾಸ ವರರುಚಿ ಮೊದಲಾದ ವಿದ್ವಾಂಸರು ಕುಳಿತಿರಲು ; ರಾಯ 

ಕವೀಶ್ವರರೊಳು . 'ಕಿಂಭುಕ್ತಮಭುಕ್ತಂ ' ಎಂಬ ಎರಡು ಸಮಸ್ಯೆ ಹೇಳಿ, ಇದಕ್ಕೆ



--------------------------ಬತ್ತೀಸವುತ್ತ ಕಥೆ.-------------------------೫೫


ಲಾಗಿ ; ರಾಯ ಆ ಮುನಿಯ ಸಕಲ ಉಪಚಾರದಿಂದ ಉಪಚರಿಸಿ-ಏನು 

ದಯಮಾಡಿದಿರಿ ? ಎಂದು ಕೇಳಲಾಗಿ ; ಆ ಮುನಿ-ಎಲೈರಾಯನೇ ! 

ನಿನ್ನ ಸಾದ್ವಿ ಈ ಲೋಕದಲ್ಲಿ ರವಿಯೋಪಾದಿ ವ್ಯಾಪಿಸಿ ಇರುವುದರಿಂದ 

ನಿನ್ನ ಕಾಣಬೇಕೆಂದು ಬಂದೆನು, ಎಂದ ಮಾತಂ ಕೇಳಿ, ರಾಯನು ಮೆಚ್ಚಿ, 

ಆಮುನಿಗೆ ಸವಾಲಕ್ಷದ್ರವ್ಯವಂ ಕೊಟ್ಟು ನಮಸ್ಕಾರವ ಮಾಡಿ ಕಳುಹಿ 

ದನು ಕಣಾ !-ಎಂದ ಮಾತಿಗೆ ಅನಂಗಜೆಯೆಂಬ ಪುತ್ತಳಿಯು ತಲೆದೂಗಿ 

ನಗುತ್ತ, ಹಾಸ್ಯಂಗೈದು ಹೇಳಿದ ಉಪಕಥೆ :--


ಕೇಳೈಯ ಚಿತ್ರಶರ್‍ಮನೆ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯ ಪಾಲಿಸುತ್ತ ಇರುವಲ್ಲಿ, ಒಂದು ದಿನ ಕಿರಾತನು ಗಜದಕೊಂಬು, 

ಕೃಷ್ಣಾಜಿನ, ಅಣಿಮುತ್ತು, ಚೌರಿಸಹ ತಂದು, ರಾಯನಿಗೆ ಕಾಣಿಕೆಯನ್ನಿ 

ರಿಸಿ, ಕೈಮುಗಿದು ಇಂತೆಂದನು :- ಎಲೈ ಮಹಾರಾಯನೇ ! ವನಾಂತರ 

ದಲ್ಲಿ ಕ್ರೂರಮೃಗಗಳ ಬಾಧಕವಾಗಿದೆ. ಅದ ತಪ್ಪಿಸಬೇಕೆಂದು ಬಿನ್ನೈ 

ಸಲಾಗಿ : ರಾಯನು ಕೇಳಿ ಅಕ್ಷಣವೇ ಬಲೆಗಳು, ಕಣ್ಣಿಗಳು, ನಾಯಿಗಳು 

ಮೊದಲಾದುವನ್ನು ಸನ್ನಾಹಮಾಡಿಸಿಕೊಟ್ಟು, ಸಿಂಹ ಕಾರ್ದೂಲ ಮೊದ

..............

ಅರ್ಥವ ಹೇಳಿ ಎಂದು ಬೆಸಗೊಳ್ಳಲು ; ವರರುಚಿ ಇಂತೆಂದನು-ಎಲೈ ರಾಯನೇ ! 

ನಾನು ದೇಶಾಂತರಕ್ಕೆ ಪೋದಲ್ಲಿ, ಪುಂಡರೀಕವೆಂಬ ಪಟ್ಟಣದಲ್ಲಿ ಸಿಂಹಸೇನನೆಂಬ 

ಅರಸು ರಾಜ್ಯಂಗೆಯ್ಯುತ್ತಿದ್ದನು. ಆತಂ ಲೋಭಿಗಳಲ್ಲಿ ಹೆಚ್ಚಾದವನು. ಯಾ 

ರಿಗೂ ಏನನ್ನೂ ಕೊಟ್ಟಂಧವನಲ್ಲ. ಆತನು ತನ್ನ ಹೆಂಡತಿಗೆ ಅನ್ನವನು, ತನ್ನ ಓಲೈ 

ಸಿದವರಿಗೆ ಸಂಬಳವನು ಸಹ ಕೊಡನು. ಯಾವುದಕ್ಕೂ ಹೇಸನು. ಹುಸಿಗೆ 

ಪಿಸುಣಕ್ಕೆ ಭಂಡಾರವಾಗಿದ್ದನು. ದುರ್ಮಾರ್ಗ, ಒಬ್ಬನೆ ಊಟಮಾಡುವನು. 

ಭೂತಬಲಿಗಳ ಕೊಡನು. ಎಂಜಲ ಕೈಯಿಂದ ಕಾಗೆಯ ಹೊಡೆಯನು, ತ್ಯಾಗ 

ಕೊಡನು. ನೀರು ಮಜ್ಜಿಗೆಯನ್ನೂ ಸಹ ಯಾರಿಗೂ ಇಕ್ಕದೆ, ನಾಯಂತೆ ಬಗು 

ಳುತ್ತ ಮನೆಯ ಹೊಗುವ ಯಾಚಕರ ಗದರಿಸುತ್ತ, ತಾನೆ ಉಂಬನು. ಇಂಥವನ 

ಭೋಜನ " ಅಭುಕ್ತ” ಎನಿಸುವುದು, ಮತ್ತೆ ಆತನ ಜನ್ಮ ವ್ಯರ್ಥವು, ಇನ್ನು 

"ಭುಕ್ತ?” ಎಂಬುದು ಏನು ? ಎಂದರೆ -ದಾನಧರ್ಮ ಪರೋಪಕಾರವಾಗಿ ಮ 

ಕ್ಕಳು ನಂಟರು ಸ್ನೇಹಿತರು ಹೆಂಡತಿ ಒಡ ಹುಟ್ಟಿದರು ಪರದೇಶಿಗಳು ಎಲ್ಲರಿಗೂ 

ಅನ್ನವಂ ಕೊಡಿಸಿ ಉಂಬುವನ ಊಟವೀಗ "ಭುಕ್ತ ” ಎನಿಸುವುದು-- ಎಂದು 

ವರರುಚಿ ಪೇಳಲು ; ರಾಯಂ ಕೇಳಿ ಮೆಚ್ಚಿ ಸವಾಲಕ್ಷವರಹವಂ ಕೊಟ್ಟನು 

ಕಣಾ! ಎಂದು ಒಂದು ಪ್ರತಿಯಲ್ಲಿ ಬದಲಾಗಿ ಇದೆ.



೫೬------------------ಕರ್ಣಾಟಕ ಕಾವ್ಯಕಲಾನಿಧಿ------------------------------



ಲಾದ ಮೃಗಯಾತ್ರೆ ಮಾಡುತಿರುವಲ್ಲಿ ಸ್ಥಿರಂಜೀವಿ ಎಂಬ ಗಿಣಿಯು ತನ್ನ 

ಸಮೂಹಸಮೇತವಾಗಿ ಗಗನದಲ್ಲಿ ಬರುತ್ತ ಇಂತೆಂದುದು :-ಎಲೈ ಮ 

ಹಾರಾಯನೇ ! ಕಳಿಂಗ ದೇಶದಲ್ಲಿ ಚಂಪಕಾಪುರವೆಂಬ ಅಗ್ರಹಾರದಲ್ಲಿ 

ರುವ ಮಹಾಜನಂಗಳ ಒಬ್ಬ ರಾಕ್ಷಸ ಬಕನಂತೆ ದಿನಂಪ್ರತಿ ಒಬ್ಬರೂ 

ಬ್ಬರ ತಿನ್ನುವುದ ನಾನು ಕಂಡು ಇರುವೆ-ಎಂದ ಗಿಣಿಯ ಮಾತ ಕೇಳಿ, 

ರಾಯನು ವಿಸ್ಮಿತನಾಗಿ, ಅದನ್ನು ನೋಡಬೇಕೆಂದು ಆಕಾಶಮಾರ್ಗದಲ್ಲಿ 

ಅಲ್ಲಿ ಹೋಗಿ, ನೋಡುವಲ್ಲಿ ಆ ರಾಕ್ಷಸನು ಆಹಾರನಿಮಿತ್ತ ಒಬ್ಬ 

ಬ್ರಾಹ್ಮಣ ಹೋಗುವುದ ಕಂಡು, ಅವನ ಸಂಗಡ ತಾನು ಹೋಗುತ್ತ 

ಎಲೈ ಬ್ರಾಹ್ಮಣ ! ಎಲ್ಲಿ ಹೋಗುತ್ತೀಯ ? ಎನ್ನಲಾಗಿ; ಅವನು ರಾಕ್ಷ 

ಸನ ವೃತ್ತಾಂತವಂ ತಿಳಿಸಲಾಗಿ; ರಾಯ ಅವನ ಹೆದರದಿರೆಂದು ಹಿಂದೆ ನಿಲ್ಲಿ 

ಸಿ, ಮುಂದಕ್ಕೆ ತಾನು ಹೋಗುತ್ತ ಇರುವ ರಾಕ್ಷಸನು ಅರ್ಭಟಿಸಿ 

ಕುಣಿಯುತ್ತ ಮೀಸೆಯಂ ನೀಡುತ್ತ ಬರುವುದ ಕಂಡು, ತೊಲಗದಿರುವ 

ರಾಯನ ಕಂಡು, ಆ ರಾಕ್ಷಸ ಆಶ್ಚರಪಡುತ್ತ-ಇವನು ವೀರನೆಂದು ಸ 

ಮೀಪಕ್ಕೆ ಬಂದು, ಗರ್ಜಿಸಿ, ರಾಯನ ಹೊಡೆಯಲಾಗಿ; ರಾಯನು ಅವನ 

ಹೊಡೆದು, ಇಬ್ಬರೂ ಯುದ್ಧವಂ ಮಾಡುವುದ ನೋಡಿ,ಅಬ್ರಾಹ್ಮಣನು ಓಡಿ 

ಹೋಗಿ, ಅಗ್ರಹಾರದ ಮಹಾಜನದ ಕೂಡ ಹೇಳಲಾಗಿ; ಜನರೆಲ್ಲರೂ 

ಬಂದು ಇರ್ವರ ಯುದ್ಧವಂ ನೋಡುತಿರಲಾಗಿ; ರಾಯನು ರಾಕ್ಷಸನ ಕಾಲಂ 

ಹಿಡಿದು ನೆಲಕ್ಕೆ ಅಪ್ಪಳಿಸಲಾಗಿ ; ರಾಕ್ಷಸನು ಮೃತವಾದುದನ್ನು ಯಾವತ್ತು 

ಜನವೂ ಕಂಡು, ನೀನು ಯಾರು ? ಎಂದು ಕೇಳಲಾಗಿ ;-ನಾನು ವಿಕ್ರ 

ಮಾದಿತ್ಯರಾಯನೆಂದು ಹೇಳಿದುದಂದ-ಎಲೈಮಹಾರಾಯನೇ ! ನಿನ್ನಿಂದ 

ಈ ಅಗ್ರಹಾರ ಜೀರ್ಣಿದ್ದಾರವಾಯಿತೆಂದು ಸ್ತುತಿಯಂ ಮಾಡಿ, ಕೇಳಿ 

ದುದ ಕೊಡುವಂಥ ರತ್ನವಂ ಕೊಡಲಾಗಿ; ರಾಯನು ತೆಗೆದುಕೊಂಡು ಅ 

ಲ್ಲಿಂದ ಬರುವ ಮಾರ್ಗದಲ್ಲಿ ಒಬ್ಬ ಬ್ರಾಹ್ಮಣ ದರಿದ್ರದಿಂದ ಕಷ್ಟಪಡಲಾ 

ರದೆ ತನ್ನ ಸತಿ ಸಹಿತ ಗಂಗೆಯೊಳಗೆ ಬೀಳಬೇಕೆಂದು ಬರುವನಂ ಕಂಡು-- 

ಎಲೋ ಬ್ರಾಹ್ಮಣ ! ಎಲ್ಲಿಗೆ ಹೋಗುವೆ ? ಎನ್ನಲಾಗಿ ; ಅವನು ತನ್ನ 

ವೃತ್ತಾಂತವಂ ಹೇಳಿದುದಂದ ರಾಯ ಕೇಳಿ ಮರುಗಿ ಆಮಹಾಜನಂಗಳು 

ತನಗೆ ಕೊಟ್ಟ ಚಿಂತಾಮಣಿಯೇಬ ರತ್ನವಂ ಅವನಿಗೆ ಕೊಟ್ಟು-ರತ್ನ 



-------------------ಬತ್ತೀಸಪುತ್ತಳಿ ಕಥೆ.---------------------------೫೭


ನೀನು ಕೇಳಿದುದ ಕೊಡುವುದು. ನೀನು ಇನ್ನು ಸುಖವಾಗಿರು, ಎಂದು 

ಕಳುಹಿಸಿ, ಅಲ್ಲಿಂದ ಇಲ್ಲಿ ಬಂದು ತಾನು ಸುಖದಿಂದ ಇದ್ದನು, ಕಣಾ ! 


ಇಂತು ಕರ್ಣಾಟಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಅನಂಗಜೆಯೆಂಬ ಪುತ್ತಳಿಯು ಹೇಳಿದ ಹನ್ನೊಂದನೆಯ ಕಥೆ.


  ***

೧೨ ನೆಯ ಕಥೆ.


ಹನ್ನೆರಡನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ 

ಭೋಜನ ತಾಂಬೂಲವಂ ತೀರಿಸಿ, ಎಂದಿನಂತೆ ಸಿಂಹಾಸನದ ಬಳಿಗೆ 

ಬಂದು, ಬಲದ ಕಾಲಂ ನೀಡುವ ಸಮಯದಲ್ಲಿ, ಆ ಸೋಪಾನದ ಇಂದ್ರಾ 

ವತಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ, ಭೋಜರಾಯನು ಬೇರೆ ಸಿಂಹಾ 

ಸನದಲ್ಲಿ ಕುಳಿತು, ಚಿತ್ರಶರ್‍ಮನಿಂದ ಪೇಳಿಸಿದ ಕಥೆ:


ಎಲೆ ಪುತ್ತಳಿಯೇ, ಕೇಳು. ಧಾರಾಪುರದಲ್ಲಿ ನಮ್ಮ ರಾಯನು 

ಸುಖದಿಂದ ರಾಜ್ಯಂಗೆಯ್ಯುವಲ್ಲಿ ಒಂದು ದಿನ ಸದರಿನಲ್ಲಿ ಕುಳಿತಿರುವ ವೇಳೆ 

ಯಲ್ಲಿ ವರರುಚಿ ಮೊದಲಾದ ಕವಿಗಳ ಮುಖಮಂ ನೋಡಿ ಒಂದು ಬೆರಲಂ 

ತೋರಲಾಗಿ ; ಅದಕ್ಕೆ ಯಾರೂ ಉತ್ತರವ ಕೊಡದೆ ಇರುವುದ ಕಂಡು, 

ಅಲ್ಲಿಂದ ವರರುಚಿ ಎದ್ದು ಹೋಗಿ ಬಂದು ಊರಲಿ ಒಬ ಕುರುಬ ರೂ 

ಪಸ್ಥನಾಗಿ ಇರುವುದಂ ಕಂಡು, ಅವನ ಕರೆದು-ನಿನಗೊಂದು ಕಾರ್‍ಯವಂ 

ಮಾಡಿಕೊಟ್ಟೇನು. ನನ್ನ ಸಂಗಡ ಬಾರೆಂದು ಅವನ ತನ್ನ ಮನೆಗೆ ಕರೆ 

ದುಕೊಂಡು ಹೋಗಿ ಎಲೋ ಕುರುಬ ! ನಿನ್ನ ರಾಯನ ಮನೆಗೆ ಕರೆದು 

ಕೊಂಡು ಹೋಗುತ್ತೇನೆ. ನೀನು ರಾಯನ ಸಂಗಡ ಮಾತನಾಡಬೇಡ, 

ರಾಯನು ಹೇಳಿದುದಕ್ಕೆ ನೀನು ಸಂಜ್ಞೆ ಮಾಡಿ ಉತ್ತರಕೊಡು ಎಂದು ಹೇಳ 

ಲಾಗಿ; ಆ ಕುಲುಬನು-ಒಳ್ಳೇದು ಎಂದು ಎನ್ನಲಾಗಿ; ಅವನ ರಾಯನ ಬಳಿ 

ಗೆ ಕರೆತಂದು ತೋರಲಾಗಿ ; ರಾಯನು-ಇವನಾರೆಂದು ಕೇಳಲಾಗಿ ; ವರ 

ರುಚಿಯು-ನಮ್ಮ ಗುರುಪುತ್ರನೆಂದು ಹೇಳಿದುದಕ್ಕೆ, ರಾಯನು ಮಯ್ಯಾದೆಯ



೫೮------------------ಕರ್ಣಾಟಕ ಕಾವ್ಯಕಲಾನಿಧಿ.---------------------------------


ಮಾಡಿ ಕುಳ್ಳರಿಸಿಕೊಂಡು, ಒಂದು ಬೆರಲಂ ತೋರಲು ; 

ಆ ಕುರುಬ -- ಎರಡು ಬೆರಲ ತೋರಿದನು. ಮತ್ತೆ ಭೋಜರಾಜನು 

ಮೂರು ಬೆರಳಂ ತೋಲಾಗಿ; ಕುಲುಬನು ಒಂದೇ ಬೆರಲಂ ತೋರಲು ; 

ರಾಯನು ಮೆಚ್ಚಿ ಅವನಿಗೆ ಸವಾಲಕ್ಷವರಹವಂ ಕೊಟ್ಟು ಕಳುಹಿಸಿದ, ಬಳಿ 

ಕ ರಾಯನ ಬಳಿಗೆ ವರರುಚಿ ಬಂದು ನಮ್ಮ ಗುರುಪುತ್ರ ಏನು ಪ್ರಸಂಗ 

ಮಾಡಿದನು ? ಎನ್ನಲು, ಲೋಕಕ್ಕೆ ಪರಬ್ರಹ್ಮನೊಬ್ಬನೇ ಎಂದು ನಾನೊಂ 

ದು ಬೆರಲಂ ತೋಯಲು : ಅದಕ್ಕವನು ಜೀವಾತ್ಮ ಪರಮಾತ್ಮನೆಂದು ಎರಡು 

ಬೆರಲಂ ತೋಡಿದನು. ಅಬಳಿಕ ನಾನು ಬ್ರಹ್ಮ ವಿಷ್ಣು ಮಹೇಶ್ವರರೆಂದು ಮೂರು 

ಬೆರಲಂ ತೋರಿದುದಕ್ಕೆ ಅವನು-ಸಂಹಾರಕಾಲಕ್ಕೆ ಪರಾತ್ಮ ಒ 

ಬ್ಬನೆ ಎಂದು ಒಂದು ಬೆರಲಂ ತೋರಿದನು. ಅದಕ್ಕೆ ಮೆಚ್ಚಿ ಅವನಿಗೆ 

ಸವಾಲಕ್ಷ ವರಹವಂ ಕೊಟ್ಟು ಕಳುಹಿಸಿದೆನೆನ್ನಲಾಗಿ : ರಾಯನ ಬಳಿ 

ಯಿಂದ ವರರುಚಿ ಕುರುಬನ ಬಳಿಗೆ ಬಂದು ರಾಯನ ಸಂಗಡ ಏನು 

ಮಾಡುತ್ತಿದ್ದೆ? ಎನ್ನಲಾಗಿ ; ಆ ಕುಣುಬ-ರಾಯನು ಒಂದು ಬೆರಲಂ 

ತೋರಿ ಒಂದು ಕುಲಿಯಂ ಕೇಳಿದ, ನಾನು ಎರಡು ಬೆರಲ ತೋರಿ 

ಎರಡು ಕುರಿಗಳ ಕೊಟ್ಟೇನು ಎಂದು ಸನ್ನೆಯಂ ಮಾಡಿದೆ. ಅವ 

ಮೂರು ಬೆರಲ ತೋರಿ ಮೂರು ಕುರಿ ಕೇಳಿದ. ನಾನು ಕೊಡು 

ವುದೇ ಒಂದು ಎಂದು ಸನ್ನೆ ಮಾಡಿ ತೋರಲಾಗಿ-- ನನಗೆ ರಾಯನು 

ಸವಾಲಕ್ಷ ವರಹವನ್ನು ಕೊಟ್ಟು ಕಳುಹಿಸಿದ-- ಎಂದ ಮಾತಿಗೆ, ವರರುಚಿ 

ಯು ನಗುತ್ತ ಅವನ ಕಳುಹಿಸಿದನು ಕಣಾ! ಎಂದುದಕ್ಕೆ, ಇಂದ್ರಾವತಿಯೆಂಬ 

ಪುತ್ತಳಿಯು ಗಹಗಹಿಸಿ ನಗುತ್ತ ಹಾಸ್ಯಂಗೆಯು ಹೇಳಿದ ಉಪಕಥೆ:--


ಕೇಳಯ್ಯ ಚಿತ್ರಶರ್‍ಮನೆ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯವಂ ಪಾಲಿಸುವ ವೇಳೆಯಲ್ಲಿ ಒಂದು ದಿನ ಆ ಪುರದ ಮಂದಚಿತ್ತನೆಂಬ 

ವರ್ತಕನು ಬಹು ದ್ರವ್ಯ ಸಂಪಾದಿಸಿ ಮೃತನಾದನು. ಅವನ ಕುಮಾರ 

ಪುರಂದರರಾಯ ಯಾವತ್ತು ಹಣ ದಾನಧರ್ಮಮಾಡುವುದ ಬಂಧುಗಳು ಕಂ 

ಡು-ಆದಾಯವಿಲ್ಲದೆ ವೆಚ್ಚ ಮಾಡಬಾರದೆಂದು ಹೇಳಿದುದಕ್ಕೆ ಆ ಪುರಂದರ 

ನಿಂತಂದನು: ಭಾಗ್ಯವಂತನಿಗೆ ಕೊನೆಗೆ ದರಿದ್ರ ತಪ್ಪದು” ಎನ್ನಲಾಗಿ, 

ಬಂಧುಗಳಂತೆಂದರು:- ಅದಕ್ಕೋಸ್ಕರ ಆಪತ್ಕಾಲಕ್ಕೆ ಧನವಂ ಇರಿಸಿಕೊ 



------------------------ಬತ್ತೀಸುತ್ತ ಕಥೆ.---------------------------೫೯ 


ಳ್ಳಬೇಕು” ಎನ್ನಲಾಗಿ; “ ಪುಣ್ಯವಂತನಿಗೆ ಅಪತ್ಕಾಲವೇ ಇಲ್ಲ. ಭಾಗ್ಯ 

ಹೋಗುವ ಕಾಲಕ್ಕೆ ಬಚ್ಚಿಟ್ಟ ಒಡವೆ ತನಗೆ ತಾನೇ ಹೋಗುವುದು " 

ಎಂದು ದಾನಧರ್ಮವ ಮಾಡಿ, ತೀರ್ಥಯಾತ್ರೆಯಂ ಮಾಡಿ, ನಾನಾ ದೇಶ 

ವಂ ಸಂಚರಿಸಿ, ಈ ಪಟ್ಟಣಕ್ಕೆ ಬಂದು, ನನ್ನ ರಾಯನ ಕೂಡ ತನ್ನ ವೃ 

ತ್ತಾಂತವಂ ಬಿನ್ನಿಸಲಾಗಿ ; ರಾಯ-ನೀಚರಿಸಿದ ರಾಜ್ಯದಲ್ಲಿ ಏನು ಅತಿಶ 

ಯವೆನ್ನಲಾಗಿ; “ ಶಶಿಕಾಂತವೆಂಬ ಪಟ್ಟಣದಲ್ಲಿ ಚಂದ್ರಬಾಹುಕನೆಂಬ ಅರ 

ಸಿನ ಮಗಳು ದಮಯಂತಿಯನ್ನು ಒಂದು ಮೋಹಿನಿ ಪಿಡಿದಿರುವುದು. ಅದು 

ಅವಳ ಯಾರಾದರೂ ಮದುವೆ ಮಾಡಿಕೊಂಡರೆ ಅವರ ಕೊಲ್ಲದೆ ಬಿಡೆನೆಂದು 

ಪ್ರತಿಜ್ಞೆಯಂ ಮಾಡಿ ಇರುವುದರಿಂದ, ಅವಳ ಯಾರೂ ಮದುವೆಯಾಗದೆ 

ಹಾಗೇ ಇರುವಳು ” ಎನ್ನಲಾಗಿ; ರಾಯ ಪುರಂದರನ ಕರೆದುಕೊಂಡು 

ಖೇಚರಮಾರ್ಗದಲ್ಲಿ ಅಪಟ್ಟಣಕ್ಕೆ ಹೋಗಿ, ಚಂದ್ರಬಾಹುಕನು ಕಾಣ 

ಲಾಗಿ ; ಆಅರಸು ರಾಯನ ಮನ್ನಣೆಯಂ ಮಾಡಿ, ಸಿಂಹಾಸನದಲ್ಲಿ ಕುಳ್ಳಿರಿ 

ಸಿಕೊಂಡು ಏನು ಕಾರಣ ಬಂದುದು ? ” ಎನ್ನಲಾಗಿ, ಆಮಾತಿಗೆ ರಾ 

ಯನು-ದಮಯಂತಿಯ ವಿವಾಹವಾಗಬೇಕೆಂದು ಬಂದೆನು ಎನ್ನಲಾಗಿ ; ಅ 

ರಸು ಸಂತೋಷಭರಿತನಾಗಿ ತನ್ನ ಮಗಳ ಮದುವೆಯಂ ಮಾಡಿ, ದಂಪತಿಗ 

ಳ ಬೇ ಮನೆಗೆ ಕಳುಹಿದಕಾರಣ, ಮಲಗುವ ಮನೆಯಲ್ಲಿ ಇದ್ದರೂ ಇ 

ರುವಲ್ಲಿ, ಮೋಹಿನಿ ಎಂಬ ರಾಕ್ಷಸಿಯು ರಾಯನ ಕೊಲ್ಲುವುದಕ್ಕೆ ಬರಲಾಗಿ, 

ರಾಯನು ರಾಕ್ಷಸಿಯ ಸಂಗಡ ಯುದ್ಧ ಮಾಡುವುದ ದಮಯಂತಿಯು ಕಂಡು, 

ಆಶ್ಚರಪಡುತ್ತ ನೋಡುತ್ತಿರುವ ರಾಯನಾರಾಕ್ಷಸಿಯಂ ನಾಲ್ಕು  

ಸೀಳಂ ಮಾಡಿ, ನಾಲ್ಕು ದಿಕ್ಕಿಗೆ ನಾಲ್ಕು ಸೀಳಂ ಬಿಸುಟು, ಕಡಿಮೆ ನಾಲ್ಕು 

ಸೀಳ ಆ ಪಟ್ಟಣದಲ್ಲಿ ಜಯಸ್ತಂಭ ಮಾಡಲಾಗಿ ; ಆ ರಾಕ್ಷಸಿ ರಾಕ್ಷ 

ಸರೂಪಳಿದು ಗಂಧರ್ವರೂಪದಿಂದ ಬಂದು ನಿಂತು "ಎಲೈ ಮಹಾರಾಯನೆ!

ನಿನ್ನಿಂದ ನನ್ನ ಶಾಪ ವಿಮೋಚನವಾಯಿತು" ಎನ್ನಲಾಗಿ; ಅಮಾತಿಗೆ ರಾಯ 

ನೀನಾರೆಂದು ಕೇಳಲು; “ನಾನು ಪೂರ್ವದಲ್ಲಿ ವಿದ್ಯಾಧರಕನ್ನಿಕೆ. ಕೈಲಾಸಕ್ಕೆ 

ಹೋಗುತ್ತಿರುವ ದಾರಿಯಲ್ಲೊಬ್ಬ ಭೂತಲೋಭನೆಂಬ ಮಹರ್‍ಷಿ 

ಒಂದು ಬಳಿಯಲ್ಲಿ ತನ್ನ ಪತ್ನಿ ಸಹಿತ ಇರುವುದಂ ಕಂಡು-ಋಷಿಯು ಮು 

ದುಕ, ಹೆಂಡತಿ ಹುಡುಗಿ; ನರೆಕೂದಲಮಂಡೆ ಸೊಕ್ಕಿದಗಲ್ಲ, ಬಡಿದಾಡುವೆ 



೬೦-------------------ಕರ್ಣಾಟಕ ಕಾವ್ಯಕಲಾನಿಧಿ.----------------------------


ಹಲ್ಲು ನೋಡಿ ನಾನು ಹಾಸ್ಯಮಾಡಲಾಗಿ ; ಆ ಋಷಿಯು ಕೋಪಿಸಿ, 

ರಾಕ್ಷಸಿಯಾಗೆಂದು ಶಪಿಸಲಾಗಿ ; ಆ ಬಳಿಕ-ಈ ಶಾಪವಿಮೋಚನ ಯಾವಾ 

ಗ? ಎಂದು ಋಷಿಯಂ ಕೇಳಿಕೊಳ್ಳಲಾಗಿ ; ಆ ಋಷಿಯು-ನಿನ್ನ ದೇಹ ಎಂ 

ಟು ಸೀಳಂ ಮಾಡಿ, ನಾಲ್ಕು ಸೀಳಂ ನಾಲ್ಕು ದಿಕ್ಕಿಗೆ ಇಟ್ಟು, ನಿಂತ ನಾಲ್ಕು 

ಸೀಳಂ ಜಯಸ್ತಂಭ ಮಾಡಿದಾಗ, ಈ ಶಾಪ ತೀರುವುದು ಎನ್ನಲಾಗಿ ; ಆಗ 

ಆಋಷಿಯನ್ನು ನನ್ನ ಆಹಾರಕ್ಕೇನು ? ಎಂದು ಕೇಳಲಾಗಿ; ದಮಯಂತಿಗೆ 

ಪತಿಯಾಗಿ ಬಂದವರ ಭಕ್ಷಿಸಿಕೊಂಡು ಇರು-ಎಂದು ನೇಮಿಸಿ, ಇದ್ದುದ 

ರಿಂದ ನಾನು ಇಲ್ಲಿ ಹೀಗೆ ಇದ್ದೆ ಎಂದ ಮಾತ ರಾಯ ಕೇಳಿ, ಸಂತೋಷ 

ಪಡಲಾಗಿ; ಬಳಿಕ ಆಸ್ತಿಯನ್ನು ರಾಯನಿಗೆ ಬಂಭತ್ತು ಕೋಟಿ ಹಣವ 

ನ್ನು ಬೇಕಾದುದನ್ನು ಕೊಡುವ ರತ್ನವನ್ನು ಕೊಟ್ಟು, ಕೈಲಾಸಕ್ಕೆ ಹೋದ 

ಬಳಿಕ, ರಾಯನು ಅರತ್ನವನ್ನೂ ಹಣವನ್ನೂ ಪುರಂದರನಿಗೆ ಕೊಟ್ಟು, 

ಇರ್ವರೂ ಇಲ್ಲಿಗೆ ಬಂದು ಸುಖವಾಗಿ ಇದ್ದರು ಕಣಾ !


ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಇಂದ್ರಾವತಿಯೆಂಬ ಪುತ್ತಳಿಯು ಹೇಳಿದ ಹನ್ನೆರಡನೆಯ ಕಥೆ,

......

೧೩ ನೆಯ ಕಥೆ.


ಹದಿಮೂರನೆಯ ದಿವಸದಲ್ಲಿ ಎಂದಿನಂತೆ ಭೋಜರಾಯನು ಸ್ನಾನ 

ದೇವತಾರ್ಚನೆ ಭೋಜನ ತಾಂಬೂಲವಂ ತೀರಿಸಿಕೊಂಡು ಮೂವತ್ತೆರಡು 

ಪುತ್ತಳಗಳಿಂದ ಕೂಡಿದ ಸಿಂಹಾಸನದೆಡೆಗೆ ಬಂದು ಬಲಗಾಲಂ ನೀಡುವ ವೇ 

ಳೆಯಲಿ, ಅಸೋಪಾನದ ಕುರಂಗಸೇನೆಯೆಂಬ ಪುತಳಿಯು-ಹೋಹೋ ! 

ನಿಲ್ಲು ನಿಲ್ಲು! ಎಂದು ಧಿಕ್ಕರಿಸಿಲಾಗಿ ; ಭೋಜರಾಯನು ಬೇರೆ ಸಿಂಹಾಸನ 

ದಲ್ಲಿ ಕುಳಿತು ಚಿತ್ರಶರ್‍ಮನಿಂದ ಪೇಳಿಸಿದ ಕಥೆ:


ಎಲೆ ಪುತ್ತಳಿಯೇ ! ಕೇಳು. ನಮ್ಮ ಭೋಜರಾಯನು ಧಾರಾ 

ಪುರದಲ್ಲಿ ಸುಖರಾಜ್ಯಂಗೆಯ್ಯುತ್ತಿರುವಲ್ಲಿ ಒಂದು ದಿನ ವರರುಚಿಯ ಸಂ



-------------------------ಬತ್ತೀಸವತಳಿ ಕಥೆ.------------------------------೬೧


ಗಡ-ನೀವು ಸಕಲ ವಿದ್ಯವ ಬಲ್ಲಿರಷ್ಟೆ: ಚೋರವಿದ್ಯೆ ಬರುವುದೆ ? 

ಎನ್ನಲಾಗಿ;-ಇನ್ನು ಮೇಲೆ ಅಭ್ಯಾಸ ಮಾಡುವೆನೆಂದು ರಾಯನೊಡನೆ ಹೇಳಿ 

ಅಪ್ಪಣೆ ತೆಗೆದುಕೊಂಡುಹೋಗಿ, ಬಹು ಚೋರನಾದಂಥ ಸಹುದಾತನೆಂಬ 

ಮಾದಿಗನ ಮನೆಗೆ ನೀರು ತರುವುದು, ಹುಲ್ಲು ಹೊರೆಯಂ ತಂದು ಹಾಕು 

ವುದು-ಈಪ್ರಕಾರ ಮಾಡುತ್ತಿರುವಲ್ಲಿ; ಒಂದು ದಿನ ಅಮಾದಿಗ ಕಂಡು-- 

ಎಲೈ ಮಹಾಪುರುಪನೇ! ನನ್ನ ಮನೆಯ ಬಳಿ ಸಂಚಾರ ಯೋಗ್ಯವಲ್ಲೆಂದು 

ನೀವು ತಿಳಿದು ಹುಲ್ಲ ಹೊರೆಯಂ ತಂದು ಹಾಕುವ ಕಾರಣವೇನೆಂದು ಕೇಳ 

ಲಾಗಿ ; ವರರುಚಿ-ನಿನ್ನ ಚೋರವಿದ್ಯೆಯಂ ಕಲಿಯುವುದಕ್ಕಾಗಿ ಬಂದೆನು 

ಎನ್ನಲಾಗಿ; ಆ ಮಾತಿಗವನು-ನನ್ನ ಚೋರವಿದ್ಯೆ ಕಲಿಯುವುದಕ್ಕೆ ಠಕ್ಕು 

ಠೌಳಿ ಜಾಲಗಳಿರಬೇಕು. ನೀವು ವಿಪ್ರರು. ನಿಮಗಿದು ಬರಲರಿಯದು 

ಎನ್ನಲಾಗಿ : ನೀ ಹೇಳಿದಂತೆ ನಡೆಯುತ್ತೇನೆ ಎಂದು ಹೇಳಿ, ನಿನ್ನ ವಿದ್ಯೆ 

ಯ ಕಲಿಸು ಎನ್ನಲಾಗಿ, ಅವನು ತನ್ನ ಚೋರವಿದ್ಯೆಯನ್ನೆಲ್ಲಾ ಕಲಿಸಲಾಗಿ; 

ಅದನ್ನು ಕಲಿತು ರಾಯನ ಬಳಿಗೆ ಬಂದು ಕುಳ್ಳಿರಲಾಗಿ ; ರಾಯ ನವ 

ರತ್ನಖಚಿತವಾದ ತಟ್ಟೆಯಲ್ಲಿ ಕರ್ಪೂರವೀಳೆಯವ ತರಿಸಿಕೊಡಲಾಗಿ; ವರ 

ರುಚಿ ಆತಟ್ಟೆಯನ್ನು ಯಾರೂ ಕಾಣದೆ ಅಪಹರಿಸಿಕೊಂಡು ಇರುವುದನ್ನು 

ಆ ಹಡಪಿಗಂ ಕಂಡು ರಾಯನಿಗೆ ಹೇಳದೆ ಸುಮ್ಮನಿರಲಾಗಿ ; ರಾಯ ಓಲಗ 

ತೀರಿದಮೇಲೆ ಅರಮನೆಗೆ ಎದ್ದು ಹೋದನು. ಆ ಬಳಿಕ ವರರುಚಿ ತನ್ನ 

ಮನೆಗೆ ಹೋಗಿ ಇದ್ದನು. ಮರುದಿನ ರಾಯನು ಸದರಿನಲ್ಲಿ ಕುಳಿತಿರಲಾಗಿ 

ವೀಳೆಯ ತರಹೇಳಲು ; ವೀಳೆಯದ ತಟ್ಟೆಯಿಲ್ಲವೆಂದು ಗುಲ್ಲು ಹೇಳಲಾಗಿ, 

ಆ ಸುದ್ದಿಯ ರಾಯ ಕೇಳಿ ಹಡಪಿಗನ ಕರೆಸಿ ತಟ್ಟೆ ಎಲ್ಲಿ ? ಎನ್ನಲಾಗಿ ; 

ಹಡಪಿಗ ವರರುಚಿ ತೆಗೆದುಕೊಂಡು ಹೋದರೆಂದು ಹೇಳುತ್ತಿರುವಲ್ಲಿ-- ವರ 

ರುಚಿ ವೀರಾವೇಶವಂ ತಾಳಿ-ನಾ ಕಳ್ಳನೇ' ಎಂದು ಹಡಪಿಗನ ಕೂಡ 

ಕೂಗಾಡುವುದಂ ಕಂಡು, ರಾಯನು- ನೀವೇಕೆ ಕೂಗಾಡುತಿರಿ ? 

ಎನ್ನಲಾಗಿ; ತಟ್ಟೆಯ-ನಾನು ತೆಗೆದುಕೊಂಡೆನೆಂದು ನಿಮಗೆ ಅರಿಕೆ ಮಾಡಿ 

ದುದರಿಂದ ಕೂಗಾಡುವೆ ಎಂದು ಹೇಳಿದ ಮಾತಿಗೆ, ರಾಯ-ವರರುಚಿ 

ಕಳ್ಳರೇ ? ಎಂದು ಹಡಪಿಗನ ಮೇಲೆ ಕೋಪಿಸಲಾಗಿ ;-ಇವರ ಮೇಲೆ 

ನಾನು ಕಳವನುಂಟು ಮಾಡದೆ ಇದ್ದರೆ, ಆಗ ನಾನೇ ಕೊಡುವೆನು, ಎಂದ



೬೨-------------------ಕರ್ಣಾಟಕ ಕಾವ್ಯ ಕಲಾನಿಧಿ,------------------------


ಮಾತಿಗೆ, ನೀವಿಬ್ಬರೂ ಚಂಡಿಕಾದೇವಿಯ ಗುಡಿಗೆ ಹೋಗಿ, ಉಂಟು ಇಲ್ಲ 

ಮಾಡಿಕೊಂಡು ಬರಹೇಳಿ ರಾಯನ ಅಪ್ಪಣೆಯಾದುದರಿಂದ, ಅದೇ ಮೇರೆಗೆ 

ಇರ್ವರೂ ಚಂಡಿಕಾಲಯಕ್ಕೆ ಹೋಗಿ-ಓ ದೇವಿಯೇ ! ಇವರು ತಟ್ಟೆಯ 

ತೆಗೆದುಕೊಂಡು ಹೋಗಿರುವುದು ನಿಜವಾದರೆ ನಿಮ್ಮಾಜ್ಞೆಯುಂಟಾಗಲಿ. 

ಇಲ್ಲದಿದ್ದರೆ ಯಥಾಪ್ರಕಾರಕಿರಲೆಂದು ಹಡಸಿಗ ವರರುಚಿಯ ಗುಡಿಯೊ 

ಳಕ್ಕೆ ಕೂಡಿ, ಬಾಗಿಲಿಗೆ ಬೀಗವಂ ಹಾಕಿ, ಹಡಪಿಗ ಈಚೆ ಕಾದಿರಲಾಗಿ ; 

ಚಂಡಿಕಾದೇವಿಯು ಸಮರಾತ್ರಿಯಲ್ಲಿ ಚಂದ್ರಾಯುಧವ ತೆಗೆದುಕೊಂಡು ವರ 

ರುಚಿಯ ತಲೆಯೊಡೆಯುವುದಕ್ಕೆ ಬರಲಾಗಿ; ಆಗ ಆ ವರರುಚಿ ಅನೇಕ 

ವಿಧದಿಂದ ದೇವಿಯಂ ಸ್ತುತಿಮಾಡಿ ಇಂತೆಂದನು :- ನೀವು ಸಕಲವಂ ತಿಳಿ 

ದಂಥ ಜಗನ್ಮಾತೆಯಾದುದರಿಂದ ನನ್ನಲ್ಲಿ ಕಳವಿಲ್ಲ, ಚೆನ್ನಾಗಿ ಪರಾಂಬ 

ರಿಸಿ ಆಜ್ಞೆ ಮಾಡೆಂದು ನುಡಿಯಲಾಗಿ ; ದೇವಿ ದಿವ್ಯದೃಷ್ಟಿಯಿಂದರಿದು 

ನೋಡಿ,-ನೀನು ಕಳ್ಳತನಕ್ಕಾಗಿ ಹೋದವನಲ್ಲ, ಪರೀಕ್ಷೆಯ ನಿಮಿತ್ತ ಆ 

ತಟ್ಟೆ ತೆಗೆದಿರುವುದು ತಿಳಿಯಿತು. ಆದರೂ ಆ ಒಡವೆ ನಿನ್ನಲ್ಲಿ ಇದೆಯಷ್ಟೆ. 

ಆದುದರಿಂದ ಕಳ್ಳತನವುಂಟಾಯಿತು. ನಿನ್ನ ಕೊಲ್ಲುವುದೇ ಸರಿ ಎನ್ನ 

ಲಾಗಿ ; “ ಪ ತ್ಯಕ್ಷವಾದರೂ ಪ್ರಮಾಣಿಸಿ ನೋಡಬೇಕು” ಎಂಬ ನೀತಿ 

ಲೋಕದಲ್ಲಿ ನಿದರ್ಶನದಲ್ಲಿರುವ ಕಾರಣ, ನಿದಾನಿಸಿ ನಿದರ್ಶನ ಮಾಡಬೇ 

ಕೆಂದು ಪ್ರಸನ್ನ ಮಾಡುವಷ್ಟರಲ್ಲಿ, ಉದಯವಾದುದರಿಂದ ಆ ದೇವಿಯು 

ಮಾಯವಾದಳು. ಆ ಬಳಿಕ ವರರುಚಿ ಹಡಪಿಗನ ಬಾಗಿ ತೆಗೆ ಎಂದು 

ದಕ್ಕೆ ಅವನು ಆಶ್ಚಯ್ಯಪಟ್ಟು ಬಾಗಿಲ ತೆಗೆದು ಬಿಡಲಾಗಿ ; ಅಲ್ಲಿಂದ ಇಬ್ಬ 

ರೂ ರಾಯನ ಬಳಿಗೆ ಬರಲಾಗಿ ; ರಾಯ-ನಮ್ಮ ಗುರುವಿನ ಮೇಲೆ ಇಲ್ಲದ 

ಕಳತನ ಹೇಗೆ ಹೇಳದೆ ? ಎಂದು ಕೋಪಿಸಿ, ಹಡಪಿಗನ ಕಳುಹಿಸಿದ 

ಬಳಿಕ,ವರರುಚಿ ತಟ್ಟೆಯ ತಂದು ರಾಯನ ಮುಂದಿರಿಸಿ,-ಚೋರವಿದ್ಯ ಬರು 

ವುದೇ ? ಎಂದು ಕೇಳಿದುದರಿಂದ, ಈ ವಿದ್ಯವಂ ಕಲಿತು ನಿಮಗೆ ಪರೀಕ್ಷೆ 

ಕೊಡುವುದಕ್ಕಾಗಿ ಇದ ತೆಗೆದೆ ಎಂದುದಕ್ಕೆ, ರಾಯನು ಮೆಚ್ಚಿ ವರರುಚಿಗೆ 

ಸವಾಲಕ್ಷದ್ರವ್ಯವ ಕೊಟ್ಟು, ಆ ಹಡಪಿಗನ ಕರೆಯಿಸಿ ಅವನಿಗೆ ಬಹುಮಾ 

ನವ ಮಾಡಿ ಮನ್ನಿಸಿದನು ಕಣಾ! ಎಂದು ಹೇಳಿದ ಚಿತ್ರಶರ್‍ಮನ ಮಾತಿಗೆ 

ಕುರಂಗಸೇನೆಯೆಂಬ ಪುತ್ತಳ ನಗುತ್ತ ಹಾಸ್ಯಂಗೆಯ್ದು ಹೇಳಿದ ಉಪಕಥೆ:--



-------------------ಬತ್ತೀಸಪುತ್ಥಳಿ ಕಥೆ.------------------------------೬೩


ಬ ಕೇಳೈಯ ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯನು ಸುಖ 

ವಾಗಿ ರಾಜ್ಯವಂ ಪಾಲಿಸುವ ವೇಳೆಯಲ್ಲಿ ಬಂದು ದಿನ ಶಿಕಾರಿಗಾಗಿ ಅರ 

ಣ್ಯಕ್ಕೆ ಹೋಗಿ ನಾನಾಮೃಗವ ಸಂಹರಿಸಿ ಬರುವಲ್ಲಿ ಒಬ್ಬ ದ್ವಿಜನು 

ತನ್ನ ಕುಟುಂಬ ಸಹಿತ ಹೊಳೆಯ ದಾಟುವಾಗ, ಅವನ ಹೆಂಡತಿ ಮೇಲು 

ನೀರು ಬಂದು ನೀರಿನಲ್ಲಿ ಮುಳುಗಿ ತೇಲಿ ಹೋಗಲಾಗಿ, ಆತನು ಅನೇಕ 

ದುಪಡುವುದಂ ಕಂಡು, ರಾಯನು ತಾನು ನೀರಿನಲ್ಲಿ ಹೊಕ್ಕು ಆ ಸ್ತ್ರೀ 

ಯನ್ನು ಈಚೆಗೆ ಎಳೆತಂದು, ಆತನಿಗೆ ಅವಳನ್ನು ಕೋಟದ್ರವ್ಯವನ್ನು ಸಹ 

ಕೊಟ್ಟು, ಸುಖವಾಗಿ ಹೋಗಿ ಎನ್ನಲಾಗಿ ; ಆ ವಿಪ್ರನು-ಎಳ್ಳೆ ಮಹಾರಾ 

ಯನೆ ! ನೀನು ಮಾಡಿದ ಪ್ರಾಣೋಪಕಾರಕ್ಕೆ ನಿನಗೆ ಶೀಘ್ರದಿಂದ 

ಮೋಕ್ಷವಾಗುವುದೊಂದು ಮಂತ್ರವಂ ಉಪದೇಶ ಮಾಡಿಕೊಡುತ್ತೇನೆ 

ಎನ್ನಲಾಗಿ ; ರಾಯ-ಹಾಗಾಗಲಿ ಎಂದುದಕ್ಕೆ ; ಆ ರಾಯನಿಗೆ ಮಂತ್ರೋ 

ಪದೇಶವಂ ಮಾಡಿ, ರಾಯನ ಅಪ್ಪಣೆ ತೆಗೆದುಕೊಂಡು ಹೋದ, ಬಳಿಕ, 

ಅಲ್ಲಿಂದ ರಾಯ ಬರುವ ದಾರಿಯಲ್ಲಿ ಒಂದು ಪರ್ವತದರುಗಿನಲ್ಲಿ ಒಬ್ಬ 

ಋಷಿ ಮಹಾತಪಸ್ಸು ಮಾಡಿದರೂ ಮೋಕ್ಷವಾಗದಿರುವುದಂ ಕಂಡು, 

ಆ ಋಷಿಗೆ ಮೋಕ್ಷವಾಗುವ ಮಂತ್ರವ ಹೇಳಲಾಗಿ ; ರಾಯನಿಗಾ ರುಷಿ 

ಪುರುಷಲಿಂಗವ ಕೊಟ್ಟು ಕಳುಹಿಸಲಾಗಿ ; ರಾಯ ಈ ಪಟ್ಟಣದ ರಾಯ 

ಬೀದಿಯಲ್ಲಿ ಬರುವಲ್ಲಿ ಒಬ್ಬ ದರಿದ್ರನಂ ಕಂಡು ಆ ಪುರುಷಲಿಂಗರಂ ಕೊ 

ಟ್ಟು ತನ್ನ ಅರಮನೆಗೆ ಬಂದು ಸುಖವಾಗಿ ಇದ್ದನು ಕಣಾ ! ಇಂತಪ್ಪ ವಿತ 

ರಣ ಭುಜಬಲ ಮತ್ತೆಲ್ಲಿಯಾದರೂ ಉಂಟೆ? 


ಇಂತು ಕರ್ಣಾಟಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಕುರಂಗಸೇನೆ ಎಂಬ ಪುತ್ತಳಿ ಹೇಳಿದ ಹದಿಮೂನೆಯ ಕಥೆ.

........

೧೪ ನೆಯ ಕಥೆ.



ಹದಿನಾಲ್ಕನೆಯ ದಿವಸದಲ್ಲಿ ಭೋಜರಾಯನು ಎಂದಿನಂತೆ ಸ್ನಾನ ದೇ 

ವತಾರ್ಚನ ಭೋಜನವಂ ತೀರಿಸಿ, ಸಿಂಹಾಸನದ ಬಳಿಗೆ ಬಂದು, ತನ್ನ



೬೪------------------------ಕರ್ಣಾಟಕ ಕಾವ್ಯಕಲಾನಿಧಿ.---------------------------


ಬಲದ ಕಾಲಂ ನೀಡುವ ಸಮಯದಲ್ಲಿ, ಲಾವಣ್ಯವತಿಯೆಂಬ ಪುತ್ತಳಿಯು 

ಹೋಹೋ ! ನಿಲ್ಲು ನಿಲ್ಲು ! ಎಂದು ಧಿಕ್ಕರಿಸಲಾಗಿ, ಭೋಜರಾಯ ಖಿನ್ನ 

ನಾಗಿ ಬದಲು ಸಿಂಹಾಸನವು ತರಿಸಿ ಕುಳಿತುಕೊಂಡು, ಚಿತ್ರಶರ್‍ಮದಿಂದ 

ಪೇಳಿಸಿದ ಕಥೆ--


ಎಲೆ ಪುತ್ತಳಿಯೇ ! ಕೇಳು, ಧಾರಾಪುರದಲ್ಲಿ ನಮ್ಮ ಭೋಜರಾ 

ಜನು ಸುಖರಾಜ್ಯಂಗೆಯ್ಯುವಲ್ಲಿ ಒಂದುದಿನ ರಾಯನೋಲಗಕ್ಕೆ ಒಬ್ಬ ಬ್ರಾ 

ಹ್ಮಣ ಮುದುಕಿ ಬಂದು, ರಾಯನ ಕೂಡೆ-ನಾನು ಒಂದು ವಿದ್ಯವ ಬಲ್ಲೆನು 

ಎಂದು ಹೇಳಲು;-ಅದು ಎಂಥ ವಿದ್ಯೆ ? ಎಂದು ಕೇಳಲಾಗಿ; ಅದಕ್ಕೆ 

ಅಳುವುದೊಂದೆ ವಿದ್ಯೆ ಬಲ್ಲೆನು ಎಂದ ಮಾತಿಗೆ, ರಾಯ ಮೆಚ್ಚಿ, ಅನ್ನವಸ್ತ್ರ 

ವಕೊಟ್ಟು-ಊಟಮಾಡಿಕೊಂಡು ಇಲ್ಲೇ ಇರು ಎಂದು ಕಟ್ಟಳ ಮಾಡಿ ಇರಿ 

ಸಲಾಗಿ; ಕೆಲವುದಿನ ಹೋದಬಳಿಕ ರಾಯನು ಒಂದುದಿನ ಮುಸುಕನಿಟ್ಟು 

ಮಲಗಿಕೊಂಡು, ಭೋಜರಾಜ ಸತ್ತನೆಂದು ಅಳು ಎನ್ನಲಾಗಿ; ಅಮಾ 

ತಿಗೆ ಮುದುಕಿ- ಭೋಜರಾಜನು ಸತ್ತನು, ಭೂಮಿಗೆ ಆಧಾರವಿಲ್ಲದೆ 

ಹೋಯಿತು. ಸರಸ್ವತಿ ಸಂಬಂಧದ ವಿದ್ಯೆಯೆಲ್ಲಾ ವ್ಯರ್ಥವಾಯಿತು, ವಿದ್ವಾಂ 

ಸರೆಲ್ಲರೂ ಕೆಟ್ಟು ಹೋದರು ಎಂದು ಅಳಲು; ರಾಯ ಮೆಚ್ಚಿ, ಎದ್ದು, ಮು 

ದುಕಿಗೆ ಸವಾಲಕ್ಷ ಹೊನ್ನ ಕೊಟ್ಟನು ಕಣಾ ' ಎಂದ ಚಿತ್ರಶರ್ಮನ 

ಮಾತಿಗೆ ಲಾವಣ್ಯವತಿ ನಗುತ್ತ ಹಾಸ್ಯಂಗೆಯ್ದು ಹೇಳಿದ ಉಪಕಥೆ :--


ಕೇಳೈಯಾ ಚಿತ್ರಶರ್ಮನೇ! ನಮ್ಮ ವಿಕ್ರಮಾದಿತ್ಯರಾಯನು 

ರಾಜ್ಯ ಪಾಲಿಸುವ ವೇಳೆಯಲ್ಲಿ ಒಂದು ದಿನ ಚಂದ್ರಗುಪ್ತರಾಯನ ಕುಮಾ 

ರ ಚಿತ್ತಕಾಂತರಾಯ ತನ್ನ ಬಲಸಹಿತ ಬಂದು ರಾಯನ ಕಾಣಲಾಗಿ ; ರಾ 

ಯನು ಆ ರಾಯನಿಗೆ ಮಯ್ಯಾದೆಯಂ ಮಾಡಿ ಸಿಂಹಪೀಠದಲ್ಲಿ ಕುಳ್ಳಿರಿಸಿ 

ಕೊಂಡು ಏನು ಕಾರಣ ಬಲಸಹಿತ ಬಂದುದು ? ಎಂದು ಕೇಳಲಾಗಿ ; ಆ 

ರಾಯನು ಇಂತೆಂದನು:-ವಂಶಾಂಜನಿಯೆಂಬ ಪಟ್ಟಣದಲ್ಲಿ ಒಬ್ಬ ತಪಸ್ವಿ 

ಕಾಮಕೇಳಿಯಲ್ಲಿರುವುದಂ ಕೇಳಿ, ತಪಸ್ವಿ ಕಾಮಕೇಳಿಯಲ್ಲಿರಬಾರದೆಂದು 

ಕೋಪವ ತಾಳ್ದು, ಬಲಸಹಿತ ಹೋಗಿ, ಪಟ್ಟಣವಂ ಮುತ್ತಿಗೆಯಂ 

ಮಾಡಿ, ಆ ತಪಸ್ಸಿಗೆ ಬುದ್ಧಿಗಲಿಸಿ, ಬಂದೆ ಎನ್ನಲಾಗಿ; ರಾಯ-ಬರುವ 

ದಾರಿಯಲ್ಲಿ ಏನು ಅತಿಶಯವೆಂದು ಕೇಳಲಾಗಿ ;- ಒಂದು ನಂದನವನದಲ್ಲಿ 



----------------------ಬತ್ತೀಸಪುತ್ತಳಿ ಕಥೆ.------------------------೬೫


ನೀಲಲೋಹಿತವೆಂಬ ಗವಿಯಲಿ ಮರೀಚೆಯೆಂಬ ಋಸಿ ಆರು ಮಂದಿ 

ಮಕ್ಕಳು ಸಹ ಇರುವನು. ಅವರ ತಿನ್ನಬೇಕೆಂದು ಒಂದು ಚಿತ್ರಕಾಯ 

ನೆಂಬ ಹುಲಿಯು ಕಾದಿರುವುದು ಎಂದ ಮಾತ ಕೇಳಿ, ಅಚಿತ್ತ ಕಾಂತರಾಯನಿಗೆ 

ಅನೇಕ ಬಹುಮಾನವಂ ಮಾಡಿ ಕಳುಹಿಸಿ, ಆಬಳಿಕ ರಾಯ ಖೇಚರಮಾ 

ರ್ಗದಲ್ಲಿ ಆನಂದನವನದ ಬಳಿಗೆ ಹೋಗಲಾಗಿ ; ಆ ಸಮಾಚಾರವನ್ನು ಆ 

ಋಷಿಯು ಕೇಳಿ, ತನ್ನ ಜೇಷ್ಠ ಪುತ್ರನ ರಾಯನ ಬಳಿಗೆ ಕಳುಹಿಸಿ ತಮ್ಮ 

ಉಪಾಧಿಯಾವತ್ತೂ ವಿವರಿಸಲಾಗಿ ; ರಾಯ ಕೇಳಿ, ಆ ಗವಿಯೆಡೆಗೆ ಹೋಗಿ, 

ಅಲ್ಲಿ ಕಾದಿರುವ ಚಿತ್ರಕಾಯನೆಂಬ ಹುಲಿಯಂ ಕೊಂದು, ಆ ಋಷಿಮಕ್ಕಳ 

ಭೀತಿ ಬಿಡಿಸಿ, ಕಾಪಾಡಿದುದರಿಂದ ಆರುಷಿ ಎಲೈ ಮಹಾರಾಯನೇ ! 

ನಿನ್ನಿಂದ ನಮ್ಮೆಲ್ಲರ ಜೀವ ಉಳಿಯಿತೆಂದು ಕೊಂಡಾಡಿ, ರಾಯನಿಗೆ ದಕ್ಷಿ 

ಣಾವರ್ತಶಂಖವ, ಏಕಮುಖದ ರುದ್ರಾಕ್ಷಿಯಂ, ದಧಿವಾಮನಮೂರ್ತಿ, 

ಲಕ್ಷ್ಮೀನಾರಾಯಣಮೂರ್ತಿ-ಎಂಬ ಸಾಲಗ್ರಾಮಂಗಳ ಸಹ ಕೊಡಲಾಗಿ ; 

ರಾಯ ತೆಗೆದುಕೊಂಡು, ಅಲ್ಲಿಂದ ಬರುವಲ್ಲಿ, ಒಬ್ಬ ಬುಧನು ಕಳ್ಳರಿಗೆ 

ಸಿಕ್ಕಿ ದೇವತಾರ್ಚನೆ ದೇವರೊಡವೆಯೆಲ್ಲವನ್ನು ಕಳಕೊಂಡು ಹೆಂಡತಿ 

ಮಕ್ಕಳು ಸಹ ಬರುತ್ತಿರಲು ; ರಾಯಂ ಕಂಡು-ಎಲೈ ಬ್ರಾಹ್ಮಣೋತ್ತ 

ಮನೇ-ನೀನಾರು ? ಎಲ್ಲಿಂದ ಬಂದೆ ? ಎಲ್ಲಿಗೆ ಹೋಗುವೆ ? ಎನ್ನಲಾಗಿ ; 

ಆತನು ತನ್ನ ವೃತ್ತಾಂತವೆಲ್ಲವಂ ಹೇಳಿದುದರಿಂದ ರಾಯನಿಗೆ ದಯೆಬಂದು 

ಆ ವಿಪ್ರನಿಗೆ ಆ ಬಲಮುರಿಶಂಖ ಸಾಲಗ್ರಾಮಗಳ ಲಕ್ಷದ್ರವ್ಯ ಸಹ ಕೊಟ್ಟು 

ಕಳುಹಿಸಿ *ತಾನಿಲ್ಲಿಗೆ ಬಂದು ಸುಖವಾಗಿದ್ದನು. 


ಇಂತು ಕರ್ಣಾಟಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಲಾವಣ್ಯವತಿಯೆಂಬ ಪುತಿಳಿ ಹೇಳಿದ ಹದಿನಾಲ್ಕನೆಯ ಕಥೆ.

......

೧೫ ನೆಯ ಕಥೆ.


ಹದಿನೈದನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ 

ಭೋಜನ ತಾಂಬೂಲವಂ ತೀರಿಸಿ, ಸಿಂಹಾಸನದ ಬಳಿಗೆ ಬಂದು, ಬಲಗಾ 

...........................

ಪಾ-*ಕಳುಹಿಸಲಾಬ್ರಾಹ್ಮಣಂ ರಾಯನಂ ಹರಸಿ ಕೊಂಡಾಡಿ ಆತನೊಳ್‌ 

ಬೀಳ್ಕೊಂಡು ಹೋದನು ಕಣಾ !




೬೬-------------------ಕರ್ಣಾಟಕ ಕಾವ್ಯ ಕಲಾನಿಧಿ.-------------------------------


ಲಂ ನೀಡುವ ಸಮಯದಲ್ಲಿ, ಆ ಸೋಪಾನದ ಮೋಹಿನಿಯೆಂಬ ಪುತ್ತಳಿ 

ಧಿಕ್ಕರಿಸಲಾಗಿ; ಭೋಜರಾಯ ಬೇಹ ಸಿಂಹಾಸನದಲ್ಲಿ ಕುಳಿತು ಚಿತ್ರ 

ಶರ್ಮನಿಂದ ಪೇಳಿಸಿದ ಕಥೆ :-


ಎಲೆ ಪುತ್ತಳಿಯೇ ! ಕೇಳು-ಧಾರಾಪುರದಲ್ಲಿ ನಮ್ಮ ರಾಯ ಸುಖ 

ರಾಜ್ಯವಂಗೆಯ್ಯುವಲ್ಲಿ ಒಂದು ದಿನ ಆ ಪುರದಲ್ಲೊಬ್ಬ ಸಮಾಧಿಕನೆಂಬ 

ಬ್ರಾಹ್ಮಣ ಬಂದು ರಾಯನ ಸಂಗಡ ಇಂತೆಂದನು :-ಕೇಳ್ಳ ಮಹಾರಾ 

ಯನೇ ! ನನ್ನ ಮನೆಯಲ್ಲಿ ನನಗೂ ನನ್ನ ತಾಯಿಗೂ ಆಗದು ; ನನ್ನ 

ಹೆಂಡತಿಗೂ ನನಗೂ ಆಗದು ; ಅತ್ತೆ ಸೊಸೆಯರಿಗೂ ಆಗದು ; ಹೀಗೆ 

ಒಬ್ಬರಿಗೊಬ್ಬರು ಬಡಿದಾಡುತ್ತ ಇದ್ದೇವೆ. ಈ ನನ್ನ ಕರ್ಮವ ಬಿಡಿಸ 

ಬೇಕು ಎನ್ನಲಾಗಿ ; ರಾಯ ಕೇಳಿ,-ಈ ದೋಷ ನನ್ನದೆನ್ನಲಾಗಿ ; ಆ 

ಮಾತಿಗೆ ಮಂತ್ರಿಗಳು ಅವನ ಅನುಭವಕ್ಕೆ ನಿಮಗೆ ಕಾರಣವೇನು ? 

ಎಂದುದಕ್ಕೆ, ರಾಯ-ಕೇಳಿ, ಆ ವಿಪ್ರನಿಗೆ ವೃತ್ತಿ ಕ್ಷೇತ್ರ ಉಚಿತಂಗಳ 

ನಾವು ಕೊಟ್ಟಿದ್ದರೆ ಅವನ ಮನೆಯಲ್ಲಿ ಜಗಳ ಬಾರದು. ಇದರಿಂದ 

ಕಲಹವುಂಟಾಯಿತು. ಅದು ಕಾರಣ ಈ ದೋಷ ನಮ್ಮದೇ ಸರಿ-- ಎಂದು 

ರಾಯನಾಡಿದ ಮಾತಿಗೆ ಸಕಲರೂ ಸಂತೋಷಪಡಲಾಗಿ ; ಆ ಬಳಿಕ ಆ ದ್ವಿಜ 

ನಿಗೆ ಉಂಬಳಿ ಸ್ವಾಸ್ಥ್ಯವಂ ಸವಾಲಕ್ಷದ್ರವ್ಯ ಸಹ ಕೊಟ್ಟು ಕಳುಹಿಸಿದನು 

ಕಣಾ ! ಎಂದ ಮಾತಿಗೆ ಮೋಹಿನಿಯೆಂಬ ಪುತ್ತಳಿ ನಗುತ್ತ ಹಾಸ್ಯಂ 

ಗೆಯ್ದು ಹೇಳಿದ ಉಪಕಥೆ :--


ಕೇಳೈಯಾ ಚಿತ್ರಶರ್ಮನೇ ನಮ್ಮ ವಿಕ್ರಮಾದಿತ್ಯರಾಯ ರಾಜ್ಯವ 

ಪಾಲಿಸುವ ವೇಳೆಯಲ್ಲಿ ಬಂದು ದಿನ ಒಬ್ಬ ಬ್ರಾಹ್ಮಣೋತ್ತಮ ರಾಯನ 

ಎದುರಿಗೆ ಬಂದು ನಿಂತು-ಎಲೈಮಹಾರಾಯನೇ ! ನಾನು ದಾರಿದ್ರ್ಯದೋ 

ಷದಿಂದ ದೇಶದೇಶದಲ್ಲಿರುವ ದೇವರ ಪೂಜಿಸಿದಾಗ್ಯೂ ದಾರಿದ್ರ, ಬಿಡದೆ ಇರ 

ಲಾಗಿ ನೀನು ನೆರೆ ದಾತನೆಂದು ನಾನು ಕೇಳಿ ಬಂದೆ. ನನ್ನ ದಾರಿದ್ರ್ಯ 

.............

ಪಾ-1, ನಾನಾ ದೇಶಂಗಳಂ ತಿರುಗಿ ಆಯಾ ದೇಶಂಗಳಲ್ಲಿದ್ದ ದೇವತೆಗಳಂ 

ಪೂಜೆಯಂ ಮಾಡಿ, ನಾನಾ ದೇಶಂಗಳಲ್ಲಿರುವ ಬೆಟ್ಟಗಳನ್ನೇ ಬೀಳುವೆನೆಂದರೆ 

ನನ್ನ ದಾರಿದ್ರ್ಯ ಪೋಗದು. 




-------------------ಬತ್ತೀಸ ಪುತ್ತಳಿ ಕಥೆ.-----------------------೬೭


ನಿನ್ನಿಂದ ತೀರಬೇಕೆನ್ನಲಾಗಿ ; ಅವನ ಆ ಮಾತಿಗೆ ರಾಯ ಮೆಚ್ಚಿ ಕೋಟ್ಕಿ 

ದ್ರವ್ಯವ ಕೊಟ್ಟು, ಮನ್ನಿಸಿ, ಆ ಬಳಕ - 1ನೀನು ಚರಿಸಿದ ದೇಶದಲ್ಲಿ 

ಏನು ಅತಿಶಯವುಂಟು ?1 ಎನ್ನಲಾಗಿ ; ಅವನಿಂತೆಂದನು :-ಭಾರತವರ್ಷ 

ವಂ ದಾಂಟಿ ಹರಿವರ್ಷಕ್ಕೆ ಬರುವ ದಾರಿಯಲ್ಲಿ ಒಂದು ಬೆಟ್ಟದ ಬಳಿಯಲಿ; 

ಶೃಂಗಾರವನದ ಮಧ್ಯದಲ್ಲಿ ಭಾಸ್ಕರ ಕ್ಷೇತ್ರದಲ್ಲಿ ದೇವೇಂದ್ರನಿಂದ ಪ್ರತಿಷ್ಠೆ 

ಮಾಡಲ್ಪಟ್ಟ 2ಪುರಂದರೇಶ್ವರನೆಂಬ ಶಿವಲಿಂಗವಿರುವುದು. ಅದರ ಸನ್ನಿಧಿಯಲ್ಲಿ 

ಒಬ್ಬ ದಿವ್ಯ ಪುರುಷ ನಿರಂತರವೂ ಹೆಣವ ಭಕ್ಷಿಸುವುದ ಕಂಡು ಇರುವೆ 

ನೆನ್ನಲಾಗಿ ;2 ರಾಯ ಚೋದ್ಯಂಬಟ್ಟು ಆದ ನೋಡಬೇಕೆಂದು, ಆ ವಿಪ್ರ 

ನನ್ನು ಕರೆದುಕೊಂಡು ಖೇಚರಮಾರ್ಗದಲ್ಲಿ ಹರಿವರ್ಷದ ಮಕರಾದ್ರಿಯೆಂಬ 

ಬೆಟ್ಟದ ಬಳಿಯಲ್ಲಿ ಹೋಗಿ ಇರಲಾಗಿ ; ಎಂದಿನಂತೆ ದಿವ್ಯ ಪುರುಷ ಬಂದು 

ಹೆಣ ತಿನ್ನುವುದ ರಾಯ ಕಂಡು ಎಲೈ ಮಹಾನುಭಾವನೇ ! ನೀನು ಹೇಣ 

ವಂ ಭಕ್ಷಿಸುವ ಕಾರಣವೇನೆಂದು ಕೇಳಿ, ಕೈಗಳಂ ಪಿಡಿಯಲಾಗಿ ; ಅವನು 

ತನ್ನ ಆಹಾರಕ್ಕೆ ಇವನಾರೋ ಅಡ್ಡ ಬಂದನೆಂದು ರಾಯನ ಹೊಡೆಯಲಾಗಿ ; 

ರಾಯ ಖತಿಗೊಂಡು ಅವನ ಹೊಡೆದುದರಿಂದ ಅವನು ಆಯುಧ ತೆಗೆದು 

ಕೊಳ್ಳಲಾಗಿ ; ರಾಯ ಶ್ರೀತಾಳಪತ್ರವಂ ಕೈಕೊಂಡು ಹಣಾಹಣಿ ಕೇಶಾ 

ಕೇಶಿ ಮೋಡಾವೋಡಿ ಯುದ್ಧವಂ ಮಾಡುತ್ತ, ಗಂಧರ್ವನ ಶಿಖೆಯಂ 

ಪಿಡಿದು ನೆಲಕ್ಕೆ ಮೆಟ್ಟಿ ನಿಲ್ಲಲಾಗಿ ; ಅವನು-ನೀನಾರು ? ದೇವನೋ ? 

..................

ಪಾ-1. ನೀನು ನಾನಾ ದೇಶಂಗಳಂ ತೊಳಲಿ ಬಂದೆಯಲ್ಲ, ಅಯಾ ದೇಶಂ

ಗಳಲ್ಲಿ ಏನೇನು ಚೋದ್ಯವ ಕಂಡುದುಂಟು ?


2. ಪುರಂದರೇಶ್ವರನ ಸಮೀಪದಲ್ಲಿ ಒಬ್ಬ ದಿವ್ಯ ಪುರುಷನು ನಿತ್ಯ ಪೆಣ 

ನಂ ತಿನ್ನು ತಿರ್ಪನು. ಅದಂ ಕಂಡೆನೆಂತೆನೆ-ಸುವರ್ಣಮಯವಾದ ರಥವನ್ನೇರಿ 

ಒಳ್ಳಿತ್ತಾದ ದಿವ್ಯಾಭರಣಂಗಳಂ ಧರಿಸಿಕೊಂಡು ಗಂಧರ್ವ ಪುರುಷನಂತೆ ಖೇಚರಮಾ 

ರ್ಗದಿಂದ ಬಂದು ಆ ಬೆಟ್ಟದ ಬಳಿಯಲ್ಲಿ ಒಂದು ಗವಿಯೊಳು ತನ್ನ ಒಡವೆ ವಸ್ತು 

ಗಳಂ ಇರಿಸಿ, ಆ ರಥಂ ಅಲ್ಲಿ ನಿಲ್ಲಿಸಿ, ಆ ಬಳಿಯಲ್ಲಿರುವ ಸ್ಮಶಾನವ ಹೊಕ್ಕು, 

ಅಲ್ಲಿರ್ದ ಬೂದಿಯಂ ಮೈಗೆ ಲೇಪನವಂ ಮಾಡಿಕೊಂಡು, ಆರಿವೆಗಳಂ ಕೈಕಾಲಿಗೆ 

ಕಟ್ಟಿಕೊಂಡು, ಆ ಶ್ರವದ ಬಸಿರ೦ ಸೀಳಿ, ಅಲ್ಲಿದ್ದ ಅನ್ನವಂ ಭಕ್ಷಿಸಿ, ಅನಂತರ ಮು 

ನ್ನಿನಂತೆ ಒಡವೆ ವಸ್ತುಗಳಂ ತೊಟ್ಟುಕೊಂಡು, ಆ ರಥದಮೇಲೆ ಕುಳಿತುಕೊಂಡು ಖೇ 

ಚರ ಮಾರ್ಗದಿಂದ ಸ್ವರ್ಗಕ್ಕೆ ಪೋಪುದೊಂದಾಶ್ಚರಮಂ ಕಂಡೆಯೆಂದು ಪೇಳಲು



೬೯----------------------ಕರ್ಣಾಟಕ ಕಾವ್ಯ ಕಲಾನಿಧಿ.-------------------------------


ಕಿನ್ನರನೋ ? ಯಕ್ಷನೋ ? ಯಾರು ? ಎನ್ನಲಾಗಿ ತಾನು ವಿಕ್ರ 

ಮಾದಿತ್ಯರಾಯನೆಂದುದರಿಂದ, ಆ ಪುರುಷ ಕರಗಳ ಮುಗಿದು ವಂದಿಸಲಾ 

ಗಿ ; ಆಗವನ ಮುಂದಲೆಯಂ ಬಿಟ್ಟು, ಕುಳ್ಳಿರಿಸಿ ನೀನು ಸ್ವರ್ಗಾದಿ ಭೋ 

ಗವನ್ನು ಅನುಭವಿಸುತ್ತಿದ್ದರೂ ಹೆಣ ತಿನ್ನುವುದೇನೆಂದು ಕೇಳಿದುದಕ್ಕೆ, ಆ 

ಪುರುಷ-ಎಲೈ ಮಹಾರಾಯನೇ! ನಾನು ಪೂರ್ವಜನ್ಮದಲ್ಲಿ ಸುರಭಿಪಟ್ಟಣ 

ದಲ್ಲಿ ವಿರಸೇನನೆಂಬರಸಾಗಿ ರಾಜ್ಯವಾಳುವಲ್ಲಿ ಗೋದಾನ, ಭೂದಾನ, 

ಕನ್ಯಾದಾನ, ಹಿರಣ್ಯದಾನ, ವಸ್ತ್ರದಾನ, ಮುಂತಾದ ದಾನವಂ ಮಾಡಿ, 

ಅನ್ನೋದಕದಾನವ ಮಾಡದ ಕಾರಣ-ಸ್ವರ್ಗಭೋಗವಾದರೂ, ಅನ್ನೋ 

ದಕವಿಲ್ಲವಾದುದರಿಂದ ನನ್ನ ಹೆಣದ ರಕ್ತ ಮಾಂಸವಂ ತಿನ್ನುವುದಾಗಿ 

ಅಮೃತಸೇವನೆ ತಪ್ಪಿತು. “ ಲೋಕದಲ್ಲಿ ಆಹುತಿಸಮಾನವಾದ ಹೋಮ, 

ಗಾಯತ್ರಿ ಸಮಾನವಾದ ಜಪ, ಅನ್ನೋದಕಸಮಾನವಾದ ದಾನವಿಲ್ಲ” 

ಎಂಬ ನೀತಿ ಅಳಿಯದೆ, ಅನ್ನೋದಕದಾನ ಮಾಡದ ನಿಮಿತ್ತ, ಈ ಪ್ರಾಪ್ತಿ 

ಯೆನಗಾಯಿತೆಂದು ಹೇಳಲಾಗಿ ; ಅದ ರಾಯ ಕೇಳಿ, ಈ ದಿವ್ಯಪುರುಷನಂ 

ರಕ್ಷಿಸಬೇಕೆಂದು ಚಿಂತಿಸಿ, ತಾಯ ಗರ್ಭದಿಂದ ತಾನು ಪುಟ್ಟಿದಾರಭ್ಯ ಅಂದಿನ 

ವರೆಗೆ ಮಾಡಿದ ಅನ್ನೋದಕ ದಾನದ ಫಲವನ್ನು ಆತನಿಗೆ ಧಾರೆಯೆರೆದು 

ಕೊಡಲಾಗಿ ; ದೇವದುಂದುಭಿ ಮೊಳಗಿದುವು ; ದೇವತೆಗಳು ಪೂಮಳೆಗರೆ 

ದರು, ಆ ಫಲದಿಂದ ಹೆಣ ಮರೆಯಾಗಲು, ಆ ಪುರುಷನಿಗೆ ಹೆಣ ತಿನ್ನುವುದು 

ತಪ್ಪಿ ಅಮೃತಸೇವನೆಯುಂಟಾಗಿ, ದೇವತೆಗಳು ವಿಮಾನವ ತೆಗೆದುಕೊಂಡು 

ಬಂದು ದಿವ್ಯಪುರುಷನ ದೇವಲೋಕಕ್ಕೆ ಕರೆದುಕೊಂಡು ಹೋಗುವಲ್ಲಿ-- 

ರಾಯನ ಉದಾರಸಾತ್ವಿಕಗುಣಕ್ಕೆ ಮೆಚ್ಚಿ ಆಪುರುಷ ಕೇಳಿದುದ ಕೊಡುವು 

ದೊಂದು ರತ್ನವ ರಾಯನಿಗೆ ಕೊಟ್ಟು, ಸುರಲೋಕಕ್ಕೆ ಹೋದನು. ಆ 

ಬಳಿಕ ಅಲ್ಲಿಂದ ರಾಯ ಬರುವ ದಾರಿಯಲ್ಲಿ ಒಬ್ಬ ಬ್ರಾಹ್ಮಣ ಅನ್ನವಿಲ್ಲದೆ 

ಕ್ಷುತ್ತಿನಿಂದಿರುವನಂ ಕಂಡು, ಅವನಿಗಾರತ್ನವಂ ಕೊಟ್ಟು, ಇಲ್ಲಿಗೆ ಬಂದು 

ಸುಖವಾಗಿದ್ದನು, ಕಣಾ !


ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಮೋಹಿನಿಯೆಂಬ ಪುತ್ತಳಿಯು ಹೇಳಿದ ಹದಿನೈದನೆಯ ಕಥೆ,



-----------------------------ಬಸಪುತ್ತಳಿ ಕಥೆ.------------------------------೬೯  

೧೬ ನೆಯ ಕಥೆ.


ಹದಿನಾಲನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ 

ಭೋಜನ ತಾಂಬೂಲವಂ ತೀರಿಸಿ, ಷೋಡಶ ಮಹಾದಾನಂಗಳಂ ಮಾಡಿ, 

ಗಂಧಮಾಲ್ಯಾಭರಣಾಲಂಕೃತನಾಗಿ, ರತ್ನಖಚಿತವಾದ ಪಾವುಗೆಗಳ ಮೆಟ್ಟಿ 

ಕೊಂಡು, ಎಂದಿನಂತೆ ಚಿತ್ರಶರ್‍ಮನ ಕೈಲಾಗಿನಲ್ಲಿ ಓಲಗಸಾಲೆಗೆ, ಬಂದು, 

ಸಿಂಹಾಸನದೆಡೆಗೆ ನಡೆತಂದು, ಬಲದ ಕಾಲಂ ನಿಡುವ ಸಮಯದಲ್ಲಿ ಆ 

ಸೋಮಾನದ ಕುರಂಗಲೋಚನೆಯೆಂಬ ಪುತಳಿಯು-ಹೋಹೋ ! ನಿಲು 

ನಿಲ್ಲು! ಈ ಸಿಂಹಾಸನವನ್ನೇ ಇದಿರು ಭೋಜರಾಯನೇ ! ನನ್ನೊಡೆಯನಾದ 

ವಿಕ್ರಮಾದಿತ್ಯರಾಯನಂತೆ ವೀರವಿತರಣಗಳುಳ್ಳಡೆ ಈ ಸಿಂಹಾಸನವನ್ನೇ 

ರು, ಇಲ್ಲವಾದರೆ ಕೆಲಸರು. ಮೀರಿ ಕುಳಿತೆಯಾದರೆ ನಿನ್ನ ತಲೆ ಸಹಸ್ರ 

ಹೋಳಾಗುವುದು ! ಎಂದು ಧಿಕ್ಕರಿಸಲಾಗಿ ; ಭೋಜರಾಯನು ಖಿನ್ನನಾಗಿ 

ಬೇರೊಂದು ಸಿಂಹಾಸನದಲ್ಲಿ ಕುಳಿತು, ಚಿತ್ರಶರ್‍ಮನಿಂದ ಪೇಳಿಸಿದ ಕಥೆ:-- 


ಎಲೆ ಪುತ್ತಳಿಯೆ ! ಕೇಳು, ಧಾರಾಪುರದಲ್ಲಿ ನಮ್ಮೀ ಭೋಜರಾಯ 

ನು ಸುಖರಾಜ್ಯಂಗೆಯ್ಯುವಲ್ಲಿ ಒಂದು ದಿನ ಒಬ್ಬ ಬೇಡನ ಸತಿ ಲುಬ್ಧಿಕೆಯೆಂ 

ಬವಳು ಒಂದು ಹುಲ್ಲೆಯಂ ತಂದು 1 ಕೈಗಾಣಿಕೆಯೊಪ್ಪಿಸಲಾಗಿ ; (ರಾಯ 

ಜಿಂಕೆಯಂ ನೋಡಿ-ಇದು ಇಷ್ಟು ಕಂಗೆಟ್ಟಿರುವ ಕಾರಣವೇನೆಂದು ಕೇಳ 

ಲಾಗಿ; ಅವಳಾಮಾತಿಗೆ ಎಲೈ ರಾಜನೇ ! ನಿನ್ನ ಕೀರ್ತಿ ಪ್ರತಾಪವನ್ನು ದೇ 

ವಕನ್ಯೆಯರು ಹಾಡುತ್ತಿರಲದನ್ನು ಕೇಳುವ ಮನಸೋತು ಈ ಹುಲ್ಲೆ ಹುಲ್ಲು 

ಮೆಯ್ಯುವುದನ್ನೂ ಮೆಲುಕು ಹಾಕುವುದನ್ನೂ ಸಹ ಮರೆತು ಹೀಗೆ ಬಡ 

ವಾಯಿತೆಂದು ಹೇಳಲಾಗಿ ;) 1 ರಾಯನು ಮೆಚ್ಚಿ ಅವಳಿಗೆ ಸವಾಲಕ್ಷ 

ದ್ರವ್ಯವನ್ನು ಕೊಟ್ಟು ಕಳುಹಿಸಿದನು ಕಣಾ ! ಎಂದ ಮಾತಿಗೆ ಕುರಂ 

ಗಲೋಚನೆಯೆಂಬ ಪುತ್ತಳಯು ನಗುತ್ತ ಹಾಸ್ಯಂಗೆಯು ಪೇಳದ ಉಪಕಥೆ:--


ಕೇಳೈಯ ಚಿತ್ರಶರ್‍ಮನೆ' ನಮ್ಮ ಒಡೆಯನಾದ ವಿಕ್ರಮಾದಿತ್ಯರು

.......

ಪಾ-1, ಕೈ ಕಾಣಿಕೆಯೊಪ್ಪಿಸಿ, ಎರಲೆಯ ಮರಿಯಮುಖದಿಂದ ನಿಮ್ಮಡಿ 

ಯಂ ಕಾಣಬೇಕೆಂದು ಒಂದೆನೆಂದು ಹೇಳಲು ; ಆದ೦ಕೇಳಿ.



೭೦----------------------ಕರ್ಣಾಟಕ ಕಾವ್ಯಕಲಾನಿಧಿ,.---------------------------


ಯ ಈ ಉಜ್ಜಿನಿ ರಾಜ್ಯ ಪಾಲಿಸುವಲ್ಲಿ ಒಂದು ದಿನ ಈ ಪುರದೊಳೊಬ್ಬ 

ಧನದತ್ತನೆಂಬ ವರ್ತಕ ಬಹು ದ್ರವ್ಯಸಂಪಾದಿಸಿ ತನ್ನಲ್ಲಿ ತಾನೇ ಯೋಚಿಸಿ-- 

1 “ ಭೋಜನಕ್ಕಿಲದ ಹಣ ತಾನಿರಲೇಕೆ? ಕೂಟಕ್ಕಿಲ್ಲದ ಸ್ತ್ರೀಯಿರಲೇಕೆ? 

ಧರ್ಮಕ್ಕಿಲ್ಲದ ಧನವಿರಲೇಕೆ? ಪರೋಪಕಾರ ಗೆಯ್ಯುವನೊಬ್ಬ ಧಾರ್‍ಮಾತ್ಮ 

ನಿಗಲ್ಲದೆ ಮಿಕ್ಕಾದವರಿಗೆ ಭಕ್ತಿ ದೊರೆವುದೆ ?” ಎಂಬ ನೀತಿಯಂ ತಿಳಿ 

ದು, ಭಾಗ್ಯವಿದ್ದ ನಿಮಿತ್ತ1 ಗೋದಾನ ಭೂದಾನ ಕನ್ಯಾದಾನ ಹಿರಣ್ಯದಾನ 

ಅನ್ನೋದಕದಾನ ವಸ್ತ್ರದಾನ ಮುಂತಾದ ದಾನಗಳಂ ಮಾಡಿ, ತೀರ್ಥಯಾ 

ತ್ರೆಗೆ ಹೋಗಿ, ಪುಣ್ಯನದಿಗಳಲ್ಲಿ ಸ್ನಾನವಂ ಮಾಡಿ, ಆ ಬಳಿಗಳಲ್ಲಿರುವ 

ದೇವರುಗಳ ಪೂಜೆಯ ಮಾಡಿ, ಮರಳಿ ಪಟ್ಟಣಕ್ಕೆ ಬಂದು ಸುಖದಲ್ಲಿ ಇ 

ರುತ್ತ, ಒಂದುದಿನ ವಿಕ್ರಮಾದಿತ್ಯರಾಯನ ಓಲಗಕ್ಕೆ ಬರಲು ; ರಾಯ ಆ 

ವರ್ತಕನಿಗೆ ಬಹುಮಾನಮಾಡಿಸಿ-ನೀನು ಯಾತ್ರೆಗಳ ಮಾಡಿರುವ ವಿಚಾ 

ರವ ಕೇಳಿ ಇದ್ದೇವೆಯಾದರೂ ಆಸ್ಥಳಗಳಲ್ಲಿ ನಡೆದ ಅತಿಶಯವನ್ನು 

ನಿನ್ನಿಂದಲೇ ಕೇಳಬೇಕು ಎಂದು ಹೇಳಲಾಗಿ ; ಆ ವರ್ತಕನು-ಹಿಮವತ್ಪರ್‍ವ 

ತದ ಬಳಿಯಲ್ಲಿರುವ ಮಣಿಮಂಡಲವೆಂಬ ಪಟ್ಟಣದ ಶ್ರುತಸೇನನೆಂಬ ರಾಯ 

ಬಹುಕಾಲ ರಾಜ್ಯವಾಳುತ್ತಿರುವಲ್ಲಿ ಸಂಸ್ಕಾರಫಲದಿಂದ ಒಬ್ಬ ಮಗಳ ಹಡೆ 

ದು ಗಂಡುಮಕ್ಕಳಿಲ್ಲದೆ ಇರಲು, -ಮುಂದೆ ಪಟ್ಟಣಕ್ಕೆ ಯಾರೂ ಇಲ್ಲ. ಒಬ್ಬ 

ಮಗಳಿದ್ದಾಳೆ. ಇದಕ್ಕೆ ಹೇಗೆ ಮಾಡಬೇಕೆಂದು ಮಂತ್ರಿಗಳೊಡನೆ ಆಲೋ 

ಚಿಸಿ, ಇರುವ ಮಗಳಿಗೆ ಪಟ್ಟ ಕಟ್ಟಬೇಕೆಂದು ಅವರು ಹೇಳೆ, ಆ ಮಗ 

ಳಿಗೆ ಪಟ್ಟಾಭಿಷೇಕವ ಮಾಡಿ, ರಾಜ್ಯಭಾರವ ಮಾಡಿಸುತ್ತಿರಲಾಗಿ ; 

ರಾಯ ತನ್ನ ಮಗಳು ಯೌವನಸ್ಥೆಯಾದಳೆಂದು ತಿಳಿದು, ಇನ್ನು ವಿವಾಹ 

ವಿಲ್ಲದೆ ಇರಬಾರದೆಂದು ಅವಳಿಗೆ ತಕ್ಕ ಪುರುಷನ ವಿಚಾರಿಸುತ್ತಿರುವಲ್ಲಿ-- 

ಆ ಪಟ್ಟಣದಲ್ಲೊಬ್ಬರಾಕ್ಷಸನಿರುವನು. ಅವನು ಹೊಸಜನರ ಕಂಡಕ್ಷಣವೇ 

ತಿನ್ನುವನು ಎಂದು ಕೇಳಿ) ಅದು ಕಾರಣ ಅಲ್ಲಿಗೆ ಯಾರೂ ಹೋಗದೆ ಇರು 

.....................

ಪಾ-2. ಭೋಜನೋಚಿತವಾದ ಸಕಲ ಪದಾರ್ಥಗಳಿಂದ ಭುಂಜಿಸುವ ಭಕ್ತಿ

ಯೆಂಬುದು ಬಹು ಪುಣ್ಯಾತ್ಮನಿಗಲ್ಲದೆ ದೊರಕದೆಂದು, ತನಗೆ ಭಾಗ್ಯವುಂಟಾದ 

ಕಾರಣ.



-------------------------ಬತ್ತೀಸಪುತ್ತಳಿ ಕಥೆ.---------------------------೭೧


ವುದರಿಂದ, ಅವಳಿಗೆ ಮದುವೆಯಿಲ್ಲದೆ ರಾಜ್ಯವಾಳುವಳು ಎನ್ನಲು; ರಾಯ 

ಕೇಳಿ, ಅವನ ಕರೆದುಕೊಂಡು ಆಕಾಶಮಾರ್ಗದಲ್ಲಿ ಆ ಪಟ್ಟಣಕ್ಕೆ ಹೋಗಿ, 

ಬೀದಿಗಳಲ್ಲಿ ಚರಿಸುತ್ತ ಆ ಚಂದ್ರಲೇಖೆಯ ಉಪ್ಪರಿಗೆಯ ಬಳಿಗೆ ಹೋಗು 

ವುದ ಆರಾಕ್ಷಸ ಕಂಡು, ಯಾವನೋ ಹೊಸಬ, ತಿನ್ನಬೇಕೆಂದು ತೊಡೆ ಭು 

ಜವಂ ತಟ್ಟಿ ಮೀಸೆಯಂ ತಿರುಹುತ್ತ ಬಂದು, ರಾಯನ ಹೊಡೆಯಲಾಗಿ ; 

ರಾಯ ಆ ಏಟ ತಪ್ಪಿಸಿಕೊಂಡು, ಆ ರಾಕ್ಷಸನ ಹೊಡೆದು ಮುಂದಲೆವಿಡಿದು 

ನೆಲಕ್ಕೆ ಬಡಿದು ಅಪ್ಪಳಿಸಲಾಗಿ ; ಆ ರಾಕ್ಷಸನು ಮೃತವಾದುದ ಎಲ್ಲರೂ 

ಕಂಡು ಆಶ್ಚಯ್ಯಪಟ್ಟು, ಅರಸಾದ ಚಂದ್ರಶೇಖೆಗೆ ಬಂದು ಹೇಳಲಾಗಿ ; ಅವ 

ಳು ರಾಯನ ವರ್ತಕನ ಸಹ ಕರೆಯಬಿಟ್ಟು ಸಿಂಹಪೀಠದಲ್ಲಿ ಕುಳ್ಳಿರಿಸಿ ಸತ್ಕ 

ರಿಸಿ, ರಾಯನ ನೋಡಿ-ನೀನು ನರನೋ ? ಹರಿಯೇ ? ಸುರಪತಿಯೋ? 

ಮನಸಿಜನೋ ? ಯಾರೆಂದು ಕೇಳಲಾಗಿ ;-ನಾನು ವಿಕ್ರಮಾದಿತ್ಯರಾಯ 

ಎಂದುದಂ ಕೇಳಿ, ರಾಯನ ಪಾದಕ್ಕೆರಗಿ, ಶಶಿರವಿಗಳಂತೆ ಕಾಂತಿಯುಳ್ಳ 

ನಿನ್ನ ಸಂದರ್ಶನ ಮಾತ್ರದಿಂದ ಇಂದಿಗೆ ನಾನು ಧನ್ಯಳಾದೆನು, ಎಂದುದಕ್ಕೆ 

ರಾಯನಿಂತೆಂದನು :- ಎಲೆ ಅರಸಿಯೇ ! ಈ ರಾಕ್ಷಸನು ಇಲ್ಲಿ ಇದ್ದ ಕಾರಣ 

ವೇನೆಂದು ಕೇಳಲಾಗಿ ; “ ಮುನ್ನೊಬ್ಬ ಯಾಚಕಬ್ರಾಹ್ಮಣ ಬಂದು ತನ್ನ 

ವಿದ್ಯಾಕುಶಲತೆಯ ತೋರಿ ತನ್ನ ದಾರಿದ್ರ ತೀರಬೇಕೆಂದು ಕೇಳಲಾಗಿ, 

ಅವನಿಗೆ ಕೋಟಿ ಧನನಂ ಕೊಟ್ಟು ಕಳಹಿಸುವಲ್ಲಿ ; ನಮ್ಮ ಪುರೋಹಿತ 

ಅವನ ತಿರಸ್ಕರಿಸಿ ನುಡಿಯಲಾಗಿ ; ಆತ ಕೋಪಿಸಿ-ನೀನು ರಾಕ್ಷಸನಾಗು. 

ಇಲ್ಲಿ ಇದ್ದುಕೊಂಡು ಹೊಸಜನ ಬಂದರೆ ತಿನ್ನು ಎಂದು ಶಾಪವಿತ್ತನು. ಅದ 

ಕಂಡು ಆಗ ಇವನಿಗೆ ಈ ಶಾಪ ವಿಮೋಚನೆ ಎಂದಿಗೆ ? ಎಂದು ನಾನು ಕೇಳಿ 

ಕೊಳ್ಳಲಾಗಿ ; ವಿಕ್ರಮಾದಿತ್ಯರಾಯನು ಇಲ್ಲಿಗೆ ಬಂದಾಗ ಆತನಿಂದ ತೀರುವು 

ದೆಂದು ಹೇಳ ಹೋದುದರಿಂದ, ಇಂದಿಗಾತನ ಶಾಪ ತೀರಿತು” ಎನ್ನಲಾಗಿ ; 

ಆ ರಾಕ್ಷಸರೂಪಳಿದು ಬ್ರಾಹ್ಮಣೋತ್ತಮರೂಪಾಗಿ ಆ ಪುರೋಹಿತ ಬಂದು 

ಎದುರಾಗಿ ನಿಂತುಕೊಂಡ ಬಳಿಕ, ರಾಯ ಧನದತ್ತನಿಗೆ ತನ್ನ ವೀರ ವಿತರಣ 

ಸಾಹಸ ಪರಾಕ್ರಮ ಮುಂತಾದುದೆಲ್ಲವ ಉಪದೇಶವಂ ಮಾಡಿ ಕೊಟ್ಟು, ಆ 

ಧನದತ್ತನಿಗೆ ಆ ಚಂದ್ರಲೇಖೆಯನ್ನು ವಿವಾಹ ಮಾಡಿಸಿ, ಆ ಪಟ್ಟಣದ 

ಪಟ್ಟಾಭಿಷೇಕವಂ ಮಾಡಿಸಿ ಸುಖವಾಗಿದ್ದುಕೊಂಡಿರಿ, ಎಂದು ಹೇಳಿ


೭೨-----------------ಕರ್ಣಾಟಕ ಕಾವ್ಯಕಲಾನಿಧಿ.----------------------------


ಅಲ್ಲಿಂದ ಆಕಾಶಮಾರ್ಗದಲ್ಲಿ ಇಲ್ಲಿಗೆ ಬಂದು, ಈ ರಾಜ್ಯವನ್ನು ಪರಿವಾ 

ಲಿಸಿ ಪೊರೆಯುತ್ತ, ಈಸಿಂಹಾಸನಾರೂಢನಾಗಿ ತಾನು ಸುಖದಲ್ಲಿದ್ದನುಕಣಾ! 


ಇಂತು ಕರ್ಣಾಟಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಕುರಂಗಲೋಚನೆಯೆಂಬ ಪುತ್ತಳಿ ಹೇಳಿದ ಹದಿನಾಲ್ಕನೆಯ ಕಥೆ.

೧೭ ನೆಯ ಕಥೆ.


ಹದಿನೇಳನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ 

ಭೋಜನ ತಾಂಬೂಲವಂ ತೀರಿಸಿ ಸಿಂಹಾಸನದ ಬಳಿಗೆ ಬಂದು ಬಲಗಾಲಂ 

ನೀಡುವ ಸಮಯದಲ್ಲಿ, ಆ ಸೋಪಾನದ ಕಾಮಕೇಳಿಯೆಂಬ ಪುತ್ತಳಿಯು 

ಧಿಕ್ಕರಿಸಲಾಗಿ, ಭೋಜರಾಯನು ಖಿನ್ನನಾಗಿ ಬೇರೆ ಸಿಂಹಾಸನದಲ್ಲಿ ಕುಳಿ 

ತು ಚಿತ್ರಶರ್‍ಮನಿಂದ ಪೇಳಿಸಿದ ಕಥೆ:-


1 ಎಲೆ ಪುತ್ತಳಿಯೇ' ಕೇಳು. ಧಾರಾಪುರದಲ್ಲಿ ನಮ್ಮ ಭೋಜ 

ರಾಯನು ಸುಖರಾಜ್ಯಂಗೆಯ್ಯುವಲ್ಲಿ ಬಂದುದಿನ ನಾಟಕಶಾಲೆಯಲ್ಲಿ ಕುಳಿತು 

ಚಿತ್ರಲೇಖೆಯೆಂಬ ವೇಶಿಯ ನಾಟ್ಯವ ನೋಡುವಲ್ಲಿ ರಾಯಂಗೆ ದಾಹ ಕಂ 

ಡುದ ಹಡಪಿಗ ತಿಳಿದು ಪನ್ನೀರಗಿಂಡಿಯಂ ಕುಡಲಾಗಿ ; ರಾಯ ದಾಹಶಮನ 

ಮಾಡಿಕೊಂಡು ಹಡುಗನ ಮೆಚ್ಚಿ ಆ ಸವಾಲಕ್ಷದ ಗಿಂಡಿಯನ್ನು ಅವನಿಗೆ 

ಕೊಟ್ಟು ಆ ವೇರಿಯ ನಾಟ್ಯದ ಕುಶಲತೆಗೆ ಅವಳಿಗೆ ಸವಾಲಕ್ಷದ್ರವ್ಯವನಿ 

ತ್ತು ಕಳುಹಿಸಿದನು, ಎಂದ ಮಾತಿಗೆ ಕಾಮಕೇಳಿಯೆಂಬ ಪುಳಿ ನಗುತ್ತ 

ಹಾಸ್ಯಂಗೆಯ್ದು ಹೇಳಿದ ಉಪಕಥೆ:- 

...................

ಪಾ-1, ಎಲೆ ಪುತ್ತಳಿಯೆ ! ಕೇಳು. ನನ್ನೊಡೆಯ ಭೋಜರಾಯನು 

ಧಾರಾಪುರದಲ್ಲಿ ಸುಖರಾಜ್ಯಂಗೆಯ್ಯುತ್ತಿಪ್ಪ ಸಮಯದಲ್ಲಿ, ಒಂದಾನೊಂದು ದಿನ 

ತನ್ನ ನಾಟಕಶಾಲೆಯೊಳು ನಾನಾವಿಧದ ನಾಟ್ಯವನಾಡುತ್ತ ಇರಲಾಗಿ, ರಾಯಂಗೆ 

ದಾಹವಾಗಲು, ಗಿಂಡಿಯ ಪನ್ನೀರನ್ನೆಲೆಯುವ ಸಮದಲ್ಲಿ ನಾಟ್ಯವಿದ್ಯೆಯ ಕುಶಲ 

ತೆಗೆ ಮೆಚ್ಚಿ ರಾಯಂ ತಲೆದೂಗುತ್ತಿರಲು, ಗಿಂಡಿಯ ಪನ್ನೀನ್ನೆರೆಯುತ್ತಿರಲು ;



------------------------ಬತ್ತೀಸ ಪುತ್ಥಳಿ ಕಥೆ-------------------------------೭೩ 


ಕೇಳಯ್ಯಾ ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯ ಪರಿಪಾಲಿಸುವಲ್ಲಿ ಒಂದುದಿನ ತನ್ನ ಸೇವಕಜನದಲ್ಲಿ ಒಬ್ಬನ 

ಕರೆದು ಅವನ ಪ್ರೌ ಢತ್ಸವ ನೋಡಬೇಕೆಂದು-- ಈಶಾರಿನಲ್ಲಿ ಹೇಸಿಗೆಯಾದ ಗೀಜ 

ವಾಯನ ನೋಡಿ ಕರೆದುಕೊಂಡು ಬಾ, ಎಂದು ಕಟ್ಟಳೆ ಮಾಡಿ ಕಳುಹಲಾಗಿ; 

ಆ ಸೇವಕ ಪಟ್ಟಣದ ಬೀದಿಗಳಲ್ಲಿ ಹುಡುಕುತ್ತ ಬರುವಲ್ಲಿ--ಒಬ್ಬನು 

ಬಾಯೊಳಗೆ ಅಡಕೆಯ ಹಾಕಿಕೊಂಡು, ಕೈಯಲ್ಲಿ ಎಲೆಯ ಹಿಡಿದು, ಹಾಗೆ 

ಯೇ ಹೊಟ್ಟೆಯುಬ್ಬರಿಸಿ ಬಹಿಶ್ಯಂಕೆಗೆ ಹೋಗಿ ಬಿಡುಗಡ್ಡೆ ಸಹಿತ ಕಂಡ 

ಕಂಡವರಿಗೆಲ್ಲ ಸುಣ್ಣಕ್ಕೆ ಹಲ್ಲು ಕಿರಿಯುತ್ತಿರುವುದ ಕಂಡು, ಇವನೇ ಗೀಜ 

ವಾಯನೆಂದು, ಅವನ ರಾಯನ ಬಳಿಗೆ ಕರೆತಂದು ನಿಲ್ಲಿಸಿ, ಅವನ ವಿಚಾರವೆ 

ಲ್ಲವ ರಾಯನಿಗೆ ಅಂಕೆಯಂ ಮಾಡಲಾಗಿ ; ರಾಯ ಸೇವಕನ ಚಾತು 

ರ್‍ಯಕ್ಕೆ ಮೆಜ್, ಆಸೇವಕನಿಗೆ ಬಹುಮಾನವಂ ಮಾಡಿ ಕಳುಹಿಸಿ, ಬಳಿಕ 

ಆಗೀಜಿವಾಯನ-ನೀನು ಅವ ದೇಶ ? ನಿನ್ನ ಕುಲವಾವುದು.? ಹೀಗೆ ಎಲ್ಲ

....................

ಮತ್ತೆ ತಲೆದೂಗುತ್ತಿರಲು, ನೀರನೆರೆದುದಕ್ಕೆ ಮಾಣ್ಬುದಕ್ಕೆ ರಾಯಂ ಮೆಚ್ಚೆ, ಹಡ 

ಪಿಗಂಗೆ ಮತ್ತೂ ಕೈನೀಡಲು ಆ ಸವಾಲಕ್ಷ ಹೊನ್ನಿನ ಗಿಂಡಿಯಂ ಕೊಡಲದ 

ಪಾತ್ರವಾಡುವ ವೇಶಿಗೆ ಕೊಟ್ಟು, ಮತ್ತೂ ಕೈ ನೀಡಲು, ಐವತ್ತು ಸಾವಿರ ಹೊನ್ನಿನ 

ಗಿಂಡಿಯ ನೀಯಲದಂ ನಾಟಕಗಿತ್ತು ಹಡಪಿಗಂ ಮತ್ತೂ ಕೈ ನೀಡಲು, ಹನ್ನೆರಡು 

ಸಾವಿರ ಹೊನ್ನ ಗಿಂಡಿಯನೀಯಲು, ಅದಂ ಹಡಪಿಗನ ಕೈಗೆ ಕೊಡಲು; ಸಮೀಪ 

ದಲ್ಲಿ ಕುಳಿತಿರುವ ಸಾಮಾಜಿಕರು ಕಂಡು - ಇಂತಪ್ಪ ತ್ಯಾಗವೇನು? ಎಂದು ಕೇಳಲಾ 

ರಾಯನಿಂತೆಂದನು:- ನಾನು ನೀರ ಕುಡಿಯುತ್ತಿರವಾಗ ತಲೆದೂಗಲದಂ ಹಡಪಿಗಂ 

ಕಂಡು, ಪಾತ್ರಕೆ ಮೆಚ್ಚಿ ತಲೆದೂಗಿದನೆಂದರಿತು ಮತ್ತೂ ನೀರನೆರೆಯುತ್ತಿರಲು, 

ಮತ್ತೆ ತಲೆದೂಗುತ್ತಿರಲು, ನಾಟಕಂಗೆ ಉಚಿತವಂ ಕೊಡುವುದಕ್ಕೆ ಈ ಗಿಂಡಿಯಂ 

ಕೊಡು ಎಂದು ತಲೆದೂಗಿದನೆಂದು ಗಿಂಡಿಯಂ ಕೊಡಲು, ಅದಂ ನಾಟಕಂಗಿತ್ತು 

ಮತ್ತೆ ತಲೆದೂಗಲು ಕಂಡು ಐವತ್ತು ಸಾವಿರ ಹೊನ್ನಿನ ಗಿಂಡಿಯಂ ಕೊಡಹೇ 

ಳಿದನೆಂದರತು ಅದಂ ಕೊಟ್ಟೆನು. ಆ ಗಿಂಡಿಯಂ ನಾಟಕಂಗೆ ಕೊಟ್ಟು ಮತ್ತೂ 

ತಲೆದೂಗಲು, ತನಗೆ ಉಚಿತವಂ ಕೊಡುವುದಕ್ಕೆ ತಲೆದೂಗಿದನೆಂದು ಹನ್ನೆರಡು 

ಸಾವಿರ ಹೊನ್ನಿನ ಗಿಂಡಿಯಂ ಕೊಡಲದಂ ಹಡಪಿಗನ ಕೈಯಲ್ಲಿ ಕೊಟ್ಟೆನೆಂದು ಪೇಳ್ದ 

ರಾಯನ ನುಡಿಯಂ ಕೇಳ್ದು ಸಭೆಯಲ್ಲವೂ ಮೆಚ್ಚಿ ಕೊಂಡಾಡಿದರು. ಇಂತಪ್ಪ 

ತ್ಯಾಗಿ ಕಣಾ ! ನಮ್ಮ ಭೋಜರಾಜನೆಂದು ನುಡಿದ ಚಿತ್ರ ಶರ್ಮನ ವಾಕ್ಯಮಂ 

ಕೇಳಿ ಪುತ್ತಳಿಯು ಹೇಳಿದ ಉಪಕಥೆ-ಎಂದು ಬೇರೊಂದು ಪ್ರತಿಯಲ್ಲಿದೆ.




೭೪----------------------ಕರ್ಣಾಟಕ ಕಾವ್ಯ ಕಲಾನಿಧಿ,---------------------------------


ರಿಗೂ ಹಲ್ಲ ಕಿರಿಯುವುದೇನು ? ಎಂದು ಕೇಳಲಾಗಿ ; ಅವನು-ನಾನು 

ಕಿರಾತ ದೇಶದ ಬ್ರಾಹ್ಮಣ. ಸದ್ಯಂತದಲ್ಲಿ ಹುಟ್ಟಿದ್ದರೂ ಕುಟುಂಬ ರಕ್ಷಣೆ 

ಗೋಸ್ಕರ ಸೇವಕಾವೃತ್ತಿಯಲ್ಲಿದ್ದು ಈ ರೀತಿಯಾದೆನು. ನಾನಿದ್ದುದು 

ಕುಗ್ರಾಮವಾಗಿ, ದೇಶಾಂತರವ ಬಂದೆನು. ದರಿದ್ರ ದೋಷದಿಂದ ಕುಲಾ 

ಚಾರವ ಬಿಟ್ಟು ಹೀಗೆ ತಿರುಗುತ್ತಿರುವೆನು. ದರಿದ್ರ ದೋಷದಿಂ ಪಾಪ ಮಾಡು 

ವನು, ಪಾಪದಿಂದ ನರಕಕ್ಕೆ ಪೋಪನು, ಮತ್ತು ದರಿದ್ರನಾಗಿ ಪುಟ್ಟುವನು 

ಮತ್ತೂ ಪಾಪನಹನು" ಎಂಬ ನೀತಿಯುಂಟಾಗಿ, ದರಿದ ನಾದುದರಿಂದ ಎಲ್ಲ 

ರಿಗೂ ಈ ರೀತಿ ಹಲ್ಲ ಕಿರಿಯುವೆನು, ಎನ್ನಲು ; ಆ ಮಾತಿಗೆ ರಾಯನು 

ಮರುಗಿ, ಹೆದಬೇಡವೆಂದು ಅವನಿಗೆ ಧೈರವಂ ಹೇಳಿ,-ನಿಮ್ಮ ಕಿರಾತ 

ದೇಶದಲ್ಲಿ ಏನಾದರೂ ಚೋದ್ಯದ ವರ್ತಮಾನವುಂಟೆ ? ಎನ್ನಲಾಗಿ; ಅಹಳ್ಳಿ 

ಗನಿಂತೆಂದನು:- ನಮ್ಮ ಕಿರಾತದೇಶದಲ್ಲಿ ತುಂಗಪಟ್ಟಣವೆಂಬ ಪಟ್ಟಣವುಂಟು. 

ಅದು ಸಮೀಪದಲ್ಲಿ ಒಂದು ಬೆಟ್ಟವುಂಟು. ಅಬೆಟ್ಟದಲ್ಲಿ ಒಂದು ಗುಹೆ 

ಯುಂಟು. ಅದರಲ್ಲಿ ಒಬ್ಬ ತಪಸ್ವಿ ವಾಸವಾಗಿಹನು, ಅವನು ವಾಮನ 

ರೂಪಿಯಾಗಿ, ಯತಿಯಾಗಿ, ಪಾವಾಗಿ, ಹುಲಿಯಾಗಿ, ಸಿಂಹವಾಗಿ, ಪಿಶಾಚಿ 

ಯಾಗಿ, ರಾಕ್ಷಸನಾಗಿ, ಅಬೆಟ್ಟವನ್ನೆಲ್ಲಾ ತಿರುಗುತ್ತಿಹನು, ಅತಂಗೆ ರಾ 

ಜ್ಯದ ಬೇಡರು ಪ್ರತಿದಿನವೂ ಅನ್ನವು ಕೊಡುತ್ತಿಹರು. ಒಂದುದಿನ ತಪ್ಪಿ 

ದರೆ ಊರ ಜನರ ತಿಂದು ತೇಗುವನು ಎಂದ ಮಾತಿಗೆ ರಾಯ ವಿಸ್ಮಿತನಾಗಿ 

ಆಹಳ್ಳಿಗನ ಸಹಿತ ಆಕಾಶಮಾರ್ಗದಲ್ಲಿ ಪೋಗಿ, ಆ ಮಾಯಾಪುರುಷನಂ 

ಕಂಡು, ಪಿಡಿಯಲು; ಆಪುರುಷ ತಪ್ಪಿಸಿಕೊಂಡು ಮಾಯವಾಗಿ, ಕಿರುಜಡೆ 

ಕಿಂಕಿಣಿರವ ಕಾಲಿನಲ್ಲಿ ಹಾವುಗೆ ಬೆನ್ನಿನಲ್ಲಿ ಹೊತ್ತ ಹುಲಿಚರ್ಮ ಕೈಯ 

ರುದ್ರಾಕ್ಷಿಜಪಮಾಲೆ ಇಂದಜಾಲ ಮಹೇಂದ್ರಜಾಲ ಹೇಳುತ್ತ 

ಒಬ ಕಪಟೆಯತಿಯಂತೆ ಬರಲು ; ರಾಯ ಪಿಡಿಯ ಹೋಗಲು ; ಪಾವಾ 

ಗಿಯೂ ಪಕ್ಷಿಯಾಗಿಯೂ ಪಿಶಾಚಿಯಾಗಿಯೂ ಕಾಣಿಸಲು ; ಪುನಃ ಪಿಡಿ 

ಯಪೋಗಲು, ಮಾಯವಾಗಿ ಪೋಗುವನು, ಗಿರಿಶಿಖರದಲ್ಲಿ ಕಾಣುವನು, 

ಮತ್ತೊಂದು ಬಳಿಗೆ ಪೋಗುವನು, ಅಟ್ಟಿದರೆ ಓಡುವನು. ಈ ರೀತಿ 

ರಾಯನ ಕಾಡುತ್ತಿರಲಾಗಿ-ರಾಯ ಕೊಪಟೋಪನಾಗಿ ತನ್ನ ಶಕ್ತಿಯಿಂದ 

ಅವನ ಮಾಯೆಯ ಗೆದ್ದು, ಅಟ್ಟಿ ಹೋಗಿ ಪಿಡಿತಂದು, ಹೆಡಗಟ್ಟಿ ಕಟ್ಟಿ; 



----------------------ಬತ್ತೀಸಪುತ್ತ ಕಥೆ-------------------------೭೫


ನೊಳು ಹಾಕುವಷ್ಟಯಲ್ಲಿ ಅವನು-ಎಲೈರಾಯ ! ನಿಲ್ಲು ನಿಲ್ಲು, ನಾನು 

ಪಾರ್ವ, ಎನ್ನ ರಕ್ಷಿಸು ರಕ್ಷಿಸು!ಎಂದು ದೀನನಾಗಿ ಬೇಡಿಕೊಳ್ಳಲು; ಅದಕ್ಕೆ 

ನೀನು ಯಾರು ? ಎಂದು ಕೇಳಲು ; ಕೇಳೈ ಮಹಾರಾಯನೇ? ನಾನು 

ಮುನ್ನಿನ ಜನ್ಮದಲ್ಲಿ ಕಾಶ್ಯಪಗೋತ್ರದ ಕಾಮಪಾಲನ ಮಗ, ಅತಿದ್ರವ್ಯವ 

ಸಂಪಾದಿಸಿ, ದಾನಧರ್‍ಮಪರೋಪಕಾರವ ಮಾಡದೆ, ಆ ಹಣವನ್ನು ಈ 

ಬೆಟ್ಟದ ಗುಹೆಯಲ್ಲಿ ನಿಕ್ಷೇಪವ ಮಾಡಿ, ಮೃತನಾದೆನು. ಅಹಣದಾಸೆ 

ಯಿಂದ ಈಗ ಪಿಶಾಚಿಯಾಗಿ ಕಾದಿರುವೆನು. ನಾನು ಮನುಷ್ಯನಲ್ಲ. ಇಂದಿನ 

ದಿನ ಸುದಿನ. ಜನ್ಮಾಂತರದಲ್ಲಿ ಮಾಡಿದ ಪುಣ್ಯದಿಂದ ನಿನ್ನಂಥ ಪುಣ್ಯಪುರು 

ಷನದರ್ಶನವಾಯಿತು. ನನಗೆ ಪಿಶಾಚತ್ವ ಬಿಡುವಹಾಗೆ ದಯೆಮಾಡಬೇಕು. 

ಎಂದು ರಾಯನ ಪಾದಕ್ಕರಗಲಾಗಿ ; ರಾಯನಿಗೆ ಕರುಣವುಂಟಾಗಿ, ತಾನು 

ಮಾಡಿದ ದಾನಧರ್ಮಗಳಲ್ಲಿ ಒಂದು ದಿನದ ಧರ್ಮದ ಫಲವಂ ಧಾರೆಯೆರೆದು 

ಕೊಡಲು ; ಆಗ ಅವನಿಗೆ ಪಿಶಾಚತ್ವ ಹೋಗಿ ದಿವ್ಯಪುರುಷನಾದನು. ಆಗ 

ದೇವತೆಗಳು ದೇವದುಂದುಭಿಗಳ ಧ್ವನಿಗೆಯು ಪೂಮಳೆ ಗರೆದು, ದಿವ್ಯ 

ವಿಮಾನವಂ ಕಳುಹಿಸಲಾಗಿ ; ಆಪುರುಷ ರಾಯ ಮಾಡಿದ ಉಪಕಾರಕ್ಕೆ 

ಪೂರ್ವದಲ್ಲಿ ತಾ ನಿಕ್ಷೇಪ ಮಾಡಿದ್ದ ಹತ್ತು ಕೊಟದ್ರವ್ಯವಂ ಕಿತ್ತು ಕೊಟ್ಟು, 

ಅವಿಮಾನದಲ್ಲಿ ಕುಳಿತು, ಸುರಲೋಕಕ್ಕೆ ಪೋಗಲಾಗಿ ; ರಾಯನು ಆ 

ಹಣವನ್ನು ಸಂಗಡ ಬಂದ ಗೀಜವಾಯನಿಗೆ ಕೊಟ್ಟು, ಕಳುಹಿಸಿ, ತಾನು 

ಇಲ್ಲಿಗೆ ಬಂದು ಸುಖವಾಗಿದ್ದನು ಕಣಾ !


ಇಂತು ಕರ್ಣಾಟಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಕಾಮಕೇಳಿಯೆಂಬ ಪುತ್ತಳಿಯು ಹೇಳಿದ ಹದಿನೇಳನೆಯ ಕಥೆ.

.......

೧೮ ನೆಯ ಕಧೆ.


ಹದಿನೆಂಟನೆಯ ದಿವಸ ಭೋಜರಾಜನು ಸ್ನಾನ ದೇವತಾರ್ಚನೆ ತಾಂ 

ಬೂಲವಂ ತೀರಿಸಿಕೊಂಡು, ಸರ್ವಾಭರಣಾಲಂಕೃತನಾಗಿ, ಎಂದಿನಂತೆ


೭೬---------------------ಕರ್ಣಾಟಕ ಕಾವ್ಯಕಲಾನಿಧಿ.------------------------------


ಚಿತ್ರಶರ್ಮನ ಕೈಲಾಗಿನಿಂದ ಮೂವತ್ತೆರಡು ಪುತ್ಥಲೀಯುಕ್ತವಾದ ಸಿಂಹಾ 

ಸನದ ಬಳಿಗೆ ಬಂದು ಬಲದ ಕಾಲಂ ನೀಡುವ ಸಮಯದಲ್ಲಿ ಆ ಹದಿನೆಂಟ 

ನೆಯ ಸೋಪಾನದ ರತ್ನ ಚಂಡಿಕೆಯೆಂಬ ಪುತ್ತಳಿಯು-ಹೋ ಹೋ ! 

ನಿಲ್ಲು ನಿಲ್ಲು ! ಎಂದು ಧಿಕ್ಕರಿಸಲಾಗಿ; ಭೋಜರಾಯನು ಖಿನ್ನನಾಗಿ ಬೇರೆ 

ಸಿಂಹಾಸನದಲ್ಲಿ ಕುಳಿತು, ಚಿತ್ರಶರ್ಮನಿಂದ ಪೇಳಿಸಿದ ಕಥೆ :


ಎಲೆ ಪುತ್ತಳಿಯೇ, ಕೇಳು. ಧಾರಾಪುರದಲ್ಲಿ ನಮ್ಮ ಭೋಜರಾ 

ಯನು ಸುಖರಾಜ್ಯಂಗೆಯ್ಯುತ್ತಿರುವಲ್ಲಿ ಕಾಶ್ಮೀರ ದೇಶದ ಸರ್ವತೋಭದ್ರ 

ಎಂಬ ಪಟ್ಟಣದರಸು ತಲೋತ್ತುಂಗನಿಗೆ ಸೀಮಂತಿನಿಯೆಂಬ ಮಗಳು, 

ಬುದ್ದಿ ಶಾಲಿಯೆಂಬ ಆತನ ಪ್ರಧಾನನಿಗೆ ಸುಮುಖನೆಂಬ ಮಗನು ಇದ್ದರು. 

ಆ ಅರಸಿನ ತನುಜೆ ಪ್ರಧಾನಿಯ ತನುಜ ಸಹ ವಿದ್ಯಾಪಾಲನೆಂಬ ಬ್ರಾಹ್ಮ 

ಣೋತ್ತಮನ ಬಳಿಯಲ್ಲಿ ವಿದ್ಯಾಭ್ಯಾಸವಂ ಮಾಡುತ್ತಿರುವಲ್ಲಿ-ಆ ಸೀ 

ಮಂತಿನಿ ಸುಮುಖನಮೇಲೆ ಮೋಹಿಸಿ ಇರುವಳು, ಆ ಸುಮುಖನು ಅವಳ 

ಮೇಲೆ ಕಾಮಿಸಿ ಇರುವನು. ಇಷ್ಟರಲ್ಲಿ ಅರಸಾದ ಅವಳ ತಂದೆ ಸಿಂಗ 

ಳದ್ವೀಪದ ಅರಸಿನ ಮಗನಿಗೆ ತನ್ನ ಮಗಳ ಕೊಡಬೇಕೆಂದು ನಿಶ್ಚಯಿಸಲು, 

ಅದ ಮಗಳಾದ ಸೀಮಂತಿನಿ ತಿಳಿದು, (ಅದು ತನಗೆ ಇಷ್ಟವಿಲ್ಲದಿರಲು, ಒಂದು 

ದಿನ) ರಾತ್ರಿಯಲ್ಲಿ ಬೇಕಾದಷ್ಟು ದ್ರವ್ಯವಂ ಒಡವೆ ಸಹ ತೆಗೆದುಕೊಂಡು, 

ಪ್ರಧಾನನ ಮಗ ಸುಮುಖನ ಬಳಿಗೆ ಬಂದು, ತನ್ನ ತಂದೆ ಮಾಡಿರುವ 

ಆಲೋಚನೆಯಂ ಹೇಳಿ, ತನ್ನ ವಿವರವಂ ತಿಳಿಸಿ, ಆ ಸುಮುಖನ ಕರೆದು 

ಕೊಂಡು 1ಉತ್ತರದಿಕ್ಕಿನಲ್ಲಿ1 ಪೋಗಿ, ಪಯಣಗತಿಯಿಂ ಒಂದು ಘೋರಾ 

ರಣ್ಯದಲ್ಲಿ ಬರುತಿಪ್ಪ ಸಮಯದಲ್ಲಿ 2ಬಾಯಾರಿ,2 ನೀರಂ ಕಾಣದೆ, 

ಒಂದು ಚೂತವೃಕ್ಷದ ನೆಳಲಲ್ಲಿ ಕುಳಿತುಕೊಳ್ಳಲಾಗಿ: 3ಆಕುಮಾರನು 

ಈಕೆಯ ಬಳಲಿಕೆಯಂ ನೋಡಿ ಕನಿಕರಪಟ್ಟು, ಆಬಳಲಿಕೆಯಂ ತೀರಿ 

ಸಬೇಕೆಂದು ಆಮಾವಿನ ಮರದಲ್ಲಿ ರುಚಿಕರವಾದ ಒಂದು ಹಣ್ಣನ್ನು 

ಕೊಯ್ದು ಕೊಡಲು; ಅವಳು ಆ ಹಣ್ಣ ಮೆದ್ದರೂ ದಾಹ ತೀರದೆ ಇರ 

ಲು ನೋಡಿ, ಅವಳ3 ದಾಹ ತೀರಿಸಬೇಕೆಂದು ನಾನು ನೀರು ತರುವ 

................

ಪಾ-1, ಉತ್ತರದೇಶಕ್ಕಂ 2. ದಾಹ ಕಂಡು

3. ಸುಸ್ತಿನಿಂದ ಬಳಲಿರುವವಳ,



--------------------ಬಸವಪುತ್ತ ಕಥೆ.-------------------------೭೭


ಪರ್‍ಯಂತ ನೀನು ಈಮರದ ನೆರಳಲ್ಲಿ ಕುಳಿತಿರು ಎಂದು ಹೇಳಿ, ತಾನು 

ನೀರ ಹುಡುಕುತ್ತ ಹೋಗಲು: ಇತ್ತಲಾ ನಮ್ಮ ರಾಯ ಬೇಂಟೆಯಾಡಿ 

ದುಷ್ಟಮೃಗಗಳ ಸಂಹರಿಸುತ್ತ, ಒಂದು ವ್ಯಾಘ್ರನ ಕಂಡು ಬೆನ್ನಟ್ಟಿ ಆಅರಣ್ಯ 

ದೊಳಗೆ ಹೋಗುತ್ತ, ದಾರಿತಪ್ಪಿ,ಬಳಲಿ, ಈಮಾವಿನಮರದ ನೆಳಲಿಗೆ ಬಂದು, 

ಅಲ್ಲಿ ಕುಳಿತಿರುವ ಅರಾಜಕುಮಾರಿಯ ಕಂಡು, ಇವಳಾರು ? ದೇವತೆ 

ಯೋ? ಕಿನ್ನರಿಯೋ? ರಾಕ್ಷಸಿಯೊ ಮನುಷ್ಯೆಯೋ? ಎಂದು (ಊಹಿಸಿ 

ಅವಳ ರೂಪಿಗೆ ಬೆರಗಾಗಿ, ಅವಳ ಬಳಿಗೆಯ್ದಿ) ನೀನಾರೆಂದು ಕೇಳಲಾಗಿ, 

ಅವಳು ತನ್ನ ವೃತ್ತಾಂತನ ಹೇಳಲು; ಅದ ಕೇಳಿ, ರಾಯ 1ತನ್ನ ಪೂಜಾ 

ಫಲದಿಂದ ಈ ಸ್ತ್ರೀ ರತ್ನ ದೊರಕಿತೆಂದು ಸಂತುಷ್ಟನಾಗಿ ತನ್ನ ಅಂದಳದಲ್ಲಿ 

ಅವಳ ಕುಳ್ಳಿರಿಸಿಕೊಂಡು, ತನ್ನ ಅರಮನೆಗೆ ಕರೆತಂದು, ರಾಣಿವಾಸದಲ್ಲಿ 

ಇರಿಸಿ, ಅವಳ ತಾನೇ ಮದುವೆಯಾಗಬೇಕೆಂದಿರಲಾಗಿ, ಅತ್ತಲಾಸುಮು 

ಖನು ನೀರ ತಂದು ಸತಿಯಂ ಕಾಣದೆ, ಹುಡುಕಿ ನೋಡಿ, ಅನೇಕವಾಗಿ ವ್ಯಸ 

ನಪಡುತ್ತ ಇಲ್ಲಿ ನರಪ್ರಾಣಿ ಸಂಚಾರವಿಲ್ಲ. ಇದು ಮಹಾರಣ್ಯ. ಎಲ್ಲಿಹೋ 

ದಳೋ? ನೀರ ತರುವುದು ತಡವಾಯಿತೆಂದು ಕೋಪಿಸಿ ಇದ್ದಾಳೋ ? ಎಂದು 

ಕೂಗುತ್ತ ಇಂತೆಂದನು -ಓ ಕಾಂತೇ ' ನಾನು ನಿನ್ನ ರೂಪರೇಖಾಲಾವಣ್ಯ 

ತಿಶಯಕ್ಕೆ ಮೆಚ್ಚಿ, ಬಾಲ್ಯದಾರಭ್ಯ ನಿನ್ನ ನೆರೆನಂಬಿ ತಾಯಿತಂದೆಯಂ ಬಿಟ್ಟು, 

ನಿನ್ನ ಕಡೆ ನಾಬಂದುದಕ್ಕೆ ನೀನು ಮುನಿದು ಈಮೇರೆ ಮರೆಯಾಗಿರುವರೆ? 

ಎನ್ನುತ್ತ ಎಷ್ಟು ಹಲುಬಿದರೂ ಸದ್ದಿಲ್ಲದೆ ಇರುವುದ ಕಂಡು ಮೃಗಂ 

ಗಳು ತಿಂದುವೊ ? ರಾಕ್ಷಸರು ಉಯ್ದರೊ? ಮಾನವರು ಹಿಡಿದುಕೊಂಡು 

...................


ಪಾ-1. ಪಾ: ನಾನು ಮಾಡಿದ ಪೂಜಾಫಲದಿಂದ ಈ ರತ್ನವು ದೊರಕಿತೆಂ 

ದು ಸಂತೋಷವ ಮಾಡಿಕೊಂಡು, ಆ ಕುಮಾರತಿಯ ತನ್ನ ಪಲ್ಲಕ್ಕಿಯಲ್ಲಿರಿಸಿಕೊ೦ 

ಡು, ಧಾರಾಪುರಕ್ಕೆ ಬರುವ ಮಾರ್ಗದಲ್ಲಿ ಏಕಾಂತದಲ್ಲಿ-ನೀನು ಆರು ? ಆರ 

ಮಗಳು? ಅವ ದೇಶ? ಆರ ಸ್ತ್ರೀ ? ಎಂದು ಕೇಳಲಾಗಿ; ಅವಳು ನಾನು ಕಾಶ್ಮೀರ 

ದೇಶದ ರಾಯನ ಮಗಳು. ನಾನು ನಮ್ಮ ಪ್ರಧಾನನ ಕುಮಾರ ಸುಮುಖನಸಂಗಡ 

ಬಂದೆನೆಂದು ಹೇಳಲಾಗಿ; ರಾಯ-ಇನ್ನೂ ಇವಳ ಆರೂ ಮದುವೆಯಾಗಿಲ್ಲ. ಈ 

ಕನ್ಯಾರತ್ನವನ್ನು ನಾನು ಮದುವೆಯಾಗುವೆನೆಂದು ನಿಶ್ಚಯಿಸಿ ಅರಮನೆಗೆ ಕರೆತಂ 

ದು, ತನ್ನ ರಾಣಿವಾಸದ ಬಳಿಯಲ್ಲಿರಿಸಿ, ಅವಳಂ ನೋಡಿ ಆರೈಕೆ ಮಾಡಿ ಎಂದು 

ನೇಮಿಸಲು.



೭೮------------------ಕರ್ಣಾಟಕ ಕಾವ್ಯ ಕಲಾನಿಧಿ.---------------------------------


ಹೋದರೊ ? ಏನೋ ಕಾಣೆನು, ಎಂದು ಬಲುಬಗೆ ಯೋಚಿಸಿ, ಆ ವನ 

ವನೆಲ್ಲವ ಅರಿಸಿ ಕಾಣದೆ, ವ್ಯಾಕುಲಪಡುತ್ತ, ಧಾರಾಪುರಕ್ಕೆ ಬಂದು, ವಿಚಾ 

ರಿಸಲಾಗಿ; ರಾಯ ಬೇಟೆಗೆ ಹೋಗಿ ಅರಣ್ಯದಲ್ಲಿ ಒಬ್ಬ ಕನ್ಯಕೆ ಸಿಕ್ಕಲು 

ಅವಳ ತಾನೇ ಮದುವೆಯಾಗಬೇಕೆಂದು ಸಿದ್ಧಮಾಡಿದ್ದಾನೆ ಎಂದು ಹೇಳು 

ತ್ತಿದ್ದ ಪುರಜನರ ಮಾತ ಕೇಳಿ, ಮತ್ತೆ ಬೀದಿಗಳಲ್ಲಿ ಸಂಚರಿಸುತ್ತ ಇರ 

ಲಾಗಿ; ರಾಯನ ದೂತ ಒಬ್ಬನು ರಾಯ ತಾನು ಕಟ್ಟಿಸಿರುವ ನೂತನವಾದ 

ಸೌಧಾಗ್ರದಲ್ಲಿ ಪ್ರತಿಮೆಗಳನ್ನು ತಿದ್ದುವುದಕ್ಕೆ ಗಾರೆಯಕೆಲಸದಲ್ಲಿ ಬುದ್ದಿ 

ವಂತನಾಗಿರುವನ ಕರೆತರಹೇಳ ಕಟ್ಟು ಮಾಡಿಸಿದುದರಿಂದ ಈಕೆಲಸದಲ್ಲಿ 

ಜಾಣರಾಗಿರುವವನ ಹುಡುಕುವೆನೆಂದು ಬರುತ್ತಿರು; ಅವನ ಕಂಡು, 

ಆಸುಮುಖ-ನಾನು ಗಾರೆಯಕೆಲಸವ ಬಹುವಿಚಿತ್ರವಾಗಿ ಮಾಡಬಲ್ಲೆನು 

ಎನ್ನಲಾಗಿ; ಊಳಿಗದವನು ಅವನ ಕರೆದುಕೊಂಡು ಬಂದು, ರಾಯನ ಎದು 

ರಾಗಿ ನಿಲ್ಲಿಸಿ, ಇವನಂತೆ ಈ ಪುರದಲ್ಲಿ ಗಾರೆಕೆಲಸ ಮಾಡುವರಿಲ್ಲವಂತೆ, 

ಇವನು ಬಲು ನಿಪುಣನು-ಎಂದುದಕ್ಕೆ ರಾಯ ಕೇಳಿ, ಅವನಿಗೆ ಆ ಕೆಲಸ 

ನೇಮನಮಾಡಲಾಗಿ; ಆಸುಮುಖನು ತರತರದಿಂದ ಪ್ರತಿಮೆಗಳ ಮಾ 

ಡುತ್ತಿರುವ ಆವುದ ರಿಕೆಯ ಮೇಲೆ ರಾಯ ಅರಾಜಕುಮಾರಿಯ 

ಸಂಗಡ ಪಗಡೆಯಾಡುತ್ತಿರುವುದ ಸುಮುಖನು ತಿಳಿದು-ಇವಳೇ ತನ್ನ ಸ್ತ್ರೀ 

ಯೆಂದರಿದು, ತಾ ಮಾಡುವ ಗಾರೆಯಕೆಲಸದಲ್ಲಿ ಒಂದು ಏಕಾಂತವಾದ 

ವನವ ಕಲ್ಪಿಸಿ, ಅದರಲ್ಲಿ ಒಬ್ಬಳು ಸ್ತ್ರೀಯು ಇರುವಂತೆ 1ಸಿದ್ಧಮಾಡಿ1 

ಸುಣ್ಣದ ಮಡಕೆಯ ಹೊಯ್ದು ಬಳಿಕ ಒಡೆದ ಮಯ್ಯಾದೆಯಲ್ಲಿ ಕೈಯಾ 

ಳನ್ನು ಕುರಿತು-ಒಬ್ಬ ರಾಜಕುಮಾರಿ ನನ್ನ ಕರೆತಂದು, ಒಂದು ಅರಣ್ಯ 

ದಲ್ಲಿ ದಾಹವಾಗಿ, ಮಾವಿನ ಮರದ ನೆಳಲಲ್ಲಿ ಕುಳಿತು, ನನ್ನ ನೀರ ತರ 

ಹೇಳಿ, ಕಳುಹಿಸಿ, ನಾನು ನೀರ ತೆಗೆದುಕೊಂಡು ಬರುವಷ್ಟಯಲ್ಲಿ ಅಲ್ಲಿರದೆ 

ವಂಚಿಸಿ ಆರ ಸಂಗಡ ಹೋದಳು. ಅವಳಂತೆ ನೀನೂ ವಂಚನೆ 

..............

ಪಾ-1, ತೀಡಿ. 2. ಮನದ ನಿಶ್ಚಯಮಾಡಿ ಪಗಡೆಯಾಡುವ ನೆವ 

ದಲ್ಲಿ ರಾಯನ ಕೂಡೆ ಇಂತೆಂದಳು:- ನಾನು ಪಗಡೆಯಾಡುವುದರಲ್ಲಿ ನಾಲ್ಕೈದುತೆರ 

ದಿಂದ ಅಡಬಲ್ಲೆ. ಡಾಳವ ಕೇಳುವ ನೆವದಿಂದ ಸೂಚಿಸುವ ಮಾತ ಕೇಳಿ ಆ ಗಾರೆ 

ಕೆಲಸದವ ನಿನಗೇನಾಗಬೇಕೆಂದು,



---------------------------ಬತ್ತೀಸುತ್ತ ಕಥೆ.------------------------------೭೯ 


ಮಾಡದೆ ಸುಣ್ಣದ ಮಡಕೆಯ ತಾ-ಎಂದು ಹೇಳಿದ ಮಾತಿಗೆ, ರಾಯನ 

ಕೂಡೆ ಪಗಡೆಯಾಡುತ್ತಿದ್ದ ರಾಜಕುಮಾರಿ ಕೇಳಿ, ಕತ್ತೆತ್ತಿ, ಅವನ 

ನೋಡಿ, 'ಇವನು ಸುಮುಖನೇ ಸರಿ ಎಂದು ತಿಳಿದು, ತನ್ನ ರೂಪ ಮರಸಿ 

ಕೊಂಡು, ಮತ್ತೊಂದು ರೂಪಿನಲ್ಲಿ ಬಂದಿದ್ದಾನೆ ಎಂದು ಮನ ನಿಶ್ಚಯ 

ಮಾಡಿ, ರಾಯನ ಕಡೆ ಪಗಡೆಯಾಡುವ ನೆವದಲ್ಲಿ ಇಂತೆಂದಳು:-- ನಾನು 

ಆಡುವ ನೆತ್ತದ ಸಾಲೆ ಅತಿಕ್ರಮಿಸಿಹೋದುದು. ನೆತ್ತ ಮನೆಯ ಬಿಟ್ಟು 

ಈ ಮನೆಯಲ್ಲಿಯೇ ನಿಂತು ಇದೆ. ನಾಲ್ಕೈದು ನೆತ್ತವ ಬರಹೇಳುವೆ. 

ದಾಳವ ತಾ-ಎಂದು ದಾಳವ ಕೇಳುವ ನೆವದಿಂದ (ತನ್ನ ವಿವರವ) ಸೂಚಿ 

ಸಲಾಮಾತ ಸುಮುಖ ಕೇಳಿ, ತಾನು ಹೋಗಿ ಬಹಳ ಹೊತ್ತಾಗಲಾಗಿ 

ಸತ್ತನೆಂದು ನಿಶ್ಚಯಿಸಿ ಪರರ ಮನೆಗೆ ಬಂದು ವಠವಲ್ಲದೆ ಇದ್ದೇನೆಂದು 

ನುಡಿದಳೆಂದು ನಿಶ್ಚಯಿಸಲು; ರಾಯ ಗಾರಕೆಲಸದವನು ಆಡಿದ ಮಾತಿಗೆ 

ತನ್ನ ಬಳಿಯಲ್ಲಿದ್ದ ಸ್ತ್ರೀಯು ಆಡಿದ ಮಾತ ಕೇಳಿ, ತಾನು ನಿಪುಣನಾದು 

ದಂದ ಈ ಗಾರೆಯಕೆಲಸದವನು ಚೋರಭಾವದಲ್ಲಿ ಬಂದು ಇದ್ದಾನೆ. 

ಈ ಸ್ತ್ರೀಯು ಇವನ ಹೆಂಡತಿಯೇ ಆಗಿರುವಳು. ಇವರಿರ್ವರ 

ಮಾತು ಅರಿಯಬಂದಿತು. ನಾನು ಪರನಾರಿಸಹೋದರನು ಎಂದು ತನ್ನ 

ಮನದಲ್ಲಿಯೇ ತಿಳಿದು-ಎಲೆ ಬಾಲೇ ! ನೀನು ಆ ಗಾರೆಯವನ ಕೂಡೆ 

ವಕ್ರೋಕ್ತಿಯಲ್ಲಿ ನುಡಿದೆ. ಅವನು ವಕ್ರೋಕ್ತಿಯಲ್ಲಿ ನುಡಿದನು. ನಿಮ್ಮಿ 

ಬ್ಬರ ಮಾತು ಒಂದಾಗಿದೆ. ನಿನಗೆ ಅವ ಏನಾಗಬೇಕು ? ಎಂದು ಕೇಳ 

ಲಾಗಿ; ಅವಳು ಲಜ್ಜೆಯಿಂದ ತಲೆವಾಗಿ,ತನ್ನ ಪತಿಯೆನ್ನಲಾಗಿ;ರಾಯ ಕೇಳಿ, 

ಸಂತೋಷಪಟ್ಟು ನೀನು ನಮಗೆ ಒಡಹುಟ್ಟಿನ ಸಮಾನವೆಂದು, ಅನೇಕ 

ವೈಭವದಿಂದ ಅವರಿರ್ವರಿಗೂ ವಿವಾಹವ ಮಾಡಿಸಿ, ಉರು ಉಂಬಳಿ 

ಸವಾಲಕ್ಷದ್ರವ್ಯ ಸಮೇತವಾಗಿ ಕೊಟ್ಟು, 1ಇರಿಸಿ1ಕೊಂಡನು ಇಂಥ 

ವೀರವಿತರಣ ಉದಾರಗುಣಗಳನುಳ್ಳವನು ನಮ್ಮ ರಾಯನು ಕಣಾ! ಎಂದ 

ಮಾತಿಗೆ ರತ್ನಚಂಡಿಕೆಯೆಂಬ ಪುತ್ತಳಿ ನಗುತ್ತ ಹಾಸ್ಯಂಗೆಯ್ದು ಪೇಳದ 

ಉಪಕಥೆ :--


ಕೇಳೈಯ, ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯ ಈ ರಾ

...............

ಪಾ--1. ಕಳುಹಿದನು.

 


೮೦-------------------ಕರ್ಣಾಟಕ ಕಾವ್ಯ ಕಲಾನಿಧಿ.-------------------------


ಜ್ಯವ ಪಾಲಿಸುವ ವೇಳೆಯಲ್ಲಿ ಒಂದುದಿನ ಸೌರಾಷ್ಟ್ರ ದೇಶದ ರುದ್ರಕೀರ್ತಿ 

ಯೆಂಬ ಅರಸಿನ ಬಳಿಯಿಂದ ಒಬ್ಬ ಚಂದ್ರಭಟ್ಟನೆಂಬವನು ಬಂದು ರಾಯ 

ನ ಕಾಣಿಸಿಕೊಂಡನು. ಅವನು ಕಾವ್ಯಲಕ್ಷಣಗಳ ಬಲ್ಲವನು ; ಕವಿತ್ವ 

ಪೇಳುವಲ್ಲಿ ಶಬ್ದ ಶುದ್ದಿಯಾದವನು , ವಿನೋದಪರಿಹಾಸಕನು ; ಸತ್ಯಸಂ 

ಧನು ; ಧರವಂಶದವನು ; ಅವರವರ ಮನಸ್ಸಿಗೆ ತಕ್ಕ ಹಾಗೆ ನಡೆದುಕೊಂ 

ಬನು. ಇಂಥ ಭಟ್ಟನು ಬರಲಾಗಿ ರಾಯ ಮನ್ನಣೆಯಿಂದ ಅವನ ಕುಳ್ಳಿ 

ರಿಸಿದ ಬಳಿಕ, ಅವನಿಂತೆಂದನು - ಎಲೈ ಮಹಾರಾಯನೇ ! ನಿನ್ನ ರಾಜ್ಯ 

ದಲ್ಲಿ ದರಿದ್ರರಿಲ್ಲ, ಪಿಸಣರು ಮೊದಲೇ ಇಲ್ಲ, ಸಕಲರೂ ಸೌಭಾಗ್ಯಸ್ಥರು. 

ನೀನು ತ್ಯಾಗದಲ್ಲಿ ಕರ್ಣ, ಭೋಗದಲ್ಲಿ ಇಂದ್ರ, ನಡತೆಯಲ್ಲಿ ಧರ್‍ಮರಾಯ. 

ಸತ್ಯದಲ್ಲಿ ಹರಿಶ್ಚಂದ್ರ, ನಿನ್ನ ಶರೀರವು ಪರೋಪಕಾರಕ್ಕೆ ಎತ್ತಿದ ಶರೀ 

ರವು. ನಿನಗೆ ಸರಿಯಾದ ಪ್ರಭುಗಳು ತಪ್ಪನ್ನ ದೇಶದಲ್ಲೂ ಇಲ್ಲ ಎಂದು 

ನುತಿಸಿ ನುಡಿಯಲಾಗಿ, ರಾಯ ಮೆಚ್ಚಿ ಕೋಟಿ ದ್ರವ್ಯ ಕೊಟ್ಟು, -ನಿಮ್ಮ 

ರಸಾದ ರುದ್ರಕೀರ್ತಿಗೆ ಸಾಂಗಸನ್ನಾಹಗಳನುಂಟು ? ನಡೆವಳಿಯಲ್ಲಿ 

ವಿಶೇಷವೇನು ? ಎಂದು ಕೇಳಲಾಗಿ, ಅಭಟ್ಟನಿಂತೆಂದನು --ಎಲೈಮಹಾರಾ 

ಯನೆ ' ಕೇಳು. ನಮ್ಮರಸು ದಾನಿ, ವಿವೇಕಜ್ಞಾನವನುಳ್ಳವನು, ಲೋ 

ಕಕ್ಕೆ ಹಿತವಾದಂಥವನು, ಧೈರಕ್ಕೆ ನಿಧಾನವಾದವನು. ಅಪಟ್ಟಣದ ಉದ್ಯ 

ನದಲ್ಲಿ ಒಂದು ಚಂಡಿಕಾದೇವಿಯ ಗುಡಿಯುಂಟು. ಅಚಂಡಿಕಾದೇವಿಯ 

ನ್ನು ನಿರಂತರದಲ್ಲೂ ಪೂಜೆಯಮಾಡುತ್ತಿರುವನು. ಹೀಗೆ ಪೂಜಿಸುತ್ತಿ 

ರುವಲ್ಲಿ ಬಂದುದಿನ ಒಬ್ಬ ಬ್ರಾಹ್ಮಣ ಅಲ್ಲಿಗೆ ಬರಲಾಗಿ, ನಮ್ಮರಸು ನೀನು 

ಎಲ್ಲಿಂದ ಬಂದೆ ? ಎಂದು ಕೇಳಿದುದರಿಂದ; ಅವನು-ನಾನು ಉಜ್ಜಿನೀ 

ಪಟ್ಟಣದಿಂದ ಬಂದೆ ಎನ್ನಲಾಗಿ ನಿಮ್ಮ ವಿಕ್ರಮಾದಿತ್ಯರಾಯನ ಚರಿತ್ರೆ ಏನು? 

ಎಂದು ಕೇಳಿದುದರಿಂದ, ಅವಿಪ್ರ ಇಂತಂದನು . "ನಮ್ಮ ರಾಯನು 

ಯಾರು ಬಂದು ಬೇಡಿದರೂ ಬೇಡಿದುದ ಕೊಟ್ಟು ಮನ್ನಿಸಿ, ಪೂರ್ತಿ 

ಯಾಗಿ ದ್ರವ್ಯ ಕೊಡುವನು. ಅಲ್ಲಿ ಯಾವತ್ತು ಜನರ ಭಾಗ್ಯವಂತರಾಗಿ 

ದರಿದ್ರವಿಲ್ಲದಿರುವರು. ರಾಯ ಲೋಕವಿಖ್ಯಾತನಾಗಿ ಇರುವನು, ಎಂದು 

ಹೇಳುವುದಂ ಕೇಳಿ, ಆ ಅರಸು ನಿನ್ನಂತ ತಾನು ದಾತನಾಗಬೇಕೆಂದು ಆ 

ಚಂಡಿಕಾದೇವಿಯ ಪೂತ ಸಂಚಾರದಿಂದ ಪೂಜಿಸಿ, ತನ್ನ ಶಿರವಂ ಸಮಪಿ 



----------------------ಬತ್ತೀಸ ಪುತ್ತಳಿ ಕಥೆ.------------------------೮೧ 


ಸಲಾಗಿ; ಅದಕ್ಕೆ ಅದೇವಿಯು ಮೆಚ್ಚಿ ಯಥಾಪ್ರಕಾರ ಶಿರವನಿತ್ತು ಪ್ರಸ 

ನ್ನಳಾಗಿ-ನಿನಗೆ ಬೇಕಾದ ವರವಂ ಬೇಡಿಕೆ ಕೊಡುತ್ತೇನೆ ಎನ್ನಲಾಗಿ ; 

ಅರಸು-ವಿಕ್ರಮಾದಿತ್ಯರಾಯನಂತೆ ದಾತನಾಗಬೇಕು. ನನಗೆ ಧನಧಾನ್ಯಂ 

ಗಳಾದಿಯಾಗಿ ನನ್ನ ಭಂಡಾರದಲ್ಲಿ ತುಂಬಿರಬೇಕು ಎಂದು ಕೇಳಲಾಗಿ; ಆ 

ಮಾತಿಗಾದೇವಿ-ಎಲೈ ಅರಸೇ' ನೀನು ಕೇಳಿದುದು ಬೇಕಾದರೆ ದಿನಚರಿ ನಿನ್ನ 

ಶಿರಸ್ಸ ಪೂಜೆಯ ಮಾಡಿ ಸಮರ್ಪಿಸಿದರೆ ನಿನ್ನ ಭಂಡಾರದಲ್ಲೆಲ್ಲ ತುಂಬಿ 

ರುವುದು. ಇಲ್ಲದಿದ್ದರೆ ಇಲ್ಲವು-- ಎಂದ ವಾಕ್ಯವಂ ಕೇಳಿ, ಅರಸು-ನಿನ್ನ 

ಅಪ್ಪಣೆಯಮೇರೆ ನಡೆಯುವೆನೆಂದು ಹೇಳಿದುದಕ್ಕೆ, ಅದೇವಿಯು ವರವನ್ನಿತ್ತು 

ಮಾಯವಾದಳು. ಬಕ ಅರಸು ದಿನಚು ತನ್ನ ಶಿರವ ಪೂಜೆಗೆಯ್ಯುವುದಕ್ಕೆ 

ಭಂಡಾರದಲ್ಲಿ ದ್ರವ್ಯ ಅದಿಯಾಗಿ ಸಕಲವನ್ನೂ ದಾನವ ಮಾಡಿ ಮಧ್ಯಾಹ್ನ 

ದರಿದ್ರನಾಗಿರುವನು " ಎಂದು ಅಭಟ್ಟ ಹೇಳಲಾಗಿ; ರಾಯ ಕೇಳಿ ವಿಸ್ಮಿತ 

ನಾಗಿ, ಅದ ನೋಡಬೇಕೆಂದು, ಅಭಟ್ಟನ ಕರೆದುಕೊಂಡು, ಆಕಾಶಮಾ 

ರ್ಗದಲ್ಲಿ ಆಚಂಡಿಕಾದೇವಿಯ ಗುಡಿಯ ಬಳಿಗೆ ಹೋಗಿ, ಕಾದಿರಲಾಗಿ; 

ಎಂದಿನಂತೆ ರುದ್ರಕೀರ್ತಿ ಬಂದು ಅನೇವಿಗೆ ತಿರಸ್ಕೃ ಪೂಜೆಯಂ ಮಾಡಿದು 

ದರಿಂದ ಅಕ್ಷಣವೇ ದೇವಿಯ ಕಟಾಕ್ಷದಿಂದ ಯಥಾಪ್ರಕಾರಕ್ಕೆ ಶಿರಸ್ಸು 

ಉಂಟಾಗಿ, ಅರಸು ಎದ್ದು ಅರಮನೆಗೆ ಹೋಗಲಾಗಿ; ಭಂಡಾರದಲ್ಲಿರುವುದ 

ನ್ನೆಲ್ಲಾ ದಾನವಂ ಮಾಡಿ, ಸತ್ಕಥಾಶ್ರವಣದಿಂದಿರುತ್ತಿರಲು ; ಇತ್ತಲಾಬಳಕ 

ನಮ್ಮ ರಾಯ ಅದೇವಿಯನ್ನು ರುದ್ರಕೀರ್ತಿಯೋಪಾದಿ ಪೂಜಿಸಿ ತನ್ನ 

ಶಿರವಂ ಛೇದಿಸಿ ಸಮರ್ಪಿಸಲಾಗಿ ; ಅದೇವಿಯು ನೋಡಿ ಮೆಚ್ಚಿ ರಾಯನಿಗೆ 

ಮುನ್ನಿನಂತೆ ತೆರವಂ ಕೊಟ್ಟು, ನಿನಗೆ ಬೇಕಾದ ವರವ ಬೇಡೆನ್ನಲಾಗಿ ; 

ರಾಯನಿಂತೆಂದನು - ರುದ್ರಕೀರ್ತಿ ನಿರಂತರ ಶಿರವ ಕೊಡುವ ಪೂಜೆಗೆ 

ಅವನ ಭಂಡಾರದಲ್ಲಿ ಎಲ್ಲ ತುಂಬಿರುವಂತೆ ನೀ ವರವನಿತ್ತೆಯಷ್ಟೆ. ನಾನು 

ಬೇಡುವುದೇನೆಂದರೆ-ರುದ್ರಕೀರ್ತಿ ನಿತ್ಯ ನಿನಗೆ ಶಿರಸ್ಸ ಪೂಜೆ ಮಾಡದಿ 

ದ್ದರೂ ಅವನ ಭಂಡಾರದಲ್ಲಿಯೆ. ಅಷ್ಟು ತುಂಬಿರುವಂತೆ ನನಗೆ ವರವ 

ಪಾಲಿಸೆನ್ನಲಾಗಿ, ಅದೇವಿಯು-ಹಾಗೇ ಅಗಲೆಂದು ವರವ ಕೊಟ್ಟು ಕಳು 

ಹಿಸುವಲ್ಲಿ, ರಾಯಂಗೆ ಕೇಳಿದುದ ಕೊಡುವ ಒಂದು ರತ್ನವ ಕೊಡಲಾಗಿ ; 

ರಾಯ ಅದರ ತೆಗೆದುಕೊಂಡು, ಭಟ್ಟನ ಕರೆದುಕೊಂಡು, ಇಲ್ಲಿಗೆ ಬಂದು, ಆ  



೮೨-------------------ಕರ್ಣಾಟಕ ಕಾವ್ಯ ಕಲಾನಿಧಿ.---------------------------


ಭಟ್ಟನಿಗೆ ಆರತ್ನವಂ ಕೊಟ್ಟು ಕಳುಹಿಸಿ, ತಾನು ಸುಖವಾಗಿರುವಲ್ಲಿ ; ಅತ್ತ 

ಲಾಮಲದಿನ ರುದ್ರಕೀರ್ತಿ ಎಂದಿನಂತೆ ಹೋಗಿ ಅದೇವಿಯಂ ಪೂಜಿಸಿ ಶಿರ 

ವನರಿವ ಸಮಯದಲ್ಲಿ ದೇವಿಪ್ರಸನ್ನಳಾಗಿ ಇಂತೆಂದಳು :-ಎಲೈ ರುದ್ರಕೀ 

ರ್ತಿಯೇ ! ನಿನ್ನೆಯ ದಿವಸ ವಿಕ್ರಮಾದಿತ್ಯರಾಯ ಬಂದು ನಿನ್ನಂತೆ ಎನ್ನ 

ಪೂಜೆಸಿ, ವರವ ಬೇಡಿದುದೇನೆಂದರೆ-ನಿತ್ಯ ನೀನು ನಿನ್ನ ತಿರಸ್ಸ ಪೂಜೆಯಂ 

ಮಾಡದಿದ್ದರೂ ನಿನ್ನ ಭಂಡಾರದಲ್ಲಿ ಎಲ್ಲ ತುಂಬಿರುವಂತೆ ವರವ ಪಡೆದು 

ಹೋದನು; ಇನ್ನು ಮೇಲೆ ಎನ್ನ ಪೂಜಿಸಬೇಡ, ನಿನ್ನ ಭಂಡಾರದಲ್ಲಿ ಅಷ್ಟು 

ತುಂಬಿದೆ, ಹೋಗೆಂದು ಹೇಳಿ ಮಾಯವಾದಳು. ಆದೇವಿಯ ಮಾತ ಕೇಳಿ 

ರುದ್ರಕೀರ್ತಿಯು ವಿಸ್ಮಿತನಾಗಿ, ದಾನ ಧರ್ಮ ಪರೋಪಕಾರದಲ್ಲಿ ವಿಕ್ರಮಾ 

ದಿತ್ಯರಾಯನಿಗೆ ಮಿಗಿಲೆನಿಸಿಕೊಳ್ಳಬೇಕೆಂದು ಮಾಡಿದ ಆಲೋಚನೆ ಕಾರ್‍ಯ 

ಕಟ್ಟಿತೆಂದು ತಿಳಿದು, 1 ( ಬಳಕ ತಾನೇ ತನ್ನಲ್ಲಿ ಯೋಚನೆ ಮಾಡಿ) 1 

ಮನದಲ್ಲಿ ವೈರವಿಲ್ಲದೆ, ತಾ ಮಾಡುವ ಧರ್ಮಕ್ಕೆ ವಿಕ್ರಮ ಸಹಾಯ 

ವಾದನೆಂದು ರುದ್ರಕೀರ್ತಿಯು ನಮ್ಮ ವಿಕ್ರಮಾದಿತ್ಯರಾಯನ ಸ್ತುತಿಸಿ 

ರಾಜ್ಯ ಭಾರವ ಮಾಡುತಿರ್ದನು, 2ಎಂದು ಹದಿನೆಂಟನೆಯ ಸೋಪಾನದ 

ಪುತ್ತಳಿಯು ನುಡಿಯಲಾ ಭೋಜರಾಯ ಖಿನ್ನನಾಗಿ ತನ್ನ ಅರಮನೆಗೆ 

ಹೋದನು.2 


ಇಂತು ಕರ್ಣಾಟಭಾಪಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ರತ್ನ ಚಂಡಿಕೆಯೆಂಬ ಪುತ್ತಳಿಯು ಹೇಳಿದ ಹದಿನೆಂಟನೆಯ ಕಥೆ.

......

೧೯ ನೆಯ ಕಥೆ.


ಹತ್ತೊಂಬತ್ತನೆಯ ದಿವಸ ಭೋಜರಾಜನು ಸ್ನಾನದೇವತಾರ್ಚನೆ 

ತಾಂಬೂಲವ ತೀರಿಸಿಕೊಂಡು, ಶುಚಿರ್ಭೂತನಾಗಿ, ನಾನಾದಾನಂಗಳ ಮಾಡಿ 

ಸರ್‍ವಾಭರಣಾಲಂಕೃತನಾಗಿ, ಎಂದಿನಂತೆ ಚಿತ್ರಶರ್‍ಮನ ಕೈಲಾಗಿನಿಂದ ಸಿಂಹಾ 

.........

ಪಾ-1, ನನ್ನ ಯೋಚನೆ ಕೇಳ. 2. ಈರೀತಿಯಲ್ಲಿ ಒಂದು ಪ್ರತಿ 

ಯಲ್ಲಿ ಕೆಲಕೆಲವು ಕಥೆಗಳ ಕೊನೆಯಲ್ಲಿ ಮಾತ್ರ ಇದೆ.



-----------------------ಬತ್ತೀಸಪುತ್ತಳಿ ಕಥೆ.--------------------------------೮೩ 


ಸನದ ಬಳಿಗೆ ಬಂದು ಬಲಗಾಲ ನೀಡುವ ಸಮಯದಲ್ಲಿ, ಆಹತ್ತೊಂಬತ್ತ 

ನೆಯ ಸೋಪಾನದ ವಿದ್ಯಾಧರಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ ; ಭೋಜ 

ರಾಯನು ಖಿನ್ನನಾಗಿ ಬೇಯತೆ ಸಿಂಹಾಸನದಲ್ಲಿ ಕುಳಿತು, ಚಿತ್ರಶರ್ಮನಿಂದ 

ಹೇಳಿಸಿದ ಕಥೆ .--


ಎಲೆ ಪುತ್ತಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ರಾಯನು ಸುಖ 

ರಾಜ್ಯಂಗೆಯುವಲ್ಲಿ ಒಂದು ದಿನ ಅಪುರದ ಸೋಮಶರ್ಮನೆಂಬ ಬ್ರಾಹ್ಮ 

ಣೋತ್ತಮನಿಗೆ ಒಬ್ಬ ಪುತ್ರ ಜನಿಸಿದುದರಿಂದ, ಲಗ್ನ ಗ್ರಹಗತಿಯ ನೋಡಿ, 

ಈಕುಮಾರ ಚೋರನಾಗುವನೆಂದರಿತು, ಅಸೋಮಶರ್ಮ ಚಿಂತಾ 

ಕ್ರಾಂತನಾಗಿ, ಸುತನಾದ ಯಜ್ಞಕರ್ಮನಿಗೆ ವೇದ ಶಾಸ್ತ್ರ ಪುರಾಣ ಕಾವ್ಯ 

ನಾಟಕಾಲಂಕಾರ ವಿಮಾಂಸ ತರ್ಕವೆಂಬ ಅನೇಕ ವಿದ್ಯಗಳ ಕಲಿಸಿ, 

ಚೋರ ವಿದ್ಯದಿಂದ ಮಹಾಪಾಪವೆಂದು ಮಗನಿಗೆ ತಿಳಿಯಹೇಳಿ, ಅವ ಪ್ರೌಢ 

ನಾದ ಬಳಿಕ, ತನ್ನ ಮನೆವಾರ್ತೆಯೆಲ್ಲ ಮಗನಿಗೊಪ್ಪಿಸಿ, ತಾನು ತಪೋ 

ವನಕ್ಕೆ ಪೋದನು. ಆಬಳಿಕ ಯಜ್ಞಕರ್ಮ ಕುಟುಂಬಸಂರಕ್ಷಣೆ ಮಾಡಿ 

ಕೊಂಡಿದ್ದು ಕೆಲವು ದಿವಸವಾದ ತರುವಾಯ ಗ್ರಾಸೋಪಾಯಕ್ಕೆ ಇಲ್ಲದೆ, 

ಕಷ್ಟವಾದ ಕಾರಣ, ಆತನ ಸತಿಯಾದ ಸುಶೀಲೆಯಿಂತೆಂದಳು :- ಎಲೈ ಪತಿ 

ಯೇ ! ಗ್ರಾಸೋಪಾಯಕ್ಕಿಲ್ಲದೆ ಇರುವ ಕಾರಣ, ನಂಟರು ಇಷ್ಟರು 

ಸರ್ವರೂ ಅವಮಯ್ಯಾದೆಯಾಗಿ ಕಾಣುತ್ತಲಿದ್ದಾರೆ. ಇನ್ನು ಮೇಲಾದರೂ 

ಭೋಜರಾಜನ ಬಳಿ ವಿದ್ಯಾಪ್ರಸಂಗವನ್ನು ಮಾಡಿದರೆ ನಮ್ಮ ಕಷ್ಟ ಬಿಡು 

ವಂತೆ ಮಾಡುವನು ಎಂದು ಹೇಳಲಾಗಿ ; ಅವನಿಂತೆಂದನು ಎಲೌ 

ಸ್ತ್ರೀಯೆ ಕೇಳು. ಕಷ್ಟ ಕಾಲಕ್ಕೆ ಒಡಹುಟ್ಟಿದವರು ಮುಂತಾಗಿ ಯಾ 

ರಿದ್ದರೂ ಇಲ್ಲ ; ಅದುಕಾರಣ ರಾಯನ ಸಭೆಯ ಸಾಮಾಜಿಕರನನುಸರಿಸಿ 

ರಾಯನ ಕಂಡರೆ ನಮ್ಮ ಕಷ್ಟ ತೀರಿಸುವನೋ ಅವಮನ್ನಣೆ ಮಾಡುವನೋ 

ಕಾಣಕೊಡದೆಂದು ಅನುಮಾನಚಿತ್ತನಾಗಿ, ರಾಜಪರಿಗ್ರಹವಾಗ ಬಾರದೆ 

ನ್ನುತ್ತ ಯೋಚಿಸಿ ತನಗಿಹಪರಸಾಧನೆಯ ಕೊಡುವಂಥ ಪರಶಿವನ ಬೇಡುವೆ 

ನೆಂದು, ತನ್ನ ಪತ್ನಿಯ ಸಂತೈಸಿ, ಪೇಳಿ, ಸಿದ್ದಾಶ್ರಮಕ್ಕೆ ಪೋಗಿ, ಶಿವನ

ಕುರಿತು ಸದಾ ಪೋಡಶೋಪಚಾರದಿಂ ಪೂಜಿಸಿ ವಂದಿಸುತ್ತಿರಲಾಗಿ; ಆಪ 

ರಶಿವ ಪ್ರತ್ಯಕ್ಷವಾಗಿ - ಎಲೈ ವಿಪ್ರನೇ ! ನಿನ್ನ ದೃಢಭಕ್ತಿಗೆ ಮೆಚ್ಚಿದೆ.



೮೪--------------------ಕರ್ಣಾಟಕ ಕಾವ್ಯ ಕಲಾನಿಧಿ.---------------------------


ಇಷ್ಟಾರ್ಥಮಂ ಬೇಡು ಕೊಡುವೆನೆನ್ನಲಾಗಿ; ಆ ಯಜ್ಞಶರ್ಮನು- 1 ಎಲೈ 

ದೇವನೇ ! ನನ್ನ ಶ್ರಮ ಬಿಡಿಸಿ ಸೌಭಾಗ್ಯ ಪಾಲಿಸಬೇಕೆಂದು ಬೇಡಲಾಗಿ1 ; 

ಅಪರಶಿವನು-ನಿನಗೆ ಪೂರ್ವಾರ್ಜಿತದ ಚೋರತನದಿಂದ ಭಾಗ್ಯ ಬರುವು 

ದೆಂದು ಹೇಳಿ, ಮಾಯವಾಗಲಾಗಿ ; ಅಲ್ಲಿಂದ ತನ್ನ ಮನೆಗೆ ಬಂದು, 

ಯೋಚಿಸಿ, ನಿಶ್ಚೈಸಿ, " ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾ 

ಶುಭಂ" ಎಂಬ ನೀತಿಮಂ ತಿಳಿದು, ಅಕೃತ್ಯವ ಮಾಡಿದರೂ ಕುಟುಂಬ 

ಸಂರಕ್ಷಣೆಯ ಮಾಡಬೇಕೆಂದು ಶ್ರುತಿಸಮ್ಮತವಿರುವ ಕಾರಣ, ಶಿವನ ವಾ 

ಕ್ಕಿನ ಪ್ರಕಾರ ಅದಿರ ಅರ್ಧರಾತ್ರಿಯಲ್ಲಿ ಚೋರತನಕ್ಕೆ ಹೊರಟು, 

ರಾಯನ ಅರಮನೆಗೆ ಕನ್ನವಿಕ್ಕಿ, ಒಳಗೆ ಹೋಗಿ, ನಿಂತು ನೋಡುತ್ತ, 

--ದ್ರವ್ಯಾಭರಣ ಕಳಬೇಕು ಕಳಬಾರದು ಎನುತ್ತ, ಪಾಪಕ್ಕೆಂದೆ, ಯೋಚಿ 

ಸುತ್ತ ನಿಂತಿರುವ ರಾಯನ ತೂಗುಮಂಚದ ಮೇಗಣ ಸರಪಣಿಯಿಂದ 

ಬಂದು ಹಾವು ಇಳಿದು ಬರುವದ ಕಂಡು, ದುಷ್ಟನಿಗ್ರಹ ಮಾಡಿದರೆ ದೋ 

ಷವಿಲ್ಲವೆಂದು ಆ ಹಾವ ಕೊಂದು, ಮಂಚದ ಕೆಳಗೆ ಎಳೆದು ಹಾಕುವಾಗ, 

ಅದರ ವಿಷ ಹಾರಿ ರಾಯನ ರಾಣಿಯ ಗಲ್ಲದ ಮೇಲೆ ಬಿದ್ದುದ ಕಂಡು, 

ರಾಯ ಚುಂಬನ ಮಾಡಿದರೆ ವಿಷ ತಗಲೀತೆಂದು ತನ್ನ ಉಗುರಿನಿಂದ ವಿಷವ 

ತೆಗೆಯುವಲ್ಲಿ ಅರಸಿತಿಗೆ ಎಚ್ಚಲವಾಗಿ, ನಿಂತಿರುವ ನನ್ನ ಕಂಡು, ಲಜ್ಜೆ 

ಯಿಂದ ರಾಯನ ಏಳಿಸಿ-ಇವನಾರೋ ಬಂದು ನಾವು ನಿದ್ರೆಯಿಂದ ಮಲಗಿ 

ರುವುದ ಕಂಡು ನನ್ನ ಗಲ್ಲದ ಮೇಲೆ ಉಗುರನಿಟ್ಟನು ? ಎಂದು ಪೇಳಲಾಗಿ, 

ರಾಯನಾರಾಣಿಯೆಂದ ಮಾತಿಗೆ ಚಂದ್ರಯುಧವ ತೆಗೆದುಕೊಂಡು, ಕೈಯಲ್ಲಿ 

ಪಿಡಿದು-ನೀನಾರು ? ಎಂದು ಕೇಳಲಾಗಿ, ನಾನು ಸೋಮಶರ್ಮನ ಕು 

ಮಾರ, ಯಜ್ಞಕರ್ಮ, ನಾನು ಕಷ್ಟದತೆಯಿಂದ ನಿನ್ನ ಅರಮನೆಗೆ ಕನ್ನ 

ವಿಕ್ಕಿ ಹೊಕ್ಕು ನಿಂತು ನೋಡುವ, ತಾವು ದಂಪತಿ ಸಹಿತ ಸೊಕ್ಕಿ ಮಲಗಿ 

ನಿದ್ದೆ ಮಾಡುತ್ತಾ ಇರುವಲ್ಲಿ, ತನಗೆ ಹಾವಿನಿಂದುಪಾಧಿ ಬರುವುದ ಕಂಡು, 

ಅದ ಕೊಂದ ಕಾರಣ ಅದು ವಿಷ ಅಮ್ಮನವರ ಗಲ್ಲದ ಮೇಲೆ ಹಾರಿ 

ಬಿದ್ದುದ ಕಂಡು, ಪರಸ್ತ್ರೀಯರ ಮುಟ್ಟಲಾಗದೆಂದು ಶ್ರುತಿಯಿರುವ 

...................

ಪಾ-1, ಎಲೈ ಸ್ವಾಮಿಯೇ! ನಾನು ದರಿಗ್ರಸು. ಈ ದರಿದ್ರ ಹೋಗುವ ಹಾಗೆ 

ಮಾಡಿ ಭಾಗ್ಯವಂತನಾಗುವ ಹಾಗೆ ಮಾಡಬೇಕೆಂದು ಕೇಳಲು. 



------------------------ಬತ್ತೀಸ ಪುತ್ತಳಿ ಕಥೆ.-------------------------೮೫ 


ಕಾರಣ ಅಂಜಿ, ಬಳಿಕ ತಮಗಾವಿಷ ತಗಲೀತು ಎಂದು, " ಅರಸಿನ 

ರಾಣಿ, ಅಣ್ಣನ ರಾಣಿ, ಹೆಣ್ಣು ಕೊಟ್ಟಂಥವನ ರಾಣಿ, ಗುರುವಿನ ರಾಣಿ, 

ತನ್ನ ಹೆತ್ತ ತಾಯಿಗಿಂತ ಮಿಗಿಲು” ಎಂಬ ನೀತಿಯ ತಿಳಿದು ನೋಡಿ 

ಕೊಂಡು, ಉಗುರಿನಿಂದ ವಿಷವ ತೆಗೆಯುವಲ್ಲಿ ಅಮ್ಮನವರಿಗೆ ಎಚ್ಚರವಾ 

ಯಿತೆಂದು ಪೇಳಿ, ತಾ ಕೊಂದ ಹಾವ ತೋಲಾಗಿ ; ಅವಾಗ ರಾಯನು-- 

ಎಲೈ ಬ್ರಾಹ್ಮಣೋತ್ತಮನೇ ! ನೀನು ಸತ್ಪುರುಷನ ಗರ್ಭಸಂಭವನಾದ 

ನಿಮಿತ್ತ, ಈ ಕಂಟಕದ ಪರಿಹರಿಸಿ ಕೊಟ್ಟೆಯೆಂದು, ಅವನಿಗೆ ಸವಾಲಕ್ಷ 

ದ್ರವ್ಯವ ಕೊಟ್ಟು, ಮನ್ನಿಸಿ ಕಳುಹಿಸಿಕೊಟ್ಟನು ಕಣಾ ! ಎಂದ ಮಾತಿಗೆ 

ವಿದ್ಯಾಧರಿಯೆಂಬ ಪುಸ್ತಳ ನಗುತ್ತ ಹಾಸ್ಯಗೆಯು ಹೇಳಿದ ಉಪಕಥೆ :--


ಕೇಳೈಯಾ ಚಿತ್ರಶರ್‍ಮನೇ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯ ಪಾಲಿಸುತ್ತಿರುವಲ್ಲಿ ಒಂದುದಿನ ಬಹುಪ್ರಕಾಶಮಾನವಾದ ಚಂದ್ರೋ 

ದಯದಲ್ಲಿ ಓಲಗಸಾಲೆಯಲ್ಲಿ ಕುಳಿತು ತನ್ನ ಮಂತ್ರಿಯಾದ ಭಟ್ಟಿ ಸಹಿತ 

1ಭದ್ರವೇತ, ಕೂಚಮಾರ1 ವಿಟ ವಿರೂಪಕ ನಾಗರಿಕ ಪೀಠಮರ್ದನರ 

ಕಡೆ ಪಸಂಗಿಸುತ್ತಿರುವಾಗ ಒಬ್ಬ ಧನಪಾಲನೆಂಬ ವರ್ತಕ ಬಂದು 

ರಾಯನ ಕೂಡ ತಾನು 2ವ್ಯಾಪಾರನಿಮಿತ್ತ ಹೋಗುವಲ್ಲಿ ಒಂದು ಅತಿಶಯ 

ವ ಕಂಡನೆಂದು ಹೇಳಲಾಗಿ2, ರಾಯನು-ಅದೇನತಿಶಯವೆನ್ನಲಾಗಿ ; ಅವ 

ನಿಂತೆಂದನು :-ಗಂಧವಾದನ ಬೆಟ್ಟದ ಬಳಿಯಲ್ಲಿ 3ಒಂದು ಕೊಳದ3 ಮಧ್ಯ 

ದಲಿ ಒಂದು ತಾವರೆಕಾಸುಮವಿರುವುದು ಅಕುಸುಮ ಸೂರ್‍ಯನು ಮ 

ಧ್ಯಾಹ್ನಕ್ಕೆ ಬರುವ ವೇಳೆಗೆ ಆಕಾಶದ ತನಕ ಬೆಳೆದು ಸೂರಿನ ಮುಟ್ಟಿ 

ಅಲ್ಲಿಂದ ಸಂಧ್ಯಾಕಾಲಕ್ಕೆ ಇಳಿದಿಳಿದು ಪುನಃ ಆ ಕೊಳದ ನೀರಿನೊಳಗೆ ಬಂದು 

ಮುಳುಗುವುದು. ಈ ಪ್ರಕಾರ ದಿನಂಪ್ರತಿಯೂ ಬೆಳೆಬೆಳೆದು ಸೂರ್‍ಯನ 

ಬಳಿಗೆ ಹೋಗಿ ಪುನಃ ಇಳಿದು ಬರುವುದು. ಅಲ್ಲೊಬ್ಬ ಕೆದರಿದ ಮಂ  

ಡೆಯನುಳ್ಳ ಮುನಿಯು ಬಹುಕಾಲದಿಂದ 1 ತಪಸ್ಸು ಮಾಡಿದರೂ ಸೂರ್‍ಯನ 

................

 ಪಾ-1, ನಾದ್ರಚೇತ, ಕುಚಕುಮಾರ, 2ವ್ಯಾಪಾರಕ್ಕೆ ಪೋದ ವೃ 

ತ್ತಾಂತಮಂ ಪೇಳುತ್ತಿರುವಲ್ಲಿ ತನ್ನ ಹೆಂಡರೊಳು ಒಂದು ಚೋದ್ಯದ ಮಾತ ಕಂಡೆ 

ನದೆಂತೆನೆ 3. ಭಾಸ್ಕರ ಕ್ಷೇತ್ರದಲ್ಲಿ ಅಘೇಂದ್ರೇಶ್ವರನ ಗುಡಿಯ ಬಳಿಯಲ್ಲಿ 

ಒಂದು ಕೊಳವಂಟು ಆ ಕೊಳದಲ್ಲಿ. 4 ತಪಸ್ಸ ಮಾಡಿಕೊಂಡು ಇರುವನು. 

ಅವನು ಉಬ್ಬಿ ಬರುವ ತಾವರೆಯಮೇಲೆ ಏರಿ ಅನೇಕ ದೂರ ಹೋಗಿ, ಸೂರ್‍ಯನ



೮೬----------------ಕರ್ಣಾಟಕ ಕಾವ್ಯಕಲಾನಿಧಿ.------------------------------


ದರ್ಶನವಿಲ್ಲದೆ ಇರುವನು ಎಂದ ಮಾತ4 ಕೇಳಿ, ರಾಯ ಅದ ನೋಡಬೇ 

ಕೆಂದು ಪರದನ ಕರೆದುಕೊಂಡು, ಖೇಚರ ಮಾರ್ಗದಲ್ಲಿ ಆಗಂಧಮಾ 

ದನ ಬೆಟ್ಟದ ಬಳಿಗೆ ಹೋಗಿ, ಅಲ್ಲಿರುವ ಅಘೋರೇಶ್ವರನ ಪೂಜಿಸಿ, ಆ ಮು 

ನಿಗೆ ವಂದಿಸಿ ಇಂತೆಂದನು :- ಎಲೈಮಹಾಮುನಿಯೇ ! ಇಲ್ಲಿ ನೀವು 

ತಪಸ್ಸ ಮಾಡುತ್ತ ಇರುವ ಕಾರಣವೇನೆಂದು ರಾಯ ಕೇಳಲಾಗಿ ; ಆ 

ಮುನಿಯಿಂತೆಂದನು ಈ ಕೊಳದಲ್ಲಿ ಹುಟ್ಟಿಯಿರುವ ಕಮಲದಲ್ಲಿ ಕುಳಿ 

ತು ಸೂರ್‍ಯನ ಬಳಿಗೆ ಹೋಗಿ ಸೂರ್‍ಯನ ಕಂಡು 1ಮುಕ್ತಿಯ1 ಪಡೆಯ 

ಬೇಕೆಂಬ ಬಯಕೆಯಿಂದ ತಪಸ್ಸ ಮಾಡಿಕೊಂಡು ಇರುವೆನು. ಆದಾ 

ಗ್ಗೂ ಈ ತಾವರೆಯಲ್ಲಿ ಕುಳಿತು ಸೂರ್‍ಯನ ಬಳಗೆ ಹೋಗುವೆನೆಂದರೆ ಸೂ 

ರ್‍ಯಕಿರಣಜ್ವಾಲೆಯಿಂದ ದೇಹ ಬೆಂದು ಕಪ್ಪಾದೀತೆಂದು ಭೀತಿಪಟ್ಟಿದ್ದೇನೆ 

ಎನ್ನಲಾಗಿ ; ಅಮುನಿಯ ಮಾತ ತಾಯ ಕೇಳಿ, ಇಂತೆಂದನು -ಲೋಕ 

ದಲ್ಲಿ ಆದಿತ್ಯ ಮಂಡಲಕ್ಕೆ ಹೋಗುವರು ಯಾರೆಂದರೆ-ಸಕಲವನ್ನೂ ತ್ಯಜಿ 

ಸಿದ ಸನ್ಯಾಸಿಯೊಬ್ಬ, ರಣರಂಗದಲ್ಲಿ ಎದುರುನುಗ್ಗಿ ಹೋಗುವನೊಬ್ಬ. 

ಇವರಿಬ್ಬರಲ್ಲದೆ ಇನ್ನು ಬೇರೆಯಿಲ್ಲವೆಂದು ರಾಯ ಅಮುನಿಗೆ ಹೇಳಿ, 

ಆರಾತ್ರಿ ಕಳೆದು, ಬೆಳಗಾಗುವುದು ಅಕೊಳದಲ್ಲಿ ಕಮಲಯೇಳುವುದ 

ಕಂಡು, ರಾಯ ಜಲಸ್ತಂಭ ತಾ ಬಲ್ಲುದರಿಂದ ಆಕೊಳದ ನೀರಂ ಹೊಕ್ಕು, 

ಆಕಮಲದಲ್ಲಿ ಕುಳಿತುಕೊಳ್ಳಲು ; ಆ ಕಮಲ ಅಂತರಿಕ್ಷಕ್ಕೆ ಬೆಳೆದು, ಸೂ 

ರ್‍ಯನ ಬಳಿಗೆ ಹೋಗುವಲ್ಲಿ, ಅಸೂರ್‍ಯನ ಕಿರಣದಿಂದ ರಾಯನ ದೇಹ 

ಬೆಂದು ಬೆಂಡಾಗಿ, ಮೂರ್‍ಚ್ಛೆ ಪೋದುದರಿಂದ, ಅದಕ್ಕೆ ಅಂಜದೆ, ಚೇತರಿಸಿ 

ಕೊಂಡು, ಧೈರವಿಡಿದು, ಅಸೂರ್ಯನ ಧ್ಯಾನಿಸುತ್ತಿರಲಾಗಿ ; ರಾಯನ ದೃಢ 

ಕ್ಕೆ ಮೆಚ್ಚಿ ಅಸೂರ್‍ಯ ಕೃಪಾದೃಷ್ಟಿಯಿಂದ ನೋಡಲಾಗಿ ; ರಾಯನ ಶರೀರ 

ತಂಪಾದುದರಿಂದ ಮತ್ತು ಸ್ತುತಿಸುತ್ತ, ಅಸೂರ್‍ಯನ ಕಂಡು ನಮಿಸಲಾಗಿ ; 

ಆ ಸೂರ್‍ಯ-ಎಲೈ ರಾಯನೇ ' ಎಲ್ಲಿಗೆ ಬಂದೆ ? ಎನ್ನಲಾಗಿ ; ಅಮಾತಿಗೆ 

...................

ಕಾಣುವೆನೆಂದು ಯೋಚಿಸಿ, ನೀರ ಬೊಕ್ಕು ತಾವರೆಯ ನೇಲು, ಆ ತಾವರೆಯು 

ಸೂರ್‍ಯನ ಬಳಿಗೆ ಕೊಂಡು ಹೋಗುವುದೆಂದು ತನ್ನ ಹೆಂಡತಿ ಹೇಳಿದಳೆಂದು ಧನ 

ಪಾಲನೆಂಬ ಪರದ ಹೇಳಲಾಗಿ; ಆ ಮಾತ೦ಕೇಳಿ. 


 ಪಾ-1, ಅನೇಕ ಶುದ್ಧ ಕ್ರಿಯೆಗಳ,



--------------------------ಬತ್ತೀಸಪುತ್ತಳಿ ಕಥೆ.-------------------------೮೭ 


ರಾಯ-ನಿಮ್ಮ ಪಾದದರ್ಶನವಾಗಬೇಕೆಂದು ಬಂದೆನೆನ್ನಲಾಗಿ ; ಅಸೂರ್‍ಯ 

ರಾಯನಿಗೆ ತನ್ನ ನಿಜಸ್ವರೂಪವ ತೋರಿ ಇಪ್ಪತ್ತು ರತ್ನವಂ ಕೊಟ್ಟು* 

ಕಳುಹಿಸಲಾಗಿ ; ರಾಯ ಅತಾವರೆಕಮಲದಲ್ಲಿ ಕುಳಿತುಕೊಂಡು, ಸಾಯಂ 

ಕಾಲದ ವೇಳೆಗೆ ಅಕಮಲ ಅಕೊಳದ ನೀರಿನಲ್ಲಿ ಬಂದು ಮುಳುಗ 

ಲಾಗಿ, ರಾಯ ನೀರಿನಿಂದ ಮೇಲಕ್ಕೆ ಎದ್ದು ಬಂದು, ಅಮುನಿಯೊಡನೆ 

ತಾನು ಸೂರ್‍ಯನ ಕಂಡ ವಿವರವ ಹೇಳಿ, ಆಯಿಪ್ಪತ್ತು ರತ್ನವ ಅಮುನಿಗೆ 

ಕೊಟ್ಟು, ಅಲ್ಲಿಂದ ವರ್ತಕ ಸಹ ಇಲ್ಲಿಗೆ ಬಂದು, ಆವರ್ತಕನಿಗೆ ಕೋಟಿ 

ದ್ರವ್ಯವ ಕೊಟ್ಟು ಕಳುಹಿಸಿ, ತಾನು ಸುಖವಾಗಿದ್ದನು ಕಣಾ!


ಇಂತು ಕರ್ಣಾಟಕಭಾಪಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ವಿದ್ಯಾಧರಿಯೆಂಬ ಪುತ್ತಳಿ ಹೇಳಿದ ಹತ್ತೊಂಬತ್ತನೆಯ ಕಥೆ.

..........

೨೦ನೆಯ ಕಥೆ.


ಇಪ್ಪತ್ತನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ 

ಭೋಜನ ತಾಂಬೂಲವಂ ತೀರಿಸಿಕೊಂಡು, ಶುಚಿರ್ಭೂತನಾಗಿ, ನಾನಾ 

ದಾನಂಗಳ ಮಾಡಿ, ಸಕಲಾಭರಣವಸ್ತ್ರಾಲಂಕೃತನಾಗಿ, ಎಂದಿನಂತೆ 

ಚಿತ್ರಶರ್‍ಮನ ಕೈಲಾಗಿನಿಂದ ನವರತ್ನ ಉಚಿತವಾದ ಮಾವುಗೆಗಳ ಮೆಟ್ಟಿ 

ಸಿಂಹಾಸನದ ಬಳಿಗೆ ಬಂದು, ಬಲಗಾಲ ನೀಡುವ ಸಮಯದಲ್ಲಿ ಆಸೋ 

ಪಾನದ ರತ್ನಾವತಿಯೆಂಬ ಪುತ್ತಳಿಯು, ಹೋ ಹೋ ! ನಿಲ್ಲು ನಿಲ್ಲೆಂದು, 

ಧಿಕ್ಕರಿಸಲಾಗಿ ; ಭೋಜರಾಯ ಖಿನ್ನನಾಗಿ ಬೇರೆ ಸಿಂಹಾಸನದಲ್ಲಿ ಕು 

ಳಿತು, ಚಿತ್ರಶರ್ಮನಿಂದ ಪೇಳಿಸಿದ ಕಥೆ :--


ಎಲೆ ಪುತ್ತಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ಭೋಜರಾ 

ಯನು ಸುಖರಾಜ್ಯಂಗೆಯ್ಯುವಲ್ಲಿ ಮೂರುವರುಷ ಮಳೆಬೆಳೆಯಿಲ್ಲದೆ ಆ

ರಾಜ್ಯಕ್ಕೆ ಅತಿಕ್ಷಾಮವಾದುದರಿಂದ, ಅದ ರಾಯ ಕೇಳಿ ಯೋಚಿಸುತ್ತಿರು 

............

* ನಿನಗೆ ಮೊದಲು ವಿಕ್ರಮನೆಂಬ ಪೆಸರು ನಡೆವುದು. ಇಲ್ಲಿಂದ ನನ್ನ 

ದರ್ಶನವಾದ ಕಾರಣ ವಿಕ್ರಮಾದಿತ್ಯರಾಯನೆಂದು ಪೆಸರಾಗಲಿ ಎಂದು 

ವರಮಂ ಕೊಟ್ಟು-- ಎಂದು ಅಧಿಕಪಾಠವಿದೆ.



೮೮-----------------ಕರ್ಣಾಟಕ ಕಾವ್ಯಕಲಾನಿಧಿ-----------------------------


ವಲ್ಲಿ, ಆಕಾಶವಾಣಿ- ಎಲೈ ರಾಯ ! ನಿನ್ನ ಬಳಿಯಲ್ಲಿರುವ ವರರುಚಿ 

ಅಟ್ಟಹಾಸದಿಂ ನಕ್ಕರೆ ಮಳೆ ಬರುವುದು ಎನ್ನಲಾಗಿ ; ರಾಯನಾಮಾತ 

ಕೇಳಿ, ಆಗ ವರರುಜೆಯ ಕರೆಸಿ, ನೀನು ಅಟ್ಟಹಾಸದಿಂ ನಕ್ಕರೆ ನಮ್ಮ 

ಸೀಮೆಗೆ ಮಳೆಯಾಗಿ ಬೆಳಸು ಬೆಳೆದು ಬರ ಬಿಡುವುದು, ನಗು ಎನ್ನಲಾಗಿ 

ಆ ಮಾತಿಗೆ ರಾಯನ ಮುಖವ ನೋಡಿ- 1ಎಲೈ ರಾಯನೇ ! ಸುಮ್ಮನೆ 

ನಗು ಎಂದರೆ ನಗು ಬರುವುದೇ ? ಅಕಾರಣವಾದ ನಗು ಹಿರಿಯರಿಗೆ ಸಲ್ಲದು 

ಎಂದು ವರರುಚಿ ನುಡಿಯಲಾಗಿ ; ರಾಯನಿಂತೆಂದನು "ಲೋಕದಲ್ಲಿ 

ಗುರುಗಳೂ ಹಾಸ್ಯದ ಮಾತನಾಡಬಹುದು, ಕ್ಲಿಪ್ತಮಾಡಲಾಗದು ” ಎಂಬ 

ನೀತಿಯಿರುವ ಕಾರಣ ನಮ್ಮ ರಾಷ್ಟ್ರದಲ್ಲಿ ಸರ್ವರೂ ಸಂತೋಷಭರಿತ 

ರಾಗಿರಬೇಕೆಂದು ನೀವು ನವರಸಭರಿತವಾದ ಹಾಸ್ಯವಾಡಬೇಕು. "ಸಂ 

ತೋಪವಿಲ್ಲದ ವಿಪ್ರ, ಲಜ್ಜೆಯಿಂದಿರುವ ವೇಶಿ ಕೆಡುವರು" ಎಂಬುದ ನೀವು 

ತಿಳಿದಿಲ್ಲವೇ ? 1ನಿಮಗೈಶ್ವಚರ್‍ಯವಿದ್ದರೂ ಸಂತೋಷದ ಹಾಸ್ಯವಿಲ್ಲದೆ ಇರುವ 

ಕಾರಣ ನೀವು ನಿರ್ಭಾಗ್ಯರ ಸಮಾನರಾದವರು. ನಮ್ಮ ದೇಶದಲ್ಲಿರಬೇಡಿ 

ಹೊರಟುಹೋಗಿ ಎನ್ನಲಾಗಿ;- ಹಿರಿಯರಿಗೆ ವಧೆಯಾವುದೆಂದರೆ-- ಅರಸಿನ 

ಬಳಿ ಅವಮನ್ನಣೆಯೆ' ವಧೆ ; ಸ್ತ್ರೀಯಳಿಗೆ ಗಂಡನ ಮಗ್ಗಲುಬಿಟ್ಟು ಮ 

ಲಗುವುದೇ ವಧೆ'' ಎಂದು ತಿಳಿದು, ರಾಯನ ಅಪ್ಪಣೆಯ ಪ್ರಕಾರಕ್ಕೆ ವರ 

ರುಚಿ ಊರಬಿಟ್ಟು ಹೊರಟುಹೋಗುವಾಗ, ರಾಯ ಆತನ ಸಂಗಡ ಒಬ್ಬ 

..................

ಪಾ-1, ಲೋಕದೊಳು ಸಂಸಾರಸುಖವಿಲ್ಲ, ವ್ರತವು ಮೊದಲೇ ಇಲ್ಲ. 

ಆದ ಕಾರಣವಾಗಿ ಅಳುವುದೇ ಹೊರತು ನಗೆ ಬಾರದು-ಎಂದು ವರರುಚಿ ನುಡಿಯ 

ಲು; ಆಮಾತಿಗೆ ರಾಯನಿಂತೆಂದನು :-ಲೋಕದೊಳು ಮನುಜರು ಕಾಲವಾ 

ಗುವ ಪರಂತಕ್ಕೂ ಹಾಸ್ಯವೇ ಇರಬೇಕು. ಹಾಸ್ಯವಿಲ್ಲದ ಮನುಜನು ವ್ಯರ್ಧ 

ವೆನಿಸುವನು. ಗುರುಗಳಲ್ಲಿಯೂ ಹಾಸ್ಯದ ಮಾತು ನುಡಿಯಬಹುದು. ಕುಟಿಲವ 

ಮಾಡಬಾರದು-ಇಂತೆಂಬ ನೀತಿಯುಂಟಾಗಿ ಇದುಕಾರಣ ನೀವು ನಮಗೆ ಗುರು 

ಸ್ಥಾನವಾದುದರಿಂದ ನಮ್ಮ ಸಭೆಯಲ್ಲಿ ನವರಸಭರಿತವಾದ ಪ್ರಸಂಗಕ್ಕೆ ಯೋಗ್ಯರೇ 

ಇರಬೇಕು. ಮತ್ತು ನಾನಾಳುವ ರಾಜ್ಯದಲ್ಲಿ ಹದಿನೆಂಟು ಜಾತಿಯಲ್ಲಿಯೂ ಸಂ 

ತೋಷವಲ್ಲದೆ ಚಿಂತೆ ಹೊದ್ದ ಬಾರದ ಹಾಗೆ ಇರಬೇಕು. ನನ್ನ ಸಭೆಗೆ ಬಂದರೆ 

ಎಂಥ ಮೂಢನಿಗಾದರೂ ಸವಾಲಕ್ಷ ಹೊನ್ನ ಕೊಡುವೆನು. ನಿಮಗೆ ಕೊಟ್ಟ 

ವಸ್ತುಗಳಿಗೆ ಮಿತಿ ಮೇರೆಯಿಲ್ಲ. ಎಷ್ಟು ಭಾಗ್ಯವಿದ್ದರೂ ಸಂತೋಷವಿಲ್ಲದ ವಿಪ್ರ 

ಕೆಡುವನು.



-----------------------ಬತ್ತೀಸಪುಳಿ ಕಥೆ,-------------------------------೮೯ 


ಚಾರನ ಗೋಪ್ಯದಿಂದ ಕಳುಹಿಸಿ, ಆತನಿಗೆ--ನೀನು ಸಂಗಡಲೇ ಹೋಗಿ, 

ಆತನರಿಯದಂತಿದ್ದು, ಎಲ್ಲಿ ಹಾಸ್ಯವ ಮಾಡಿ ನಗುವನೋ  ಅಲ್ಲಿಂ 

ದ ಕರೆದುಕೊಂಡು ಬಾ ಎಂದು ಕಟ್ಟು ಮಾಡಲಾಗಿ; ವರರುಚಿಯು ಬಹುದೂ 

ರ ನಡೆದು, ದಣಿದು ಸಾಯಂಕಾಲವಾಗಲು ಒಂದು ಪಾಳುಗುಡಿಯ ಕಂಡು 

ಅದರಲ್ಲಿ ಒಂದು ಮೂಲೆಯಲ್ಲಿ ಪವಡಿಸಲು ; ಮತ್ತೋರ್ವ ಗೃಹಸ್ಥನು 

ಪತ್ನಿಸಮೇತ ದೂರದೇಶದಿಂದ ಬಂದು ಅವನೂ ಒಂದು ಮೂಲೆಯ 

ಲ್ಲಿ ಮಲಗಲು ; ಮತ್ತೋರ್ವ ಅಗಸ ತಪ್ಪಿಸಿಕೊಂಡ ತನ್ನ ಕತ್ತೆಯನ್ನು ರಾತ್ರಿ 

ಯವರೆಗೂ ಅರಸಿ ಕಾಣದೆ ಬಳಲಿ ಬಂದು, ಅವನ ಒಂದು ಮೂಲೆಯ 

ಲ್ಲಿ ಮಲಗಲು; ಮತ್ತೊಬ್ಬ ಕಬ್ಬಿನ ವ್ಯಾಪಾರಿ ವಿಕ್ರಯಮಾಡುವೆನೆನುತ 

ತಂದ ಕಬ್ಬಿನ ಹೊರೆಯ ಇಳುಹಿ ಒಂದು ಮೂಲೆಯಲ್ಲಿ ಮಲಗಲು ಅಲ್ಲಿ 

ಕತ್ತಲೆಯಾದಕಾರಣ ಒಬ್ಬರಿರುವುದ ಒಬ್ಬರು ಕಾಣದೆ ಇರಲು-(ಹೀಗಿ 

ರುವಾಗ) ದೂರದೇಶದಿಂದ ಬಂದ ಮಾರ್ಗಸ್ಥನು ಪತ್ನಿ ಪಕ್ಕದಲ್ಲಿದ್ದ ಕಾ 

ರಣ ಕಾಮೋದ್ರೇಕದಿಂದ ಆಕೆಯ ಕಡೆ ನಾನಾಬಗೆಯ (ವಿನೋದ)ಗಳ 

ಲ್ಲಿದ್ದು, ಸುಖಸಮುದ್ರದಲ್ಲಿ ಮುಳುಗಿ-ಎಲೆ ಪ್ರಿಯೆ! ಇಂದಿನವರೆಗೆ ಕಾಣ 

ದುದನ್ನೆಲ್ಲಾ ಈಗ ಕಂಡೆನು. ಇಂತು ಎಂದೂ ನೆರೆಯಲಿಲ್ಲವೆನಲು-ಆ ಮಾತ 

ಕೇಳಿ ಅಗಸನು--ಎಲೈಮಹಾಪುರುಷನೇ ! ನೀವು ಕಾಣದುದೆಲ್ಲಾ ಕಂಡ 

ಬಳಿಕ ನನ್ನ ಕತ್ತೆಯ ಕಂಡಿರಾ ? ಎನ್ನಲಾಗಿ; ಆ ಮಾತ ಕೇಳಿ-ಇಲ್ಲಿ 

ಯಾರೋ ಬಂದು ಮಲಗಿದ್ದಾನೆಯೆಂದು ಬಾಗಿಲ ಸದ್ದಾಗದಂತೆ ತೆಗೆ 

ಯೆಂದ ಆ ಹೆಂಗಸಿನ ಮಾತ ಕಬ್ಬಿನ ಪಿಂಡಿಯ ತಂದವ ಕೇಳಿ-ಎಲೈ 

ನಾನು ಎಚ್ಚrವಾಗಿದ್ದೇನೆ. ಸದ್ದಾಗದಂತೆ ಕಬ್ಬ ತೆಗೆದರೆ ತಿಳಿಯಬಂ 

ದೀತು ಎನ್ನಲಾಗಿ; ಅವರವರ ಮಾತ ಕೇಳಿ ವರರುಚಿ ಅಟ್ಟಹಾಸದಿಂ 

ನಕ್ಕನು. ಆಗ ಮೇಲೆ ಮೋಡಗಟ್ಟಿ ಮಳೆ ಹುಯ್ದು ಕೆರೆ ಕಟ್ಟೆ ತೊರೆ 

ಹಳ್ಳ ಕೊಳ್ಳಗಳಲ್ಲ ತುಂಬಿ ಕೋಡಿ ಹರಿದುವು ಅಂದು ಗೋಪ್ಯದಿಂದ 

ರಾಯ ಹಿಂದೆ ಕಳುಹಿಸಿದ್ದ ಬುದ್ಧಿವಂತ ವರರುಚಿಯ ಅನೇಕ ತೆರದಿಂದೊ 

ಡಂಬಡಿಸಿ, ರಾಯನ ಬಳಿಗೆ ಕರೆತರಲಾಗಿ ; ರಾಯ ಕಂಡು ಬಹುಮಾ 

ನವ ಮಾಡಿ ಕುಳ್ಳಿರಿಸಿಕೊಂಡು ಎಲ್ಲಿಯತನಕ ಹೋಗಿದ್ದಿರಿ? ಅಲ್ಲೇ 

ನತಿಶಯವ ಕಂಡಿರಿ ? ಎಂದು ಕೇಳಲಾಗಿ; ತಾನು ಪಾಳುಗುಡಿಯಲ್ಲಿ ಮಲ



೯೦----------------ಕರ್ಣಾಟಕ ಕಾವ್ಯಕಲಾನಿಧಿ,---------------------------------


ಗಿದ್ದಾಗ ನಡೆದ ವೃತ್ತಾಂತವ ವೇಳೆ, ಅದುಕಾರಣ ಅಟ್ಟಹಾಸದಿಂದ ನಕ್ಕೆನು 

ಎಂದು ಹೇಳಲಾಗಿ; ರಾಯ ಮೆಚ್ಚಿ ವರರುಚಿಗೆ ಸವಾಲಕ್ಷ ದ್ರವ್ಯವ 

ಕೊಟ್ಟು, ಮನ್ನಿಸಿದನು ಕಣಾ ! ಎಂದ ಮಾತಿಗೆ ರತ್ನವತಿಯೆಂಬ ಪುತ್ತಳಿ ನಗುತ್ತ 

ಹಾಸ್ಯಗೆಯ್ದು ಹೇಳಿದ ಉಪಕಥೆ :--


ಕೇಳೈಯಾ ಚಿತ್ರಶರ್ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯ ಪಾಲಿಸುವಲ್ಲಿ ಒಂದು ದಿನ ಒಬ್ಬ ಬೇಟೆಗಾಯಿ ಜಿಂಕೆಯ ಚರ್ಮ, 

ಪುಲಿಯ ಚರ್ಮ, ಪುಣುಗುಚೆಟ್ಟು, ಕಸ್ತೂರಿ ಸಹ ತಂದು, ಕೈಗಾಣಿಕೆ 

ಯೊಪ್ಪಿಸಿ-ಎಲೈ ಮಹಾರಾಯನೇ ! ಮೃಗಗಳು ಅರಣ್ಯದ ವನಗಳಲ್ಲಿ 

ಹೇರಳವಿವೆ. ಈಗ ಬೇಂಟೆಗೆ ಸಮಯವಾಗಿದೆ ಎಂದು ಅಳಿಕೆ ಮಾಡಲಾ 

ಗಿ; ರಾಯನು ಕೇಳಿ, ಆಕ್ಷಣವೇ ಹೊರಟು ನಾನಾಮೃಗಗಳ ಪಿಡಿಯ 

ಬೇಕೆಂದು ಬಲೆಗಳ ಬೀಸಿ, ಗಿಡವನಲಾ ಶೋಧಿಸುತ್ತ, ಬೇಟೆಯನಾಡು 

ಈ ಬರುವಲ್ಲಿ, ಒಂದು ಕಾಡ ಹಂದಿಯ ಕಂಡು ಬೆನ್ನಟ್ಟಿ ಹೋಗಲಾಗಿ, 

ಅದು ಕೈಗೆ ಸಿಕ್ಕದೆ ಒಂದು ಗವಿಯ ಹೊಕ್ಕಿತು. ರಾಯನು ಆ ಗವಿಯ 

ಪೊಕ್ಕು, ಹುಡುಕಿ ನೋಡಲಾಗಿ; ಅಲ್ಲಿ ಮತ್ತೊಂದು ಬಿಲದ್ವಾರ ಕಂಡು, 

ಅದಲ್ಲಿ ಹೋಗಲಾಗಿ; ಒಂದು ಕೋಟೆ ಸುವರ್ಣಮಯವಾಗಿ ಕಾಣಿ 

ಸಲು; ಆಕೋಟೆಯೊಳಗೆ ಹೋಗಿ ನೋಡಲಾಗಿ, ನವರತ್ನಖಚಿತವಾದ 

ನಿಲಗನ್ನಡಿ ಬಾಗಿಲುಗಳನುಳ್ಳ ಮನೆಗಳಿಂದೊಪ್ಪುವ ನಾನಾತೆರದಿಂದ 

ಪ್ರಕಾಶಮಾನವಾದ ಪಟ್ಟಣವಿರಲು, ಅದು ಬಳಯ ಉದ್ಯಾನವನಕ್ಕೆ ರಾ 

ಯನು ಹೋಗಲಾಗಿ ; ಅಲ್ಲಿ ಆ ಪಟ್ಟಣದ ಕಾವಲುಗಾರ ಕಂಡು-- 

ಈ ಪಟ್ಟಣವು ಯಾರದು ? ಇದನಾಳುವ ಅರಸು ಯಾರು ? ಎಂದು ಕೇಳ 

ಲಾಗಿ; ಅವರು-ಇದು ಶೋಣಿತವೆಂಬ ಪಟ್ಟಣ. ಇದನಾಳುವನು ಬಲಿಚ 

ಕ್ರವರ್ತಿಯೆಂದು ಹೇಳಿ, ಆ ಬಳಕ-ನೀವಾರೆಂದು ಕಾವಲುಗಾರು ಕೇಳ 

ಲಾಗಿ; ರಾಯ ತನ್ನ ವೃತ್ತಾಂತನ ಅವರೊಡನೆ ಹೇಳಲಾಗಿ; ಆ ಜನವು 

ಕೇಳಿ ತನ್ನೊಡೆಯನಾದ ಬಲೀಂದ್ರಚಕ್ರವರ್ತಿಯ ಬಳಿಗೆ ಹೋಗಿ, ಕೈ 

ಮುಗಿದು-ಎಲೈ ಚಕ್ರವರ್ತಿಯೇ ! ನಿಮ್ಮ ಉದ್ಯಾನವನಕ್ಕೆ ವಿಕ್ರಮಾದಿ 

ತ್ಯರಾಯ ಬಂದಿದ್ದಾರೆ ಎನ್ನಲಾಗಿ ; ಆತ ಆಶ್ಚರ ಪಟ್ಟು ತನ್ನ ಮಂತ್ರಿಗಳ 

ಕಳುಹಿಸಿ, ತಾನು ಎದುರಾಗಿ ಹೋಗಿ, ರಾಯನ ತನ್ನ ಅರಮನೆಗೆ ಕರೆದು



--------------------------ಬತ್ತೀಸವುಳಿ ಕಥೆ.--------------------------೯೧ 


ಕೊಂಡು ಬಂದು, ತನ್ನ ಸಿಂಹಾಸನದಲ್ಲಿ ಕುಳ್ಳಿರಿಸಿ, -ನೀವಿಲ್ಲಿಗೆ ಬಂದ 

ಕಾರಣವೇನೆಂದು ಕೇಳಲಾಗಿ; ರಾಯ ತಾ ಬಂದ ವರ್ತಮಾನವ ಪೇಳಿದುದ 

ಕೇಳಿ, ಅತಿ ಸಂತೋಷಂಬಟ್ಟು, ರಾಯನಿಗೆ ಮಜ್ಜನ ಭೋಜನ ಮಾಡಿಸಿ, 

ಪುಷ್ಪ ಸುಗಂಧ ತಾಂಬೂಲವ ಕೊಡಿಸಿ, ಆ ಬಳಿಕ ನವರತ್ನಾಭರಣ ಪೀ 

ತಾಂಬರವ ಕೊಟ್ಟು, ಕಳುಹಿಸುವಲ್ಲಿ (ಎರಡು ರತ್ನವ ಕೊಟ್ಟು, ಇದು 

ಕೇಳಿದುದ ಕೊಡುವುದು. ಇದು ನೆನೆದಲ್ಲಿಗೆ ಮನೋವೇಗದಲ್ಲಿ ಕರೆದು 

ಕೊಂಡು ಹೋಗುವುದು ಎಂದು ಹೇಳಲಾಗಿ ;) ಅದ ತೆಗೆದುಕೊಂಡು 

ಅಲ್ಲಿಂದ ಪುನಃ ಆ ದ್ವಾರದಲ್ಲಿ ಹೊಕ್ಕು ಈಚೆಗೆ ಬಂದು, ಇಲ್ಲಿಗೆ ಬರುವ 

ದಾರಿಯಲ್ಲಿ, ಒಬ್ಬ ಬ್ರಾಹ್ಮಣ ತನ್ನ ಮಗ ಸಹಿತ ಬರುವನ ಕಂಡು, 

ರಾಯನು-ನೀವೆಲ್ಲಿಗೆ ಹೋಗುತ್ತೀರಿ ? ಎನ್ನಲಾಗಿ ; ಆ ಬ್ರಾಹ್ಮಣ ತನ್ನ 

ದರಿದ್ರ ದುಃಖವ ಹೇಳಿದುದ ಕೇಳಿ, ಆ ರಾಯನಿಗೆ ಮನಸ್ಸು ಮರುಗಿ ಆ 

ರತ್ನವ ಕೊಟ್ಟು, ಇದು ಕೇಳಿದುದ ಕೊಡುವುದೆಂದು ಪರೀಕ್ಷೆ ಪೇಳದ 

ಬಳಿಕ, ರಾಯನ ಕೈಯಲ್ಲಿ ಮತ್ತೊಂದು ರತ್ನವಿರುವುದ ಕಂಡು, ಆ ಬ್ರಾ 

ಹ್ಮಣನ ಮಗ ಇದರ ವಿವರವೇನೆಂದು ಕೇಳಲಾಗಿ, ರಾಯ-ಇದು ನೆನೆದ 

ಬಳಿಗೆ ಮನೋವೇಗದಿಂದ ಕೊಂಡುಹೋಗುವುದೆಂದ ಮಾತಿಗೆ ಆ ವಿಪ್ರನ 

ಮಗ ತನಗಾರತ್ನವ ಕೊಡಬೇಕೆಂದು ಕೇಳಿದುದರಿಂದ (ಅದ ಅವನಿಗೆ 

ಕೊಟ್ಟು, ಈ ರೀತಿಯಲ್ಲಿ ) ತಂದೆ ಮಕ್ಕಳಿಗೆ ಆಯೆರಡು ರತ್ನಗಳ 

ಕೊಟ್ಟು ಕಳುಹಿಸಿ ತಾನಿಲ್ಲಿಗೆ ಬಂದು ಸುಖವಾಗಿದ್ದನು, ಎಂದು ರತ್ನವತಿ 

ಯೆಂಬ ಪುತ್ತ ನುಡಿಯಲಾಗಿ; ಭೋಜರಾಜನು ಲಜ್ಜಿತನಾಗಿ, ತನ್ನ ಆರ 

ಮನೆಗೆ ಪೋದನು.


ಇಂತು ಕರ್ಣಾಟಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ರತ್ನ ವತಿಯೆಂಬ ಪುತ್ತಳಿ ಪೇಳಿದ ಇಪ್ಪತ್ತನೆಯ ಕಥೆ,

.........

೨೧ ನೆಯ ಕಥೆ.


ಇಪ್ಪತ್ತೊಂದನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ 

ರ್ಚನೆ ಭೋಜನ ತಾಂಬೂಲವ ತೀರಿಸಿ, ವಸ್ತು ಭರಣಾಲಂಕೃತನಾಗಿ, 

ಚಿತ್ರಶರ್‍ಮನ ಕೈಲಾಗಿನಿಂದ ಅಸ್ಥಾನಮಂಟಪಕ್ಕೆ ಬಂದು ತನ್ನ ಬಲಗಾಲ



೯೨------------------ಕರ್ಣಾಟಕ ಕಾವ್ಯಕಲಾನಿಧಿ.-----------------------


ನೀಡುವ ಸಮಯದಲ್ಲಿ, ಆ ಸೋಪಾನದ ಮದನಮೋಹಿನಿಯೆಂಬ ಪುತ್ತಳಿ 

ಯು ಹೋ ಹೋ ಎಂದು ಧಿಕ್ಕರಿಸಲಾಗಿ; ಭೋಜರಾರನು ಖಿನ್ನನಾಗಿ 

ಬೇರೆ ಸಿಂಹಾಸನದಲ್ಲಿ ಕುಳಿತು ಚಿತ್ರಶರ್ಮನಿಂದ ಹೇಳಿಸಿದ ಕಥೆ.--


ಎಲೆ ಪುತ್ತಳಿಯೇ | ಕೇಳು. ಧಾರಾಪುರದಲ್ಲಿ ನಮ್ಮ ರಾಯ ಸುಖ 

ರಾಜ್ಯಗೆಯ್ಯುವಲ್ಲಿ ಬಂದುದಿನ 1ನೀರಿನಲ್ಲಿ1  ಬೇಟೆ ನೋಡಬೇಕೆಂದು 

ಹೊರಟು, ಗಂಗಾನದಿಯಲ್ಲಿ ಬಲೆಗಳ ಬಿಡಿಸಿ, ಹೇರಳ ಮೀನುಗಳ ಹಿಡಿಸಿ 

ನೋಡುತ್ತಿರುವಲ್ಲಿ ಅವರಲ್ಲಿ ಬಾಳರಮೀನು, ಜಿನುಗುಮೀನು, 

ಸಸಿಲೆಮೀನು, ಪಾವುಮೀನಾದಿಯಾಗಿ ಇರುವುದ ನೋಡುತ್ತ, ಮತ್ತು 

ಭೇಟೆ ಮಾಡಿಸುವಲ್ಲಿ ಒಂದು ಮೀಂಗುಲಿಗನೆಂಬ ಹಕ್ಕಿಯು ಗಗನದೊಳಾ 

ಡುತ್ತ ಇದ್ದು ನೀರಿನಲ್ಲಿ ಹೊಳನ ವಿನ ಕಂಡು ಗ್ರಾಸಕ್ಕಾಗಿ ಸಸಿನೆ 

ಅಲ್ಲಿಂದಿಳಿದು, ಆ ಮೀನ ಕಚ್ಚಿ, ಖೇಚರಕ್ಕೆ ಹಾಕಿ ಹೋಗುವಾಗ ಬಾಯಿ 

ಯಲ್ಲಿ ಕಚ್ಚಿಯಿದ್ದ ಮೀನು ಜಾರಿ ನೀರಿನಲ್ಲಿ ಬೀಳುವುದಕ್ಕೆ ಮುಂಚೆ 

ಮತ್ತೆ ಎರಗಿ ಆ ಮೀನ ಕಚ್ಚಿಕೊಂಡು ಹೋಗುವ ಮಾಂಗುಲಿಗಪಕ್ಷಿಯ 

ಚಮತ್ಕಾರವ ಕಂಡು ರಾಯನು ಮೆಚ್ಚಿ, ತನ್ನ ಕೊರಲ ಪದಕವ ತಗೆದು 

ಆ ಪಕ್ಷಿಗೆ ಹಾಕಿದುದರಿಂದ ಅದು ನೀರಿಗೆ ಬೀಳಲಾಗಿ, ಮಂತ್ರಿಗಳು ಕಂಡು 

ಅಮೋಘವಾದ ಪದಕವನ್ನು ನೀರಿಗೆ ಕಾರಣವೇನೆಂದು ಕೈ ಮುಗಿದು 

ಕೇಳಲಾಗಿ, ರಾಯನಿಂತೆಂದನು  ಕೇಳೈ, ಈ ಲೋಕದಲ್ಲಿ ಇಬ್ಬರು  

ಪಾಪಾತ್ಮರು. ಅರಾರೆಂದರೆ- 2ಉಚಿತವ ತಿಳಿಯದವನೊಬ್ಬ, ಅಸ್ಥಾನ 

ದಲ್ಲಿ ವಚನಹೀನನೊಬ್ಬ ಇವರು ಕರ್ಮಿಗಳೆಂಬ ನೀತಿಯಿಂದ ಮೀಂಗು 

ಲಿಗಪಕ್ಷಿ ಮೀನ ನುಂಗಬಾರದೆಂದು ಪದಕವ ನೀರಿಗೆಚ್ಚೆಯೆಂದುದಕ್ಕೆ 

ಸರ್ವರೂ ರಾಯನ ಹೊಗಳಿದರು... ಎಂಬ ಮಾತಿಗೆ ಮದನಮೋಹಿನಿಯೆಂ 

ಬ ಪುತ್ತಳಿಯು ನಗುತ್ತ ಹಾಸ್ಯಗೆಯು ಪೇಳಿದ ಉಪಕಥೆ - 


ಕೇಳೈಯ್ಯ ಚಿತ್ರಶರ್‍ಮನೇ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯ ಮಾಲನೆ ಮಾಡುವವೇಳೆಯಲ್ಲಿ ಒಂದು ದಿನ ಅನ್ನಸತ್ರದಲ್ಲಿ ಬ್ರಾ 

.....................

ಪಾ--1 ಮೀನ. 

2. ಉಚಿತಾರ್ಥವರಿಯದವ, ರಾಜಾಸ್ಥಾನದಲ್ಲಿ ಮೆಚ್ಚು ನುಂಗುವನು; ವಚ 

ನದರಿದ್ರನು - ಇವರುಗಳು ಕಣಾ ! ಲೋಕದಲ್ಲಿ ಪಾಪಿಗಳು ಎಂಬನೀತಿ - 

ಯುಂಟಾಗಿ,



----------------------------ಬತ್ತೀಸಪುತ್ರ ಕಥೆ.--------------------------------೯೩ 


ಹ್ಮಣ ಸಮೂಹವ ನೋಡಬೇಕೆಂದು ಹೋಟುಹೋಗಿ ನೋಡುತ್ತಿರು 

ವಲ್ಲಿ, ಬಹುಸ್ಕೂಲಕಾಯನಾದ ಒಬ್ಬ ಬ್ರಾಹ್ಮಣ ಬರಲಾಗಿ; ಅವನ 

ಕಂಡು.. ಎಲೈ ಬ್ರಾಹ್ಮಣೋತ್ತಮನೇ ! ನೀನು ಯಾವ ದೇಶದವ ? ಎಂದು 

ಕೇಳಲಾಗಿ; ಆ ಬ್ರಾಹ್ಮಣನು ಎಲೈ ರಾಯನೇ ! ಕಾಶ್ಮೀರದೇಶದಲ್ಲಿ ದಮಾ 

ರಣ್ಯವೆಂಬ ಒಂದು ಅಗ್ರಹಾರವಿರುವುದು. ನಾನು ಆ ಅಗ್ರಹಾರದವನು. 

ನಾನು ಬಡತನದ ಬೇಗೆಯಿಂದ ಬೆಂದು, ನಿಮ್ಮ ದಿಗಂತಪ್ರಖ್ಯಾತವಾದ 

ಅನ್ನೋದಕದಾನ ಖ್ಯಾತಿಯ ಕೇಳಿ ಇಲ್ಲಿಗೆ ಬಂದೆನು ಎನ್ನಲಾಗಿ; ರಾ 

ಯನು ಅಲ್ಲಿ ಏನತಿಶಯವೆಂದು ಕೇಳಿದುದಕ್ಕೆ ಅವನು (ಆದೇಶದಲ್ಲಿ) 

1 ಪಂಚಮದ 1 ಗಿರಿಯ ಬಳಿಯಲ್ಲಿರುವ ದಧೀಚೆ ಮುನಿಯಾಕ್ರಮದಲ್ಲಿ ದಿನ 

ಚಂದ್ರನೆಂಬ ಮುನಿ ಬಹುಕಾಲ ಈತನ ಕುರಿತು ತಪಸ್ಸ ಮಾಡಲಾಗಿ, 

ಈಶ ಪ್ರತ್ಯಕ್ಷವಾಗಿ--ನಿನಗೆ ಬೇಕಾದ ವರವ ಕೇಳು ಎನ್ನಲಾಗಿ; ಆ 

ಮುನಿ ತನ್ನ ಭಜಿಸಿದವರಿಗೆ ಕೇಳಿದುದ ಕೊಡುವಂಥ ವರವ ಪಾಲಿಸಬೇಕೆಂ 

ದು ಕೇಳಲಾಗಿ; ಅದೇಮೇರೆಗೆ ಈಶ ವರವನ್ನಿತ್ತು ಆ ಮುನಿಯ 2ಪಾತಾ 

ಳಲೋಕದಲ್ಲಿರಿಸಿ,2 ಅವನ ಸುತ್ತ ಏಳುಸುತ್ತಿನ ಕೋಟೆಯ - ನಿರ್ಮಿಸಿ, 

ಅದಕ್ಕೆ ಸೂಚೀದ್ವಾರದ ಬಾಗಿಲುಗಳು ಮಾಡಿ, ಒಂದನೆಯ ಸುತ್ತು ಬಾ 

ಗಿಲಲ್ಲಿ ವಜ್ರದುಂಬಿಯನಿರಿಸಿ, ಎರಡನೆಯ ಸುತ್ತು ಬಾಗಿಲಲ್ಲಿ 3ವಿಷವ3 

ನ್ನಿರಿಸಿ, ಮನೆಯ ಸುತ್ತು ಬಾಗಿಲಲ್ಲಿ ಕಾಲರಾಕ್ಷಸನನಿರಿಸಿ, ನಾಲ್ಕನೆ 

ಯ ಸುತ್ತಿನ ಬಾಗಿಲಲ್ಲಿ ಬಡಬಾಗ್ನಿಯನಿರಿಸಿ, ಐದನೆಯ ಸುತ್ತಿನ ಬಾಗಿ 

ಲಲ್ಲಿ ಪುಲಿ ಸಿಂಹವನಿರಿಸಿ, ಆನೆಯ ಸುತ್ತಿನ ಬಾಗಿಲಲ್ಲಿ ಭೇತಾಳನನಿರಿಸಿ, 

ಏಳನೆಯ ಸುತ್ತಿನಲ್ಲಿ 4ಜಲಪ್ರಳಯವ4 ಪುಟ್ಟಿಸಿ, ಅಲ್ಲಿಗಾರ ಪೋಗದಂತೆ 

ಮಾಡಿ, ಈಶ ಪೋದನು, ಆ ಬಳಿಕ ಇಂಥ ದುಸ್ತರವಾದುದಲ್ಲಿ ಅದಿನ 

ಚಂದ್ರಮುನಿ ಇರುತ್ತಿದ್ದಾನೆಂದು ಹೇಳಿದುದ ರಾಯ ಕೇಳಿ, ಅಕ್ಷಣವೇ 

ಅದ ನೋಡಬೇಕೆಂದು, ಆ ವಿಪ್ರನ ಕರೆದುಕೊಂಡು ಖೇಚರಮಾರ್ಗದಲ್ಲಿ 

ಹೋಗಿ, ಭೇತಾಳನ ವರವುಂಟಾದುದರಿಂದ ಆ ಸೂಚಿದ್ವಾರದ ಬಾಗಿ 

ಲಲ್ಲಿ ಹೊಕ್ಕು, ಕೋಟೆ ಯೇಳುಸುತ್ತನ್ನೂ ದಾಂಟ, ಆ ಮುನಿಯ ಬಳಿಗೆ 

................

 1. ಚ೦ಪಮಾ. 

 2, ಪಾತಾಳಲೋಕದಲ್ಲಿರು ಎಂದು ಹೇಳಿ ಸೂಚೀದ್ವಾರದಷ್ಟು ಬಿಲದ್ವಾರ 

 ವಂ ಮಾಡಿ, ಮಾರ್ಗವಂ ಅದಕ್ಕೆ. 3, ವಿಷಗಾಳಿ. 4. ಜಲದಾಳಿಯ



೯೪------------------ಕರ್ಣಾಟಕ ಕಾವ್ಯಕಲಾನಿಧಿ.----------------------------


ಹೋಗಿ ವಂದಿಸಲಾಗಿ; ಆ ಮುನಿಯು ರಾಯನ ಕಂಡು ವಿಸ್ಮಿತನಾಗಿ-- 

ಇಂಥ ಅಸಾಧ್ಯಸ್ಥಳಕ್ಕೆ ಹೇಗೆ ಬಂದೆ ? ನಿನ್ನ ಹೆಸರೇನು ? ಎಂದು ಕೇಳ 

ಲಾಗಿ; ತಾನು ವಿಕ್ರಮಾದಿತ್ಯರಾಯನೆಂದು ಹೇಳಲಾಗಿ; ಆ ಮುನಿಯು 

ಸಂತೋಷಪಟ್ಟು ಸಮೀಪದಲ್ಲಿ ಕುಳ್ಳಿರಿಸಿಕೊಂಡು ಇಂತೆಂದನು :--ಕೇಳೈ 

ರಾಯನೇ ! ನನ್ನಲ್ಲಿಯ ಯಾರು ಒಂದು ಬೇಕಾದುದ ಕೇಳಿದರೆ ಕೊಡುವಂತೆ 

ಶಿವನ ವರವ ಪಡೆದಿರುವೆ. ಈವರೆಗಿಲ್ಲಿಗಾರೂ ಬರಲಿಲ್ಲ ಎಂದು ಚಿಂತಿಸು 

ತಿದ್ದೆನು, ನೀನು ಮಹಾಪುರುಷನಾದಕಾರಣ ಇಲ್ಲಿಗೆ ಬಂದೆ. ನಿನಗೆ ಬೇ 

ಕಾದರ್ಥವ ಬೇಡು ಎನ್ನಲಾಗಿ; ಸ್ವಾಮೀ, ನನಗೆ ನಿಮ್ಮ ಕಟಾಕ್ಷದಿಂದ ಸಕ 

ಲೈಶ್ವರ್‍ಯ ಭೋಗಭಾಗ್ಯ, ಮಂದಿ, ಮಾರ್ಬಲ ಯಾವತ್ತೂ ಸಂಪೂರ್ಣವಾಗಿ 

ಇರುವುದು. ನಾನು ಇನ್ನೇನ ಬೇಡುವೆನು ಎನ್ನಲು ; ಆ ಮಾತಿಗೆ ಆ 

ಮುನಿ ನೀನು ಬಹುಪ್ರಯಾಸಪಟ್ಟು ನಮ್ಮಲ್ಲಿ ಬಂದು ಸುಮ್ಮನೆ ಹೋಗ 

ಬಾರದೆಂದು ಚತುರಂಗಸೇನೆ ಕೊಡುವುದೊಂದು ರತ್ನ, ಬೇಕಾದಷ್ಟು 

ದ್ರವ್ಯ ಕೊಡುವುದೊಂದು ರತ್ನ ; ಮೃಷ್ಟಾನ್ನ ಕೊಡುವುದೊಂದು ರತ್ನ, 

ಈ ಮೂಲ ರತ್ನದ ಪರೀಕ್ಷೆ ಪೇಳಿ ಕೊಟ್ಟು ಕಳುಹಿಸಲಾಗಿ; ರಾಯ 

ರತ್ನಂಗಳ ತೆಗೆದುಕೊಂಡು, ಅಲ್ಲಿಂದ ಆ ಸೂಚಿದ್ವಾರದ ಬಾಗಿಲಲ್ಲಿ 

ಹೊಕ್ಕು ಇಲ್ಲಿಗೆ ಹೊಟುಬರುವ ದಾರಿಯಲ್ಲಿ ಒಬ್ಬ ಅರಸು ದಾಯಾದಿ 

ಗಳಿಂದ ರಾಜ್ಯಭ್ರಷ್ಟನಾಗಿ ಗ್ರಾಸಕ್ಕಿಲ್ಲದೆ ಸತಿ ಸುತರು ಸಮೇತ ಅರಣ್ಯ 

ದಲ್ಲಿ ಅಗ್ನಿ ಪ್ರವೇಶಕ್ಕೆ ನಿಶ್ಚಯವಾಗಿ ಅಗ್ನಿ ಕುಂಡಕ್ಕೆ ಅಗ್ನಿಯ ಹಾಕಿ 

ಇರುವುದ ಕಂಡು, ಕನಿಕರಪಟ್ಟು ರಾಯ-ನೀವು ಅಗ್ನಿಪ್ರವೇಶವ ಮಾಡ 

ಕಾರಣವೇನೆಂದು ಕೇಳಲಾಗಿ; ಆ ಅರಸು ಇಂತೆಂದನು ನಾನು ಅಂಗದೇ 

ಶದ ಅರಸು ; ದಾಯಾದಿಗಳು ಹೆಚ್ಚಿ ರಾಜ್ಯಕೊಳ್ಳಲಾಗಿ, ನಿರ್ವಾಹವಿಲ್ಲದೆ 

ಅಲ್ಲಿಂದ ಈ ಅರಣ್ಯಕ್ಕೆ ಬಂದು ಅಗ್ನಿಪ್ರವೇಶಕ್ಕೆ ನಿಶ್ಚೈಸಿ ಇದ್ದೇನೆ. 

ಹೀಗಿರುವ ಬ್ರಹ್ಮಲಿಖಿತವ ಮೀರಲಳವೇ ? ಎಂದು ವ್ಯಾಕುಲಪಡುತ್ತ 

ಹೇಳಿದ ಆ ಅರಸಿನ ಮಾತ ಕೇಳಿ, ರಾಯನು ಕರುಣಚಿತ್ತನಾಗಿ ಅಂಜ 

ಬೇಡವೆಂದು ಅಭಯವಿತ್ತು, ದಿನಚಂದ್ರಮುನಿ ತನಗೆ ಕೊಟ್ಟ ಮೂರು 

ರತ್ನವ ಕೊಟ್ಟು, ರತ್ನ ಪರೀಕ್ಷೆ ಪೇಳಿ, ಸಂತೈಸಿ ಕಳುಹಿಸಿ, ಇಲ್ಲಿಗೆ 

ಬಂದು, ಇದ ಪೇಳಿದ ಬ್ರಾಹ್ಮಣನಿಗೆ ಕೋಟ ದ್ರವ್ಯ ಕೊಟ್ಟು ಕಳುಹಿಸಿ, 



------------------------ಬತ್ತೀಸಪುತ್ರ ಕಥೆ.----------------------೯೫ 


ತಾನು ಸುಖವಾಗಿದ್ದನು-ಎಂದು ಮದನಮೋಹಿನಿಯು ನುಡಿಯಲಾಗಿ; 

ಭೋಜರಾಜನು ಆಶ್ಚ ರ ಚಿತ್ತನಾಗಿ, ತನ್ನ ಅರಮನೆಯ ಪೊಕ್ಕನು. 


ಇಂತು ಕರ್ಣಾಟಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತೆಯಲ್ಲಿ 

ಮದನಮೋಹಿನಿಯೆಂಬ ಪುತ್ತಳಿ ಹೇಳಿದ ಇಪ್ಪತ್ತೊಂದನೆಯ ಕಥೆ, 

........

೨೨ ನೆಯ ಕಥೆ.


ಇಪ್ಪತ್ತೆರಡನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ 

ರ್ಚನೆ ಮಾಡಿ ಭೋಜನ ತಾಂಬೂಲವ ತೀರಿಸಿಕೊಂಡು, ನವರತ್ನಾಭರಣಾ 

ಲಂಕೃತನಾಗಿ, ಎಂದಿನಂತೆ ಚಿತ್ರಶರ್‍ಮನ ಕೈಲಾಗಿನಿಂದ ಆ ಸಿಂಹಾಸನದ 

ಬಳಿಗೆ ಬಂದು, ಬಲಗಾಲ ನೀಡುವ ಸಮಯದಲ್ಲಿ ಇಪ್ಪತ್ತೆರಡನೆಯ 

ಸೋಪಾನದ ಪದ್ಮನಯನೆಯೆಂಬ ಪುತ್ತಳಿಯು-ಹೋಹೋ ! ನಿಲ್ಲುನಿಲ್ಲು 

ನನ್ನೊಡೆಯ ವಿಕ್ರಮಾದಿತ್ಯರಾಯನಂತೆ ಸಾಹಸೌದಾರ್‍ಯ ಗುಣಗಳುಳ್ಳಡೆ 

ಈ ಸಿಂಹಾಸನವನೇಲು, ಇಲ್ಲವಾದರೆ ಕೆಲಸಾರು ಎಂದು ಧಿಕ್ಕರಿಸಲಾಗಿ 

ಭೋಜರಾಜನು ಖಿನ್ನನಾಗಿ ಬೇರೆ ಸಿಂಹಾಸನದಲ್ಲಿ ಕುಳಿತು, ಚಿತ್ರಶ 

ರ್ಮನಿಂದ ಹೇಳಿಸಿದ ಕಥೆ :--


ಎಲೈ ಪುತ್ತಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ರಾಯ ಸುಖ 

ರಾಜ್ಯವ ಗೆಯ್ಯುವಲ್ಲಿ ಒಂದು ದಿನ ಚತುರಂಗಬಲ ಸಹಿತ ರಾಜಬೀದಿಯಲ್ಲಿ 

ಸ್ವಾರಿಯು ಹೊರಟು ಬರುವಲ್ಲಿ, ಗೊಲ್ಲಗೇರಿಯಿಂದ ಗೊಲ್ಲತಿಯರು 

ಹಾಲು ಮೊಸನ ಹರವಿಗಳಂ ಹೊತ್ತು ಬರಲಾಗಿ, ಅವರ ಕಂಡು 

1 ಎಣ್ಣೆಯ ಹರವಿಗಳೆಂದು1 ಮೈಗಾವಲ ಜನರು ಅವರ ಬಡಿಯ ಹೋಗಲಾ 

ಗಿ, ಅವರು ಅಂಜಿಕೊಂಡು ಬೇಗ ಓಡಿಹೋಗುವಾಗ, ಒಬ್ಬೊಬ್ಬರು ತೊ 

ಡರಿಕೊಂಡು ಹೊತ್ತಿದ್ದ ಹರವಿಗಳ ಎತ್ತಿಹಾಕಿ, ಮೊಸರು ಎಲ್ಲ ಚಲ್ಲಿ 

ಹೋದಕಾರಣ ಅವರೆಲ್ಲಾ ದುಃಖಪಡುತ್ತಿರುವಲ್ಲಿ ಅವರಲ್ಲೊಬ್ಬಳು 

ಸ್ತ್ರೀ ನಗುತ್ತಿರುವುದ ಕಂಡು, ಅವಳ ಕರೆಸಿ--ಎಲ್ಲಾ ಸ್ತ್ರೀಯರೂ 

ರೋದಿಸುವುದೇನು ? ನೀನೊಬ್ಬಳು ನಗುವುದೇನೆಂದು ರಾಯನು ಕೇಳ 

.....................

ಪಾ-1, ಎಣ್ಣೆಯಹರವಿಯ ಕಾಣಬಾರದು. ಅವಶಕುನವೆಂಬ ನೀತಿಯುಂಟಾಗಿ,



೯೬---------------ಕರ್ಣಾಟಕ ಕಾವ್ಯಕಲಾನಿಧಿ. -----------------------------


ಲಾಗಿ; ಅವಳಂತೆಂದಳು:--ಕೇಳೈ ರಾಯನೇ ! ಮೊದಲು ಕಷ್ಟಪಟ್ಟುದಕ್ಕೆ 

ದುಃಖಪಡಲಿಲ್ಲ ; ಈ ಹಾಲು ಮೊಸ ಚೆಲ್ಲಿ ಹೋದರೆ ಇದಕ್ಕೆ ರೋ 

ದನ ಪಡುವೆನೇ ? ಎನ್ನಲಾಗಿ; ರಾಯ-ನೀಮುನ್ನ 1ಕಷ್ಟಪಟ್ಟುದೇ1 ನೆಂದು 

ಕೇಳಿದುದಕ್ಕೆ ಅವಳಂತೆಂದಳು :- ಕೇಳೈಯಾ ರಾಯನೇ ! ಹೇಮಾವತಿ 

ಯೆಂಬ ಪಟ್ಟಣದ ಅರಸು ಸಿಂಹಸೇನನ ಬಳಿಯಲ್ಲಿ ವರ್ತಕನಾಗಿ ಇದ್ದ 

ರತ್ನದತ್ತನ ಹೆಂಡತಿಯಾಗಿ ಮೊದಲು ನಾನು ಇದ್ದೆ; ನನ್ನ ಹೆಸರು ಚಂದ್ರ 

ರೇಖೆ. ನನಗೆ ಮಕ್ಕಳಿರಲಿಲ್ಲವಾಗಿ ಅಪಟ್ಟಣದ ಕಾಳಿಕಾದೇವಿಗೆ ಹರಕೆಮಾ 

ಡಿಕೊಂಡಕಾರಣ ಬಳಿಕ ಪುತ್ರನ ಪಡೆದು ಒಂದುದಿನ ದೇವಿಯ ಹರಕೆಯ 

ನೊಪ್ಪಿಸಿ ರಾಜಬೀದಿಯಲ್ಲಿ ಬರುವಲ್ಲಿ, ಅಸಿಂಹಸೇನನೆಂಬ ಅರಸು ನನ್ನ 

ಕಂಡು ನನ್ನ ರೂಪಲಾವಣ್ಯಕ್ಕೆ ಮನಸೋತು, ತನ್ನ ದೂತಿಯರ ಕಳು 

ಹಿಸಿ, ನನ್ನ ಒಡಂಬಡಿಸಲು ಕರೆಯಬಿಡಲಾಗಿ ನಾನು ಅಲ್ಲಿಗೆ ಹೋದರೆ 

ಪಾತಿವ್ರತ್ಯ ಭಂಗವಾದೀತೆಂದು ಹೋಗದಿರಲಾಗಿ ; ಆ ಅರಸು ಕಾಮೋ 

ದ್ರೇಕದಿಂದ ದುರಾಲೋಚನೆಯ ಮಾಡಿ, ನನ್ನ ಪತಿಯಾದ ರತ್ನದತ್ತನ 

ಕರೆಸಿಕೊಂಡು--ನೀನು ದೀಪಾಂತರಕ್ಕೆ ಹೋಗಿ ರತ್ನಗಳ ತೆಗೆದುಕೊಂ 

ಡು ಬಾಯೆಂದು, ಅನೇಕ ದ್ರವ್ಯವ ಕೊಟ್ಟು ಪಯಣವ ಮಾಡಿ ಕಳು 

ಹಿದ ಬಳಿಕ ; ಪುನಃ ತನ್ನ ದೂತಿಯರ ನನ್ನ ಹತ್ತಿರಕ್ಕೆ ಕಳುಹಿಸಿ-ಸು 

ಮ್ಮನೆ  ಬಂದರೆ ಸರಿ. ಇಲ್ಲದಿದ್ದರೆ ಬಲಾತ್ಕಾರದಿಂದ ಹಿಡಿದುಕೊಂಡು ಬರ 

ಹೇಳಲಾಗಿ; ಬಂದ ದೂತಿಯರು ಹೇಳಿದ ಮಾತ ಕೇಳಿ, ಹೋಗದಿದ್ದರೆ 

ಮಾನಕ್ಷತಿಯಾದೀತೆಂದು ತಿಳಿದು ಇಂತೆಂದೆನು-ಎಲೆ ದೂತಿಯರಾ ! ಅದಾ 

ಗ್ಗೂ ಅರಸನ ಬಂಡಾರದ ಬೀಡಿಗೆ ಬಂದಿರ ಹೇಳಿ, ನಾನಾರೂ ಕಾಣದಂತೆ 

ಬರುವೆನೆಂದು ಹೇಳಿ, ಆ ದೂತಿಯರ ಕಳುಹಿಸಿ, ಆದಿನ ರಾತ್ರಿ ನನ್ನ ಮನೆ 

ಯಿಂದ ಹೊರಟು ರಾಜಬೀದಿಯಲ್ಲಿ ಹೋಗುತ್ತಿರುವಲ್ಲಿ ಒಬ್ಬ ಪುರುಷನ 

.........

ಪಾ-1, ಪಟ್ಟಭಂಗವೇ. 2. ದೂತಿಯರು ಬಂದು ಈ ವೃತ್ತಾಂತವ ಪೇಳಲು 

ತಾನು ಒಪ್ಪದೆ ಇರಲು, ಮತ್ತು ಬಲಾತ್ಕಾರದಿಂದ ಹಿಡಿತನ್ನಿರಿ ಎಂದು 

ದೂತರ ಕಳುಹಲು, ಪತಿವ್ರತಾಭಂಗವಹುದೆಂದು ತಿಳಿದು, ಪತಿವ್ರತಾ 

ಭಂಗವಾದಮೇಲೆ ಸ್ಟೇಚ್ಛೆಯ ತರಬೇಕಲ್ಲದೆ ಈ ಪ್ರಾಪ್ತಿ ತಪ್ಪದು. 

ಕಳವೇತಕ್ಕೆಂದು ನನ್ನಲ್ಲಿ ನಾನೇ ಯೋಚಿಸಿಕೊಂಡು,



------------------------ಬತ್ತೀಸವುಳಿ ಕಥೆ----------------------------೯೭  


 ಕಂಡು, (ಅವನಿಗೆ ಮನಸೋತು) ಅವನ ಕರೆದು-ಎಲೈ ಪುರುಷನೇ ! 

 ನನ್ನ ಮನೆಯಲ್ಲಿ ಬಹಳ ದ್ರವ್ಯವಿದೆ. ಅದ ತೆಗೆದುಕೊಂಡು ಬರುತ್ತೇನೆ. 

 ನೀನೂ ನಾನೂ ಗಂಡಹೆಂಡರಾಗಿ ದೂರದೇಶದಲ್ಲಿರುವ-- ಎಂದು ಹೇಳಿದ 

 ಮಾತಿಗೆ ಒಡಂಬಟ್ಟುದರಿಂದ ನಾನು ಬರುವ ತನಕ ನೀನು ಊರಮುಂದೆ 

 ಇರುವ ಕಾಳಿಕಾದೇವಿಯ ಗುಡಿಯಲ್ಲಿರು, ಎಂದು ಹೇಳಿ, ಅವನ ಕಳು 

 ಹಿಸಿ, ಅರಮನೆಗೆ ಹೋಗಿ, ಅರಸಿನ ಸಂಗಡ ಮೋಸಗಾರಿಕೆಯಲ್ಲಿದ್ದು, 

 ಅರಸು ಮರೆತು ಮಲಗಿರುವ ವೇಳೆ ನೋಡಿ, ದೊಡ್ಡ ಕಲ್ಲ ಶಿರದ ಮೇಲೆ 

 ಎತ್ತಿಹಾಕಿ, ಅರಸನ ಕೊಂದು, ಬಂಡಾರದಲ್ಲಿ ಇದ್ದ ಒಡವೆ ಹಣ ಮೊದ 

 ಲಾಗಿ ಬೇಕಾದಷ್ಟು ತೆಗೆದುಕೊಂಡು, ಊರ ಮುಂದಣ ಕಾಳಿಕಾದೇವಿಯ 

 ಗುಡಿಗೆ ಬಂದು, ಆ ಪುರುಷನ ನೋಡಲಾಗಿ-- ಅವನು ಹಾವು ಮುಟ್ಟಿ ಮೃತ 

 ನಾಗಿರುವುದ ಕಂಡು ನಾನು ಊರೊಳಗೆ ಹೋಗಿ ಮನೆಯಲ್ಲಿ ಇದ್ದರೆ 

 ಅರಸನ ಕೊಂದವಳಿವಳೆಂದು ದೂತಿಯರು ದೂರುಮಾಡಿಯಾರು ಎಂದು 

 ಆ ಪಟ್ಟಣವ ಬಿಟ್ಟು, ರತ್ನಾವತಿಯಂಬ ಪಟ್ಟಣವ ಸೇರಿ, ಅಲ್ಲಿ ವೇಸಿ 

 ಯಾಗಿರಲಾಗಿ ; ಅತ್ತಲಾಬಳಿಕ ಅರಸು ಸತ್ತ ಸುದ್ದಿಯ ದೂರದಲ್ಲೇ 

 ಕೇಳಿ, ನನ್ನ ಗಂಡನಾದ ರತ್ನದತ್ತ ಆಪಟ್ಟಣಕ್ಕೆ ಬಂದು, ಮನೆಯಲ್ಲಿ 

 ನನ್ನ ಕಾಣದೆ, ವಿಚಾರಿಸಿ, ಬಳಿಕ ಮತ್ತೊಬ್ಬಳ ಮದುವೆಯಾಗಿ, ನನ್ನ 

 ಮಗ ಸಹಿತ ಇರುತಿದ್ದನು. ಕೆಲವು ದಿನದ ಮೇಲೆ ಆ ಮಗ ದೊಡ್ಡವ 

 ನಾಗಿ ಬಲು ಜಾಣನಾಗಿ ಅನೇಕ ದ್ರವ್ಯ ಸಂಪಾದಿಸಿ ಅಲ್ಲಿಂದ ವ್ಯಾಪಾರ 

 ನಿಮಿತ್ತ ರತ್ನವತಿಗೆ ಬಂದು, ನನ್ನ ಕಂಡು, ನನ್ನ ಮನೆಗೆ ಬಂದು, ಬಹಳ 

 ದ್ರವ್ಯವ ಕೊಟ್ಟು, ಮಂಚದ ಮೇಲೆ ಕುಳಿತುಕೊಳ್ಳಲಾಗಿ; ನಾನು ಸಮೀ 

 ಪದಲ್ಲಿ ಕುಳಿತುಕೊಂಡು ವೀಳ್ಯ ಮಡಿಸಿಕೊಟ್ಟು, ಮುದ್ದುಗೈದು, ಆಲಿಂಗನ 

 ಮಾಡಿದಲ್ಲಿ-- ನನ್ನ ಸ್ತನಗಳಿಗೆ ಹಾಲುದುಂಬಲಾಗಿ-- ಮಕ್ಕಳ ಮೇಲಣ ಮೋ 

 ಹದಂತೆ ಇದೇನಾಶ್ಚರ್‍ಯವೆಂದು, ಕಡೆಗೆ ಸೇರಿ, ಕುಳಿತು, ಇಂತೆಂದು 

 ಕೇಳಿದೆನು:- ನೀನು ಯಾವ ದೇಶ ? ಯಾರ ಮಗ ? ಇಲ್ಲಿಗೆ ಏನು 

 ಕಾರಣ ಬಂದೆ ? ಎನ್ನಲಾಗಿ ; ಅವನು ನಾನು ಹೇಮಾವತಿಯೆಂಬ ಪಟ್ಟ 

 ಣದ ವರ್ತಕನಾದ ರತ್ನದತ್ತನ ಮೊದಲನೆಯ ಹೆಂಡತಿಯ ಮಗ, ವ್ಯಾಪಾ 

 ರನಿಮಿತ್ತವಾಗಿ ಇಲ್ಲಿಗೆ ಬಂದೆ ಎಂದ ಮಾತ ಕೇಳಿ, ಅವ ನನ್ನ ಮಗನೆಂದು 



೯೮----------------------ಕರ್ಣಾಟಕ ಕಾವ್ಯಕಲಾನಿಧಿ.---------------------------


ತಿಳಿದು, ಅವ ಕೊಟ್ಟ ಹಣವ ಹಿಂದಕ್ಕೆ ಕೊಟ್ಟು, ಕಳುಹಿಸಿ ಬಿಟ್ಟು, ಆ ಬೆಳ 

ಗಾಗಿ ಹಿರಿಯರಾದ ಭೂಸುರೋತ್ತಮರ ಬಳಿಗೆ ಹೋಗಿ, ಕೇಳಲಾಗಿ-- 

ಈ ಪಾಪಕ್ಕೆ ಮರಣ ಪ್ರಾಯಶ್ಚಿತ್ತವೆಂದು ಅವರು ಹೇಳಿದುದ ಕೇಳಿ, 

ಬಂದು, ನನ್ನಲ್ಲಿದ್ದ ಸರ್ವವನ್ನೂ ಬ್ರಾಹ್ಮಣರಿಗೆ ದಾನವ ಕೊಟ್ಟು, ಆ 

ಬಳಿಕ ಅರಣ್ಯದಲ್ಲಿ ಒಂದು ಹುಣಿಸೆಯ ಮರದ ಪೋಟೆಗೆ ಕಾಡ ಬೆರಣಿ 

ತುಂಬಿಸಿ, ಅದು ಮಧ್ಯದಲ್ಲಿ ಕುಳಿತುಕೊಂಡು, ಬೆಂಕಿಯ ಹಾಕಿಸಲಾಗಿ ;

ಮೆಯ್ಯು ಬೆಯುತ್ತ ಬರುವಲ್ಲಿ ; ದೊಡ್ಡ ಮಳೆಯು ಬಂದು, ಬೆಂಕಿಯಾ 

ರಿಹೋಗಿ ದೇಹದ ಕೆಲಭಾಗವು ಬೆಂದು ಕೆಲವು ಬೇಯದೆ ಆ ನೋವಿನಲ್ಲಿ 

ಇರುವಲ್ಲಿ; ಒಬ್ಬ ಗೊಲ್ಲನಾಯಕ ಅಲ್ಲಿಗೆ ಬಂದು, ಕಂಡು, ನನ್ನ ಕರೆದು 

ಕೊಂಡು ಹೋಗಿ, ಆರೈಕೆ ಮಾಡಿದ ಕಾರಣ, ಅವನ ಸತಿಯಾದೆ. ಕೇಳೈ 

ರಾಯನೆ ! ಪಾತಿವ್ರತ್ಯ ಭಂಗವಾದುದಕ್ಕೆ ಅಳಲೋ ? ಹಾದಿ ಪುರುಷನ 

ಗುಡಿಯಲ್ಲಿ ಹಾವು ಕಚ್ಚಿದುದಕ್ಕಳಲೋ ? ಅರಸನ ಕೊಂದುದಕ್ಕಳಲೋ? 

ಮಗನ ಕೂಡೆ ವಿಟಗಾರಿಕೆ ಮಾಡಿ ಒಡವೆ ವಸ್ತು ವೆಚ್ಚವಾದುದಕ್ಕಳಲೋ? 

ಹುಣಿಸೆಯ ಮರದ ಪೋಟೆಯಲ್ಲಿ ದೇಹ ಬೆಂದು ಬೇಯದುದಕ್ಕಳಲೋ ? 

ಗೊಲ್ಲನ ಪತ್ನಿಯಾದುದಕ್ಕಳಲೋ ? ಇಷ್ಟರಲ್ಲಿ ಒಂದಕ್ಕೂ ಅಳಲಿಲ್ಲ. 

ಈ ಹಾಲುಮೊಸರು ಚೆಲ್ಲಿ ಹೋದರೆ ಇದಕ್ಕೆ ಅಳುವೆನೆ ? ಎಂದು 

ನಕ್ಕೆನು-ಎಂದ ಮಾತ ಕೇಳಿ, ರಾಯನು ಮೆಚ್ಚಿ, ಅವಳಿಗೆ ಸವಾ ಲಕ್ಷ 

ದ್ರವ್ಯವ ಕೊಟ್ಟು, ಕಡಿಮೆ ಸ್ತ್ರೀಯರಿಗೆಲ್ಲ ಹಾಲು ಮೊಸರ ಕ್ರಯವ 

ಕೊಡಿಸಿ, ಕಳುಹಿಸಿದನೆಂದುದಕ್ಕೆ ಪದ್ಮನಯನೆ ಯೆಂಬ ಪುತ್ತಳಿ ನಗುತ್ತ 

ಹಾಸ್ಯಗೆಯ್ದು ಹೇಳಿದ ಉಪಕಥೆ:--


ಕೇಳೈಯಾ ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯ ಪಾಲಿಸುವ ವೇಳೆಯಲ್ಲಿ ಬಂದು ದಿನ ಹಿಮವತ್ಪರ್ವತದ ಬಳಿಯಲ್ಲಿ 

ರುವ ಜಯವತಿಯೆಂಬ ಪಟ್ಟಣದ ಅರಸಾದ ಸೋಮದತ್ತನ ದಾಯಾದಿ 

ಗಳು ಆರಾಜ್ಯವಾಕ್ರಮಿಸಿಕೊಂಡ ಕಾರಣ ಆ ಸೋಮದತ್ತನು ರಾಯನ 

ಬಳಗೆ ಬರಲಾಗಿ, ಆತನಿಗೆ ಅರ್ಧಸಿಂಹಾಸನವನ್ನಿತ್ತು ಕುಳ್ಳಿರಿಸಿಕೊಂಡು, 

ಬಂದ ಕಾರವೇನೆಂದು ಕೇಳಲಾಗಿ, ಅರಸು ತನ್ನ ದಾಯಾದಿಗಳಿಂದ ಆದ 

ವರ್ತಮಾನವ ಹೇಳಲಾಗಿ; ಆಗ ಆತನಿಗೆ ಬಿಡದಿಯ ಬಿಡಿಸಿಕೊಟ್ಟು ಇರಿ 



---------------------ಬತ್ತೀಸಪುತ್ತಳಿ ಕಥೆ.--------------------------೯೯


ಸಿಕೊಂಡು ಆಬಳಿಕ ರಾಯ ತನ್ನ ಮಂತ್ರಿಯೊಡನೆ ಇಂತೆಂದನು:-ಶತಾಣಾ 

ಗತರಾಗಿ ಬಂದವರ ಮನ್ನಿಸಿ ರಕ್ಷಿಸದಿದ್ದರೆ ಅನೇಕ ಪಾಪವೆಂಬ ನೀತಿಯಿ

ರುವ ಕಾರಣ ಈಯರಸನ ಪಾಲಿಸಬೇಕೆಂದು ಹೇಳಲಾಗಿ; ಆಮಾತಿಗೆ 

ಸಕಲರೂ ಸಮ್ಮತಿ ಪಟ್ಟು ಹಾಗೆ ಮಾಡಬಹುದು ಎಂದ ಬಳಿಕ ಅಸೋ 

ಮದತ್ತನ ಕರೆಸಿಕೊಂಡುರಾಯ ನಿಮ್ಮ ದೇಶದಲ್ಲಿ ಅತಿಶಯವೇನೆಂದು 

ಕೇಳಲಾಗಿ; ಆ ಅರನಿಂತೆಂದನು-ಹಿಮವತ್ಸರ್ವತಕ್ಕೆ ಮೂಡಲಾಗಿ ಹಸ್ತಗಿರಿ 

ಯರುಗಿನಲ್ಲಿರುವ ಭೈರವನ ಗುಡಿಗೆ ಕೊಂಬಿನ ಕೂಗಿನಲ್ಲಿ ಭೈರವಿಯೆಂಬ 

ಕೊಳವಿದೆ. ಆಕೊಳಕ್ಕೆ ದೇವಕನ್ಯಕೆಯರು ಬಂದು ಜಲಕ್ರೀಡೆಯ 

ನ್ನಾಡಿ ಮಾಡಿ ಆ ಭೈರವನ ಪೂಜೆಸಿ ಪೋಗುವರು- ಎಂದ ಮಾತ ಕೇಳಿ, ರಾಯ 

ಅದ ನೋಡಬೇಕೆಂದು ಆಕ್ಷವೇ ಆಕಾಶಮಾರ್ಗದಲ್ಲಿ ಅಲ್ಲಿಗೆ ಹೋಗಿ, 

ಆ ಕೊಳದಲ್ಲಿ ಸ್ನಾನವ ಮಾಡಿ ಭೈರವನ ಪೂಜಿಸಿ, ಅಲ್ಲಿ ಇರುವಲ್ಲಿ 

ಎಂಟುಮಂದಿ ಸ್ತ್ರೀಯರು ಆಕೊಳದಿಂದ ಮೇಲಕ್ಕೆ ಬಂದು ಕನಕ 

ಪ್ರತಿಮೆಯಂತೆ ಕಣ್ಣಿಗೆ ಕಾಣಿಸಿ ಭೈರವನ ಪೂಜಿಸಿ ಕೊಳದಲ್ಲಿ ಜಲಕ್ರೀಡೆ 

ಯಾಡಿ ಮಾಡಿ ಪೋಗುವುದ ಕಂಡು, ರಾಯನು ಅವರ ಹಿಂದೆ ಹೋಗಲಾಗಿ; 

ಅಲ್ಲೊಂದು ಬಿಲದ್ವಾರವ ಕಂಡು ಅದಲ್ಲಿ ಹೊಕ್ಕು ಪಾತಾಳಲೋಕಕ್ಕೆ 

ಹೋಗಿ, ಅಲ್ಲಿ ಹೇಮಾವತಿಯೆಂಬ ಪಟ್ಟಣದ ಕಾಣಲಾಗಿ; ರಾಯ ಅಲ್ಲಿಗೆ 

ಹೋಗಿ, ಸುವರ್ಣಮಯವಾದ ಕೋಟೆ ಕೊತ್ತಲವ ನೋಡುತ ಒಳಗೆ 

ಹೋಗಲಾಗಿ; ಅಲ್ಲಿರುವ ಗೃಹಗಳು ನವರತ್ನ ರಚಿತವಾಗಿರುವುದಕ್ಕೆ ಆಶ್ಚ 

ರ್ಯಪಡುತ್ತ, ಅರಮನೆಯ ಬಳಿಯಲ್ಲಿ ನಿಂದಿರುವ ರಾಯನ ಬಾಗಿಲ ಕಾವಲ 

ಗಾರರು ಕಂಡು-ನೀವು ಯಾರೆಂದು ಕೇಳಲಾಗಿ; ರಾಯನು ತನ್ನ ವೃತ್ತಾಂ 

ತವ ಹೇಳಲಾಗಿ, ಕಾವಲುಗಾರು ವೇಗವಾಗಿ ಹೋಗಿ ತಮಗೆ ಅರಸಾಗಿ 

ರುವ ವೇದಾವತಿಗೆ ಹೋಗಿ ರಾಯನ ಸಮಾಚಾರವ ಹೇಳಲಾಗಿ; ಅವಳು 

ಕೇಳಿ ಎದುರುಗೊಂಡು ಬಂದು, ರಾಯನ ಕರೆದುಕೊಂಡು ಹೋಗಿ ತನ್ನ 

ಸಿಂಹಾಸನದಲ್ಲಿ ಕುಳ್ಳಿರಿಸಿ, ರಾಯನ ಕುಶಲ ಕ್ಷೇಮವ ವಿಚಾರಿಸಿ, ರಾಯ 

ನಿಗರ್ಘ್ಯಪಾದ್ಯಾಚಮನಂಗಳಿಂದುಪಚರಿಸಿ, ನವರಸ ಭರಿತವಾದ ರಾಗದಿಂ 

ಪಾಡಿ, ರಾಯನ ಮೆಚ್ಚಿಸಿ, ಇಂತೆಂದಳು:-ಎಲೈ ಮಹಾರಾಯನೇ! ನಿನ್ನ ವೀರ 

ವಿತರಣಾದಿ ಉದಾರವ ಕೇಳಿ ನಾನು ನಿನ್ನ ವಿವಾಹವಾಗಬೇಕೆಂದು ಚಿಂತಿ



೧೦೦--------------ಕರ್ಣಾಟಕ ಕಾವ್ಯ ಕಲಾನಿಧಿ.--------------------------


ಸುತ್ತ ಇದ್ದೆ. ನನ್ನ ಪುಣ್ಯದಿಂದ ನೀನೇ ಇಲ್ಲಿಗೆ ಬಂದುದು ಉತ್ತಮವಾ 

ಯಿತು. ಇನ್ನು ಕೈವಿಡಿದು ಪಾಲಿಸೆನ್ನಲಾಗಿ; ರಾಯನಿಂತೆಂದನು:-ನನಗೆ 

ಏಕಪತ್ನೀವ್ರತ, ಅನ್ಯಸ್ತ್ರೀಯರು ಜನನಿಯ ಸಮಾನ. ಆದಾಗ್ಯೂ 

ನನಗೊಬ್ಬ ಸೋದರಳಿಯನಿದ್ದಾನೆ. ಅವನನ್ನು ಮದುವೆಯಾಗು ಎಂದು 

ಹೇಳಲಾಗಿ; ಆ ವೇದಾವತಿಯಿಂತೆಂದಳು:-ನಾರಿಯೆಂದರೆ ಹೆಂಗಸರಿಗೂ 

ಹೆಸರು ; ನಾರಿಯೆಂದರೆ ಬಿಲ್ಲಿನ ನಾರಿಗೂ ಹೆಸರು ; ಆದುದರಿಂದ ನಾರಿ 

ಯೆಂಬ ಹೆಸರಿಗೆ ಒಣಗಿದ ಮರವೂ ಬಿಲ್ಲಾಗಿ ಬಾಗುವುದು. ಪ್ರತ್ಯಕ್ಷ 

ವಾಗಿ ಕಚಕುಚದ ನಾರಿಯರ ಕಂಡು ಮೋಹಿಸದವರು ಯಾರು ? ನೀನು 

ಎಲೈಮಹಾದೃಢಪುರುಷನೆಂದು ಆ ಬಳಿಕ ರಾಯನಿಗೆ ಅಷ್ಟೈಶ್ವರ್‍ಯ ಕೊಡುವಂಥ 

ಎಂಟು ರತ್ನಗಳ ಕೊಟ್ಟು ಕಳುಹಿಸಲಾಗಿ; ರಾಯ ಅಲ್ಲಿಂದ ಬಿಲದ್ದಾರ 

ದಲ್ಲಿ ಮೇಲಕ್ಕೆ ಬಂದು ಖೇಚರಮಾರ್ಗದಿಂದಿಲ್ಲಿಗೆ ಬಂದು ಸೋಮದತ್ತ 

ನಿಗೆ ಆಯೆಂಟು ರತ್ನವ ಕೊಟ್ಟು ಬಲಸಮೇತನಾಗಿ, ದಂಡೆತ್ತಿ ಹೋಗಿ ಆ 

ಸೋಮದತ್ತನ ದಾಯಾದಿಗಳ ಜಯಿಸಿ ಜಯಂತಿಯೆಂಬ ಪಟ್ಟಣವನ್ನು 

ಯಥಾಪ್ರಕಾರವಾಗಿ ಸೋಮದತ್ತನಿಗೆ ಪಟ್ಟಾಭಿಷೇಕವ ಮಾಡಿ ಇರಿಸಿ 

ಬಿಟ್ಟು, ಶರಣಾಗತರಕ್ಷಕನೆಂಬ ಬಿರುದ ಪಡೆದು ಅಲ್ಲಿಂದ ತಾನಿಲ್ಲಿಗೆ 

ಬಂದು ಸುಖವಾಗಿ ಇದ್ದನು.


ಇಂತು ಕರ್ಣಾಟಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಪದ್ಮನಯನೆಯೆಂಬ ಪುತ್ಥಳಿ ಹೇಳಿದ ಇಪ್ಪತ್ತೆರಡನೆಯ ಕಥೆ.

......

ಇಪ್ಪತ್ತು ಮೂರನೆಯ ಕಥೆ.


ಇಪ್ಪತ್ತು ಮನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವ 

ತಾರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು, ಸರ್‍ವಾಭರಣಾಲಂಕೃ 

ತನಾಗಿ, ಭೂರಿ ದಾನಗಳ ಮಾಡಿ, ಚಿತ್ರಶರ್‍ಮನ ಕೈಲಾಗಿನಿಂದ ಆಸ್ಥಾನ 

ಮಂಟಪದ ಸಿಂಹಾಸನದ ಬಳಿಗೆ ಬಂದು, ಬಲಗಾಲ ನೀಡುವ ಸಮಯದಲ್ಲಿ 



------------------------ಬತ್ತೀಸಪುತ್ರ ಕಥೆ.----------------------------೧೦೧ 


ಆ ಸೋಪಾನದ ರತಿರೂಪಿಣಿಯೆಂಬ ಪುತ್ತಳಿ-ಹೋ ಹೋ ! ನಿಲ್ಲು ನಿಲ್ಲು 

ಎಂದು ಧಿಕ್ಕರಿಸಲಾಗಿ; ಭೋಜರಾಯನು ಖಿನ್ನನಾಗಿ ಬೇರೆ ಸಿಂಹಾ 

ಸನದಲ್ಲಿ ಕುಳಿತು, ಚಿತ್ರಶರ್‍ಮನಿಂದ ಪೇಳಿಸಿದ ಕಥೆ:-- 


ಎಲೆ ಪುತ್ತಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ಭೋಜರಾ 

ಯನು ಸುಖರಾಜ್ಯಗೆಯ್ಯುವಲ್ಲಿ ಒಂದು ದಿನ ರತಿದೇವಿಯಂತಿರುವ ತನ್ನ 

ಮಗಳು ಲಲಿತಾಂಗಿ ಬರುವುದ ಕಂಡು,-- ಇವಳಿಗೆ ತಕ್ಕ ವರನಾಗಬೇಕೆಂದು 

ಯೋಚಿಸುತ್ತಿರುವಲ್ಲಿ 1ಸಿಂಹಳ ದ್ವೀಪದ1 ಭುವನೈಕವೀರನೆಂಬ ಅರಸಿನ 

ಮಗ ದಿಲೀಪನೆಂಬವನು ಮಹಾ ಬುದ್ದಿಶಾಲಿ ರೂಪಸ್ಸನೆಂಬುವುದ ಕೇಳಿ, 

ರಾಯನಿಂತೆಂದನು:- 2ಹೆಣ್ಣ ಕೊಡುವಲ್ಲಿ ಕುಲ ಶೀಲ ವಿದ್ಯೆ ಬಳಗ ಯೌವನ  

ಶರೀರದಾರ್ಢ, ಧನವಿರುವುದ ನೋಡಿ, ಈ ಏಳು ಗುಣಗಳಿದ್ದವನಿಗೆ ಹೆಣ್ಣ 

ಕೊಡಬೇಕು; ಮಿಕ್ಕ ಗುಣಗಳೆಲ್ಲಾ ದೈವಾಧೀನವೆಂಬ ನೀತಿಯಿರುವುದು 

ಎಂದು ಹೇಳಿ, ಲಗ್ನ ನಿಶ್ಚಯಮಾಡಿ ಚಪ್ಪರ ಮೇಲುಕಟ್ಟು ಕಟ್ಟಿಸಿ, ನಂಟರಿ 

ಷ್ಟರ ಕರೆಯ ಕಳುಹಿಸಿ, ಸಕಲ ಸಂಭ್ರಮದಿಂದ ರಾಯ ಭೂರಿಯ ಬ್ರಾಹ್ಮ 

ಣರಿಗೆ ಕೊಡುತ್ತಿರುವಲ್ಲಿ ಅವರೊಳಗೊಬ್ಬ ಬ್ರಾಹ್ಮಣೋತ್ತಮ ರಾಯನ, 

ಕೈಯಲಿ ದಾನವ ತೆಗೆಯದೆ ಇರಲವನ ರಾಯ ಕೇಳಿದನು:- ನಾವು 

ಕೊಟ್ಟಂಥ ದಾನ ಎಲ್ಲರೂ ತೆಗೆದುಕೊಂಡುದ ಕಂಡು, ನೀನು ತೆಗೆಯದಿ 

ರುವ ಕಾರಣವೇನೆಂದು ಶಂಕಿಸಿ ಕೇಳಲಾಗಿ; ಅವನಿಂತೆಂದನು:-ಕೇಳೈಯ 

ರಾಯನೇ ! ನಿನಗೆ ಪುತ್ರ ಸಂತಾನವಿಲ್ಲದ ನಿಮಿತ್ತ ನಿನ್ನ ಕೈ ದಾನವ ತೆಗೆ 

ಯಲಾಗದೆಂದ ಮಾತ್ರ ರಾಯ ಕೇಳಿ, ಕೋಪವ ತಾಳಿ, ಅವನ ಊರ 

ಬಿಟ್ಟು ಹೊರಡಿಸಿ ಬಿಡಲಾಗಿ ; ಅವನು ಊರ ಮುಂದಿರುವ ಚಂಡಿಕಾ 

ದೇವಿಯ ಗುಡಿಗೆ ಹೋಗಿ ಬಹು ಕ್ಷುತ್ತಿನಿಂದ ಬಳಲಿ ಇಂತೆಂದನು:-- 

ಹಸಿವು ರೂಪ ಕೆಡಿಸುವುದು, ತಡವ ಮಾಡುವುದು, ಸಂಭೋಗದ ಇಚ್ಛೆ 

ತಪ್ಪಿಸುವುದು, ದೃಷ್ಟಿ ಕಾಣಿಸದಂತೆ ಮಾಡುವುದು, ತಪಸ್ಸ ಕೆಡಿಸುವುದು, 

ಸತಿಸುತರು ಮುಂತಾಗಿ ಎಲ್ಲರಲ್ಲಿಯೂ ಭೇದಗಳ ಹುಟ್ಟಿಸುವುದು, 

....................

ಪಾ -1, ಸಿಂಗದೇಶದ, 2. ಬಲವಿದ್ಯಾಯಾಪಯ ಹೊನ್ನು ಉಂಟಾಗಿ ಶರೀರ

ಭದ್ರವಾಗಿ ಇರುವುದು. ಈ ಏಳು ಗುಣಗಳು ನೋಡಿ ಇದ್ದವನಿಗೆ ಕೊಡ ಬೇಕೇ 

ಹೊರತು,


೧೦೨-----------------ಕರ್ಣಾಟಕ ಕಾವ್ಯ ಕಲಾನಿಧಿ.-------------------------


ಲಜ್ಜೆಯ ಯ ತೋರಿಸುವುದು: ಇಂಥ ಕ್ಷುತ್ತೆನ್ನ ಬಾಧಿಸುತ್ತಲಿದೆ ಎಂದು 

ಪೇಳುತ್ತ ಮೈಮರೆದು, ನಿದ್ರೆಗೆಯುತ್ತ ಮಲಗಿರುವಲ್ಲಿ-ಚಂಡಿಕಾದೇವಿ  

ರಾಯನ ಮಗಳ ವಿವಾಹವ ನೋಡಬೇಕೆಂದು ಮಲಗಿರುವ ಬ್ರಾಹ್ಮಣನ 

ಬಳಿಯಲ್ಲಿ ಬೇತಾಳನ ಕಾವಲಿರಿಸಿ, ಅದೇವಿ ಊರೊಳಗೆ ಹೋದ ಬಳಿಕ, 

ಬೇತಾಳ ಆ ಬ್ರಾಹ್ಮಣನಿಗೆ ಎಚ್ಚರವಾಗದಂತೆ ಎತ್ತಿಕೊಂಡು, ತಾನೂ 

ದೇವಿಯ ಹಿಂದುಗಡೆ ಹೋಗಿ, ಖೇಚರದಲ್ಲಿ ನೋಡುತ್ತಿರಲು-ಲಗ್ನವೇಳೆ 

ಬಂದುದ ಕಂಡು ಮದುವೆಯ ಗಂಡು ಮಲಗಿರುವ ಬಳಿಯಲ್ಲಿ ಈ ಬ್ರಾ 

ಹ್ಮಣನ ಮಲಗಿಸಿ, ಮದವಣಿಗನ ಎತ್ತಿಕೊಂಡು ಬಂದು ಮತ್ತೊಂದು 

ಪಾಳುಗುಡಿಯಲ್ಲಿ ಮಲಗಿಸಿಬಿಟ್ಟು, ಯಥಾಪ್ರಕಾರ ತಾನು ಹೋಗಿ ಆಕಾ 

ಶದಲ್ಲಿ ನೋಡುತ್ತಿರಲಾಗಿ-ಲಗ್ನವು ಬರಲು ಅರಸಾದ ಭುವನೈಕವೀರ 

ಶ್ರುತಿಮಂಡಲನೆಂಬ ವಿಪ್ರನಿಗೆ ತನ್ನ ಮಗನೆಂದು ನವರತ್ನಾಭರಣ ಮುಂ 

ತಾಗಿ ಅಲಂಕರಿಸಿ, ಅಂದಳದಲ್ಲಿ ಕುಳ್ಳಿರಿಸಿಕೊಂಡು, ಮದುವೆಯ ಚಪ್ಪ 

ರಕ್ಕೆ ಕರೆತರುವಲ್ಲಿ ರಾಯನು ಎದಿರುಗೊಂಡು ಹೋಗಿ ಕರೆತಂದು ಶುಭ 

ಮುಹೂರ್ತದಲ್ಲಿ ಧಾರೆಯೆದು ಹೋಮವ ಮಾಡಿಸಿ, ದಂಪತಿಯ 

ಸೆರಗ ಗಂಟಕ್ಕಿ, ಬೇರೆ ಶಯ್ಯಾಗೃಹಕ್ಕೆ ಕಳುಹಿಸಿ ಬಿಡಲಾಗಿ-- ಅಲ್ಲಿ 

ಮಂಚದ ಮೇಲೆ ಕ್ಷುತ್ತಿನಿಂದ ಬಳಲಿ ಕುಳಿತಿರುವ ಪತಿಗೆ ಆಗ ಲಲಿತಾಂಗಿ 

ಸುಗಂಧಾನುಲೇಪನವ ಮಾಡಿ, ಪರಿಮಳಂಗಳ ತೀಡಿ, ಕುಸುಮಂಗಳ 

ಮುಡಿಸಿ, ಅನೇಕವಾಗಿ ಉಪಚರಿಸಿ, ಆಬಳಿಕ ವೀಣೆಯ ತೆಗೆದುಕೊಂಡು,

ಮೋಹನ ಮೊದಲಾದ ರಾಗಗಳ ನುಡಿಸಿ ಪಾಡಿದಾಗ್ಯೂ ಶ್ರುತಿಮಂಡಲ

ಮರುಳುಹಿಡಿದಂತೆ ಸುಮ್ಮನಿರುವುದ ಕಂಡು ಲಲಿತಾಂಗಿ ಯಿಂತೆಂದಳು:-- 

ಮೋಹನವಾದ ಶಯ್ಯಾಮಂದಿರದ ಚಪ್ಪರ ಮಂಚದಲ್ಲಿ ಕುಳಿತು ಪೂರ್ಣ 

ಚಂದ್ರೋದಯದಲ್ಲಿ ನವಮೋಹನಾಂಗಿಯಾದವಳು ವೀಣೆಯ ನುಡಿಸುತ್ತ 

ಕೂಡ ಮಾಡಿದರೆ ಚತುರಪತಿಯಾದವನು ಮಾತನಾಡದೆ ಇರುವುದೇನೆಂದು 

ಬೆಸಗೊಳ್ಳಲಾಗಿ, ಅವನಿಂತೆಂದನು: --ಎಲೆ ಸತಿಯೇ ! ಕ್ಷುತ್ತಿನಿಂದ ಬಳಲಿ 

ರುವಾಗ ಯಾವುದೂ ಸೈರಿಸದು-- ಎಂದ ಮಾತ ಕೇಳಿ,ಆಲಲಿತಾಂಗಿಯಾಕ್ಷಣವೆ 

ಚಿನ್ನದ ಹರಿವಾಣದಲ್ಲಿ ಷಡ್ರಸವಾದ ಪಂಚಭಕ್ಷ್ಯ ಪರಮಾನ್ನವ ತೆಗಿಸಿ 

ಕೊಂಡು ಬಂದು ಮುಂದಿರಿಸಲಾಗಿ- ಅದ ಆಗ ಭೋಜನವ ಮಾಡಿ, 

 



-------------------------ಬತ್ತೀಸಪುತ್ತಳಿ ಕಥೆ.-----------------------------103 


ಬಳಿಕ ವೀಳೆಯವ ಸೇವಿಸಿ, ಸಂಭ್ರಮದಿಂದ ನಾನಾರತಿಗಳ, ಕ್ರೀಡಿಸಿ

ದಂಪತಿಗಳಿಬ್ಬರು ಮೈಮರೆತು ನಿದ್ರೆಗೆಯ್ಯುವಲ್ಲಿ-ಬೇತಾಳ ಮೊದಲ 

ಮದುವೆಯ ಗಂಡನ ತಂದು ಲಲಿತಾಂಗಿಯ ಮಗ್ಗುಲಲ್ಲಿ ಮಂಚದ ಮೇಲೆ 

ಮಲಗಿಸಿ ಆಶ್ರುತಿಮಂಡಲನ ತಂದು ಎಂದಿನಂತೆ ಚಂಡಿಕಾದೇವಾಲಯದಲ್ಲಿ 

ಮಲಗಿಸಿರಲಾಗಿ-ಶ್ರುತಿಮಂಡಲನು ಬೆಳಗ್ಗೆ ಎದ್ದು ರಾತ್ರಿ ತನಗೆ ಭೋಜನ 

ವಾಗಿ ನವರತ್ನಾಲಂಕೃತನಾಗಿ ವಿವಾಹವಾಗಿ, ಸ್ತ್ರೀಸಂಭೋಗ ಮುಂತಾ 

ದುದು ಎಲ್ಲ ಕನಸಾಗಿದೆ ಎನುತ್ತ, ತನ್ನಲ್ಲಿ ತಾನೇ ಆಲೋಚಿಸುತ್ತಿರುವಾಗ, 

ಇಲ್ಲಿ ಲಲಿತಾಂಗಿಯದ್ದು ಮುಖವನೊರಿಸಿಕೊಂಡು, ಕನ್ನಡನಾಗುವಳಿ 

ಯ (?) ನೋಡಿ, ಆಬಳಿಕ ಮಲಗಿರುವನ ಕಂಡು, ರಾತ್ರಿಯ ಕುರ 

ಹೊಂದೂ ಕಾಣದೆ ಅತಿವ್ಯಸನದಿಂದ ತಂದೆಯ ಬಳಿಗೆ ಬಂದು, ತಂದೆಯ 

ಕರೆದುಕೊಂಡು ಹೋಗಿ ಮಲಗಿರುವನ ತೋರಿಸಿ ಈತ ನನ್ನ ಪತಿಯ 

ಲ್ಲವೆಂದು ಹೇಳಲಾಗಿ; ರಾಯ ಕೇಳಿ ವಿಸ್ಮಿತ ತನಾಗಿ-ಎಲೆ ಮಗಳೇ ! ನಿನ 

ಗೆ ಭ್ರಾಂತೆ ? ರಾತ್ರಿ ಮದುವೆಯಾದ ಪುರುಷನ ಹಗಲು ಗುರುತರಿಯದಿ 

ರುವರೆ ? ಎಂದ ಮಾತಿಗೆ ಅಮಗಳಿಂತೆಂದಳು ;-ರಾತ್ರಿ ತಾ ಮಾಡಿದುಪ 

ಚಾರವನ್ನು ಲಜ್ಜೆಯಿಂದ ತಂದೆಗೆ ವಿವರಿಸಿ, ಇದಲ್ಲದೆ ನಾನೊಂದು ಸಮಸ್ಯೆ 

ಹೇಳಿದುದಕ್ಕೆ ಪೂರ್ತಿ ಹೇಳಿದ್ದಾರೆ ಎಂದ ಮಾತ ಕೇಳಿ, ರಾಯ ಮಲಗಿ 

ರುವನ ಏಳಿಸಿ ಕೇಳಲಾಗಿ ಅವ ನಾನೊಂದೂ ಅರಿಯೆನೆಂದುದ ಕೇಳಿ, 

ರಾಯ-ಇದೇನಾಶ್ಚರ್ಯವೆಂದು, ಮಗಳು ಸಮಸ್ಯೆ ಹೇಳಿದುದನೋಲೆಯಲ್ಲಿ 

ಬರೆಸಿ, ಬುದ್ಧಿವಂತ ನಂತನಾದ ಊಳಿಗದವನ ಕರೆಸಿ, ಅವನ ಕೈಯಲ್ಲಿ ಆ ವೋಲೆ 

ಯ ಕೊಟ್ಟು, ಅದರಲ್ಲಿ ಬರೆದಿರುವುದ ಪೂರ್ತಿ ಮಾಡಿ ಯಾವನು ಹೇಳುತ್ತಾ 

ನೋ, ಅವನ ಬಿಡದೆ ಕರೆದುಕೊಂಡು ಬಾ ಎಂದು ನೇಮಿಸಿ, ಕಳುಹಿಸಲಾಗಿ 

ಅಊಳಿಗದವನು ಚೌದಿಕ್ಕಿನಲ್ಲಿಯೂ ಹುಡುಕುತ್ತ, ಓಲೆಯಂ ತೋರು 

ತ್ತ ಬಂದರೂ ಯಾರೂ ಹೇಳದೆ ಇರಲು; ಹಿಂತಿರಿಗಿ ಬರುತ್ತ ಬಾಯಾರಿ 

ಚಂಡಿಕಾದೇವಿಯ ಗುಡಿಯ ಬಳಿಯ ಕೊಳಕ್ಕೆ ಹೋಗಿ, ನೀರ ತೆಗೆದು 

ಕೊಂಡು, ನೆಳಲಲ್ಲಿ ಕುಳಿತಿರಲು; ಆ ಊಳಿಗದವನ ಶ್ರುತಿಮಂಡಲನು 

ಕಂಡು--ನೀನೆಲ್ಲಿಗೆ ಬಂದೆ ? ಎಲ್ಲಿಗೆ ಹೋಗುವೆ ? ಎಂದು ಕೇಳಲಾಗಿ; 

ಅವನು ತಾ ಬಂದ ವೃತ್ತಾಂತವ ಹೇಳಿದುದ ಕೇಳಿ, ಆ ಓಲೆಯ ತೆಗೆದು 



೧೦೪----------------ಕರ್ಣಾಟಕ ಕಾವ್ಯಕಲಾನಿಧಿ.------------------------


ಕೊಂಡು ನೋಡಿ, ಸಮಸ್ಯೆಯ ಪೂರ್ತಿ ಮಾಡಿ ಬರೆದುಕೊಡಲಾಗಿ; ಆ ವೋಲೆ 

ಯ ತಂದು ರಾಯನಿಗೆ ಕೊಡಲಾಗಿ; ರಾಯ ನೋಡಿ ಮಗಳ ಕರೆಸಿ, ಓಲೆ 

ಯ ಕೊಡಲು; ಅವಳು ನೋಡಿ ಕೊಂಡು ಈ ಗುರುತು ನಿಜವೆಂದ ಮಾತ 

ರಾಯ ಕೇಳಿ, ಆಕ್ಷಣ ಆಶ್ರುತಿಮಂಡಲನ ಕರೆತಂದು, ಇಂಥವ ಮಗಳ 

ಪತಿಯಾಗಬಹುದೆಂದು ಸಂತೋಷವ ಮಾಡಿಕೊಂಡು, ಅಳಿಯನ ಮಗ 

ಳ ಅರಮನೆಗೆ ಕಳುಹಿಸಿ, ಬಳಿಕ ಸಿಂಹಳ ದ್ವೀಪದರಸಿನ ಮಗನಿಗೆ 

ಮತ್ತೊಬ ಮಗಳ ಮದುವೆಯ ಮಾಡಿಸಿದನು- ಎಂದ ಮಾತಿಗೆ 

ರತಿರೂಪಿಣಿಯೆಂಬ ಪುತ್ತಳಿ ಹಾಸ್ಯಗೆಯ್ದು ನಗುತ್ತ ಹೇಳಿದ ಉಪಕಥೆ:-- 


ಕೇಳಯ್ಯ ಚಿತ್ರಶರ್ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯವ ಪಾಲಿಸುವ ವೇಳೆಯಲ್ಲಿ ಒಂದುದಿನ ಒಬ್ಬ ಬೇಂಟೆಗಾರ ಯಮು 

ನಾನದಿಗೆ ಹೋಗಿ ಮಾನಿನ ಬೇಂಟೆಯಾಡುತಿರುವಲ್ಲಿ ಒಂದು ಮೊಸಳೆ 

ಅವನ ತಿನ್ನುವುದಕ್ಕೆ ಯತ್ನೀಕರಿಸಿ ಇರುವುದ ಕಂಡವರು ಬಂದು ಆ 

ಬೇಡನ ಹೆಂಡತಿಗೆ ಹೇಳಲಾಗಿ ; ಅವಳು ಓಡಿಬಂದು ರಾಯನಿಗೆ ಹೇಳಿದ 

ಕಾರಣ, ರಾಯ ತೆಗೆದುಕೊಳ್ಳುವ 1ಔಪಾಸನವ1 ಬಿಟ್ಟು ಶೀತಾಳ ಪತ್ರವ 

ತೆಗೆದುಕೊಂಡು ತನ್ನ ಮೊಸಳೆ ಬಡಿದೀತೆಂಬ ಭೀತಿಯಿಲ್ಲದೆ ನೀರಿಗಿಳಿದು 

ಆ ಮೊಸಳೆಯ ಬಾಯ ಸೀಳಿ, ಆ ಬೇಟೆಗಾಂನ ಬಿಡಿಸಲಾಗಿ; ಅವ ಶರಣಾ 

ಗತನಾಗಿ-ಎಲೈ ಮಹಾರಾಯ ! ನಿಮ್ಮಿಂದ ನಾನು ಜೀವದಿಂದುಳಿದೆನು 

ಎಂದು ಸಾಷ್ಟಾಂಗವಾಗಿ ನಮಿಸಲಾಗಿ; ರಾಯ ಅವನಿಗೆ ಕೋಟಿದ್ರವ್ಯವ 

ಕೊಟ್ಟು ಮನ್ನಿಸಿ, ಅಬಳಿಕ ಅವನ ನೀನೇನಾದರೂ ಅತಿಶಯವ ಕಂಡು 

ದುಂಟೆ ? ಎಂದು ಕೇಳಲಾಗಿ ; ಅವನಿಂತೆಂದನು -ಇಲ್ಲಿಗೆ ಬಹುದೂರ 

ದಲ್ಲಿ ಚಂಡಿಕಾದೇವಿಯ ಗುಡಿಯ ಬಳಿಯಲ್ಲಿ ಇರುವ ಕೊಳದ ಗಟ್ಟದೊ 

ಳೊಬ್ಬ ಬ್ರಾಹ್ಮಣ ಮುನಿ ಇಷ್ಟಾರ್ಥವಂ ಪಡೆಯಬೇಕೆಂದು ಬಹುಕಾಲ 

ದಿಂದ ತಪಸ್ಸು ಮಾಡಿದಾಗ್ಯೂ ಆ ದೇವಿಯ ವರವಿಲ್ಲದಿರುವುದಂ ಕಂಡು 

ಇರುವೆನೆಂದು ಹೇಳಿದುದ ಕೇಳಿ, ಅದ ನೋಡಬೇಕೆಂದು ರಾಯ ಅವನ 

ಕರೆದುಕೊಂಡು, ಆ ಕ್ಷಣವೇ ಖೇಚರದಲ್ಲಿ ಅಲ್ಲಿಗೆ ಹೋಗಿ, ಆ ದೇವಿಯ 

ಷೋಡಶೋಪಚಾರದಿಂದ ಪೂಜಿಸಿ ನಮಿಸಲಾಗಿ; ಆ ದೇವಿಯು ಪ್ರಸನ್ನ 

..................

ಪಾ-1, ಆಪೋಶನವ



------------------------ಬತ್ತೀಸಪುತ್ತಳೆ ಕಥೆ.----------------------------೧೦೫ 


ಳಾಗಿ-ಎಲೈ ರಾಯ ! ನಿನ್ನ ಭಕ್ತಿಗೆ ಮೆದೆನು. ನಿನಗೆ ಬೇಕಾದ ವರ 

ಗಳ ಕೇಳಿಕೊ, ಕೊಡುವೆನೆನ್ನಲಾಗಿ ರಾಯನಿಂತೆಂದನು :-ಎಲೌ 

ತಾಯೇ ! ನಿನ್ನ ಕುಂತು ಈ ಬ್ರಾಹ್ಮಣಮುನಿ ಬಹುಕಾಲದಿಂದ ತಪಸ್ಸು 

ಮಾಡಿದ್ದಾನೆ. ಈತನ ಈತನ ಇಷ್ಟಾರ್ಥವ ಸಲ್ಲಿಸಬೇಕೆಂದು ರಾಯ ಕೇಳಿದ 

ನಿಮಿತ್ತ ಚತುರ್ವೇದ ಪುರುಷಾರ್ಥವ ಕೊಟ್ಟು, ನೀನಾವಿಪ್ರನಿಗೆ ಕೊಡು 

ಎಂದು ಹೇಳಿ ದೇವಿ ಮಾಯವಾಗಲು ; ಆಬಳಿಕ ರಾಯನಾಮುನಿಯ ಬಳಿಗೆ 

ಬಂದು-ದೇವಿ ನಿಮಗಿಷ್ಟಾರ್ಥವ ಪಾಲಿಸಿದ್ದಾಳೆ, ತೆಗೆದುಕೊಳ್ಳಿ ಎಂದು 

ಕೊಡಲಾಗಿ ; ಆಮುನಿ ತೆಗೆದುಕೊಂಡು ರಾಯನ ಕೊಂಡಾಡಿ ತನ್ನ ಮಡಿ 

ಚೀಲದಲ್ಲಿದ್ದ ವಿಭೂತಿಯ ರಾಯನಿಗೆ ಕೊಟ್ಟು, ಇದ ಅಂಗಕ್ಕೆ ಲೇಪಿಸಿ 

ದರೆ ಕಾಯಸಿದ್ಧಿಯಾಗುವುದೆಂದು ಹೇಳಲಾಗಿ ; ರಾಯ ಅವಿಭೂತಿಯ ತೆಗೆ 

ದುಕೊಂಡು ಅಲ್ಲಿಂದ ಬರುವ ಮಾರ್ಗದಲ್ಲಿ ಒಬ್ಬ ಅರಸು ಅರಸು ರಾಜ್ಯ 

ಹೋಗಿ ಅಹನ್ಯಹನಿ ಮೆಯ್ಕೆಲ್ಲಾ ಕುಷ್ಟವಾಗಿರುವನ ಕಂಡು ಅವನ ವರ್ತಮಾ 

ನವ ಕೇಳಿ, ಆಗ ಅವನಿಗೆ ಆ ವಿಪ್ರಮುನಿ ಕೊಟ್ಟ ವಿಭೂತಿಯ ಕೊಟ್ಟು, 

ಅವನ ದೇಹ ಶುದ್ದಿಯಾದ ಬಳಿಕ, ಅವನಿಗೆ ಅರ್ಧರಾಜ್ಯವ ಕೊಟ್ಟು, ಅವನ 

ಕಳುಹಿಸಿ, ತಾನಿಲಿ ಗೆ ಬಂದು ಸುಖವಾಗಿದ್ದನು-ಎಂದು ರತಿರೂಪಿಣಿ 

ಪೇಳಲು ; ರಾಯನು ಲಜ್ಜಿತನಾಗಿ ತನ್ನ ಅರಮನೆಗೆ ಪೋದನು. 


ಇಂತು ಕರ್ಣಾಟಕಭಾಷಾವಿರಚಿತವಾದ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ

ರತಿರೂಪಿಣಿಯೆಂಬ ಪುತ್ತಳಿ ಹೇಳಿದ ಇಪ್ಪತ್ತು ಮೂರನೆಯ ಕಥೆ,

.............

ಇವತ್ತು ನಾಲ್ಕನೆಯ ಕಥೆ.


ಇಪ್ಪತ್ತು ನಾಲ್ಕನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವ 

ತಾರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು, ಎಂದಿನಂತೆ ಸಿಂಹಾಸ 

ನದ ಬಳಿಗೆ ಬಂದು, ಬಲಗಾಲ ನೀಡುವ ಸಮಯದಲ್ಲಿ ಆ ಸೋಪಾನದ 

ಹಂಸಗಮನೆಯೆಂಬ ಪುತ್ತಳಿಯು-ಹೋ ! ನಿಲ್ಲು ನಿಲ್ಲು, ನಮ್ಮ 

ವಿಕ್ರಮಾದಿತ್ಯರಾಯನಂತೆ ಸಾಹಸ ವೀರವಿತರಣಗುಣಗಳುಳ್ಳಡೆ ಈ ಸಿಂ 

ಹಾಸನವೇ, ಇಲ್ಲವಾದರೆ ಕೆಲಸಾರು ಎಂದು ಧಿಕ್ಕರಿಸಲಾಗಿ ; ಭೋಜರಾ



೧೦೬----------------ಕರ್ಣಾಟಕ ಕಾವ್ಯ ಕಲಾನಿಧಿ.--------------------------


ಯನು ಖಿನ್ನನಾಗಿ ಬೇರೆ ಸಿಂಹಾಸನದಲ್ಲಿ ಕುಳಿತು, 

ಚಿತ್ರಶರ್‍ಮನಿಂದ ಹೇಳಿಸಿದ ಕಥೆ.


ಎಲೆ ಪುತ್ತಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ರಾಯನು 

ಸುಖರಾಜ್ಯಗೆಯ್ಯುವಲ್ಲಿ ಒಂದು ದಿನ ಆಸಾನದಲ್ಲಿ ಕವಿಗಳು ವಿದ್ವಾಂಸರು 

ಮಂತ್ರಿಗಳು ಮುಂತಾಗಿ ಸಕಲರೂ ಕುಳಿತಿರುವಲ್ಲಿ ರಾಯನಿಂತೆಂದನು:--  

ಕೇಳಿರೈ, ಒಬ್ಬ ಸ್ತ್ರೀ ಇಂದೀವರಾಕ್ಷಿಯಿಂದ ಪವಳದ ಅಧರದಿಂದೊಪ್ಪು 

ವಳ ಮಾರ್ಗದಲ್ಲಿ ಬರುವುದ ಕಳ್ಳರು ಕಂಡು, ಅವಳ ಅಡ್ಡಗಟ್ಟಿ, 

ಸಕಲ ಒಡವೆಗಳ ತೆಗೆದುಕೊಂಡು, ಅಣಿಮುತ್ತಿನ ಮೂಗುತಿಯ ಮಾತ್ರ 

ಬಿಟ್ಟು ಹೋದ ಬಗೆಯೇನೆಂದು ರಾಯನು ಕೇಳಲಾಗಿ; ಆಮಾತಿಗೆ, ಎಲ್ಲರು 

ತಲೆವಾಗಿ ಆಲೋಚಿಸುತ್ತ ಸುಮ್ಮನಿರುವುದ1 ಸಮ್ಮುಖದ ಸೂಳೆ ಪ್ರಭಾ 

ವತಿಯು ಕಂಡು ಇಂತೆಂದಳು -ಕೇಳೋ ರಾಯನೇ ! ಮೇಲೆ ಅವಳ ನೇತ್ರ 

ಇಂದೀವರದಂತೆ ಕಪ್ಪಾಗಿ, ಕೆಳಗೆ ಅವಳ ತುಟಿ ಪವಳದಂತೆ ಕೆಂಪಾಗಿ 

ತೋರೆ, ನೇತ್ರದ ಕೆಳಗಣ ತುಟಿಯ ಮೇಲಣ ಮೂಗುತಿಮುತ್ತು ಕಪ್ಪು 

ಕೆಂಪಾಗಿ ಕಂಡುದರಿಂದ, ಅದು ಗುಣುಗುಂಜೆಯೆಂದು ಅನುಮಾನಪಟ್ಟು, 

ಕಳ್ಳರು ಬಿಟ್ಟು ಹೋದರೆಂದು, ಆವೇಶಿಯು ರಾಯನಿಗೆ ಉತ್ತರ ಕೊಡ 

ಲಾಗಿ ; ರಾಯನು ಮೆಚ್ಚಿ ಅವಳಿಗೆ ಸವಾಲಕ್ಷದ್ರವ್ಯವ ಕೊಟ್ಟು, ಕಳುಹಿ 

ಸಿದನು-ಎಂದ ಮಾತಿಗೆ ಹಂಸಗಮನೆಯೆಂಬ ಪುತ್ತಳ ನಗುತ್ತ ಹಾಸ್ಯಗೆಯ್ದು 

ಪೇಳಿದ ಉಪಕಥೆ:- 


ಕೇಳೈಯ ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯ ಪಾಲಿಸುವ ವೇಳೆಯಲ್ಲಿ ಒಂದು ದಿನ ರಾತ್ರಿ ಕಾಲ ಓಲಗವ ತೀರಿಸಿ 

ಕೊಂಡು ಅರಮನೆಗೆ ಹೋಗಿ ಭೋಜನವ ಮಾಡಿ ಅಂತಃಪುರದ 2ಶಯನ 

ದಾಲಯದೊಳಿರುವ ಚಪ್ಪರಗಾಲ ಶಕುನಿ ತೂಗುವ ಮಂಚದ ಹಾಸಿನಲ್ಲಿ 

ತನ್ನ ಅರಸಿ ಸಮೇತವಾಗಿ ಮಲಗಿ ಇರುವಾಗ, ಬಂದು ಸ್ಪಪ್ನವ ಕಂಡು, 

ಅದ ಮನದಲ್ಲಿ ಜ್ಞಪ್ತಿ ಮಡಗಿದ್ದು, ಬೆಳಗಾದ ಬಳಿಕ ಎಚ್ಚೆತ್ತು ನಿತ್ಯಕ 

ರ್ಮವ ತೀರಿಸಿಕೊಂಡು ಬಂದು, ಓಲಗದಲ್ಲಿ ಕುಳಿತಿರುವ ವೇಳೆಯಲ್ಲಿ– 

.................

ಪಾ-1, ವರರುಚಿ, ಕಾಳಿದಾಸ, ಮಯೂರ ಮೊದಲಾದ ಕವಿಗಳು ಸುಮ್ಮನಿರಲು, 

2. ಸಜೆ ವನೆ.



---------------------------ಬತ್ತೀಸಪುತ್ತಳಿ ಕಥೆ.-----------------------------೧೦೭


ವಿದ್ವಾಂಸ ಕವಿಗಳ ಮುಖವ ನೋಡಿ ರಾಯನಿಂತೆಂದನು :- -ಕೇಳಿರೈಯ ! 

ರಾತ್ರಿ ಮಲಗಿರುವಾಗ ಸ್ವಪ್ನವ ಕಂಡೆ. ಅದೇನೆಂದರೆ-ಎಣ್ಣೆಯೊತ್ತಿಸಿ 

ಕೊಂಡು ಕೋಣನ ಮೇಲೆ ಕುಳಿತು ಬರುತ್ತ ದಾರಿಯಲ್ಲಿ ಅನ್ನವುಣುತ್ತ, 

ತೆಂಕಣ ದಿಕ್ಕಿನಲ್ಲಿ ಓಲಗ ತೆಗೆದುಕೊಳ್ಳುವಂತೆ ಕಂಡೆ. ಇದು ಫಲವೇನು ? 

ಎಂದು ಕೇಳಲಾಗಿ ; ವಿದ್ವಾಂಸ ಕವಿಗಳಿಂತೆಂದರು :-ಕನಸಿನಲ್ಲಿ ಭಂಡಿ, 

ತೊಲೆ, ಅಂದಣ, ಕೋಣ, ಎಣ್ಣೆ, ಬೋಗಾರ, ಕೆಲಸಿ ಮುಂತಾಗಿ ಇದ್ದು 

ದಲ್ಲಿ ಯಾವುದ ಕಂಡರೂ ಹಾನಿಯೆಂದ ಮಾತಿಗೆ ಅವರೊಳಗೊಬ್ಬ ವಿವೇ 

ಕತಿಲಕನೆಂಬವನು- "ಒಳ್ಳೆಯ ಕನಸ ಪ್ರಕಟಮಾಡಬೇಕು; ದುಸ್ಸಪ್ನವ 

ಕಂಡರೆ ಮರೆಸಬೇಕು" ಎಂಬ ನೀತಿಯಿರುವುದರಿಂದ ಈ ಮೇರೆಗೆ ವಿವರಿಸಿ 

ರಾಯರೊಡನೆ ಹೇಳಲಾಗದೆಂದು ಎಲ್ಲರನ್ನೂ ಶಂಕಿಸಿ ಕೇಳಿ, ಆ ಬಳಿಕ ಅವ 

ನು-ಕೇಳೈ ಮಹಾರಾಯನೇ ! ಅಪಮೃತ್ಯು ಪರಿಹಾರಾರ್ಥವಾಗಿ ದಾನಂಗಳ 

ಮಾಡು ಎಂದು ಹೇಳಿದ ನೀತಿಚಾತುರಕ್ಕೆ ರಾಯ ಮೆಚ್ಚಿ, ಆಗ ಪಂಚಲೋ 

ಹಗಳು, ಕರಿತುರಗಗಳು, ಗೋ ಭೂ ಗೃಹಗಳು, ಪಂಚರತ್ನಗಳು, ಸುಗಂಧ 

ಪರಿಮಳ ಮುಂತಾದುವೆಲ್ಲ ದಾನವ ಕೊಟ್ಟು, ಸಭಾಸಾಮಾಜಿಕರಾದ 

ವಿದ್ವಾಂಸಕವಿಗಳಿಗೆಲ್ಲ ಲಕ್ಷ ಲಕ್ಷ ದ್ರವ್ಯವ ಕೊಟ್ಟು, ಆ ವಿವೇಕತಿಲಕ 

ನೆಂಬವಗೆ ಕೋಟಿದ್ರವ್ಯವ ಕೊಟ್ಟು ದುಸ್ಸಪ್ಪ ಶಾಂತಿಯ ಮಾಡಿಕೊಂಡು, 

ಸುಖವಾಗಿ ಇದ್ದನು-ಎಂದು ಹಂಸಗಮನೆ ನುಡಿಯಲು ; ಭೋಜರಾಯನು 

ಲಜ್ಜಿತನಾಗಿ ತನ್ನ ಅರಮನೆಗೆ ಹೋದನು.


ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಹಂಸಗಮನೆಯೆಂಬ ಪುತ್ತಳಿ ಪೇಳಿದ ಇಪ್ಪತ್ತುನಾಲ್ಕನೆಯ ಕಥೆ.

........

೨೫ ನೆಯ ಕಥೆ.


ಇಪ್ಪತ್ತೈದನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ 

ರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು ನವರತ್ನಾಭರಣಾಲಂಕೃತ 

ನಾಗಿ ಎಂದಿನಂತೆ ತನ್ನ ಆಸ್ಥಾನಕ್ಕೆ ಬಂದು ಸಿಂಹಾಸನಕ್ಕೆ ತನ್ನ ಬಲಗಾಲ



೧೦೮----------------------ಕರ್ಣಾಟಕ ಕಾವ್ಯಕಲಾನಿಧಿ.-----------------------


ನೀಡುವ ಸಮಯದಲ್ಲಿ ಆ ಸೋಪಾನದ 1ಇಂದ್ರಜಿತೆಯೆಂಬ1 ಪುತ್ಥಳಿ-- 

ಹೋ ಹೋ, ನಿಲ್ಲು ನಿಲ್ಲು. ನನ್ನೊಡೆಯನಾದ ವಿಕ್ರಮಾದಿತ್ಯರಾಯನಂತೆ 

ಉದಾರ ಸಾಹಸ ಗುಣಂಗಳುಳ್ಳಡೆ ಸಿಂಹಾಸನವನೇರು, ಇಲ್ಲವಾದರೆ ಕೆ 

ಲಸಾರು. ಮೀರಿ ಕುಳಿತರೆ ನಿನ್ನ ತಲೆ ಸಹಸ್ರ ಹೋಳಾಗುವುದು-- ಎಂದು 

ಧಿಕ್ಕರಿಸಿ ನುಡಿಯಲಾಭೋಜರಾಯನು ಶಿರವ ಬಾಗಿಸಿ ಲಜ್ಜಿತನಾಗಿ 

ಬೇರೆ ಸಿಂಹಾಸನದಲ್ಲಿ ಕುಳಿತು ಪ್ರಧಾನಿಯಾದ ಚಿತ್ರಶರ್‍ಮನಿಂದ ಪೇಳಿ 

ಸಿದ ಕಥೆ :-


ಎಲೆ ಪುತ್ತಳಿಯೆ! ಕೇಳು. ಧಾರಾಪುರದಲ್ಲಿ ನಮ್ಮ ಭೋಜರಾ 

ಯನು ಸುಖರಾಜ್ಯಗೆಯುವಲ್ಲಿ ಬಂದುದಿನ ಒಡ್ಡೋಲಗಗೊಟ್ಟು ಕುಳಿತಿ 

ರುವ ಸಮಯದಲ್ಲಿ 2ಹೈಸಳ2 ದೇಶದಿಂದ ಸುಪರಿಕ್ಷಿತನೆಂಬ ಕ್ಷತ್ರಿಯ 

ನೊಬ್ಬನು ಬಂದು ಕಾಣಿಕೆಯನಿಕ್ಕಿ ಪೊಡೆಮಟ್ಟು ರಾಯನ ಕಾಣಿಸಿಕೊಳ್ಳ 

ಲಾಗಿ ; ರಾಯನು ಮರ್‍ಯಾದೆಯಿಂದ ಆತನ ಸಮೀಪದಲ್ಲಿ ಕುಳ್ಳರಿಸಿಕೊಂ 

ಡು-ಏನುಕಾರಣ ಬಂದುದು? ಎಂದು ಕೇಳಲಾಗಿ; ಅವನಿಂತೆಂದನು:- ಕೇಳೈ 

ರಾಯನೇ ! ನಿನ್ನ ಸರ್ವರು 3ಲೋಕಚಂದ್ರನೆಂದು ಪೇಳುವುದ ಕೇಳಿ 

ನಿನ್ನ ದರ್ಶನವಾಗಬೇಕೆಂದು3 ಬಂದೆನು. ಇದಲ್ಲದೆ ನಿನ್ನಯ ರಾಜ್ಯದಲ್ಲಿ 

ಅರದೇಶಿ, ಪರದೇತಿ, ಕುರುಡರು, ಮಗರು, ಕಿವುಡರು, ಗುಜ್ಜಾರಿಗಳು, 

ಮುಂತಾದ ಸಕಲ ಜನರ ರಕ್ಷಿಸುವ ಪ್ರಭಾವವ ಕೇಳಿ, ಸಂತೋಷವಾಗಿ, 

ಬಂದೆನು. ನಿನ್ನ ರಾತ್ರೆಯ4 ಓಲಗವ ಒಂದು ದಿನ ನನಗೆ ಪಾಲಿಸಬೇ 

ಕು4 ಎನ್ನಲಾಗಿ, ರಾಯ ಸಂತೋಷಪಟ್ಟು ಆದಿನ ರಾತ್ರಿಯೋಲಗದಲ್ಲಿ 

ವಿದ್ವಾಂಸರು ಕವಿಗಳು ಪೌರಾಣಿಕರು ಮಂಡಲಿಕರು ಮನ್ನೆಯರು ಗಾ 

ಯಕರು ಪರಿಹಾಸಕರು, ಭಟ್ಟರು 5ಮೊದಲಾದವರು ಸದರಿನಲ್ಲಿ5 ಕುಳಿತಿ 

ರುವಲ್ಲಿ ಸುಪರಿಕ್ಷಿತನ ಕರೆಬಿಡಲಾಗಿ , ಆತ ಬಂದ ಬಳಿಕ ಈ ರಾತ್ರಿ 

ಯೋಲಗ ತೆಗೆದುಕೋ ಎಂದು ರಾಯನು ಹೇಳಲಾಗಿ ; ಅವನಿಂತೆಂದನು. 

..................

ಪಾ-1. ಇಂದ್ರಾರ್ಚಿತ. 2. ಕೈನಾಳ, 3. ನಿನ್ನ ಪರಲೋಕ ಚಂದ್ರನೆಂಬರು 

ನಿನ್ನಯ ಕೀರ್ತಿ ಪ್ರಭಾವವ ಕೇಳಿ ಬಂದೆನು. 4. ಕಾಲದೋಲಗವನೋಡ 

ಬೇಕೆಂದು ಬಂದೆನೆಂದು ಸುಪರಿಕ್ಷಿತ ವೇಳಲು. 5. ಮೊದಲಾದ ಸಪ್ತಾಂ 

ಗದವರ ಕರೆಸಿ ಒಡ್ಡೋಲಗಂಗೊ೦ಡು,



-------------------------ಬತ್ತೀಸಪುತಳಿ ಕಥೆ,-------------------------೧೦೯ 


ಎಲೈ ರಾಯನೆ ! 1ವಿದ್ಯೆ ಕಲಿಯಬಹುದು, ನುಡಿಗಳ ಕಲಿವುದು ಉನ್ನತ ; 

ದವ್ಯಸಂಪಾದಿಸಬಹುದು, ದಾನ ಕೊಡುವುದುನ್ನತ ; ಕವಿಯಾಗಬಹುದು, 

ಭಾವ ತಿಳಿವುದುನ್ನತ ; ಮಂತ್ರಿಯಾಗಬಹುದು, ಲೋಕಹಿತನಾಗುವುದು 

ಉನ್ನತ ; ದೊರೆಯಾಗಬಹುದು, ವೀರವಿತರಣ ಗುಣವಿರುವುದು ಉನ್ನತ 

ಅದುಕಾರಣ ಸಕಲಸಂಪನ್ನನೆನಿಸಿಕೊಂಬುದು ಸಾಮಾನ್ಯವಲ್ಲ1 ಎಂದು ಸುಪ 

ರೀಕ್ಷಿತ ನುಡಿದುದಕ್ಕೆ ರಾಯನಿಂತೆಂದನು -ಜಗತ್ತಿನಲ್ಲಿ ಎಲ್ಲವ ಬಲ್ಲವ 

ರಿಲ್ಲ ; 2ಒಂದೂ2 ಅರಿಯವವರಿಲ್ಲ ; ತಮ್ಮ ತಮ್ಮ ಮಟ್ಟಿಗೆ ತಕ್ಕಷ್ಟು 

ಬಲ್ಲರಲ್ಲದೆ 3ನೆರೆ ಸಿಪುಣರೆಸಿಕೊಳ್ಳುವರಾರು ?3ಎಂದು ರಾಯನಾಡಿದ 

ಮಾತಿಗೆ ಸುಪರೀಕ್ಷಿತನಿಂತೆಂದನು. ಕೇಳೈಯ ರಾಯನೇ ! ನಾನೂ ಎರಡು 

ಪರೀಕ್ಷೆ ಬಲ್ಲೆನು. ಅದೇನೆಂದರೆ-4ಊಟ, ಕೂಟ,4 ಈ ಯೆರಡುಪರೀಕ್ಷೆ 

ಬಲ್ಲೆನೆನಲಾಗಿ: ರಾಯ ಇವನ ಜಾಣ್ಮೆ ನೋಡುವೆನೆಂದು ಸೂಪ ಶಾಸ್ತ್ರ 

ಜ್ಞನ ಕರೆಸಿ 5ನಳ ಪಾಕ ಭೀಮಪಾಕ, ಮುಂತಾದುವಲ್ಲಿ ಅನೇಕ ತರದ 

ಭಕ್ಷ್ಯವ ಅಗ್ನಿಮತದಿಂದ ಪರಿಪಕ್ವವ ಮಾಡಿಸಿ,5 ಆ ಬಳಿಕ ಭೋಜನಶಾ 

ಲೆಯಲ್ಲಿ ಈರ್ವರೂ ಏಕಪಙ್ತಿಯಲ್ಲಿ ಕುಳಿತುಕೊಂಡು ಸಕಲವಾದ ಶಾಕ 

ಪಾಕಗಳ ಬಡಿಸಿ ಮೃಷ್ಟಾನ್ನಗಳ ಭೋಜನವ ಮಾಡಿಕೊಂಡು, ಚಂದ್ರ 

ಶಾಲೆಗೆ ಬಂದು ಕುಳಿತುಕೊಂಡು, ಗಂಧ ಕಸೂರಿ ಪರಿಮಳ ಕುಸುಮ ತಾಂ 

ಬೂಲವ ಕೊಟ್ಟು ತೀರಿಸಿಕೊಂಡು, ರಾಯ ಸುಪರಿಕ್ಷಿತನೊಳು-ಭೋ 

ಜನವು ಎಂಥದೋ ' ಎಂದು ಹೇಳಲಾಗಿ, ಆತನು ಸಕಲ ಪದಾರ್ಥವೂ 

ರುಚಿಕರವಾಗಿದ್ದಿತು ; 6ರಾಜಾನ್ನ ಸ್ವಲ್ಪ ನಾರುತ್ತಿದ್ದಿತು6 ಎನ್ನಲಾಗಿ ; 

.....................

1. ವಿದ್ಯೆಗಳ ಕಲಿಯಬಹುದು, ನುಡಿಗಳ ಕಲಿಯಲಾಗದು ; ಧನವ ಗಳಿಸಬಹುದು 

ದಾನಿಯಾಗಲರಿಯದು, ಕವಿಯಾಗಬಹುದು, ರಸಜ್ಞನಾಗಲರಿಯದು ; ಭೋ

ಜನವ ಮಾಡಬಹುದು, ಸ್ವಾರಸ್ಯಗಳ ತಿಳಿಯಲಾಗದು ; ಪ್ರಧಾನವಾಗ 

ಬಹುದು, ಲೋಕಹಿತನಾಗಲರಿಯದು; ಅರಸಾಗಬಹುದು, ವೀರವಿತರಣವು 

ಳ್ಳವನಾಗಲರಿಯದು. ಅದುಕಾರಣ ಸಕಲ ಗುಣಗಳ ತಿಳಿವುದು ಸಾಮಾ 

ನ್ಯವಲ್ಲ. 2, ಏನೂ. 3. ಸಕಲ ಕಲಾಪ್ರವೀಣನಾಗಿ ಸರ್‍ವಜ್ಞ ಚಿತ್ತ ನೆನಿಸಿ 

ಕೊಂಬುವನಲ್ಲವೆಂದು, 4 ಭೋಜನದ ಪರೀಕ್ಷೆ, ಸ್ತ್ರೀಯರ ಕೂಟದ ಪರೀಕ್ಷೆ. 

5. ಅನೇಕ ವಿಧ ಭಕ್ಷ್ಯ ಕಜ್ಜಾಯಗಳ, ಪಾರ್ವತೀಮತ ನಳಮತ ಭೀಮಮತ 

ಅಗ್ನಿ ಮತ ಇಂತೆಂಬ ಸಕಲ ಮತಗಳಿಂದ ಸಕಲ ಪರೀಕ್ಷೆಗಳ ಮಾಡಿಸಿ,

6. ರಾಜಾನ್ನದಕ್ಕಿ ಅನ್ನವು ಕವರು ನಾರೀತೆಂದು


೧೧೦------------------ಕರ್ಣಾಟಕ ಕಾವ್ಯಕಲಾನಿಧಿ.---------------------------


ರಾಯ ಉಗ್ರಾಣದ ಪಾರುಪತ್ಯ ಮಾಡುವವನ ಕರೆಸಿ ಕೇಳಲಾಗಿ; ಅವನು--ಎ

ಎಲೈ ಸ್ವಾಮಿ ! ಗಂಧಶಾಲಿಗದ್ದೆ ಉತ್ತು ಪೈರು ಮಾಡುವಾಗ ಸ್ಮಶಾನದ 

ಭೂಮಿ ಬೆರೆದಿದ್ದಿತು, ಅದರಿಂದ ರಾಜಾನ್ನ ನಾರೀತೆನ್ನಲಾಗಿ ; ರಾಯನು 

ಸಂತೋಷಚಿತ್ತನಾಗಿ, ಸುಪರೀಕ್ಷಿತನ ಊಟದ ಸುಖಿಯಹುದೆಂದು, ಅಬಳಿಕ 

ಆ ರಾತ್ರಿಗೆ ತನ್ನ ಅರಮನೆಯ ಸ್ತ್ರೀಯರಲ್ಲಿ ನವಮೋಹನಾಂಗಿಯೆಂಬ 

ದಾಸಿಯ ಕರೆಸಿ ಕಳುಹಿಸಿಕೊಡಲಾಗಿ ; ಅವಳಲ್ಲಿ ಪರಿರಂಭ ಚುಂಬನಾದಿ 

ಯಾದ ಕಲೆರತಿಗಳ ಮಾಡಿ, ಬಳಲಿ ಸುಖನಿದ್ರೆಗೈದು, ಬೆಳಗಾಗೆ ಎದ್ದು ರಾ 

ಯನ ಬಳಿಗೆ ಬರಲಾಗಿ; ರಾಯ ರಾತ್ರಿ ಸಂಭೋಗವೆಂಥದೆಂದು ಕೇಳಲಾಗಿ;

ಆತನು ಸ್ತ್ರೀ 1 ಕಾಮಕಲಾಕುಶಲವ ಬಲ್ಲ ಕಲಾಪ್ರವೀಣೆಯಾದರೂ ಹೊ  

ಲಸು ಹೊಡೆಯುತ್ತಿದ್ದಾಳೆ1 ಎಂದು ನುಡಿಯಲಾಗಿ; ರಾಯ ಅವಳ ಕರೆಸಿ ಪೂ 

ರವೃತ್ತಾಂತವ ಕೇಳಿದುದರಿಂದ ಅವಳಿಂತೆಂದಳು :-ನಾನು ಪಾಟಲಾಪುರದ 

ಪ್ರಧಾನಿ ಸುನೀತಿಯ ಮಗಳು. ನನ್ನ ಹೆರುತ್ತಲೆ ನನ್ನ ತಾಯಿ ತೀರಿಹೋ 

ದುದರಿಂದ, ದಶದಿನ ಈ ಶಿಶು ಮನೆಯಲ್ಲಿರಲಾಗದೆಂದು ಹಿರಿಯರಾದವರು 

ಹೇಳಿದ ಮಾತಿಗೆ, ಆಗ ನನ್ನ ತಂದೆ ಒಬ್ಬ ಮುದುಕಿಯ ಕರೆಯಿಸಿ, ಅವಳಿಗೆ 

ನನ್ನ ಸಾಕಿಕೊಡು ಎಂದು ಕೊಟ್ಟ ಕಾರಣ, ಅಮುದುಕಿ ನನಗೆ ಆಡಿನ 

ಮೊಲೆಯಡಿ, ಸಾಕಿ, ನಾನು ದೊಡ್ಡವಳಾದ ಬಳಿಕ, ಅರಮನೆಗೆ ನನ್ನ ಕರೆ 

ತಂದು ಒಪ್ಪಿಸಿದಳು ಎಂದ ಮಾತ ಕೇಳಿ, ರಾಯನು-ಕೂಟದ ಸುಖಿಯಹುದು 

ಎಂದು, ಆ ಸುಪರೀಕ್ಷಿತನಿಗೆ ಸವಾಲಕ್ಷದ ವ್ಯವ ಕೊಟ್ಟು ಕಳುಹಿಸಿದನು-- 

ಎಂದ ಮಾತಿಗೆ ಇಂದ್ರಜಿತೆಯೆಂಬ ಪುತ್ತಳಿಯು ನಗುತ್ತ ಹಾಸ್ಯಗೆಯ್ದು 

ಪೇಳಿದ ಉಪಕಥೆ :-


ಕೇಳಯ್ಯಾ ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯವ ಪಾಲಿಸುವ ವೇಳೆಯಲ್ಲಿ ಒಂದು ದಿನ ಒಬ್ಬ ಗೊರವ ಮೆಯ್ಗೆಲ್ಲಾ 

ಕುಂಕುಮವ ಲೇಪಿಸಿ, ರುದ್ರಾಕ್ಷಿ ಸ್ಪಟಿಕದ ಸರವ ಧರಿಸಿಕೊಂಡು, ತ್ರಿಶೂ 

ಲವ ಪಿಡಿದು, ಕೆಂಜೆಡೆಯ ಬಿಟ್ಟು, ರಾಯನೆದುರಾಗಿ ಬಂದು, ತನ್ನ ನಾನಾ

...................

ಪಾ-1, ಕಾಮಕಲಾಕುಶಲಂಗಳ ಬಲ್ಲವಳು, ಚೌಷಷ್ಟಿ ಕಲಾಪ್ರವೀಣೆಯಹುದು, 

ಆದರೂ ಜಿಡ್ಡು ನಾರುವಳು. 



---------------------ಬತ್ತೀಸವುಳಿ ಕಥೆ,---------------------------೧೧೧


ವಿಧದ ವಿದ್ಯೆಗಳ ತೋರಲಾಗಿ ; ರಾಯ ಮೆಚ್ಚಿ ಅವನಿಗೆ ಕೋಟಿಹೊನ್ನ 

ಕೊಟ್ಟು, ಮನ್ನಣೆಯಿಂದ ಮನ್ನಿಸಿ, ಆ ಬಳಕ-ನೀನೆಲ್ಲಿಂದ ಬಂದೆಯನ್ನ 

ಲಾಗಿ ; ಅವನಿಂತೆಂದನು :-ಕೇಳೈಯ್ಯಾ ಮಹಾರಾಯನೇ ! ನಾನು ಗೊಂಡಾ 

ರಣ್ಯದಲ್ಲಿ ಕಪಿಲಮುನಿಯಾಕ್ರಮದ ಬಳಿಯಲ್ಲಿರುವ ಮೈಲಾರಲಿಂಗನ 

ಗುಡಿಯಿಂದ ಬಂದನೆನ್ನಲಾಗಿ ; ರಾಯ-ಅಲ್ಲೇನತಿಶಯವೆಂದು ಕೇಳಲಾಗಿ ; 

ಆತನಿಂತೆಂದನು :-ಆ ಗುಡಿಯ ಮುಂದೆ ಸಾವಿರ ಕಾಲಿನದೊಂದು ನೆಲವು 

ಕಟ್ಟೆಯಿದೆ. ಅದರ ಕೆಳಗೆ ಅತಿಲಕ್ಷಣವಾದ ಕತ್ತಿಗಳು ನಿಲ್ಲಿಸಿ ಇವೆ. 

ಅವನಾನೊಬ್ಬ ವೀರನಾದವನು ಆ ನೆಲುವಿನ ಮೇಲೆ ಕುಳಿತು ಒಂದೊಂದಾಗಿ 

ಅದರ ಕಾಲುಗಳ ತನ್ನ ಕೈಯ ಉಗುರಿನಿಂದ ಕತ್ತರಿಸಿ, ಆಕತ್ತಿಗಳ ಮೇಲೆ 

ಬೀಳುವ ಸಮಯದಲ್ಲಿ ಅದೇವರು ಪ್ರಸನ್ನವಾಗಿ ಪಿಡಿದೆತ್ತಿಕೊಂಡು ಅವ 

ನಿಗೆ ಇಷ್ಟಾರ್ಥ ಪಾಲಿಸುವುದೆಂದು ಅಲ್ಲಿ ಶಾಸನ ಬರೆದಿರುವುದು ಎಂದ 

ಮಾತ ಕೇಳಿ, ರಾಯ ಅಕ್ಷಣವೇ ಅಚೋದ್ಯವ ನೋಡಬೇಕೆಂದು ಆಕಾಶ 

ಮಾರ್ಗದಲ್ಲಿ ಹೊರಟು, ಆಗೊಂಡಾರಣ್ಯದಲ್ಲಿರುವ ಮೈಲಾರಲಿಂಗನ ಗು 

ಡಿಯ ಬಳಿಗೆ ಹೋಗಿ, ಆ ನೆಲುವಿನಲ್ಲಿ ಕುಳಿತು ತನ್ನ ಉಗುರೊಳಗೆ ಅದರ 

ಕಾಲುಗಳ ಒಂದೊಂದಾಗಿ ಕತ್ತರಿಸಿ ಕೆಳಗಿರುವ ಕತ್ತಿಗಳ ಮೇಲೆ ಬೀಳುವ 

ಸಮಯಕ್ಕೆ ಆದೇವರು ಪ್ರಸನ್ನವಾಗಿ, ಆ ಕತ್ತಿಗಳ ಮೇಲೆ ಬೀಳದ ಹಾಗೆ 

ಅಂತರಿಕ್ಷದ ಮಾರ್ಗದಲ್ಲಿ ಅವನ ಪಿಡಿದೆತ್ತಿಕೊಂಡು ಪ್ರಸನ್ನವಾಗಿ, ತನ್ನ ನಿಜ 

ರೂಪವ ತೋರಿಸಿ, ಮೆಚ್ಚಿ-ಎಲೈ ರಾಯನೇ, ನಿನ್ನ ಧೀರತ್ವಕ್ಕೆ ಮೆಚ್ಚೆದೆ 

ನೆಂದು ರಾಯನಿಗೆ ಚತುರ್ವಿಧಫಲಪುರುಷಾರ್ಥಗಳ ಕೊಡುವ ನವರತ್ನದ 

ಬಟ್ಟಲ ಕೊಟ್ಟು ಮಾಯವಾಯಿತು. ಆ ಬಳಿಕ ಅಲ್ಲಿಂದ ರಾಯ ಬರುವ 

ದಾರಿಯಲ್ಲಿ ಒಬ್ಬ ಬ್ರಾಹ್ಮಣೋತ್ತಮ ದರಿದ್ರದಿಂದ ದೇಶಾಂತರ ಸಂಚಾರ 

ಮಾಡಿ ಅಲ್ಲಲ್ಲಿರುವ ದೇವರ ಪೂಜಿಸಿದಾಗ ತನ್ನ ದಾರಿದ್ಯ್ರ ತೀರದೆ ನೀರಿ 

ನಲಿ ಬಿದ್ದು ದೇಹವ ಬಿಡಬೇಕೆಂದು ಬರುವನ ಕಂಡು, ರಾಯನು-ಎಲೋ 

ಬ್ರಾಹ್ಮಣ ! ಎಲ್ಲಿಗೆ ಹೋಗುತ್ತಿದ್ದೀಯೆ ? ಎನ್ನಲಾಗಿ; ಅವನು ತನ್ನ ವಿಚಾ 

ರವ ಹೇಳಿ ನೊಂದುಕೊಳ್ಳಲಾಗಿ ; ರಾಯ ಅವನ ಕಷ್ಟವ ಕೇಳಿ, ಕರುಣವ 

ತಾಳಿ ತನಗೆ ಮೈಲಾರದೇವರು ಕೊಟ್ಟಂಥ ಚತುರ್ವಿಧ ಫಲವ ಕೊಡುವ 

ನವರತ್ನದ ಬಟ್ಟಲ ಕೊಟ್ಟು, ಸುಖವಾಗಿರಿ ಎಂದು ಹೇಳಿ ಕಳುಹಿಸಿ, ತಾನೀ



೧೧೨---------------ಕರ್ಣಾಟಕ ಕಾವ್ಯಕಲಾನಿಧಿ.--------------------------


ಪಟ್ಟಣಕ್ಕೆ ಬಂದು ಸುಖವಾಗಿ ರಾಜ್ಯಗೆಯ್ಯುತ್ತಿದ್ದನು-ಎಂದು ಇಂದ್ರಜಿತೆ 

ಯೆಂಬ ಪುತ್ತಳಿ ಹೇಳಲು, ರಾಜನು ದುಃಖಿತನಾಗಿ ತನ್ನ ಅರಮನೆಗೆ 

ಪೋದನು.


ಇಂತು ಕರ್ಣಾಟಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಇಂದ್ರಜಿತೆಯೆಂಬ ಪುತ್ತಳಿ ಹೇಳಿದ ಇಪ್ಪತ್ತೈದನೆಯ ಕಥೆ .

........

೨೬ ನೆಯ ಕಥೆ.


ಇಪ್ಪತ್ತಾರನೆಯ ದಿವಸದಲ್ಲಿ ಭೋಜರಾಯನು ಸ್ನಾನದೇವತಾರ್ಚನೆ 

ಭೋಜನ ತಾಂಬೂಲವ ತೀರಿಸಿಕೊಂಡು, ಎಂದಿನಂತೆ ಸಿಂಹಾಸನದ ಬಳಿಗೆ 

ಬಂದು ಬಲಗಾಲ ನೀಡುವ ಸಮಯದಲ್ಲಿ, ಆ ಸೋಪಾನದ ತ್ರೈಲೋಕ್ಯ 

ಮೋಹಿನಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ ; ಭೋಜರಾಯನು ಖಿನ್ನ

ನಾಗಿ ಬೇರೆ ಸಿಂಹಾಸನದಲ್ಲಿ ಕುಳಿತು ಚಿತ್ರಶರ್‍ಮನಿಂದ ಪೇಳಿಸಿದ ಕಥೆ:-- 


ಎಲೆ ಪುತ್ತಳಿಯೇ ! ಕಳು. ಧಾರಾಪುರದಲ್ಲಿ ನಮ್ಮ ರಾಯನು ಸುಖ 

ರಾಜ್ಯವ ಗೆಯ್ಯುವಲ್ಲಿ ಒಂದು ದಿನ ಒಬ್ಬ ಮುದುಕಿ ಬಂದು -ಎಲೈರಾ 

ಯನೇ ! ನನ್ನ ವಿದ್ಯೆಯ ನೋಡಬೇಕು ಎಂದಾಗ ; ರಾಯ-ಅದೆಂಥ ವಿದ್ಯೆ 

ತೋರು ? ಎನ್ನಲಾಗಿ ; ಆ ಮಾತಿಗವಳು ನಾನು ಬೆರಣಿಮಾಡುವ ವಿ 

ದೈಯ ಬಲ್ಲೆ ಎನ್ನಲಾಗಿ ; ಅವಳ ಮಾತ ಕೇಳಿ, ರಾಯನು ಹುಸಿನಗೆಯ 

ನಗುತ್ತ-ಎಲಾ ಮುದುಕಿ ! ಇದೊಂದು ವಿದ್ಯೆಯೆಂದು ಬಂದು ಏನೆಂತ 

ಹೇಳಿದೆಯೆಂದು ಹಾಸ್ಯವ ಮಾಡಲಾಗಿ, ಅವಳಿಂತೆಂದಳು:-ನಾನು ನಿನ್ನ ಸಭೆಗೆ 

ಬಂದು ಹೇಳಿದರೆ ಆ ಕುಶಲವ ನೋಡಬೇಕಲ್ಲದೆ ಪರಿಹಾಸ್ಯವ ಮಾಡು 

ವರೆ ? ನೀನು ಧರ್ಮಪ್ರಭು ಎಂದು ನಾನು ಬಂದೆನೆನ್ನಲಾಗಿ ; ಅವಳ 

ಮಾತ ಕೇಳಿ ರಾಯ ಸೆಗಣಿಯ ತರಿಸಿ ಗುಡ್ಡೆಯ ಹಾಕಿಸಿ ಬೆರಣಿಮಾಡು, 

ಎನ್ನಲಾಗಿ ; ಆ ಮುದುಕಿ ಆ ಸೆಗಣಿಯೆಲ್ಲವ ಕಲೆಸಿ ಬೆರಣಿಯ ತಟ್ಟಿ 

ಒಣಗಿಸಿ ರಾಯನ ಸಭೆಗೆ ತಂದು ತಕ್ಕಡಿಯಲ್ಲಿ ತೂಗಲು ಯಾವತ್ತು ಬೆರ 

ಣಿಯೂ ಒಂದೇ ತೂಕವಿರಲಾಗಿ ; ರಾಯ ಮೆಚ್ಚಿ ಆ ಮುದುಕಿಗೆ ಸವಾ



----------------------ಬತ್ತೀಸಪುತ್ತಳಿಕಥೆ.-------------------------೧೧೩ 


ಲಕ್ಷದ್ರವ್ಯವ ಕೊಟ್ಟು ಕಳುಹಿಸಿದನೆಂದ ಮಾತಿಗೆ ತ್ರೈಲೋಕ್ಯಮೋಹಿನಿ 

ಯೆಂಬ ಪುತ್ತಳಿ ನಗುತ್ತ ಹಾಸ್ಯಗೈದು ಹೇಳಿದ ಉಪಕಥೆ :-- 


ಕೇಳೈಯ ಚಿತ್ರಶರ್‍ಮನೇ! ನಮ್ಮ ವಿಕ್ರಮಾದಿತ್ಯರಾಯ ಈ ರಾ 

ಜ್ಯ ಪರಿಪಾಲಿಸುವ ವೇಳೆಯಲ್ಲಿ ಒಂದು ದಿನ ಒಬ್ಬ ಬಳೆಗಾರ ಬಂದು ರಾಯನ 

ಎದುರಾಗಿ ಬಂದು ನಿಂತುಕೊಳ್ಳಲಾಗಿ ; ರಾಯ-ನೀನು ಎಲ್ಲಿಂದ ಬಂದೆ ? 

ಎಂದು ಕೇಳಿದುದಕ್ಕೆ, ಅವನು- ಮಹಾರಾಯನೇ ! ದೇಶ ತಿರುಗುವನಿಗೆ 

ಒಂದು ಊರೆ, ಎನ್ನಲಾಗಿ ; ರಾಯ-ನೀ ತಿರುಗಿದ ದೇಶದಲ್ಲಿ ಏನತಿಶಯ 

ವೆಂದು ಕೇಳಲಾಗಿ ; ರಾಯನ ಮಾತಿಗೆ ಬಳೆಗಾರನಿಂತೆಂದನು :-- ಕನಕಾ 

ವತಿಯೆಂಬ ಪಟ್ಟಣದ ಕಾಲಭೈರವನೆಂಬ ಅರನಿಗೆ ಸೌದಾಮಿನಿಯೆಂಬ ಮ 

ಗಳು ಯೌವನಸ್ಥೆಯಾಗಿರುವಳು. ಅವಳು ಹಗಲಿನಲ್ಲಿ  ಪಿಶಾಚರೂಪಳಾಗಿ 

ಇರುವಳು. ರಾತ್ರಿಕಾಲಕ್ಕೆ ಜಗನ್ಮೋಹನ ಸ್ತ್ರೀಯಾಗಿರುವಳು-ಎಂದ 

ಮಾತ ಕೇಳಿ, ರಾಯ ವಿಸ್ಮಿತನಾಗಿ, ಅದ ನೋಡಬೇಕೆಂದು ಆ ಬಳಗಾರನ 

ಪಟ್ಟಣದಲ್ಲಿರಿಸಿ, ಭಟ್ಟಿಯ ಕರೆದುಕೊಂಡು ತಾನು ಖೇಚರವಾರ್ಗದಲ್ಲಿ 

ಕನಕಾವತಿಯೆಂಬ ಪಟ್ಟಣಕ್ಕೆ ಹೋಗಿ, ಅಸೌದಾಮಿನಿಯ ಕಂಡು ಅವಳ 

ವಶೀಕಾರ ಮಾಡು ಎಂದು ಭಟ್ಟಿಗೆ ಹೇಳಿ ಕಳುಹಲಾಗಿ ; ಭಟ್ಟ ಅವಳ 

ಬಳಿಗೆ ಹೋಗಿ, ನಾನಾಯುಕ್ತಿಯಿಂದ ಮಾತನಾಡಿಸಿ ಒಡಂಬಡಿಸಿ ಒಪ್ಪಿಸಿ, 

ಆಮಾತ ರಾಯನ ಬಳಿಗೆ ಬಂದು ಹೇಳಲಾಗಿ ; ಆ ಬಳಿಕ ರಾಯ ಅಲ್ಲಿಗೆ 

ಹೋಗಿ, ಅವಳಲ್ಲಿ ಏಳಂಟುದಿನ ಕೂಡಿದ್ದು, ಆ ಮೇಲೆ ನೀನು ಹಗಲು ಪಿ 

ಶಾಚ ರೂಪವಾಗಿರುವ ಕಾರಣವೇನೆಂದು ಕೇಳಿದ ಮಾತಿಗೆ ಅವಳಿಂತೆಂದ 

ಳು:-- ಕೇಳೈ ಮಹಾರಾಯ ! ಲಂಕಾಪುರಿಯಿಂದೊಬ್ಬ ಸಿದ್ಧ ಪುರುಷ ಇಲ್ಲಿಗೆ 

ಬಂದು ನನ್ನ ರೂಪು ರೇಖೆ ಲಾವಣ್ಯವ ಕಂಡು ಮೋಹದಿಂದ ಭ್ರಮಿಸಿ, ತನ್ನ 

ಸತಿಸುತರ ಬಿಟ್ಟು ನನ್ನಲ್ಲಿ ಕೂಡಿದ್ದು ಕೆಲವು ದಿನದ ಮೇಲೆ ನನ್ನನಗಲಿ 

ರಲಾರದೆ ತನ್ನ ಲಂಕಾಪುರಿಗೆ ನನ್ನ ಬಾರೆಂದು ಕರೆಯಲಾಗಿ ನಾನು ಬರುವು 

ದಿಲ್ಲ ಎಂದುದಕ್ಕೆ ಕೋಪಿಸಿ-ನೀನು ಹಗಲೆಲ್ಲಾ ಪಿಶಾಚಿಯಾಗು, ರಾತ್ರಿಕಾ 

ಲಕ್ಕೆ ಸ್ತ್ರೀಯಾಗೆಂದು ಶಪಿಸಿದನು. ಆ ಬಳಿಕ ನಾನು ದೈನ್ಯದಿಂದ ವಿಮೋ 

ಚನೆಯೆಂದಿಗೆ ? ಎಂದು ಕೇಳಲಾಗಿ ; ಆತನೀನು ಲಂಕಾಪುರಿಗೆ ಬಂದಾಗ 

ವಿಮೋಚನೆಯಾಗುವುದೆಂದು ಹೇಳಿ ಹೋದನು. ಆದುದರಿಂದ ಹಗಲು ಪಿಶಾ 



೧೧೪--------------ಕರ್ಣಾಟಕ ಕಾವ್ಯ ಕಲಾನಿಧಿ---------------------


ಚರೂಪಿನಲ್ಲಿರುವೆನೆಂದು ಹೇಳಿದ ಮಾತ ರಾಯ ಕೇಳಿ-ನಮ್ಮ ಪಟ್ಟಣಕ್ಕೆ 

ಹೋಗುವ ಬಾರೆಂದು ರಾಯ ಕರೆಯಲಾಗಿ, ಆಮಾತಿಗವಳು ಸಮ್ಮತಿಪ 

ಟ್ಟುದರಿಂದ ರಾಯ ಭಟ್ಟಿಯ ಬಳಿಗೆ ಬಂದು-- ಅವಳೊಪ್ಪಿ ಸಂಗಡ ಬರುತ್ತ 

ಲಿದ್ದಾಳೆ ಎಂಬ ವಿಚಾರವ ಭಟ್ಟಿಯ ಸಂಗಡ ಹೇಳಲಾಗಿ; ಆ  ಭಟ್ಟಿ - 

ಎಲೈರಾಯನೇ ! ಸ್ತ್ರೀಯರ ನಂಬಕೂಡದು. ನಿನ್ನ ಕಾರ್‍ಯವಾದ ಬಳಿ 

ಕ ನಮ್ಮ ಸ್ಥಳಕ್ಕೆ ನಾವು ಹೋಗುವುದು ಮೇಲು-ಎಂದ ಮಾತ್ರ ಅವಳು 

ಹಿಂದೆ ಬಂದಿದ್ದು ಕೇಳಿಕೊಂಡು ಹೋಗಿ, ರಾಯ ಅಲ್ಲಿಗೆ ಬಂದ ಬಳಿಕ 

ಇಂತೆಂದಳು :-ಎಲೈಪತಿಯಾದ ಮಹಾರಾಯನೇ ! ನಾನು ನಿನ್ನ ಪಟ್ಟಣಕ್ಕೆ 

ಬಂದು ಅಲ್ಲಿಯೂ ಪಿಶಾಚಿಯಾಗಿರಬಾರದೆಂದು ಹೇಳಿದುದಕ್ಕೆ, ರಾಯ-ಅದ 

ಕೇನ ಮಾಡಬೇಕೆಂದು ಕೇಳಲಾಗಿ ; ಆಗ ಅವಳು ಇಂತೆಂದಳು :-ನನ್ನ 

ಮುಡಿಯ ತೆಗೆದು ಲಂಕಾಪುರಿಯ ಕುಂಭಿನೀದೇವತೆಗೊಪ್ಪಿಸಿದರೆ ಈ 

ಪಿಶಾಚತ್ವ ಬಿಡುವುದೆನ್ನಲಾಗಿ ; ರಾಯ-ಹಾಗಾದರೆ ನಡೆ ಹೋಗುವ ಎಂದ 

ಮಾತಿಗೆ, ಅವಳು-ನನ್ನ ಮುಡಿಯ ತೆಗೆದರೆ ಲೋಕದ ಜನಕ್ಕೆ ಹಾಸ್ಯವಾಗಿ 

ತೋರುವುದು. ನೀನು ರಾಯ, ನಿನ್ನ ಮುಡಿಯ ಕೊಡಲಾಗದು ; ನಿನ್ನ 

ಭಟ್ಟಿಯ ಮುಡಿಯ ತಂದರೆ ಶೀಘ್ರದಲ್ಲಿ ಹೋಗಿ ಹರಕೆಯ ಒಪ್ಪಿಸಿ ಬರ 

ಬಹುದು ಎಂದ ಮಾತ ಕೇಳಿ, ರಾಯ ಆ ಮಾತ ಭಟ್ಟಿಗೆ ಬಂದು ಹೇಳಲಾ 

ಗಿ; ಭಟ್ಟಿ-ಇವಳ ಮಾತೆಲ್ಲ ಸುಳ್ಳು ಎಂದು ಹೇಳಿದರೂ ಕೇಳದೆ, ರಾಯ 

ಅವಳ ಮಾತೇ ನಿಜವೆಂದು ಭಟ್ಟಿಯ ತಲೆಯ ಬೋಳಿಸಿ, ಆಮುಡಿಯ 

ಅವಳಿಗೆ ತಂದು ಕೊಡಲಾಗಿ ; ಅದ ತೆಗೆದುಕೊಂಡು, ಆ ಬಳಿಕ ಅವಳು 

ರಾಯನಕೂಡ ಲಂಕಾಪುರಿಗೆ ಹೋಗುವಲ್ಲಿ ಭಟ್ಟಿ ಹಿಂದೆ ಹೋಗುತಿದ್ದನು. 

ಅವಳು ರಾತ್ರಿಯ ಕಾಲವಾದ ಬಳಿಕ-ನಡೆಯಲಾರೆ, ನನ್ನ ಎತ್ತಿಕೊ-- 

ಎನ್ನಲಾಗಿ ; ರಾಯ ಅವಳ ಕಪಟವಯದೆ ಸಹಜವೆಂದು ತನ್ನ 

ಹೆಗಲಲ್ಲಿ ಕುಳ್ಳಿರಿಸಿಕೊಂಡು ಲಂಕಾಪುರಿಗೆ ಹೋಗಲಾಗಿ ; ಅವಳ ಮೊದಲ 

ದಿವ್ಯಪುರುಷನು ಕಂಡು, ಈರ್ವರ ತನ್ನ ಮನೆಗೆ ಕರಕೊಂಡು ಹೋಗಿ, 

ರಾಯನ-ಶಹಬಾಸು ! ನನ್ನ ಸತಿಯ ಕರೆದು ತಂದವನೆಂದು ಬಹು 

ಉಪಚರಿಸಿ, ರಾಯನಿಗೆ ಹದಿನೆಂಟು ಕೋಟ ದ್ರವ್ಯವ ಕೊಟ್ಟು ಕಳು 

ಹಿಸುವಲ್ಲಿ, ಅವಳಿಂತೆಂದಳು :-ಎಲೈರಾಯ ! ನಾವಿಬ್ಬರೂ ಬಂದು



--------------------------ಬತ್ತೀಸಪುತ್ತಳಿಕಥೆ-----------------------೧೧೫


ಹರಕೆಯೊಪ್ಪಿಸುವ ಸಮಯದಲ್ಲಿ ನನ್ನ ಪೂರ್ವದ ಪುರುಷನ ಕಂಡೆನು, 

ನೀನು ಹೋಗು ಎಂದ ಮಾತಿಗೆ ರಾಯ ಲಜ್ಜಿತನಾಗಿ, ಭಟ್ಟಿಯ ಬಳಗೆ ಬಂದು 

ನಿನ್ನ ಮಾತ ಕೇಳದೆ ಕಾರ್ಯ ಕೆಟ್ಟಿತೆನ್ನಲಾಗಿ ; ಭಟ್ಟಿಯಿಂತೆಂ 

ದನು :- ಎಲೈ ರಾಯ ! 1ಹಿಂದೆ ಸ್ತ್ರೀಯರ ಮಾತಿಗೊಳಗಾಗಿ 

ಬಹುಜನ ಕೆಟ್ಟರು. ಅವಳ ಮಾತು ಬದ್ದವೆಂದು ನೀನು1 ಅವಳಿಗೆ 

ಕುದುರೆಯಾದೆ, ನಾನು ಬೋಳನಾದೆನು-ಎಂದು ರಾಯನಿಗೆ ತಿಳಿಯ ಹೇಳಿ, 

ಅಲ್ಲಿಂದೀರ್ವರೂ ಇಲ್ಲಿಗೆ ಬಂದು, ರಾಯ ಆ ಬಳೆಗಾರನಿಗೆ ಹದಿನೆಂಟು 

ಕೋಟಿ ದ್ರವ್ಯವ ಕೊಟ್ಟು ಕಳುಹಿಸಿ, ತಾನು ಸುಖವಾಗಿದ್ದನು-- ಎಂದು 

ಪುತ್ತಳಿ ನುಡಿಯಲು ; ಭೋಜರಾಯನು ಲಜ್ಜಿತನಾಗಿ, ತನ್ನ ಅರಮನೆಯ 

ಪೊಕ್ಕನು. 


ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ತ್ರೈಲೋಕ್ಯ ಮೋಹಿನಿಯೆಂಬ ಪುಳಿ ಹೇಳಿದ ಇಪ್ಪತ್ತಾ ನೆಯ ಕಥೆ.

....

೨೭ ನೆಯ ಕಥೆ.


ಇಪ್ಪತ್ತೇಳನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ 

ರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು ಎಂದಿನಂತೆ ಸಿಂಹಾಸನದ 

ಬಳಿಗೆ ಬಂದು ಬಲಗಾಲ ನೀಡುವ ಸಮಯದಲ್ಲಿ ಆ ಸೋಪಾನದ ಕನಕಾ 

ವತಿಯೆಂಬ ಪುತ್ತಳಿಯು-ಹೋ ಹೋ ! ನಿಲ್ಲು ನಿಲ್ಲು ' ಎಂದು ಧಿಕ್ಕರಿಸ 

ಲಾಗಿ ; ಭೋಜರಾಯನು ಖಿನ್ನನಾಗಿ ಬೇರೆ ಸಿಂಹಾಸನದಲ್ಲಿ ಕುಳಿತು, 

ಚಿತ್ರಶರ್‍ಮನಿಂದ ಹೇಳಿಸಿದ ಕಥೆ :--


ಎಲೆ ಪುತಳಿಯೇ ಆಯೇ ! ಕೇಳು. ಧಾರಾಪುರದಲ್ಲಿ ನಮ್ಮ ರಾಯನು 

ಸುಖರಾಜ್ಯಗೆಯ್ಯುವಲ್ಲಿ ಒಂದು ದಿನ ತನ್ನ ಚತುರಂಗಬಲ ಸಮೇತವಾಗಿ 

ಸ್ವಾರಿ ಬರುವಾಗ, ಒಬ್ಬ ನಿರ್ಧನಿಕನು ಕಟ್ಟಿಗೆಯ ಹೊರೆಯ 


ಪಾ-1, ಹಿಂದಣ ಗತಿಗಳೆಲ್ಲಾ ಹೀಗೆ. ಹೆಂಗಸರ ಮಾತ ಕೇಳಿದವರು ಮಹಾ 

ಮಹಾ ಜನಂಗಳು ಮಣ್ಣಿಗೆ ಮಣ್ಣು ಕೂಡಿಹೋದರು. ಈ ಕಥೆ 

ಯು ಆಶ್ಚರ್ಯವೆಂದು ನೀನು.



೧೧೬---------------ಕರ್ಣಾಟಕ ಕಾವ್ಯ ಕಲಾನಿಧಿ--------------------------


ಹೊತ್ತುಕೊಂಡು ಬರುವನ ರಾಯ ಕಂಡು 1"ಯಥಾ ಬಾಧತಿ ಬಾಧತೇ" 

ಎನ್ನಲಾಗಿ; ಎಲೈ ರಾಯನೆ ! ಈ ಸವುದೆ ಹೊರೆಯು ಬಾಧಿಸುವುದಿಲ್ಲ ; 

ನೀನು “ ಬಾಧತಿ” ಎಂದ ಮಾತು ಬಾಧಿಸುತ್ತಲಿದೆ.1 ಆದಾಗ್ಯೂ ನಿನ್ನಂಥ 

ಮಹಾರಾಯ ಈ ಕಷ್ಟವ ತಪ್ಪಿಸಬೇಕಲ್ಲದೆ ಈ ರೀತಿಯಾಡಬಹುದೇ ? 

ಎಂದು ಉತ್ತರವ ಕೊಡಲಾಗಿ ; ರಾಯನು ಮೆಚ್ಚಿ ಅವನಿಗೆ ಸವಾಲಕ್ಷದ್ರ 

ವ್ಯ ಕೊಟ್ಟು ಕಳುಹಿಸಿದನು ಎಂದ ಮಾತಿಗೆ ಕನಕಾವತಿಯೆಂಬ ಪುತ್ತಳ 

ನಗುತ್ತ ಹಾಸ್ಯಗೆಯು ಹೇಳಿದ ಉಪಕಥೆ:--


ಕೇಳೈಯ ಚಿತ್ರಶರ್ಮನೆ ! ನಮ್ಮ ರಾಯ ಈ ಪರಿಪಾಲಿಸುವ 

ವೇಳೆಯಲ್ಲಿ ಒಂದು ದಿನ ದಿಗ್ವಿಜಯಕ್ಕಾಗಿ ತನ್ನ ಚತುರಂಗಸೇನೆ ಸಹಿತ 

ಹೊರಟು ವೈರಿಗಳ ಜಯಿಸಿ ಶರಣಾಗತರ ಪಾಲಿಸಿ ಬರುವ ದಾರಿಯಲ್ಲಿ 

ಒಂದು ಆಲದ ಮರದ ನೆಳಲಿನಲ್ಲಿ, 2ಒಬ್ಬ ಭೀಮರೂಪ ಕುಳಿತಿರುವುದ2 

ಕಂಡು,-ನೀನು ಯಾವ ದೇಶದಿಂದ ಬಂದೆ ಎನ್ನಲಾಗಿ ; ಅವನು 3ಸಿಂಧು 

ದೇಶದ ಕಾಂತಾವತಿಯೆಂಬ ಪಟ್ಟಣದಿಂದ ವ್ಯಾಪಾರನಿಮಿತ್ತವಾಗಿ ಬಂದೆನು, 

ಎಂದ3 ಮಾತ ರಾಯ ಕೇಳಿ, ದಂಡು ಯಾವತ್ತು ಮುಂದೆ ಹೋಗಲಿ ಎಂ 

ದು ಅಪ್ಪಣೆ ಕೊಡಿಸಿ, ಹಿಂದೆ ರಾಯ ವ್ಯಾಪಾರಿ ಸಹ ಬರುತ್ತಿರುವಲ್ಲಿ-- 

ದೂರದಲ್ಲಿ ಒಂದು ಅನೆ ಬರುವುದ ಕಂಡು, ಒಂದು ಮರದ ಕೆಳಗಿವರು 

ನಿಂತು, ವ್ಯಾಪಾರಿಯಂತೆಂದನು :--ಕೇಳೈ ಮಹಾರಾಯನೆ ! ಬರುವ ಆನೆಯ 

ಮೇಲೆ ಕುಳಿತಿರುವಳು ಹೆಂಗಸು, ಗರ್ಭಿಣಿ, ಆ ಆನೆಗೆ ಬಲಗಣ್ಣು ಕುರುಡು, 

ಎನ್ನುತ್ತಿರುವಲ್ಲಿ ಒಬ್ಬ ರಾಜಕುಮಾರ ಅಲ್ಲಿಗೆ ಬಂದು ತಾಂಬೂಲವ 

ತೆಗೆದು ಯಾರಿಗೂ ಕೊಡದೆ ತಾನೇ ಸೇವಿಸುತ್ತ ಬರುವನ ನೋಡಿ, -- ಇವನು 

ಕೋಮಟಿಗೆ ಜನಿಸಿದನೆಂದು ಹೇಳಲು ; ಈ ಮಾತುಗಳಲ್ಲಿ ರಾಯ ಕೇಳಿ, 

ಆಶ್ಚರ್‍ಯಪಟ್ಟು-ನೀನು ತಿಳಿದ ಬಗೆ ಹೇಗೆ ? ಎಂದು ಕೇಳಲಾಗಿ; ಅವ್ಯಾಪಾರಿ 

................

ಪಾ-2.ಎತ್ತಬಾರದ ಬಾಧೆಯೆನ್ನಲಾಗಿ; ಈ ಸವದೆ ಹೊರೆಯು ಬಾಧಕವಿಲ್ಲ. 

ನೀನು ಬದುಕಿಯಾ,

ಪಾ-3, ಅಭಿರೂಪನೆಂಬ ಮಾರ್ಗಸ್ತ ಕುಳಿತಿರಲು.

ಪಾ-4. ಸಿಂಧೂರದ ಕಾಂತಿಮತಿ ಎಂಬ ಪಟ್ಟಣದ ವ್ಯವಹಾರಿಕ ದರಿದ್ರ ದೋ 

ಷದಿಂದ ನೊಂದು ನಿನ್ನ ಕೀರ್ತಿ ಪ್ರತಾಪವ ಕೇಳಿ ಬಂದೆನೆಂಬುದ.



-------------------------------ಬತ್ತೀಸಪುತ್ತಳಿಕಥೆ.-----------------------೧೧೭ 


ಕೇಳೈಯ ರಾಯನೇ ! ಬರುವ ಅನೆ ತನಗೆ ಎಡಗಡೆ ಇರುವ ಮರಗಳ 

ಮುರಿಯುವುದ ನೋಡಿ ಅದಕ್ಕೆ ಬಲಗಣ್ಣು ಕುರುಡು ಎಂದೆನು. ಆನೆ ಯಾವ 

ಕಡೆಗೆ ಹೋದರೂ ಸುಮ್ಮನೆ ಕುಳಿತಿರುವುದಕ್ಕೆ ಅವಳು ಹೆಂಗಸು ಎಂದೆನು 

ಅವಳು ಆನೆಯ ಮೇಗಣಿಂದ ಕೆಳಗಿಳಿದು ಜಲಬಾಧೆ ಮಾಡಿ ಕೈಯೂರಿ 

ಎದ್ದುದಕ್ಕೆ ಅವಳು ಗರ್ಭಿಣಿಯೆಂದೆನು, ಈ ರಾಜಕುಮಾರ ಯಾರಿಗೂ 

ತಾಂಬೂಲ ಕೊಡದೆ ತಾನೇ ಸೇವಿಸುತ್ತ ಬರುವುದಕ್ಕೆ ಕೋಮಟಿಗನಿಗೆ 

ಉದಿಸಿದವನು, ಎಂದೆನು-- ಎಂದ ಮಾತ ಕೇಳಿ, ರಾಯ ಮೆಚ್ಚಿ, ಇಲ್ಲಿಗೆ ಅವನ 

ಕರೆತಂದು ಒಂಬತ್ತು ಕೋಟಿ ದ್ರವ್ಯವ ಕೊಟ್ಟು, ತಾನು ಸುಖವಾಗಿ 

ದ್ದನು ಎಂದು ಹೇಳಲು ಭೋಜರಾಯ ಲಜ್ಜಿತನಾಗಿ ತನ್ನ ಅರಮನೆಯ 

ಹೊಕ್ಕನು. 


ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಕನಕಾವತಿಯೆಂಬ ಪುಕ್ಕಳಿ ಪೇಳೆದ ಇಪ್ಪತ್ತೇಳನೆಯ ಕಥೆ,

.......

೨೮ ನೆಯ ಕಥೆ.


ಇಪ್ಪತ್ತೆಂಟನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ 

ರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು ಎಂದಿನಂತೆ ಸಿಂಹಾಸ 

ನದ ಬಳಿಗೆ ಬಂದು ಬಲಗಾಲ ನೀಡುವ ಸಮಯದಲ್ಲಿ ಆ ಸೋಪಾನದ 

ಅನಂಗಸೇನೆಯೆಂಬ ಪುತ್ತಳಿಯು ಧಿಕ್ಕರಿಸಲಾಗಿ; ಭೋಜರಾಯನು ಬೇರೆ 

ಸಿಂಹಾಸನದಲ್ಲಿ ಕುಳಿತು ಚಿತ್ರಶರ್‍ಮನಿಂದ ಪೇಳಿಸಿದ ಕಥೆ :--


ಎಲೆ ಪುತ್ತಳಿಯೇ ' ಕೇಳು. ಧಾರಾಪುರದಲ್ಲಿ ನಮ್ಮ ರಾಯ ಸುಖ 

ರಾಜ್ಯಗೆಯ್ಯುವಲ್ಲಿ ಒಂದು ದಿನ ಅಗ್ರಹಾರದ ದೇವಕರ್ಮನೆಂಬ ಬ್ರಾಹ್ಮಣ 

ದರ್ಭೆಗಳ ನಿಮಿತ್ತವಾಗಿ ಅರಣ್ಯದಲ್ಲಿ ಚರಿಸುತ್ತಿರುವಲ್ಲಿ, ಒಂದು ಬಳಿ 

ಯಲ್ಲಿ ಒಂಬತ್ತು ಕೋಟಿ ದ್ರವ್ಯವ ಕಂಡು, ಆದ ತೆಗೆದುಕೊಂಡು ಹೋಗಿ, 

ತನ್ನ ಶ್ರಮವ ತೀರಿಸಬೇಕಂದು ಯೋಚಿಸಿ, ಅಷ್ಟದಲ್ಲೇ ತನ್ನ ಸತಿಯ 

ಬಾಯಿ ಒಳ್ಳೆಯದಲ್ಲ, ಯಾರ ಸಂಗಡಲಾದರೂ ಹೇಳಿದರೆ ರಾಜರುಗಳಿಂದ



೧೧೮---------------ಕರ್ಣಾಟಕ ಕಾವ್ಯಕಲಾನಿಧಿ.-------------------------------


ಉಪಾಧಿ ತಟ್ಟಿತೆಂದು ತನ್ನ ಸತಿಯ ಚಿತ್ರವ ಪರಿಶೋಧಿಸಿ ಬಂದು, ತೆಗೆದು 

ಕೊಂಡು ಹೋಗುವ ಎಂದು ಊರಿಗೆ ಬಂದು, ತನ್ನ ಮನೆಯಲ್ಲಿ ಸ್ನಾನದೇ 

ವತಾರ್ಚನೆ ಭೋಜನವ ಮಾಡಿ, ಏಕಾಂತದಲ್ಲಿ ತನ್ನ ಸತಿಯ ಸಂಗಡ ಭಿನ್ನ 

ತಂತ್ರವಾಗಿ ಇಂತೆಂದನು :-ಎಲ್ ಸತಿಯೇ ! ನಾನು ಅರಣ್ಯದಲ್ಲಿ ಬಹಿ 

ರ್‍ಭೂಮಿಗೆ ಹೋದಲ್ಲಿ ಆಸನದಲ್ಲಿ ಒಂದು ಬಿಳಯಕಾಗೆ ಬಿದ್ದಿತು, ಮಾತ 

ಯಾರಿಗೂ ಹೇಳಬೇಡವೆನ್ನಲಾಗಿ ; ಅವಳು ಒಬ್ಬರಿಗೂ ಹೇಳುವುದಿಲ್ಲ 

ಎಂದು ಪತಿಯಕೊಡೆ ಹೇಳಿ, ಅಕ್ಷಣವೇ ನೆರೆಯವರ ಕೂಡ ತನ್ನ ಗಂಡನ 

ಕುಂಡೆಯಲ್ಲಿ ಮೂರು ಬಿಳಿಯ ಕಾಗೆ ಹುಟ್ಟಿತೆಂದ ಊರಿಗೆಲ್ಲಾ ಹೇಳಿ, 

ಅದ ಕೇಳಿದವರು ದೇವಕರ್ಮನ ಹೊಟ್ಟೆಯಲ್ಲಿ ನೂರು ಬಿಳಿಯ ಕಾಗೆ 

ಹುಟ್ಟಿತೆಂದು ತಂದು ಊರಿಗೆಲ್ಲಾ ಹೇಳಿದ ವರ್ತಮಾನವ ರಾಯ ಕೇಳಿ, ಆತನ 

ಕರೆತರಿಸಿ-ಎಲೈನಿನ್ನ ಗುದದಿಂದ ನೂರು ಬಿಳಿಯಕಾಗೆ ಹುಟ್ಟಿತೆಂದು 

ಹೇಳುತ್ತಾರೆ. ಇದು ನಿಜವೇ ? ಎನ್ನಲಾಗಿ, ಅವನು ಕೇಳೈಯ ರಾಯ 

ನೇ ! ಅರಸುಗಳಲ್ಲಿ ಮಿತ್ರರಲ್ಲಿ ಹಿರಿಯರಲ್ಲಿ ಗುರುವಿನಲ್ಲಿ ತಾಯಿತಂದೆ 

ಗಳಲ್ಲಿ ಸುಳ್ಳು ಆಡಬಾರದು ಎಂಬ ನೀತಿಯಿರುವುದರಿಂದ, ನಿನ್ನ ಕೂಡ 

ಅಬದ್ಧವ ನುಡಿಯಲಾಗದೆಂದು ಇಂತೆಂದನು:-ನನ್ನ ಸತಿಯ ಸಂಗಡ ಬಂದು 

ಬಿಳಿಯ ಕಾಗೆ ಆಸನದಲ್ಲಿ ಬಿದ್ದಿತೆಂದು ಹೇಳಿದುದುಂಟು. ಅದೇತಕೆಂದರೆ ಅರ 

ಣ್ಯದಲ್ಲಿ ಒಂಬತ್ತು ಕೋಟಿ ನಿಕ್ಷೇಪದ್ರವ್ಯವ ಕಂಡು ಮರೆಸಿ ಈಮೇರೆ 

ಹೇಳಿದೆನೆಂದು ಹೇಳಲಾಗಿ ; ರಾಯ ಈತನಲ್ಲಿ ಕಪಟವಿಲ್ಲದುದರಿಂದ ತಾನು 

ಕಂಡ ಸ್ಥಿತಿ ಹೇಳಿದ. ಯಥಾರ್ಥವಾದಿ ಎಂದು ಅವನ ಮಾತ ಕೇಳಿ ಪರಿತೋ 

ಷವ ಮಾಡಿಕೊಂಡು, ಅರಣ್ಯದಲ್ಲಿ ಅತ ಕಂಡಿದ್ದ ದ್ರವ್ಯವ ತೆಗೆಸಿ, ಆತನಿಗೆ 

ಕೊಟ್ಟು ತಾನೂ ಸವಾಲಕ್ಷ ಹೊನ್ನ ಕೊಟ್ಟು ಕಳುಹಿಸಿದನು-- ಎಂದ ಮಾ 

ತಿಗೆ ಅನಂಗಸೇನೆಯೆಂಬ ಪುತ್ಥಳಿ ನಗುತ್ತ ಹಾಸ್ಯಗೆಯು ಪೇಳಿದ 

ಉಪಕಥೆ :--


ಕೇಳೈಯ ಚಿತ್ರಶರ್‍ಮನೇ ! ನಮ್ಮ ಮಹಾರಾಯ ಈರಾಜ್ಯ ಪಾಲಿ 

ಸುವ ವೇಳೆಯಲ್ಲಿ ಒಂದು ದಿನ ಒಬ್ಬ ಯತಿ ಬಂದು ರಾಯನಿಗೆ ಆಶೀರ್ವಾ 

ದವ ಮಾಡಲಾಗಿ ; ರಾಯ ನಮಿಸಿ ಕುಳ್ಳಿರಿಸಿಕೊಂಡು ಎಲ್ಲಿಂದ ಬಂದಿರಿ ? 

ಎನ್ನಲಾಗಿ ; ಆಯತಿ-ಎಲೈ ಮಹಾರಾಯನೇ, ಹಿಮವತ್ಪರ್ವತದಿಂದ 



--------------------------ಬತ್ತೀಸಪುತ್ತಳಿಕಥೆ.-------------------------೧೧೯ 


ಬಂದೆನು ? ಎನ್ನಲಾಗಿ ;-ಅನತಿಶಯವೆಂದು ಕೇಳಿದುದಕ್ಕೆ, ಅಲ್ಲಿರುವ 

ಹಿಮವತಾರೇಶ್ವರನ ಗೋಪುರದ ಬಳಿಯಲ್ಲೊಂದು ಕೊಳವಿದೆ. ಅದ 

ಇಲ್ಲಿ ಸ್ನಾನ ಮಾಡಿದವರ ಆನೆ ನುಂಗುವುದು. ಅದಕ್ಕೆ ತಪ್ಪಿಸಿಕೊಂಡು 

ಸ್ನಾನ ಮಾಡಿದರೆ ಹದಿನಾಲ್ಕು ಲೋಕದಲ್ಲಿ ನಡೆವ ವರ್ತಮಾನವೆಲ್ಲಾ ತಿಳಿ 

ಯುವುದು ಎಂದು ಹೇಳಿದ ಮಾತ ಕೇಳಿ, ರಾಯ ಅದ ನೋಡಲೇಬೇಕೆಂದು. 

ಆಕ್ಷಣವೇ ಆಕಾಶಮಾರ್ಗದಲ್ಲಿ ಅಲ್ಲಿಗೆ ಹೋಗಿ, ಆ ಕೇತಾರೇಶ್ವರನ 

ಪೂಜಿಸಿ, ಆ ಕೊಳದಲ್ಲಿ ಸ್ನಾನವ ಮಾಡುವ ಸಮಯದಲ್ಲಿ ಆನೆ ನುಂಗುವು 

ದಕ್ಕೆ ಬರಲಾಗಿ; ತಾಳ ಪತ್ರದಿಂದ ಅನೆಯ ಸೀಳಿ, ಆ ಕೊಳದಲ್ಲಿ ಸ್ಥಾನವ 

ಮಾಡಿ, ಸಕಲಲೋಕದ ವಿದ್ಯೆಯ ತಿಳಿದು, ಅಲ್ಲಿಂದ ಮೇಲಕ್ಕೆ ಬಂದು ನಿಂದಿ 

ರಲಾಗಿ ; ಆ ಕೇತಾರೇಶ್ವರನು ಪ್ರಸನ್ನನಾಗಿ-ಎಲೈರಾಯ ! ನಿನ್ನ ಧೈಯ್ಯ 

ಸಾಹಸಕ್ಕೆ ಮೆಟ್ಟಿದೆನು. ನಿನಗೆ ಬೇಕಾದ ವರವ ಬೇಡು ಎನ್ನಲಾಗಿ ; 

ರಾಯನು-ಎಲೈ ದೇವನೇ ! ಈ ಯತಿಗಿಷ್ಟಾರ್ಥವಿತ್ತರೆ ನನಗೆ ಕೊಟ್ಟಂತೆ, 

ಎನ್ನಲಾಗಿ; ರಾಯನ ಮಾತಿಗಾಗಿ ಆ ಯತಿಗೆ ಇಷ್ಟಾರ್ಥವ ಪಾಲಿಸಿ, ರಾಯನ 

--ನೀನು ಪರೋಪಕಾರಿಯಹುದೆಂದು ಹೇಳಿ, ಅದೇವನು ಸಕಲ ಕಾಮ್ಯಾ 

ರ್ಥವೀವುದೊಂದು ರತ್ನವ ಕೊಟ್ಟು, ಅದೃಶ್ಯವಾದನು. ರಾಯ ಆ ರತ್ನವ 

ತೆಗೆದುಕೊಂಡು, ಯತಿಯ ಸುಖವಾಗಿರುತ್ತಿರಿ ಎಂದು ಹೇಳಿ, ಅಲ್ಲಿಂದ 

ಬರುವ ದಾರಿಯಲ್ಲಿ ಒಬ್ಬ ಅರಸು ರಾಜ್ಯಭ್ರಷ್ಟನಾಗಿ ಬರುವುದ ಕಂಡು-- 

ನೀನು ಯಾವ ದೇಶ ? ಎಲ್ಲಿಗೆ ಹೋಗುವೆ ? ಎಂದು ಕೇಳಲಾಗಿ ; ರಾಯನಿಗೆ 

ತಾನು ಶರಣಾಗತನಾಗಿ ನಾನು ಕುಂತಲದೇಶದರಸು, ಎಂದು ತನ್ನ ವೃತ್ತಾಂ 

ತವ ವಿವರಿಸಲಾಗಿ ; ರಾಯ ಮರುಗಿ ದೇವ ತನಗೆ ಕೊಟ್ಟಿದ್ದ ಸಕಲ 

ಕಾಮ್ಯಾರ್ಥವೀವ ರತ್ನವ ಆ ಅರನಿಗೆ ಕೊಟ್ಟು, ಈ ರತ್ನ ಏನು ಬಯಸಿ 

ದಾಗ್ಯೂ ಕೊಡುವುದೆಂದು ಹೇಳಿ, ಆತನ ಸಂತೈಸಿ ಕಳುಹಿಸಿ, ತಾನು ಇಲ್ಲಿಗೆ 

ಬಂದು ಸುಖವಾಗಿದ್ದನು, ಎಂದು ಹೇಳಲು, ಭೋಜರಾಯನು ಅಪ್ರಯೋ 

ಜಕನಾದೆನೆಂದು ಖಿನ್ನನಾಗಿ ತನ್ನ ಅರಮನೆಯ ಸೇರಿಕೊಂಡನು. 


ಇಂತು ಕರ್ಣಾಟಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಅನಂಗಸೇನೆಯೆಂಬ ಪುತ್ತಳಿ ಪೇಳಿದ ಇಪ್ಪತ್ತೆಂಟನೆಯ ಕಥೆ.

......


೧೨೦---------------ಕರ್ಣಾಟಕ ಕಾವ್ಯ ಕಲಾನಿಧಿ -----------------------


೨೯ ನೆಯ ಕಥೆ.

ಇಪ್ಪತ್ತೊಂಬತ್ತನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವ 

ತಾರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು, ಎಂದಿನಂತೆ ಸಿಂಹಾಸ 

ನದ ಬಳಿಗೆ ಬಂದು, ಬಲಗಾಲ ನೀಡುವ ಸಮಯದಲ್ಲಿ -ಆ ಸೋಪಾನದ 

ಸಂಧ್ಯಾವತಿಯೆಂಬ ಪುತ್ತಳಿಯು-ಹೊಹೊ ? ಎಂದು ಧಿಕ್ಕರಿಸಲಾಗಿ ; 

ಭೋಜರಾಯನು ಖಿನ್ನನಾಗಿ, ಬೇರೆ ಸಿಂಹಾಸನದಲ್ಲಿ ಕುಳಿತು, ಚಿತ್ರಶ 

ರ್ಮನಿಂದ ಹೇಳಿಸಿದ ಕಥೆ :


ಎಲೆ ಪುತ್ತಳಿಯೆ ! ಕೇಳು. ಧಾರಾಪುರದಲ್ಲಿ ನಮ್ಮ ರಾಯನು ಸುಖ 

ರಾಜ್ಯ ಗೆಯ್ಯುವಲ್ಲಿ-- ನೆರೆಜಾಣರುಂಟೋ ಇಲ್ಲವೋ ತಿಳಿಯಬೇಕೆಂದು, 

ಸೀಮೆ ಗ್ರಾಮಾಂತರಗಳಿಗೆಲ್ಲಾ- 1ಸತ್ತವನ ಕೈರಸವ 1 ಸೀನೀರಿನ

ಬಾವಿಯ ಸಹ ಕಳುಹಿಸುವುದೆಂದು ನಿರೂಪಗಳಲ್ಲಿ ಬರೆಯಿಸಿ, ಊಳಿ 

ಗದವರ ಕೈಯಲ್ಲಿ ಕೊಟ್ಟು ಕಳುಹಿಸಲಾಗಿ ; ಆ ಊಳಿಗದವರು ಗ್ರಾಮ 

ಗ್ರಾಮಕ್ಕೆ ಹೋಗಿ, ಆ ನಿರೂಪಗಳ ಕೊಟ್ಟುದ ನೋಡಿ, ಬರೆದಿರುವ ಒಕ್ಕ 

ಣೆಗೆ ಯಾರೂ ಉತ್ತರವ ಕೊಡದೆ ಇರುವ ಕಾರಣ, ಪ್ರವೀಣವೀರ 

ಪಟ್ಟಣದ ವಚನಶೂರ ಕಂಡು ರಾಯನ ನಿರೂಪವ ತೆಗೆದುಕೊಂಡು, ಒಕ್ಕ 

ಣೆಯ ಓದಿನೋಡಿ – 2(ರಸ) ವೆಂಬುದು2 ಲವಣ, ಸತ್ತವನೆಂದರೆ ದರಿದ್ರನು 

ಎಂದು ನಿಶ್ಚೈಸಿ, ಬಾವಿಗೆ ಉತ್ತರತೋರದೆ ಆಗ ಒಬ್ಬ ದರಿದನ ಕರೆತಂದು 

ಅವನ ಕೈಯಲ್ಲಿ ಉಪ್ಪುಕೊಟ್ಟು, ಬದಲು ಬಿನ್ನವತ್ತಲೆಯಲ್ಲಿ-- ತಮ್ಮ 

ಅಪ್ಪಣೆ ಮೇರೆಗೆ ಸತ್ತವನ ಕೈರಸ ಕಳುಹಿಸಿದ್ದೇನೆ. ಬಾವಿಸಿ ಕಳುಹಿಸು 

ವೆನೆಂದರೆ ಬಾವಿ ಬಹು ಅಗಡಾಗಿ ಇದೆ. ತಮ್ಮ ಸನ್ನಿಧಿಯಲ್ಲಿ ಸ್ವಾದಾಗಿ 

ರುವ ಬಾವಿಯ ನನ್ನ ಮೇಲೆ ಕಟಾಕ್ಷವಿಟ್ಟು ಇಲ್ಲಿಯ ತನಕ ಕಳುಹಿಸಿಕೊ 

ಟ್ಟರೆ, ಆ ಎರಡೂ ತೆಕ್ಕೆಯಹಾಕಿ ಕಳುಹಿಸುತ್ತಲಿದ್ದೇನೆ ಎಂದು ಅದರಲ್ಲಿ 

ಬರೆದುಕೊಟ್ಟು ಕಳುಹಿಸಲು ; ಹಾಗೆ ಬರೆದಿರುವ ಬಿನ್ನವತ್ತಲೆಯ ರಾಯ 

ಓದಿಸಿ, ಕೇಳಿ, ಸಂತೋಷಪಟ್ಟು-ಇಂಥ ಚತುರತೆಯುಳ್ಳವನು ನಮ್ಮ ಬಳಿ 

ಯಲ್ಲಿ ಇರಬೇಕೆಂದು, ಅವನ ಕರೆಸಿ, ಸಮ್ಮುಖದಲ್ಲಿ ಇರಿಸಿಕೊಂಡು 

...............

ಪಾ-1, ಸತ್ತವನಕೈಯಲ್ಲಿ ಸರ್ವರಸವ. 2 ಸರ್ವರಸ, ಸರ್ವಬಾವಿಯನ್ನೂ,




-------------------------ಬತ್ತೀಸಪುತ್ತಳಿಕಥೆ.---------------------೧೨೧


ಕಾಪಾಡಿದನೆಂದುದಕ್ಕೆ ಸಂಧ್ಯಾವಳಿಯೆಂಬ ಪುತ್ತಳಿ ನಗುತ್ತ ಹಾಸ್ಯಗೆಯ್ದು 

ಪೇಳಿದ ಉಪಕಥೆ :--


ಕೇಳೈಯ ಚಿತ್ರವರ್ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ 

ರಾಜ್ಯ ಪಾಲಿಸುವ ವೇಳೆಯಲ್ಲಿ ಒಂದು ದಿನ ಒಬ್ಬಳು ಹೆಣ್ಣು ಬಂದಳು. 

ಅವಳು ಹೇಗಿದ್ದಳೆಂದರೆ , ಚಿನ್ನದಂತೆ ದೇಹ, ಕಮಲದಂತೆ ಮೂಗು, 

ಚಕ್ರವಾಕಪಕ್ಷಿಯಂತೆ ಕುಚ, ಹಂಸೆಯಂತೆ ನಡೆ, ಸಿಂಹದಂತೆ ನಡು, 

ಕುಮುದದಂತೆ ನೇತ್ರ, ದುಂಬಿಯಂತೆ ಮುಂಗುರುಳು ; ಚಂಚಲಿ 

ಸುತ ಬಂದು ರಾಯನ ಎದುರಾಗಿ ನಿಂತು ಕೈಮುಗಿದು ಇಂತೆಂದಳು :-- 

ಕೇಳೈಯ ಮಹಾರಾಯನೇ ! ಬಾಹ್ಲಿಕ ದೇಶದ ಪುಂಡರೀಕಪಟ್ಟಣದ 

ಕುಮುದ್ವತಿಯೆಂಬ ಮೋಹನಾಂಗಿ ನಿನ್ನ ರೂಪ ಸ್ವಪ್ನದಲ್ಲಿ ಕಂಡು 

ಕಾತರಿಸುತ್ತ ನಿನ್ನಮೇಲಣ ವ್ಯಾಮೋಹದಿಂ1ದಿರುವುದ ಕಂಡು ಅಲಂಬರನು 

ಪೀಡಿಸುತ್ತಿರಲಾಗಿ, ಅವಳು ಪರವಶದಿಂದ ಒಂಬತ್ತನೆಯ ಅವಸ್ಥೆಗೊಳಗಾ 

ಗಲಾಗಿ; ಅವಳಿಗೆ ತಳಿರ ಹಾಸಿಗೆ ಪರು ಮೊದಲಾಗಿ ಶೈತ್ಯೋಪಚಾರಗಳ 

ಮಾಡಿದಾಗ್ಯೂ ವಿರಹೋದ್ರೇಕವಾಗಿ, ಚಂದ್ರಕಿರಣದಿಂದ (ಅತಿ ಕಷ್ಟದ) 

ಅವಸ್ಥೆ ಹೊಂದಿರುವಳು.1 ನೀನು ಅಗತ್ಯವಾಗಿ ಈಕ್ಷಣವೇ ದಯೆಗೈಯ 

ಬೇಕು. ತಾಮಸಮಾಡಿದರೆ ಜೀವ ಹೋಗುವುದೆಂದು ಪೇಳಿದುದ-ರಾಯ 

ಕೇಳಿ, ಕರುಣವ ತಾಳಿ, ಭಟ್ಟಿಸಹಿತವಾಗಿ ಹೊರಟು, ಆಕಾಶಮಾರ್ಗದಲ್ಲಿ 

ಅಲ್ಲಿಗೆ ಹೋಗಿ ಇರಲಾಗಿ ; ಅವಳ ದೂತಿಯು ಹೋಗಿ ರಾಯ ಬಂದ 

ವರ್ತಮಾನವ ಪೇಳಿದುದಕ್ಕೆ, ಆ ಕುಮುದ್ವತಿಯು ಸಂಭ್ರಮದಿಂದ ಆಗ 

ಮಡಿಯ ಕಟ್ಟಿ ಅಲಂಕೃತಳಾಗಿ, ಸಾಯಂಕಾಲವಾದ ಬಳಿಕ ತನ್ನ ದೂತಿಯ 

ಕಳುಹಿಸಿ, ರಾಯನ ಕರೆಸಿಕೊಂಡು, ಆ ರಾತ್ರಿ ರಾಯನೊಡನೆ ಸುಖದಿಂ 

ದಿದ್ದು ಬಳಲಿ ನಿದ್ರೆಗೈದು ಬೆಳಗಾದ ಬಳಕ, ಎದ್ದು, ರಾಯ ಭಟ್ಟಿಯ ಬಳಗೆ 

ಬಂದು, ತನ್ನ ಬಾಯಿನಿಂದ-ಕುಮುದ್ವತಿ ಏನು ಕೇಳಿದರೂ ಕೊಡುವೆನೆಂ 

ದು ಎಂದ ಮಾತಿಗೆ ಭಟ್ಟಿಯಿಂತೆಂದನು: ಕೇಳೈಯ ರಾಯನೇ! ಸ್ತ್ರೀಯರ 

ನಂಬಲಾಗದು, ಅವರ ಮನಸ ಕಾಣಕೊಡದು, ಅದುಕಾರಣ ಇದೆಲ್ಲಾ 

2ಕಾರ್‍ಯಕಾರಣವೆಂದು2 ಹೇಳಿದ ಮಾತನುಲ್ಲಂಘಿಸಿ, ಮತ್ತೊಂದು ದಿನ 

.........

ಪಾ-1, ಬೇಗುದಿಯಾಗಿ ದಿವಾರಾತ್ರಿಯಲ್ಲಿ ನಿಮ್ಮ ಸ್ಮರಣೆ ಮಾಡುತ್ತ ಕಡ 

ಮೆಯ ಅವಸ್ಥೆಯ ಮರೆದಿರುವಳು. 2. ಕಾವ್ಯವಾಶಿಯದಪ್ಪುದು. 


೧೨೨----------------------ಕರ್ಣಾಟಕ ಕಾವ್ಯಕಲಾನಿಧಿ.--------------------------


ರಾಯ ಅವಳಲಿ ಹೋಗಿ ಬೆರೆದುಬರುವಾಗ-ಕುರುಳು ಬೆರಳ ಕೇಳಲಾಗಿ, 

ಎರಡನೂ ತೆಗೆದು ಕೊಟ್ಟುದ ರಾಯ ತೆಗೆದುಕೊಂಡು ಬಂದು, ಭಟ್ಟಿಗೆ 

ತೋರಿ-ಅವಳ ನಂಬಲಾಗದು ಎಂದೆಯಲ್ಲ' ಎನ್ನಲಾಗಿ ; ಭಟ್ಟಿ --ಎಲೈ 

ರಾಯನೇ ! ಸಕಲವ ತಿಳಿದಿರುವಲ್ಲಿ ರಾಜ್ಯೋತ್ತರಕ್ಕೆ ಪ್ರತ್ಯುತ್ತರ 

ವುಂಟೆ, ಎನ್ನಲಾಗಿ ; ಮತ್ತಿಂತೆಂದನು:-ನಾರಿಯ ಚಿತ್ರ, ಕುದುರೆಯ ಹೃದ 

ಯ, ಮಿಂಚಿನೋಟ, ಮಂಜಿನಡಿ, ಸುರಚಾಪದ ನೆಲೆ-ಇವ ತಿಳಿಯುವುದಕ್ಕೆ 

ಹರಿಹರಬ್ರಹ್ಮಾದಿಗಳಿಗಾಗದು ಎಂದು ಹೇಳಲು ; ಭಟ್ಟಿಯ ರಾಯ ಜರೆದು, 

ಅವಳ ಗುಣವ ತೋರುವೆನೆಂದು, ಬರಿದೆ ದೇಹಕ್ಕೆ ಲಘುವಿಲ್ಲವೆಂದು 

ಮೂರುನಾಲ್ಕು ದಿನ ಹೋಗದೆ ಇದ್ದು, ಐರನೆಯ ದಿವಸ ರಾತ್ರಿ ಯೋ 

ಗಾಭ್ಯಾಸದಿಂದ ಪರಮಾತ್ಮನ ಬ್ರಹ್ಮರಂಧ್ರದಲ್ಲಿ ನಿಲ್ಲಿಸಿ ನಿರ್ಜೀವಿಯಾಗಿ 

ಮಲಗಿರುವ ರಾಮನ ಅವಳು ನೋಡಿ, ಏಳಿಸಿ ಮಾತನಾಡಿಸಿದರೂ ಏಳ 

ದೆ ಮಾತನಾಡದೆ ಮಲಗಿರುವುದಕ್ಕೆ ಕೆಟ್ಟೆನೆಂದು ವ್ಯಾಕುಲಪಡುತ್ತ, ಇಂತ *

ಪ್ಪ ಕಾಂತನಾದ ರಾಯ ಹೋದ ಬಳಿಕ ಸದಗಮನವೇ ಸರಿ ಎನ್ನುತ 

ಕೊಂಡವ ತೆಗೆಸಿ, ಬೆಂಕಿಯ ಹಾಕಿಸಿ, ಅದಲ್ಲಿ ಬೀಳುವ ವೇಳೆಯಲ್ಲಿ, ಪ್ರಾ 

ಣ ಬಂದಂತೆ ರಾಯ ಎದ್ದು, ಕಣ್ಣ ತೆರೆದು, ಅವಳ ಮುಖವ ನೋಡಲಾಗಿ 

ಅವಳು ಅತಿಹರ್ಷದಿಂದ ಈರ್ವರೂ ಆಲಿಂಗಿಸಿ ಅವಳ ಸಂತೈಸಿ ಅಲ್ಲಿಂದ 

ಭಟ್ಟಿಯ ಬಳಿಗೆ ಬಂದು, ನಡೆದ ವೃತ್ತಾಂತವ ಹೇಳಲಾಗಿ ; ಭಟ್ಟಿಯು-- 

ಎಲೈ ರಾಯನೇ ! ಇನ್ನು ಹೇಳುವೆ ಕೇಳು, ನೀರಿನಲ್ಲಾದರೂ ಮೀನಿನ ಅಡಿ 

ಕಾಣಬಹುದು, ಸ್ತ್ರೀಯರ ಚಿತ್ರವ ಕಾಣಕೂಡದು, ಎನ್ನಲು ; ರಾಯ-- 

ನಿನ್ನ ಮನಸೊಪ್ಪುವ ರೀತಿಗೆ ಪರೀಕ್ಷೆ ಕೊಡವೆನೆಂದು ಭಟ್ಟಿಯೊಡನೆ ಪೇಳಿ, 

ಮತ್ತೊಂದು ದಿನ ಅವಳಲ್ಲಿ ಹೋಗಿ ಕ್ರೀಡಾವಿಲಾಸದಿಂದ ಸುಖಿಸಿ, ಆ ಬ 

ಳಿಕ ಬರಿಯ ಕಲಹವ ತೆಗೆದು ಕೋಪಿಸಿಕೊಂಡು ಹೊರಟು ಬರಲಾಗಿ ; 

ಅವಳು ರಾಯನ ಹಿಂದೆ ಬರುವಲ್ಲಿ ಮಾರ್ಗದಲ್ಲಿ ಕಾಡುಗಿಚ್ಚು ಹತ್ತಿ ಉರಿ 

ಯುವುದ ಕಂಡು ರಾಯ ಅಗ್ನಿಸ್ತಂಭ ಕಲಿತಿರುವದರಿಂದ ಆ ಕಿಚ್ಚಿನಲ್ಲಿ 

ಹೊಕ್ಕು ಮರೆಯಾಗಲಾಗಿ, ಅವಳು ಆ ಕಿಚ್ಚಿನಲ್ಲಿ ಹೊಕ್ಕುದ ಕಂಡು, 

ಅಲ್ಲಿಗೆ ಬಂದು ರಾಯನ ಕಾಣದೆ,--ರಾಯನೆಲ್ಲಿ ? ಎಂದು ಭಟ್ಟಿಯ ಕೇಳ 

ಲಾಗಿ ; ರಾಯ ಕಿಚ್ಚಿನಲ್ಲಿ ಬಿದ್ದು ಸತ್ತನೆಂದು ಹೇಳಲಾಗಿ ; ಭಟ್ಟಿಯು ಪೇ 



---------------------ಬತ್ತೀಸಪುತ್ತಳಿಕಥೆ. ------------------------೧೨೩


ಳಿದ ಮಾತ ಕೇಳಿ, ಆ ಕಿಚ್ಚಿನಲ್ಲಿ ಅವಳು ಬಿದ್ದು ಹೋದುದ ರಾಯ ಕಂ 

ಡು, ಕಾಂತೆ ಹೋದಳೇ ! ಎಂದು ಅವಳ ಗುಜವ ಆಡುತ್ತ, ರಾಯನು-- 

ಎಲೆ ಕಾಂತೆಯೇ ! ನಿನ್ನ ನಿರ್ಧರದ ನಡತೆಗೆ ಮೆಚ್ಚಿದೆ, ನಿನಗೇನು ಬೇಕಾ 

ದರೂ ಕೊಡುವೆನು ಕೇಳಕೊ ಎನ್ನಲಾಗಿ ; ತನ್ನ ಜೀವನ ಪಡೆದುದ 

ಕಂಡು, ಅವಳು ಮುಗುಳುನಗೆಯಿಂದ ತೋರಣಗಂಭದಲ್ಲಿ ಒಬ್ಬ ಭೈರ 

ವ ಜೋಗಿ ಶೂಲದಲ್ಲಿರುವನು, ಅವನ ಪ್ರಾಣ ತಂದುಕೊಡಬೇಕು ಎಂದು 

ದಕ್ಕೆ, ರಾಯ-ಅವನು ಯಾರು ? ಎನ್ನಲಾಗಿ ; ಆತ ನನ್ನ ಪತಿಯಾಗಬೇ 

ಕೆಂದ ಮಾತ ಕೇಳ, ಭಟ್ಟಿಯು ಹೇಳಿದ ಮಾತು ಸರಿ ಬಂದಿತು ಎಂದು ಯೋ 

ಚಿಸುವಲ್ಲಿ ; ಅದ ಭಟ್ಟಿಯು ತಿಳಿದುರಾಯನೊಡನೆ ಇಂತೆಂದನು:-ಕೇ 

ಳೈಯ ರಾಯನೇ! ನಿನ್ನ ಸಾಹಸ ಪರಾಕ್ರಮ ಉದಾರಗುಣ ಲೋಕವಿಖ್ಯಾತಿ 

ಯಾಗಿರುವುದ ಕೇಳಿ, ಇವಳು ತನ್ನ ಕಾರ್‍ಯಕ್ಕೊಸ್ಕರ ನಿನ್ನ ಕನಸಿನಲ್ಲಿ 

ಕಂಡೆನೆಂದು ಕಪಟದಿಂದ ತನ್ನ ದೂತಿಯ ಕೂಡೆ ಹೇಳಿ ಕಳುಹಿಸಿ, ನಿನ್ನ 

ಬರಮಾಡಿಕೊಂಡು, ಅಲ್ಲಿ ತಾನು ನಿನ್ನಲ್ಲಿ ವಶೀಕರವಾದಂತೆ ತೋರಿಸಿ, ವ್ಯಾ 

ಮೋಹ ಹುಟ್ಟಿಸಿ, ಪ್ರಾಣಪರ್‍ಯಂತರ ಮೆಚ್ಚಿಸಿ, ತನ್ನ ಕಾವ್ಯ ಸಾಧಿಸಿಕೊಂ 

ಡಳು-ಎಂದು ಹೇಳಿದ ವಾಕ್ಕಿಗೆ ರಾಯನೊಡಂಬಟ್ಟು, ಮಾತಿಗೆ ತಪ್ಪಬಾರ 

ದೆಂದು, ಇವಳ ಕಪಟದ ಮಾತ ಸಲ್ಲಿಸಿ ಕೊಡುವ ಬಾರೆಂದು ಭಟ್ಟಿಯು 

ಸಹಿತ ಅವಳ ಕರೆದುಕೊಂಡು, ಖೇಚರದ ನೀಲಾವತಿಯೆಂಬ ಪಟ್ಟಣದ 

ಅಂಬಿಕಾದೇವಿಯ ಗುಡಿಯ ಮುಂದಣ ತೋರಣಗಂಭದ ಕೂಲದ ಬಳಿಗೆ 

ಹೋಗಿ, ಆ ಶೂಲದಲ್ಲಿದ್ದವನ ಸಂಜೀವನ ವಿದ್ಯದಿಂದ ಬದುಕಿಸಿ, ತನಗೊಲಿ 

ದವಳು ಅನ್ಯವಶವಾದಳೆಂಬ ವಿರೋಧವಿಲ್ಲದೆ ಅವನಿಗೆ ಕೋಟಿ ದ್ರವ್ಯವ 

ಕೊಟ್ಟು ಸುಖವಾಗಿರಿ ಎಂದು ಹೇಳಿ, ಅಲ್ಲಿಂದ ಭಟ್ಟಿ ಸಹಿತ ಇಲ್ಲಿಗೆ ಬಂದು 

ತಾನು ಸುಖವಾಗಿ ಇದ್ದನು-ಎಂದು ಹೇಳಲು ; ಭೋಜರಾಯನು ಶಿರವ 

ಬಾಗಿಸಿಕೊಂಡು ತನ್ನ ಅರಮನೆಗೆ ಹೊಕ್ಕನು.  


ಇಂತು ಕರ್ಣಾಟಕ ಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ

ಸಂಧ್ಯಾವತಿಯೆಂಬ ಪುಳಿ ವೇಳೆದ ಇಪ್ಪತ್ತೊಂಬತ್ತನೆಯ ಕಥೆ.

....


೧೨೪---------------------ಕರ್ಣಾಟಕ ಕಾವ್ಯಕಲಾನಿಧಿ.----------------------


ಮೂವತ್ತನೆಯ ಕಥೆ.


ಮೂವತ್ತನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚ 

ನೆ ಭೋಜನ ತಾಂಬೂಲವ ತೀರಿಸಿಕೊಂಡು ಎಂದಿನಂತೆ ಸಿಂಹಾಸನದ ಬಳಿಗೆ 

ಬಂದು ಬಲಗಾಲ ನೀಡುವ ಸಮಯದಲ್ಲಿ, ಆ ಸೋಪಾನದ ಕಾಮಕರ್ಣಿಕೆ 

ಯೆಂಬ ಪುತ್ತಳಿಯು--ಹೋಹೋ ನಿಲ್ಲು ನಿಲ್ಲು ! ಎಂದು ಧಿಕ್ಕರಿಸಲಾಗಿ ; 

ಭೋಜರಾಯನು ಲಜ್ಜಿತನಾಗಿ ಬೇರೆ ಸಿಂಹಾಸನದಲ್ಲಿ ಕುಳಿತು, ಚಿತ್ರ 

ಶರ್ಮನಿಂದ ಪೇಳಿಸಿದ ಕಥೆ :--


ಎಲೆ ಪುತ್ತಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ರಾಯನು 

ಸುಖದಿಂದ ರಾಜ್ಯಗೆಯ್ಯುವಲ್ಲಿ ಒಂದು ದಿನ ಆ ಪುರದ ವಿಕ್ರಮನೆಂಬ ವೀರನು 

ಬಹುದರಿದ್ರನಾಗಿ ಸತಿಸುತರ ಸಾಕಲಾರದೆ ಒಂದು ದಿನ ಊರಮುಂದಿರುವ 

ಭೈರವನ ಗುಡಿಗೆ ಹೋಗಿ, ಆ ದೇವರ ಷೋಡಶೋಪಚಾರದಿಂದ ಪೂಜಿಸಿ, 

ಕೊರಲಿಗೆ ಗಂಡುಗತ್ತರಿಯ ಹಾಕಿಕೊಂಡು ತಿರವ ಕತ್ತರಿಸುವ ವೇಳೆಯಲ್ಲಿ 

ಆ ಭೈರವನು ಪ್ರಸನ್ನನಾಗಿ ನಿನಗೆ ಬೇಕಾದ ವರವ ಕೇಳಿಕೊ ಎನ್ನ 

ಲಾಗಿ ; ಅವ ತನ್ನ ದರಿದ್ರನ ಬಿಡಿಸಿ ಸಕಲೈಶ್ವರ ಪಾಲಿಸೆಂದು ಬೇಡಿದು 

ದಕ್ಕೆ ಆ ದೇವ ತನ್ನ ಕೈಯಲ್ಲಿದ್ದ ಡಮರುಗವ ಕೊಟ್ಟು -ಇದು ನೀನು ಕೇ 

ಳಿದುದ ಕೊಡುವುದು, ನಿನ್ನ ನೆರೆಮನೆಯವರಿಗೆ ನಿನಗಿಂತ ಭಾಗ್ಯ ಹೆಚ್ಚಾಗಿ 

ಬರುವುದು ; ಅದ ಕಂಡು ನೀನು ವ್ಯಸನಪಡಬೇಡ-- ಎಂದು ಹೇಳಿ ಕಳುಹಿ 

ಸಲಾಗಿ ; ಅವನು ಡಮರುಗವ ತೆಗೆದುಕೊಂಡು, ತನ್ನ ಮನೆಗೆ ಬಂದು ನೆರೆ 

ಮನೆಯವರಿಗೆ ನನಗಿಂತ ಮಿಗಿಲಾಗಿ ಭಾಗ್ಯಬಂದರೆ ನಾನು ಹೇಗೆ ಸೈರಿಸಲಿ 

ಎಂದು ತನಗೆ ಹತ್ತು ವರಹ ಬರಲೆಂದು ಆ ಡಮರುಗವ ಬಡಿದು ಭಜಿಸ 

ಲಾಗಿ ; ನೆರೆಯವರಿಗಿತಪ್ಪತ್ತು ತನಗೆ ಹತ್ತು ವರಹ ಬಂದುದ ತಿಳಿದು, ತನಗೆ 

ಇಪ್ಪತ್ತು ವರಹ ಬರಲಿ ಎಂದು ಮಿಡಿದುದಕ್ಕೆ ನೆರೆಯವರಿಗೆ ನಾಲ್ವತ್ತು 

ವರಹ ತನಗೆ ಇಪ್ಪತ್ತು ವರಹ ಬರಲಾಗಿ ; ಈ ಮೇರೆ ಆ ಡಮರುಗವ 

ಮಿಡಿಯುತ್ತ ನೂರಾಲು ಕೋಟಿದ್ರವ್ಯವುಂಟಾಗಿ ನೆರೆಯವರಿಗೆ ಬಂದಕ್ಕೆರ 

ಡಾಗಿರುವುದ ಕಂಡು, ಅವರ ಕೆಡಿಸುವ ಯೋಚನೆಯ ಪ್ರತಿನಿತ್ಯ ಮಾಡು 

ವುದ ಅವನ ಸತಿಸುತರು ತಿಳಿದು,-- ಅವರವರ ಪುಣ್ಯದಿಂದ ನೆರೆಹೊರೆಯು


---------------------ಬತ್ತೀಸಪುತ್ತಳಿಕಥೆ .----------------------------೧೨೫


ಬದುಕಿದರೆ ನೀನೇಕೆ ವ್ಯಸನ ಪಡುವೆ ? ಲೋಕದಲ್ಲಿ ಸಕಲರೂ ಬದು 

ಕುವುದ ಎಣಿಸಬೇಕಲ್ಲದೆ ಕೇಡ ಯೋಚಿಸಬಾರದೆಂದು ನುಡಿದು, ಅಮೇ 

ಲಾದರೂ ಹೇಗೆಂದರೆ 1 “ಸ್ವಾದಕವಾದ ನದಿಗಳು, ಕೆರೆಗಳು ಪರೋಪ 

ಕಾರಕ್ಕಾಗಿ ಇರುವುದಲ್ಲದೆ ತಮ್ಮ ರುಚಿಯ ತಾವು ತಿಳಿಯಲಿಲ್ಲ ; ತರು 

ಗಳು ಪರೋಪಕಾರಕ್ಕಾಗಿ ಫಲ ಬಿಡುವುವಲ್ಲದೆ ತಮ್ಮ ಹಣ್ಣ ತಾವು ತಿನ್ನ 

ಲಿಲ್ಲ ; ಪಶುಗಳು ಪರೋಪಕಾರಕ್ಕಾಗಿ ಹಾಲ ಕೊಡುವುವಲ್ಲದೆ ತಮ್ಮ 

ಹಾಲ ತಾವು ಕುಡಿಯಲಿಲ್ಲ ; ಸತ್ಪುರುಷರು ಪರೋಪಕಾರಕ್ಕಾಗಿ ತಾವು 

ಬದುಕುವರು ” ಎಂಬ ನೀತಿಯಿರುವುದ ತಿಳಿದು ಪರರು ಬದುಕುವುದಕ್ಕೆ 

ಸಂತೋಷಪಡಬೇಕಲ್ಲದೆ, ಹೀಗೆ ಸಂಕಟಪಡಬಾರದೆಂದು ಹೇಳಿದ ಸತಿಸುತ 

ರ ಜರೆದು, ನೆರೆಯವರು ಕೆಡುವ ಯೋಚನೆ ಮಾಡಿದನು. ಅದೇನೆಂದರೆ-- 

ತಾನು ಸಂಪಾದಿಸಿದ ದ್ರವ್ಯ ಯಾವತ್ತು ನೆರೆಯವರದೂ ಹೋಗಲೆಂದು 

ಡಮರುಗವ ಮಿಡಿಯಲಾಗಿ, ಆಗ ನೆರೆಯವರ ಭಾಗ್ಯವೆಲ್ಲಾ ಹೋದುದ 

ಕಂಡು, ಬಳಿಕ ತನ್ನ ಕಣ್ಣು ಕಾಲು ಹೋಗಲೆಂದು ಡಮರುಗವ ಮಿಡಿ 

ಯಲಾಗಿ, ನೆರೆಯವರ ಕಣ್ಣು ಕಾಲು ಹೋಗಲಾಗಿ, ಈ ವರ್ತಮಾನವ ರಾ 

ಯನು ಕೇಳಿ, ಆ ವಿಕ್ರಮವೀರನ ಕರೆಯಿಸಿ, ನೆರೆಯವರಿಗೇನು  ಕೃತ್ರಿಮ 

ಮಾಡಿದೆ ಹೇಳು ಎನ್ನಲಾಗಿ; ಅವನು-ಕೇಳೈಯ ರಾಯನೇ ! ಪರರು ಬದು 

ಕುತ್ತ ಇದ್ದರೆ ನಾನು ನೋಡಿ ಸೈರಿಸಲಾರೆ. ಅದುದರಿಂದ ನಾನು 

ಇಂಥ ಮಾಯ ಮಾಡಿದೆನೆಂದು ತನ್ನ ಗುಣವ ರಾಯನೊಡನೆ ಮರೆಯದೆ 

ಪೇಳಿದ ಮಾತಿಗೆ ರಾಯನು ಮೆಚ್ಚಿ, ಅವನಿಗೆ ಸವಾಲಕ್ಷ ದ್ರವ್ಯವ ಕೊ 

ಟ್ಟು ಮುಂದೆ ಇನ್ನು ಇಂಥ ದುರ್ಬುದ್ದಿ ಯೋಚಿಸದಿರು ಎಂದು ಬುದ್ದಿಯ 

ಕಲಿಸಿ, ಮನ್ನಿಸಿ, ಕಳುಹಿದನು-ಎಂದ ಮಾತಿಗೆ ಕಾಮಕರ್ಣಿಕೆಯೆಂಬ ಪು 

ತ್ತಳಿಯು ನಗುತ್ತ ಹಾಸ್ಯಗೆಯ್ದು ಹೇಳಿದ ಉಪಕಥೆ :-- 


ಕೇಳೈಯ ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ

ರಾಜ್ಯವ ಪಾಲಿಸುವ ವೇಳೆಯಲ್ಲಿ ಒಂದು ದಿನ ಉಜ್ಜಿನಿ ಪಟ್ಟಣದಲ್ಲಿ ವಾಸ 

ವಾಗಿರುವ ಪಾಂಚಾಲ ದೇಶದ ವರ್ತಕನಾದ ಭದ್ರಸೇನನ ಪತ್ನಿ ತನ್ನ 

ತಮ್ಮನಾದ ಜಯಪಾಲನ ಕರೆದು ಚಿನ್ನದ ವ್ಯಾಪಾರವ ಮಾಡೆಂದು ಸಾವಿರ

.................

ಪಾ-1, ಮತಿಂತೆಂದರು ಲೋಕದಲ್ಲಿ.



೧೨೬-------------ಕರ್ಣಾಟಕ ಕಾವ್ಯಕಲಾನಿಧಿ.-----------------------------


ವರಹವ ಕೊಡಲಾಗಿ ; ಅವನು ಆ ಹಣವ ತೆಗೆದುಕೊಂಡು ಬಂದು ಪೇಟೆ 

ಪೇಟೆ ತಿರಿಗಿ ಯಾರೂ ಕೊಳ್ಳದಿರಲಾಗಿ; ಆ ಸಮಯಕ್ಕೆ ಆ ಪಟ್ಟಣದೊಳೊ 

ಬ್ಬ ಕಾಲಜ್ಞಾನಿಯೆಂಬುವನು ಒಂದು ಚೀಟಿನಲ್ಲಿ "ನದಿಯ ಫಲ, ವೃಕ್ಷದ 

ಫಲ, ಭೇರಿಯ ಫಲ, ಉದ್ದಿನ ಹಿಟ್ಟು, ಹೆತ್ತ ತುಪ್ಪ ಇರುವುದು ” ಎಂದು 

ಬರೆದು, ಈ ಚೀಟಿ ಯಾರಾದರೂ ಸಾವಿರ ವರಹಕ್ಕೆ ತೆಗೆದುಕೊಳ್ಳಿರೆಂದು 

ಪೇಟೆ ಕೋಟೆಯಲ್ಲಿ ಸಾರುತಿದ್ದನು. ಯಾರೂ ತೆಗೆದುಕೊಳ್ಳದಿರುವುದ 

ಜಯಪಾಲನು ಕಂಡು ತಮ್ಮ ಅಕ್ಕ ತನಗೆ ವ್ಯಾಪಾರಕ್ಕೆ ಕೊಟ್ಟಿದ್ದ ಸಾವಿರ 

ವರಹವ ಕೊಟ್ಟು ಆ ಚೀಟ ಕೊಂಡುಕೊಂಡ ಸುದ್ದಿಯ ಭದ್ರಸೇನ ಕೇಳಿ, 

ಅವನ ಕರೆಸಿ, ಬೈದು, ಎಲ್ಲಾದರೂ ಹೋಗು ಎಂದು ಊರಬಿಟ್ಟು ಹೊ 

ರಡಿಸಲಾಗಿ ; ಅವನು ಅಲ್ಲಿಂದ ಅನೇಕ ವ್ಯಸನ ಪಡುತ್ತ ಒಬ್ಬನೆ ಬಂದು 

ದಾರಿಯಲ್ಲಿ ಹೋಗುವಲ್ಲಿ, ಅಲ್ಲೊಂದು ನದಿಯ ಕಂಡು ಸ್ನಾನವ ಮಾಡಿ 

ತಡಿಯಲ್ಲಿ ಕುಳಿತಿರುವಲ್ಲಿ ಬಂದು ನಿಕ್ಷೇಪದ ಬಿಂದಿಗೆ ಆ ನದಿಯಲ್ಲಿ ತೇಲಿ 

ಬಂದುದಂದ ಅದ ಕಂಡು ಈಚೆಗೆ ತೆಗೆದುಕೊಂಡು ಕೈಯಲ್ಲಿದ್ದ ಚೀಟ 

ನೋಡಿಕೊಂಡು ನದಿ ಫಲವಾಗುವುದೆಂದು ಬರೆದಿರುವುದ ತಿಳಿದು, ಅದರಿಂ 

ದಿದು ಸಿಕ್ಕಿತೆಂದು ಆ ಬಿಂದಿಗೆಯ ತೆಗೆದುಕೊಂಡು ಅಲ್ಲಿಂದ ಮುಂದಕ್ಕೆ 

ಹೋಗುವಲ್ಲಿ ದಾರಿಯಲ್ಲಿ ಒಂದು ವೃಕ್ಷದ ಕೆಳಗೆ ಕಳ್ಳರು ಕದ್ದು ತಂದ 

ಹಣ ಬಡವೆ ವಸ್ತುಗಳ ಹಂಚಿಕೊಳ್ಳುತ್ತಿರುವ ಜಯಪಾಲನ ಕಂಡು ಯಾ 

ವನೋ ನಮ್ಮ ಹಿಡಿಯುವುದಕ್ಕೆ ಬರುತ್ತಾನೆಂದು ಅದನೆಲ್ಲ ಅಲ್ಲೇ ಬಿಟ್ಟು 

ಓಡಿಹೋಗುವುದ ಕಂಡು, ಅಲ್ಲಿಗೆ ಹೋಗಿ ನೋಡಿ ಅದನೆಲ್ಲ ತೆಗೆದು 

ಕೊಂಡು ಚೀಟಿ ತೆಗೆದುಕೊಂಡು ಅದರಲ್ಲಿ ವೃಕ್ಷ ಫಲವಾಗುವುದೆಂದು ಬರೆ 

ದಿರುವುದ ಓದಿ ನೋಡಿಕೊಂಡು, ಅಲ್ಲಿಂದ ತನ್ನ ಪಟ್ಟಣಕ್ಕೆ ಬಂದು ಚರಿಸು 

ತ್ತಿರುವಲ್ಲಿ ಆಗ ಪಟ್ಟಣದಲ್ಲಿರುವ ಸುರಭಿಯೆಂಬ ಸೂಳೆ-ಬಹು ಭಾಗ್ಯ 

ಸಂಪಾದಿಸಿದುದ ಅನುಭವಿಸುವರಿಲ್ಲ ; ಮುಂದಿನ್ನು ಸಂಪಾದಿಸಿ ಫಲವೇನೆಂ 

ದು ತನ್ನಲ್ಲಿ ತಾನೇ ಯೋಚಿಸಿ, ತನ್ನ ಮನೆಯ ಬಾಗಿಲ ಮುಂದೆ ಬಂದು ಭೇ 

ರಿಯನಿರಿಸಿ, ಈ ಭೇರಿಯ ಬಂದು ಹೊಡೆದವನಿಗೆ ನಾನು ಹೆಂಡತಿಯಾಗಿರುವೆ 

ನೆಂದು ಅವಳು ಇರುವಲ್ಲಿ ಜಯಪಾಲ ಚರಿಸುವಲ್ಲಿ ಆ ಭೇರಿಯ ಕಂಡು 

ಧ್ವನಿ ಮಾಡಲಾಗಿ, ಅವಳಾಸದ್ದ ಕೇಳಿ ಹೊಗೆ ಬಂದು ಜಯಪಾಲನ 



----------------ಬತ್ತೀಸಪುತ್ತಳಿಕಥೆ.--------------------೧೨೬


ಕಂಡು-- ಈತನೇ ತನಗೆ ಪತಿಯೊಂದು ಮನೆಗೆ ಕರೆದುಕೊಂಡು ಹೋಗಿ 

ಅವನಿಗೆ ಮಜನ ಭೋಜನವ ಮಾಡಿಸಿ ಸಕಲಪರಿಮಳ ಸುಗಂಧ ತಾಂ

ಬೂಲವ ಕೊಟ್ಟು ಅವನಲ್ಲಿ ಅನ್ಯೂನ್ಯದಿಂದ ಕ್ರೀಡಿಸಿ ಆ ಬಳಿಕ ತನ್ನ ವೃ 

ತ್ತಾಂತವ ವೇಳೆ,--ಎನಗೆ ನೀನೇ ಪತಿಯೆಂದು ಇರಿಸಿಕೊಳ್ಳಲಾಗಿ; ಆಮೇಲೆ 

ಚೀಟಿ ನೋಡಲು ಅದರಲ್ಲಿ ಭೇರಿಯ ಹೊಡೆದ ಫಲವಾಗುವುದೆಂದು ಬರೆದು 

ಇರುವುದ ಓದಿ ನೋಡಿಕೊಂಡು ಸಂಭ್ರಮದಿಂದವಳೊಡನೆ ಕೂಡಿಯಿರು 

ತ್ತಿರುವಲ್ಲಿ ಆ ಪಟ್ಟಣದ ವರ್ತಕನಾಗಿದ್ದ ರತ್ನಕರ್ಮನೆಂಬವನಿಗೆ ಮಕ್ಕ 

ಳಿಲ್ಲದೆ ಮರಣವಾಗಲು, ಅವನ ಹೆಂಡತಿ ಅವನೊಡನೆ ಸಹಗಮನವಾದು 

ದರಿಂದ ಈ ಸಮಾಚಾರವ ಈ ಜಯಪಾಲನು ಕೇಳಿ, ತನ್ನ ಸಮಾನಿಕನಾ 

ದವನು ಸತ್ತನೇ ಹರಹರ ! ಎಂದು ಅವನಿಗೆ ಉತ್ತರ ಕ್ರಿಯೆಗಳ ತಾನು 

ಮಾಡಿದರು. ಅವನ ವರ್ತಮಾನವ ನಮ್ಮ ರಾಯ ಕೇಳಿ, ಹರುಷ ಪಟ್ಟು, 

ಜಯಪಾಲನ ಕರೆಸಿ ತನ್ನ ಬಳಿಯಲ್ಲಿ ಇರಿಸಿಕೊಂಡಿದ್ದು ಕೆಲವು ದಿನದ 

ಮೇಲೆ ರಾಯ-ಜಯಪಾಲನೇ ! ನೀನು ಗಟ್ಟಕ್ಕೆ ಹೋಗಿ ಸಕಲ ವ್ಯಾಪಾ 

ರವ ತೆಗೆದುಕೊಂಡು ಬಾರೆಂದು ಬೇಕಾದಷ್ಟು ದ್ರವ್ಯವ ಕೊಟ್ಟು ಹಡಗ 

ಮಾಡಿಸಿ ಅದರಲ್ಲಿ ಉದ್ದಿನ ಹಿಟ್ಟು ಹೆತ್ತ ತುಪ್ಪ ಮುಂತಾದ ಸಕಲ ಪದಾ 

ರ್ಥವ ತುಂಬಿಸಿ ಕಳುಹಿಸಲಾಗಿ; ಜಯಪಾಲನು ಹಡಗಿನಲ್ಲಿ ಕುಳಿತು ಸಮು 

ದ್ರದಲ್ಲಿ ಹೋಗುವಾಗ ಹುಚ್ಚು ಗಾಳಿಯು ಬೀಸಿ ಹಡಗ ಸುವರ್ಣದೀಪ 

ಕ್ಕೆ ತೆಗೆದುಕೊಂಡು ಹೋಗಲಾಗಿ ; ಅಲ್ಲಿ ಮಣ್ಣೆಲ್ಲ ಚಿನ್ನವಾಗಿ ಜನಸಂ 

ಚಾರವಿಲ್ಲದಿರುವುದ ಕಂಡು, ಜಯಪಾಲ ಅತಿ ವ್ಯಸನ ಪಡುತ್ತ ಆ ಸುವ 

ರ್ಣದ ಮಣ್ಣ ಹಡಗಿಗೆ ತುಂಬಿ ಅಲ್ಲೊಂದು ಗಟ್ಟದಲ್ಲಿಳಿದಿರಲಾಗಿ ; ಕೊಂ 

ಡು ಹೋಗಿದ್ದ ಪದಾರ್ಥವೆಲ್ಲ ಮುಗಿದು ಆಹಾರಕ್ಕಿಲ್ಲದೆ ಬಹು ನಿಗ್ರಹವಾ 

ದುದರಿಂದ ಆಗ ಕೈಯಲಿದ್ದ ಚೀಟ ತೆಗೆದು ಓದಿನೋಡಲಾಗಿ ಉದ್ದಿನ 

ಹಿಟ್ಟು ಹೆತ್ತ ತುಪ್ಪ ಇರುವುದೆಂದು ಬರೆದಿರುವುದ ಕಂಡು ಅದ ಭಕ್ಷಿಸಿ 

ಕೊಂಡು ಇರುವಷ್ಟರಲ್ಲಿ, ಪುನಃ ಅದೇಮೇರೆಗೆ ಹುಚ್ಚು ಗಾಳಿಯು ಬೀಸಿ ಹಡಗ 

ಆ ದಾರಿಗೆ ತಂದು ಬಿಡಲಾಗಿ ; ಇನ್ನು ನಾನು ಬದುಕಿದೆನೆಂದು ಹಡಗ 

ಸಾಗಿಸಿಕೊಂಡು ಬಂದು ರಾಯನಿಗೆ ತಾನು ತಂದ ಸುವರ್ಣದ ಮಣ್ಣನೊ 

ಪ್ಪಿಸಿ ರಾಯನೊಡನೆ ತನಗಾದ ವೃತ್ತಾಂತವೆಲ್ಲ ಅರಿಕೆಯ ಮಾಡಲಾಗಿ ; 


೧೨೮---------------------ಕರ್ಣಾಟಕ ಕಾವ್ಯ ಕಲಾನಿಧಿ.---------------------------


ರಾಯ ಕೇಳಿ ಇಂತೆಂದನು:-ಕೇಳೈಯ, “ಪುಣ್ಯಕಾಲಕ್ಕೆ ಅರಣ್ಯದಲ್ಲಿದ್ದರೂ 

ಸುಖವುಂಟು ; ಪುಣ್ಯ ತಪ್ಪಿದರೆ ಬೆಣ್ಣೆ ಮೆದ್ದರೂ ಹಲ್ಲು ಮುರಿಯುವುದು" 

ಎಂದು ಹೇಳಿ, ನಿನ್ನ ಯೋಗ ಚೆನ್ನಾಗಿರುವಾಗ ಬಂದ ವಿಪತ್ತುಗಳೆಲ್ಲಾ 

ಬಯಲಾಯಿತೆಂದು, ನಮ್ಮ ರಾಯನು ಜಯಪಾಲನ ಸಂತವಿಟ್ಟು, ಆ ಬಳಿಕ 

ತಾನು ಖೇಚರದಲ್ಲಿ ಆ ಸುವರ್ಣದ್ವೀಪಕ್ಕೆ ಹೋಗಿ, ಆ ಮಣ್ಣ ತೆಗೆಸಿ 

ಕೊಂಡು ಬಂದು, ಈ ಪಟ್ಟಣವನೆಲ್ಲಾ ಸುವರ್ಣಮಯವ ಮಾಡಿ, ಸಕಲ 

ರಿಗೂ ಸಂಪತ್ತುಂಟುಮಾಡಿ ಜಯಪಾಲನಿಗೆ ಹತ್ತು ಕೋಟಿ ದ್ರವ್ಯವ ಕೊ 

ಟ್ಟು, ತಾನು ಸುಖವಾಗಿದ್ದನು-ಎಂದು ಹೇಳಲು; ಭೋಜರಾಯನು ಲಜ್ಜಿತ 

ನಾಗಿ ತನ್ನ ಅರಮನೆಯ ಸೇರಿದನು.


ಇಂತು ಕರ್ಣಾಕಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಕಾಮಕರ್ಣಿಕೆಯೆಂಬ ಪುಳಿ ಹೇಳಿದ ಮೂವತ್ತನೆಯ ಕಥೆ,

  ....

೩೧ ನೆಯ ಕಥೆ.


ಮೂವತ್ತೊಂದನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ 

ರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು ಎಂದಿನಂತೆ ಸಿಂಹಾಸನದ 

ಬಳಿಗೆ ಬಂದು ಬಲಗಾಲ ನೀಡುವ ಸಮಯದಲ್ಲಿ ಆ ಸೋಪಾನದ ಕರ್ಣಾ 

ವತಿಯೆಂಬ ಪುತ್ತಳಿಯು-ಹೋ ಹೋ! ನಿಲ್ಲು ನಿಲ್ಲು! ಎಂದು ಧಿಕ್ಕರಿಸಲಾಗಿ 

ಭೋಜರಾಯನು ಖಿನ್ನನಾಗಿ ಬೇರೆ ಸಿಂಹಾಸನದಲ್ಲಿ ಕುಳಿತು, ಚಿತ್ರಶ 

ರ್ಮನಿಂದ ಹೇಳಿಸಿದ ಕಥೆ :


ಎಲೆ ಪುತ್ತಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ರಾಯನು 

ಸುಖರಾಜ್ಯಗೆಯ್ಯುವಲ್ಲಿ ಒಂದು ದಿನ ಒಬ್ಬ ನೆರೆಜಾಣನ ಕರೆತರಿಸಿ ಈ 

ಪಟ್ಟಣದಲ್ಲಿ ಶೂರನ ವೀರನ ಧೀರನ ಮೂಲುಮಂದಿಯ ಕರತರ ಹೇಳಿ 

ಕಟ್ಟು ಮಾಡಿ ಕಳುಹಿಸಲಾಗಿ ; ಅವನು ಕೋಟೆ ಪೇಟೆ ಬೀದಿಗಳಲ್ಲಿ ಹು 

ಡುಕುತ್ತ ಎಲ್ಲಿಯೂ ಕಾಣದೆ ಸೂಳೆಗೇರಿಯಲ್ಲಿ ಬರಲಾಗಿ ; ಪದ್ಮಾವತಿ



------------------ಬತ್ತೀಸಪುತ್ತಳಿಕಥೆ .-----------------------------೧೨೯


ಯೆಂಬ ಸೂಳೆ ಅತಿದವಾದ ಮುತ್ತಿನ ಮೂಗುತಿಯಿಟ್ಟಿರುವುದ ಒರ್ವ 

ನೆರೆಜಾಣನು ಕಂಡು-ಇಂಥ ಮುತ್ತು ನಿನಗೆ ಬಂದಿತು? ಎಂದು ಕೇಳ 

ಲು ; ಅವಳು-ಖಡ್ಗದ್ದೀಪಿಯೆಂಬ ಶೂರನು ಅರಣ್ಯದಲ್ಲಿ ಆನೆಯ ಬೇಟೆ 

ಯಾಡಿ ಆನೆದ ಕುಂಭಸ್ಥಳವ ಕಡಿದು ಅದರಲ್ಲಿದ್ದ ಈ ಮುತ್ತ ಆನೆಯ 

ಕೊಂಬಿನ ದಂತ ಸಹ ನನಗೆ ತಂದುಕೊಟ್ಟು ನನ್ನಲ್ಲಿ ಕೂಡಿದ್ದು ಹೋದನೆಂದ 

ಮಾತ ನೆರೆಜಾಣ ಕೇಳಿ, ಅವನೇ ಶೂರನೆಂದು ತಿಳಿದು ಕರೆಸಿ, ಕರೆದುಕೊಂ 

ಡು, ವೀರನ ಹುಡುಕುತ್ತ ಬರಲಾಗಿ ಒಬ್ಬ ಮುನಿಕುಮಾರ ಭಿಕ್ಷಾಟನ 

ನಿಮಿತ್ತ ಊರೊಳಗೆ ಕೇರಿಕೇರಿಯಲ್ಲಿ ತಿರುಗುತ್ತ ತಿಳಿಯದೆ ಭಿಕ್ಷಕ್ಕೆ ಆ 

ಸೂಳೆಯ ಬಳಿಗೆ ಹೋಗಲಾಗಿ, ಆಸೂಳೆ ಅವನ ಕಂಡು ಭ್ರಮಿಸಿ ಮೇಲೆ 

ಬಿದ್ದರೂ ಅವನು ಉಪಾಯದಿಂದ ಅವಳಿಗೆ ಸಿಕ್ಕದೆ ತಪ್ಪಿಸಿಕೊಂಡು ಬಂದುದ 

ನೆರೆಜಾಣ ಕಡು, -ಇವನ್ನ ವೀರನೆಂದು ತಿಳಿದು, ಅವನ ಕರೆದುಕೊಂಡು, 

ಧೀರನ ಹುಡುಕುತ್ತ ಬರುವಲ್ಲಿ ಒಬ್ಬ ಓಲೆಕಾರ ನಾಯಕನೂ ಮತ್ತೊ 

ಬ್ಬನೂ ಹೊಡೆದಾಡುತ್ತಿರುವಲ್ಲಿ ಅವನ ಕಡೆ ಓಲೆಕಾರ ಆನಾಯಕನ ಹಿಂ 

ದಿಕ್ಕಿಕೊಂಡು, ತಾನು ಮುಂದುವರಿದು ಹೊಡೆದಾಡುವನ ನೆರೆಜಾಣ ಕಂಡು,--  

ಇವನೇ ಧೀರನೆಂದು ತಿಳಿದು, ಅವನ ಸಹ ಕರೆದುಕೊಂಡು ಬಂದು ರಾಯನ 

ಎದುರಾಗಿ ನಿಲ್ಲಿಸಿ, ಕೈ ಮುಗಿದು, ತಮ್ಮ ಅಪ್ಪಣೆ ಮೇರೆಗೆ ಈಮೂವರ 

ಕರೆತಂದು ಇದ್ದೇನೆ ಎನ್ನಲಾಗಿ ; ರಾಯ-ಇವರ ಗುಣಗಳ ನೀನು ತಿಳಿದ 

ಬಗೆ ಹೇಗೆ ? ಎಂದು ಕೇಳಲಾಗಿ ; ನೆರೆಜಾಣ ಈ ಮುರುಮಂದಿ ಮಾಡಿದ 

ವಿವರ ಶ್ರುತಪಡಿಸಲಾಗಿ : ರಾಯನು ಮೆಚ್ಚಿ ಅನೆರೆಜಾಣನಿಗೆ ಸವಾಲಕ್ಷ 

ದ್ರವ್ಯವ ಕೊಟ್ಟು ಕಳುಹಿಸಿದನು ಎಂದ ನುಡಿಗೆ ಕರ್ಣಾವತಿಯೆಂಬ ಪುತ್ತಳಿ 

ನಗುತ್ತ ಹಾಸ್ಯಗೆಯ್ದು ಹೇಳಿದ ಉಪಕಥೆ -


ಕೇಳೈಯ ಚಿತ್ರಶರ್‍ಮನೇ ! ನಮ್ಮ ವಿಕ್ರಮಾದಿತ್ಯರಾಯನು ಸುಖ 

ರಾಜ್ಯ ಪಾಲಿಸುವ ವೇಳೆಯಲ್ಲಿ ಒಂದುದಿನ ಕೊಂಕಣದೇಶದ ಶೂರನೆಂ 

ಬವನು ತನ್ನ ಪತ್ನಿಸಹಿತ ಬಂದು ರಾಜನಿಗೆ ಕೈಮುಗಿದು-ಎಲೈ ಮಹಾ 

ರಾಯನೇ ! ನಿನ್ನ ಕೀರ್ತಿಯ ಕೇಳಿ ನಿನ್ನ ಬಳಿಯಲ್ಲಿ ಊಳಿಗವ ಮಾಡಿಕೊ೦ 

ಡು ಇರಬೇಕೆಂದು ಬಂದೆನು ಎನ್ನಲಾಗಿ, ರಾಯ-ನಿನಗೆ ಸಂಬಳವೇನು ಎಂದು 

ಕೇಳಲಾಗಿ ; ಅವನು ತಿಂಗಳಂದಕ್ಕೆ ಸಾವಿರವರಹ ಸಂಬಳ ಕೊಟ್ಟರೆ


೧೩೦---------------ಕರ್ಣಾಟಕ ಕಾವ್ಯ ಕಲಾನಿಧಿ.-------------------------


ಇರುವೆನು ಎಂದುದಕ್ಕೆ, ರಾಯ ಅದೇಪ್ರಕಾರ ಸಂಬಳವನ್ನು ನೇಮಕ 

ಮಾಡಿ ತನ್ನ ಬಳಿಯಲ್ಲೇ ಇಟ್ಟುಕೊಂಡಿರಲಾಗಿ; ಅವನು ಹಗಲಿರುಳಾಗಿ ಅರ 

ಮನೆಯ ಬಾಗಿಲಲ್ಲಿ ಕಾದಿರುವಲ್ಲಿ ಒಂದುದಿನ ಸಮರಾತ್ರಿಯಲ್ಲಿ ಊರ ಹೊ 

ರಗಿರುವ ಮಹಂಕಾಳಿಯ ಗುಡಿಯ ಬಳಿಯಲ್ಲಿ ಭಯಂಕರವಾದ ಒಂದು ಕೂ 

ಗರಾಯ ಕೇಳಿ ಆ ಶೂರನ ಕರೆದು-ಈ ಕೂಗೇನು ? ತಿಳಿದು ಬಾರೆಂದು 

ಹೇಳಲಾಗಿ ; ಆಕ್ಷಣವೇ ಕತ್ತಿಯ ಬಿಚ್ಚಿಕೊಂಡು ಹೆಂಡತಿಯು ಸಹವಾಗಿ 

ಅಲ್ಲಿಗೆ ಹೋಗುವಲ್ಲಿ, ರಾಯ ಅವನ ಶೂರತ್ವವ ಮೋಸವ ಮಾಡಬೇ 

ಕೆಂದು ಅವನು ಕಾಣದಂತೆ ತಾನೂಅವನ ಹಿಂದೆ ಹೋಗಿ ನೋಡುತ್ತಿರುವಲ್ಲಿ, 

ಆಗಲಾಕರನು ಭೀತಿಯ ಪಡದೆ ಆ ದೇವಿಯ ಗುಡಿಯ ಹೊಕ್ಕು ಚೌ 

ದಿಕ್ಕಿನಲ್ಲಿ ನೋಡುವಲ್ಲಿ ಅಲ್ಲಿಯೊಬ್ಬ ರಾಕ್ಷಸಿ ಅಟ್ಟಹಾಸದಿಂದಳುತ್ತ 

ಆರ್ಭಟಿಸುತ್ತ ಆತನ ಮೇಲೆ ಬಂದು ಬೀಳಲಾಗಿ; ಅವನು ಅಂಜದೆ ಧೈಯ್ಯ 

ದಿಂದ ನಿಂತು ಆ ರಾಕ್ಷಸಿಯ ಸಂಗಡ ಯುದ್ಧವ ಮಾಡಿ, ಅವಳ ಹತವ 

ಮಾಡಲಾಗಿ; ಆ ದೇವಿಯು ಪ್ರಸನ್ನಳಾಗಿ-ಎಲೋ ಶೂರ ! ನಿನ್ನ ಧೈರ್ಯಕ್ಕೆ 

ಮೆಚ್ಚಿದೆನು ಎನ್ನಲಾಗಿ; ಅವನು-ಎಲೌ ತಾಯೇ! ಈ ಮಧ್ಯರಾತ್ರಿಯಲ್ಲಿ 

ಮಹಾಶೂರಾದ ಕಾರಣವೇನೆಂದು ಕೇಳಲಾಗಿ ; ಆ ದೇವಿಯು ನಿನ್ನ ರಾಯ 

ನಿಗೆ ನಾಳದಿನ ಅಪಮೃತ್ಯು ತಗಲುವುದು, ಎಂದ ಮಾತ ಕೇಳಿ, ಅದಕ್ಕೇನು 

ಪರಿಹಾರವೆಂದು ಕೇಳಲಾಗಿ ; ಆದೇವಿಯು ಇಂತೆಂದಳು:-ಅಪಮೃತ್ಯುವಿಗೆ 

ವೀರನಾದವನು ಶಿರವ ಕೊಟ್ಟರೆ ನಿಮ್ಮ ರಾಯನಿಗೆ ತಟ್ಟುವ ಅಪಮೃತ್ಯು 

ತಪ್ಪುವುದೆಂದು ದೇವಿಯು ಹೇಳಿದ ಮಾತ ಕೇಳಿ, ತಿಂಗಳಿಗೆ ಸಾವಿರ ವರಹವ 

ಕೊಟ್ಟು ತನ್ನ ಕಾಪಾಡುವಂಥ ರಾಯನಿಗೆ ಬರುವ ಅಪಮೃತ್ಯು ತಪ್ಪಲೆಂದು 

ಅದೇವಿಗೆ ಎದುರಾಗಿ ತನ್ನ ತಿರಸ್ಸ ಒಪ್ಪಿಸಲಾಗಿ ; ಆಗಳವನ ಹೆಂಡತಿ ತನ್ನ 

ಗಂಡನ ಸಂಗಡ ತನಗೆ ಸಹಗಮನ ವಿಹಿತನೆಂದು ಕ ಕಟ್ಟಾರಿಯ ತೆಗೆದು, 

ನಮ್ಮೊಡೆಯನಾದ ರಾಯನಿಗೆ ದೀರ್ಘಾಯುಷ್ಯವಾಗಲೆಂದು ತನ್ನ ತಲೆಯ 

ಒಪ್ಪಿಸಿದಳು. ಅವರಿರ್ವರ ನಿರ್ವಂಚನೆಯ ರಾಯ ಕಂಡು ಎನಗಾಗಿ ಈಸತಿ 

ಪತಿಗಳು ತಮ್ಮ ತಲೆಯ ಕೊಟ್ಟರೆಂದು, ಅವರ ಗುಣವ ಆಡುತ್ತ, ಇಂಥ 

ಇಷ್ಟರು ಹೋದ ಬಳಿಕ ತನ್ನ ದೇಹ ಏತಕ್ಕೆ? ಎಂದು, ಆ ದೇವಿಯ ಮುಂದೆ 

ತನ್ನ ಕೊರಲಿಗೆ ಗಂಡಗತ್ತರಿಯ ಸೇರಿಸಿ ರಾಯ ತಿರವ ತೆಗೆದೊಪ್ಪಿಸುವ



---------------------ಬತ್ತೀಸಪುತ್ತಳಿಕಥೆ.------------------------೧೩೧


ಸಮಯದಲ್ಲಿ, ಆ ದೇವಿಯು ಪ್ರಸನ್ನಳಾಗಿ-ಎಲೈರಾಯನೇ ! ನಿನ್ನ ಕರು 

ಣಾರಸಕ್ಕೆ ಮೆಚ್ಚಿದೆನು ಎಂದು ಕೈವಿಡಿದು-ವರವ ಕೇಳು ಎನ್ನಲಾಗಿ ; 

ರಾಯ ತನ್ನ ಸೇವಕ ಅವನ ಪತ್ನಿಯು ಸಹ ಬದುಕಿಸಿ ಕೊಡಬೇಕು ಎಂದ 

ಕಾರಣ ಆಗ ಆದೇವಿಯು ಅವರಿರ್ವರ ಬದುಕಿಸಿ ಏಳಿಸಲಾಗಿ; ಆಶೂರನು 

ರಾಯನ ಕಂಡು ವಂದಿಸಿ ಮುಂದೆ ನಿಂತಿರುವುದಕ್ಕೆ ದೇವಿ ಕಂಡಿಂತೆಂದಳು:-- 

ಎಲೈ ರಾಯನೇ ! ಲೋಕಗಳಲ್ಲಿ ನಿನ್ನಂಥ ರಾಯನು ಈಶೂರನಂಥ 

ಭಟನು (ಇವಳಂಥ ಸತಿಯು) ಇಲ್ಲವೆಂದು ಮೂವರಿಗೂ ದೀರ್ಘಾಯು 

ಷ್ಯವ ಕೊಟ್ಟು, ರಾಯನಿಗೆ ಅಕ್ಷಯ ಬಂಡಾರಗುಳಿಕೆಯಿತ್ತು ದೇವಿಯು 

ಮಾಯವಾದಳು. ಆಬಳಿಕ ಅಲ್ಲಿಂದಂದ ರಾಯನು ಶೂರ ಸಹಿತ ಈ ಪಟ್ಟಣ 

ದೊಳಗೆ ಬಂದು, ಬೆಳಗಾಗಿ ಶೂರನ ಕರೆಸಿ, ತನ್ನ ರಾಜ್ಯದಲ್ಲಿ ಅರ್ಧರಾ 

ಜ್ಯವ ಅವನಿಗೆ ಕೊಟ್ಟು ತನ್ನ ಸಮಾನವ ಮಾಡಿ ಸುಖವಾಗಿದ್ದನು-ಎಂದ 

ಮಾತಿಗೆ ಭೋಜರಾಯನು ಲಜ್ಜಿತನಾಗಿ ತನ್ನ ಅರಮನೆಗೆ ಹೋದನು. 


ಇಂತು ಕರ್ಣಾಟಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ಕರ್ಣಾವತಿಯೆಂಬ ಪುತ್ತಳಿ ಹೇಳಿದ ಮೂವತ್ತೊಂದನೆಯ ಕಥೆ.

......

೩೨ ನೆಯ ಕಥೆ.


ಮೂವತ್ತೆರಡನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ 

ರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು, ಸಕಲ ಪರಿಮಳ ಸುಗಂಧವ 

ಲೇಪಿಸಿಕೊಂಡು, ಕುಸುಮಂಗಳ ಮುಡಿದು, ನವರತ್ನಾಲಂಕೃತದಿಂದ ನವ 

ವಿಧ ದುಕೂಲವ ಧರಿಸಿ, ತನ್ನ ಮಂತ್ರಿಯಾದ ಚಿತ್ರಶರ್ಮನ ಕೈವಿಡಿದು 

ಕೊಂಡು, ಸಿಂಹಾಸನದೆಡೆಗೆ ಬಂದು, ತನ್ನ ಬಲಗಾಲ ನೀಡುವ ಸಮಯದಲ್ಲಿ 

ಆ ಸೋಪಾನದ ವಾಮಲೋಚನೆಯೆಂಬ ಪುತ್ತಳಿಯು-ಹೋಹೋ ! 

ನಿಲ್ಲು ನಿಲ್ಲು ಭೋಜರಾಯನೇ ! ನನ್ನೊಡೆಯನಾದ ವಿಕ್ರಮಾದಿತ್ಯರಾಯ 

ನಂತೆ ವೀರವಿತರಣ ಸಾಹಸ ಪರಾಕ್ರಮೌದಾರ್‍ಯ ಮುಂತಾದ ಗುಣವಂತನಾದ 

ರೆ ಈ ಸಿಂಹಾಸನವ ಏರು, ಇಲ್ಲದೆ ಇದ್ದರೆ ಕೆಲಸಾರು, ಮೀರಿ ಕುಳಿ



೧೩೨------------------ಕರ್ಣಾಟಕ ಕಾವ್ಯ ಕಲಾನಿಧಿ,----------------------------


ತರೆ ನಿನ್ನ ತಲೆ ಸಹಸ್ರ ಹೋಳಾಗಿ ಬಿರಿಯುವುದು ಎನ್ನಲಾಗಿ ; ಭೋಜರಾ

ಯನು ಬೇರೆ ಸಿಂಹಾಸನದಲ್ಲಿ ಕುಳಿತು ಚಿತ್ರಶರ್‍ಮನಿಂದ ಪೇಳಿಸಿದ ಕಥೆ: 


ಎಲೆ ಪುಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ಭೋಜರಾ 

ಯನು ಸುಖರಾಜ್ಯಗೆಯ್ಯುವಲ್ಲಿ ಒಂದು ದಿನ ರಾಯ ಓಲಗದಲ್ಲಿ ಕುಳಿತಿರು 

ವಾಗ 1ವರರುಚಿ ಯಿಂತೆಂದನು: ಧೈರ್ಯಸ್ಥನಿಗೆ ಸಕಲವೂ ಕೈಗೂಡುವು 

ದು. ಅದು ಹೇಗೆ? ಎಂದರೆ-ದುಂದುಭಿ ಎಂಬ ಪಟ್ಟಣದಲ್ಲಿ ಶಶಿಮುಖನೆಂಬ 

ಬಿಲ್ವನು1 ನಿತ್ಯ ಸಾವಿರ ಕಸವರಿಗೆಯ ಮಾಡುವನು. ಈಮೇರೆಗೆ ಮಾಡಿದ 

ಕಸವರಿಗೆಲ್ಲ ಕ್ರಯವ ಮಾಡಬೇಕೆಂದು ಆ ಪಟ್ಟಣದ ಬೀದಿಗಳಲ್ಲಿ 

ಹೊತ್ತು ತಿರುಗಿದರೂ ಒಬ್ಬರೂ ಕೇಳುವರಿಲ್ಲದೆ ಮಲಾಮೆಯಾಗಿ ಮಾ 

ರದೆ ತನ್ನ ಮನೆಗೆ ಹೊತ್ತುಕೊಂಡು ಬಂದು ಇರಿಸಿ, ಆರಾತ್ರಿ ತನ್ನ ಹೆಂಡ 

ತಿಯ ಕೂಡೆ-ನಾನು ಕಸವರಿಗೆ ಮಾಡಿದುದು ಮಾರಲಿಲ್ಲ. ಮುಂದೆ ನಾ 

ವು ಜೀವನವ ಹೇಗೆ ಮಾಡುವ? ಎಂದು ಆಲೋಚಿಸುತ್ತಿರುವಲ್ಲಿ ಆ ಪಟ್ಟ 

ಣದ ಅರಸು ನಗರಶೋಧನೆಗಾಗಿ ಹೋಗಿ ಅವನ ಅಮಾತ ಕೇಳಿ ಬಂದು 

ಬೆಳಗಾಗಿ ಓಲಗದಲ್ಲಿ ಕುಳಿತಿರುವಾಗ, ಆ ಬಿಲ್ವನ ಕರೆಸಿ-ನೀನು ಮಾಡಿರುವ 

ಕಸವರಿಗೆ ಯಾವತ್ತು ತಂದು ನಮ್ಮ ಅರಮನೆಯ ಕಣಜಕ್ಕೆ ತುಂಬಿ ಅಲ್ಲಿರು 

ವ ದವಸ ಕೊಂಡುಹೋಗಿ ನಿನ್ನ ಗ್ರಾಸೋಪಾಯವ ಮಾಡಿಕೊ ಎನ್ನಲಾಗಿ; 

ಅದೇರೀತಿಯಲ್ಲಿ ಅವನು ತನ್ನ ಮನೆಯಲ್ಲಿದ್ದ ಕಸವರಿಗೆ ಯಾವತ್ತೂ 

ತಂದು ಕಣಜಕ್ಕೆ ತುಂಬಿ ಅಲ್ಲಿದ್ದ ದವಸವ ತೆಗೆದುಕೊಂಡು ಹೋಗಲಾಗಿ ; 

.................

1. ವರರುಚಿಯ ಮುಖವ ನೋಡಿ ರಾಯನಿಂತೆಂದನು:- "ಕುಹಕಕು 

ಚೋದ್ಯಗಳ ಮಾಡುವನು ಪೂಜ್ಯನೆ ? ಕರುಬಿನಿಂದ ಒಬ್ಬನ ಶ್ರೇಯಸ್ಸ ನೋಡಿ 

ಸಂತೋಷಪಡದೆ ಇರುವನು ದೊರೆಯೇ ? ಪರಿಹಾಸಕವ ಮಾಡುವಂಧವನು 

ಯೋಗ್ಯನೆ? ಭುಜಬಲವಿಲ್ಲದವ ಮನುಷ್ಯನೆ??” ಎಂಬ ನೀತಿಯುಂಟಾಗಿ, ಭುಜಬಲ 

ವೂ ಧೈಯ್ಯವೂ ಪ್ರಧಾನವೆಂದು ಹೇಳಿ, ಧೈರಸ್ಥನಿಗೆ ಸಕಲಕಾರ್‍ಯವೂ ಕೈಸೇರುವುದೆಂ

 ಬಂತೆ ಧೈಯ್ಯಗುಂದಬಾರದು, ಧೈಯ್ಯದಿಂದ ಸಕಲಕಾರವು ಬರುವುದು. ಮುನ್ನೊರ್‍ವ ರಾ 

 ಯನು ಧೈಯ್ಯದಿಂದ ರಾಜ್ಯವ ಪಡೆದನು. ಆ ಕಥೆಯ ಪೇಳ್ವೆನು ಕೇಳೆಂದು ಇಂತೆಂ 

 ದನು:- ಮುನ್ನೊಂದು ದುಂದುಭಿಯೆಂಬ ಪಟ್ಟಣದೊಳು ರಿಪುಹನೆಂಬ ರಾಯನು 

 ಸುಖರಾಜ್ಯಗೆಯ್ಯುತ್ತಿರಲು ಆ ಪಟ್ಟಣದಲ್ಲಿ ಒರ್ವ ಶಶಿಮುಖನೆಂಬ ಬಿಲ್ವನು.


2, ಕಸಗೋಲು.



-------------------------ಬತ್ತೀಸಪುತ್ತಳಿಕಥೆ.---------------------------೧೩೩ 


ಬೊಕ್ಕಸ ಬಂಡಾರದಲ್ಲಿದ್ದ ಲಕ್ಷ್ಮಿಯರೆಲ್ಲಾ ಕೂಡಿ ಮಾತಾಡಿದರು. 

ಯಾರುಯಾರೆಂದರೆ? ಮಹಾಲಕ್ಷ್ಮಿ, ವರಲಕ್ಷ್ಮಿ, ವಿಜಯಲಕ್ಷ್ಮಿ, ಧನಲಕ್ಷ್ಮಿ 

ಧಾನ್ಯಲಕ್ಷ್ಮಿ, ಪುರಲಕ್ಷ್ಮಿ ಪುರಲಕ್ಷ್ಮಿ, ಕೀರ್ತಿಲಕ್ಷ್ಮಿ-ಇವರೇಳು ಮಂದಿಯೂ-ಈ 

ಅರಸನ ಭಂಡಾರ ಬೊಕ್ಕಸ ಮುಂತಾದುದಯಲ್ಲಿ ನಾವು ತಪ್ಪದೆ ಇದ್ದು 

ಕೊಂಡಿದ್ದೆವು. ಈಗ ಅರಸಿನಲ್ಲಿ ಇರಬಾರದು ಎಂದಾಲೋಚಿಸಿ ಅದಿನ 

ರಾತ್ರಿ ಅರಸಿನ ಸ್ಪಪ್ನದಲ್ಲಿ ಮಹಾಲಕ್ಷ್ಮಿ ನಿಜರೂಪದಿಂದ ಹೋಗಿ, ಇದಿ 

ರಾಗಿ ನಿಂತು ಎಲೈ ಅರಸೇ!  ಈವರೆಗೂ ನಿನ್ನ ಅರಮನೆಯಲ್ಲಿ ನಾವು ಏಳು 

ಮಂದಿ ಲಕ್ಷ್ಮಿ ಯರೂ ಸ್ಥಿರವಾಗಿ ಇದ್ದೆವು ಇನ್ನು ಇರುವುದಿಲ್ಲ. 

ಅದೇತಕ್ಕೆಂದರೆ, ನಿನ್ನ ಅರಮನೆಗೆ ಅವಲಕ್ಷ್ಮಿಯು ಸೇರಿದಳು. 

ಅವಳು ಇರುವಲ್ಲಿ ನಾವು ಇರುವುದು ಇಲ್ಲವೆಂದು ಸ್ಥಾಪಿಸಿ ಹೋಗಲಾಗಿ ; ಅರ 

ಸು ಧೈರ್ಯಲಕ್ಷ್ಮಿಯಿದ್ದ ಕಾರಣ ಅವರೆಲ್ಲಾ ಹೋದಾಗ್ಯೂ ಆ ಲಕ್ಷ್ಮಿಯ 

ಬಿಡೆನೆಂದು ದೈರ್‍ಯವ ಪಿಡಿದಿರಲಾಗಿ, ಕೆಲವು ದಿನದ ಮೇಲೆ ಪರರಾಯರು 

ಬಂದು ಮಹಾಯುದ್ಧವ ಮಾಡಿ ಪಟ್ಟಣಕ್ಕೆ ಮುತ್ತಿಗೆಯ ಮಾಡೆ, ಕಡುಕಷ್ಟ 

ವಾಗಿ ಜಯವಿಲ್ಲದೆ ಅಪಜಯವಾದರೂ ಧೈಯ್ಯದಿಂದಿರಲಾಗಿ-ಮಹಾಲಕ್ಷ್ಮಿ 

ಮುಂತಾಗೆಲ್ಲರು ಕಂಡು, ಅರಸಿನ ಧೈಯ್ಯಕ್ಕೆ ಮೆಚ್ಚಿ ಎದುರಾಗಿ ಬಂದು-ಎಲೈ 

ಅರಸೆ ! ನಿನ್ನ ಧೈಯ್ಯಕ್ಕೆ ಎಣೆಯಿಲ್ಲವೆಂದು ವರವ ಬೇಡೆನ್ನಲಾಗಿ ; ಅರಸು 

ಅವರ ಇಂತೆಂದನು ಮಹಾಲಕ್ಷ್ಮಿ ಬಂಡಾರದಲ್ಲಿ, ಪುರಲಕ್ಷ್ಮಿ ಪಟ್ಟಣದಲ್ಲಿ 

ಕೀರ್ತಿಲಕ್ಷ್ಮಿ ಚೌದಿಕ್ಕಿನಲ್ಲಿ, ವೀರಲಕ್ಷ್ಮಿ ವಿಜಯಲಕ್ಷ್ಮಿ ಭುಜಗಳಲಿ, 

ಧನಲಕ್ಷ್ಮಿ ಬೊಕ್ಕಸದಲ್ಲಿ, ಧಾನ್ಯಲಕ್ಷ್ಮಿ ಕಣಜದಲ್ಲಿ ಸ್ಥಿರವಾಗಿರಬೇಕು 

ಎನ್ನಲಾಗಿ ; ಅದೇಮೇರೆಗೆ ಮಹಾಲಕ್ಷ್ಮಿಯ ವರವಾದುದರಿಂದ ಅಕ್ಷ 

ಣವೇ ಪರರಾಯರಿಗೆ ಅಪಜಯವಾಗಿ ಮುರಿದು ಓಡಿಹೋಗಲಾಗಿ; ಅರಸು 

ಅವರ ಪಟ್ಟಣದ ಹೊಕ್ಕು ಅಲ್ಲಿದ್ದ ಹಣಕಾಸು ಧಾನ್ಯ ಒಡವೆ ವಸ್ತ್ರಗಳು 

ರತ್ನಂಗಳಾದಿಯಾಗಿ ತೆಗೆದುಕೊಂಡು ಬಂದು, ತನ್ನ ಬೊಕ್ಕಸ ಬಂಡಾರ 

ಕಣಜಕ್ಕೆ ತುಂಬಿಸಿ, ಆ ಕಸವರಿಗೆಯನೆಲ್ಲ ಸುಡಿಸಿಬಿಟ್ಟು, ಆ ಬಿಲ್ವನ ರಕ್ಷಿಸಿ 

ಸುಖವಾಗಿದ್ದನು. ಅದುಕಾರಣ ರಾಜರಿಗೆ ಧೈರವೇ ಪ್ರಧಾನವು ಎಂದು 

ಹೇಳಿದ ವರರುಚಿಯ ಮಾತ ಕೇಳಿ, ರಾಯ ಮೆಚ್ಚಿ, ವರರುಚಿಗೆ ಸವಾ 

ಲಕ್ಷ ದ್ರವ್ಯವ ಕೊಟ್ಟನು ಎಲೈ- ಎಂದು ಚಿತ್ರಶರ್ಮನು ಹೇಳಿದ ಮಾತಿಗೆ 

ವಾಮಲೋಚನೆಯೆಂಬ ಪುತ್ತಳ ಹಾಸ್ಯಗೆಯ್ದು ಹೇಳಿದ ಉಪಕಥೆ:-- 


೧೩೪----------------ಕರ್ಣಾಟಕ ಕಾವ್ಯ ಕಲಾನಿಧಿ.--------------------------


ಎಲೈ ಚಿತ್ರಶರ್‍ಮನೇ ! ಕೇಳು. ನಮ್ಮ ವಿಕ್ರಮಾದಿತ್ಯರಾಯನು 

ಈ ಉಜ್ಜಯಿನಿಪಟ್ಟಣದಲ್ಲಿ ರಾಜ್ಯ ಭಾರವ ಮಾಡುತ್ತ ಸರ್ವರ ಪಾಲಿಸುತ್ತ 

ಪೊರೆಯುತ್ತಿರುವ ವೇಳೆಯಲ್ಲಿ ಒಂದುದಿನ ರಾತ್ರಿ ಕಾಲದಲ್ಲಿ ನಗರ ಶೋಧ 

ನೆಗಾಗಿ ತನ್ನ ಸಂಗಡ ನಾಗರಿಕ ಪೀಠವರ್ದಕರ ಕರೆದುಕೊಂಡು ರಾಯನು 

ಹೊರಟು ಕೇರಿಕೇರಿಯಲ್ಲಿರುವ ಹದಿನೆಂಟು ಜಾತಿ ಜನರ ಮನೆಯಲ್ಲಿ ನಡೆ 

ಯುವ ವರ್ತಮಾನವ ಕೇಳುತ ಬರುವ-ಚಂಡಿಕಾದೇವಿಯ ಗುಡಿಯಲ್ಲಿ 

ಮಲಗಿರುವ ಪರದೇಶಿಗಳು ಚಾತುರ್‍ಯವಾಡುತ್ತಿರುವುದ ಆ ಗುಡಿಯ ಪ್ರಾ 

ಕಾರದ ಗೋಡೆಯ ಹಿಂದೆ ನಿಂತು ಕೇಳುತ್ತಿರುವಲ್ಲಿ-- ಆ ಚಂಡಿಕಾದೇವಿಯ 

ಗುಡಿಯಲ್ಲಿ ಅಷ್ಟರಲ್ಲೇ ಚಂದ್ರೋದಯವಾಗಲಾಗಿ, ಆ ಗುಡಿಯಿಂದೊಬ್ಬ 

ಈಚೆಗೆ ಬಂದು ಹೋಗುವನ ನೋಡಿ-ಇವ ಕಳ್ಳನೋ, ಬೇಹಿನವನೋ 

ಎಂದು ಹಿಂದೆ ರಾಯ ಹೋಗಲಾಗಿ ; ಅವನು ಕೋಟೆಯನಿಳಿದು ಉತ್ತರ 

ದಿಕ್ಕಿನೊಳೊಂದು ಗವಿಯ ಹೊಕ್ಕನು. ಅದ ಕಂಡು ರಾಯ ಆಗವಿಯ 

ಹೊಕ್ಕು ಅಲ್ಲಿರುವ ಭೂತಪ್ರೇತಗಳ ನವರತ್ನಗಳ ಕಂಡು ವಿಸ್ಮಿತನಾಗಿ 

ಹೋಗುವಲ್ಲಿ, ಮತ್ತೊಂದು ದ್ವಾರವ ಕಂಡು ಅದರಲ್ಲಿ ಹೊಕ್ಕು ಹೋಗು 

ತಿರುವಲ್ಲಿ ಅಲ್ಲೊಂದು ಚಂಡಿಕಾದೇವಿಯಿರುವ ಮಹಾವನದಲ್ಲಿ ಬೂರುಗದ 

ಮರದೊಳೊಂದು ಉಯ್ಯಾಲೆಯಲ್ಲಿ ತೂಗಾಡುತ್ತಿರುವ ಒಬ್ಬ ಗಂಧರ್ವ 

ಸ್ತ್ರೀಯ ಕಂಡು, ರಾಯ ವಿಸ್ಮಿತನಾಗಿ-ಈ ಸ್ತ್ರೀಯ ಬ್ರಹ್ಮ ಯಾ 

ರಿಗೆ ನೇಮಿಸಿರುವನೆಂದು ನೋಡುತ್ತಿರಲಾಗಿ; ಅವಳು ಉಯ್ಯಾಲೆಯಾಡುತ್ತ 

ದೇಶಿ, ವರಾಳಿ, ಪೂರ್ಜರಿ, ಮುಖಾರಿ, ಶ್ರೀರಾಗ ಮುಂತಾದ ರಾಗಗಳ 

ಪಂಚಮ, ಮಂದರ, ಮಧ್ಯ ತಾರಕದಿಂದ ಮಾಡುವ ರಚನೆಗಳೂ ಅವಳ 

ಲಾವಣ್ಯ ಸೌಂದಯ್ಯಗಳ ಸಹ ನೋಡಿ, ರಾಯ ಭ್ರಮಿಸಿ, ಕಾಮಾಂಧಕಾರ 

ದಿಂದ ಭೀತಿಯ ಪಡದೆ ಆ ನವಿಲುಯ್ಯಾಲೆಯ ಮೇಲೆ ಏರಿಹೋಗಲಾಗಿ 

ಅವಳು ರಾಯನ ಕಂಡು, ಈತನಾರೆಂದು ಅತಿಶಯವ ಪಟ್ಟು-ಇವನೆಂಥ 

ವೀರನೋ ? ಇಂತಹ ಭಯಂಕರವಾದ ವನಕ್ಕೆ ಬಂದು ನನ್ನ ಯಾರು 

ಎಂತ ವಿಚಾರಿಸದೆ ಈವುಯ್ಯಾಲೆಯೇುರಿ ಬಂದಿದ್ದಾನೆ ಎಂದು ನೋಡಿ, ಅವ 

ಳಿಂತೆಂದಳು:- ಎಲೈ ಮಹಾಪುರುಷನೇ ! ನೀನು ಯಾರು ? ನರನೋ ? 

ಕಿನ್ನರನೋ? ಕಿಂಪುರುಷನೋ? ಯಕ್ಷನೋ? ರಾಕ್ಷಸನೋ? ದೇವನೊ? 



----------------------ಬತ್ತೀಸಪುತ್ತಳಿಕಥೆ .------------------------೧೩೫


ಯಾರು ? ಎಂದು ಕೇಳಲಾಗಿ;-ನಾನು ವಿಕ್ರಮಾದಿತ್ಯರಾಯ, ಈರಾತ್ರೆ ನಗ 

ರಶೋಧನೆಗಾಗಿ ಬರಲಾಗಿ, ಒಬ್ಬ ಪರದೇಶಿ ಈ ಗವಿಯ ಹೊಕ್ಕುದ ಕಂ 

ಡು, ನಾನು ಅವನ ಹಿಂದೆ ಬಂದೆ ಎಂದ ಮಾತ್ರ ಅವಳು ಕೇಳಿ-ನೀನು ಬಂ 

ದುದು ಲೇಸಾಯಿತೆಂದು ಅವನ ಕುಳ್ಳಿರಿಸಿಕೊಂಡು,-- ಪಗಡೆಯ ಆಡುವ 

ಎನ್ನಲಾಗಿ; ರಾಯ-ಜೂಜಾಟ ಬೇಡ ಎಂದುದಕ್ಕೆ, ಅವಳು ಆ ಮಾತಿಗೆ 

--ಜೂಜಾಟವ ಕಾಳಗವ ಒಲ್ಲೆನೆನ್ನುವುದು ರಾಜರ ಧರ್ಮವಲ್ಲ 

ಎಂದು, ಆಬಳಿಕ-ನೀನು ಒಪ್ಪಿದಂತೆ ಆಡೆಂದು ಚಾರಿಯ ಹಾಸಿ, ಕಾಯ 

ಹೂಡಿ, ಪಗಡೆಯನಾಡಿ ರಾಯನ ಸೋಲಿಸಲಾಗಿ ; ರಾಯ ಲಜ್ಜಿತನಾಗಿ-- 

ಇನ್ನೊಂದು ಸಾರಿ ಆಡಿದರೆ ಗೆಲ್ಬನು ಎನ್ನಲಾಗಿ ; ಆ ಮಾತಿಗವಳು-ನಾನು 

ಕೇಳಿದೊಡವೆಯ ತಂದು ಕೊಟ್ಟರೆ ಆಡುವೆನು ಎಂದುದಕ್ಕೆ ರಾಯ-ನಿನಗೇನು 

ಬೇಕು ಕೇಳು ತಂದುಕೊಡುವೆನು ಎನ್ನಲಾಗಿ ; ಅವಳು ಈಮಹಾವನದಲ್ಲಿ 

ಮುಳ್ಳು ಮುತ್ತುಗದ ಮರದಲ್ಲಿ ಬಂದು ಭೇತಾಳ ತಲೆ ಕೆಳಗಾಗಿ ನೇತಾ 

ಡುತ್ತಿದೆ. ಅದ ನನಗೆ ತಂದು ಕೊಟ್ಟರೆ ಆದೀತೆಂದು ಹೇಳಲಾಗಿ ; ರಾ 

ಯ ಒಂದು ಭಯಂಕರವಾದ ಬಳಿಯಲ್ಲಿ ಚಂಡಿಕಾದೇವಿಯ ಗುಡಿಯ ಮುಂ 

ದೆ ಮುಳ್ಳು ಮುತ್ತುಗದ ಮರದಲ್ಲಿ ತಲೆಕೆಳಗಾಗಿ ಒಳಗಿದ ಶರೀರದಲ್ಲಿ 

ನೇತಾಡುವ ಭೇತಾಳನ ಕಂಡು ಅದ ಹಿಡಿಯ ಹೋಗಲು, ಆ ಭೇತಾಳನು 

ಹುಲಿಯಾಗಿ, ಕರಡಿಯಾಗಿ, ನವಿಲಾಗಿ, ಸಿಂಹವಾಗಿ, ಕಾಡುಹಂದಿಯಾಗಿ 

ಆನೆಯಾಗಿ ನಾನಾಪ್ರಕಾರವಾಗಿ ಕಾಣುವುದ ಕಂಡರೂ ಧೈಯ್ಯದಿಂದ ಹಿಡಿ 

ದು ಕಟ್ಟಿ ತೆಗೆದುಕೊಂಡು ಬರುವ ದಾರಿಯಲ್ಲಿ ಆ ಭೇತಾಳನೊಂದು ಕಥೆ 

ಯ ಹೇಳಿತು. ರಾಯ ಆ ಕಥೆಗೆ ಉತ್ತರವ ಕೊಟ್ಟು ಕೊನೆಯ ಮಾತಿಗೆ 

ಉತ್ತರವ ಕೊಡದೆ ಮೌನದಲ್ಲಿ ತಂದು ಅವಳ ಬಳಿಯಲ್ಲಿ ಬಿಡಲಾಗಿ ; 

ಆ ಸ್ತ್ರೀಗೂ ಭೇತಾಳನಿಗೂ ಮುಖದರ್ಶನವಾಗುವುದು ಶಾಪವಿಮೋಚ 

ನೆಯಾಗಿ, ಈರ್ವರು ವಿದ್ಯಾಧರಿ ಪುಷ್ಪದಂತರಾಗಿ ರಾಯನೆದುರಿಗೆ ನಿಲ್ಲಲು ; 

ರಾಯ ಕಂಡು ಚೋದ್ಯಂಬಟ್ಟು-ನೀವಾರೆಂದು ಕೇಳಲಾಗಿ ; ಆ ಪುಷ್ಪದಂತ 

ನಿಂತೆಂದನು:-ಕೇಳೈ ಮಹಾರಾಯನೇ ! ಪೂರ್ವದಲ್ಲಿ ಕೈಲಾಸದಲ್ಲಿ ಪರ 

ಮೇಶ್ವರನು ಪಾರ್ವತಿ ಸಹ ಸತ್ಕಥಾವಿನೋದದಿಂದಿರುವಲ್ಲಿ, ಪಾರ್ವತಿ ಪರ 

ಮೇಶ್ವರನೊಡನೆ ಬ್ರಹ್ಮಕಥೆಯ ನಿರೂಪಿಸಬೇಕೆಂದು ವಿಜ್ಞಾಪಿಸಲಾಗಿ;



೧೩೬------------------ಕರ್ಣಾಟಕ ಕಾವ್ಯಕಲಾನಿಧಿ----------------------------


ಆಗ ಈಶ್ವರನು ತನ್ನ ಸಮೀಪದಲ್ಲಿದ್ದ ವಿನಾಯಕ ವೀರಭದ್ರ ಭೈರವ 

ಷಣ್ಮುಖ ಮುಂತಾದ ಪ್ರಮಥಗಣಗಳ ಹೊರಗೆ ಕಳುಹಿಸಿ, ಏಕಾಂತದಲ್ಲಿ 

ಪಾರ್ವತಿಗೆ ಬ್ರಹ್ಮಕಥೆಯ ಅರುಹುತ್ತಿರುವಲ್ಲಿ ನಾವಿಬ್ಬರೂ ಕೇಳುವುದ 

ತಿಳಿದು, ನೀವಿರ್ವರೂ ಭೇತಾಳಯಕ್ಷಿಣಿಯರಾಗಿ ಮಹಾವನದಲ್ಲಿ ಇರಿ ! 

ಎಂದು ಶಾಪವ ಕೊಡಲಾಗಿ ; ಆಗ ನಾವಿರ್ವರೂ ಶರಣಾಗತರಾಗಿ ಈ 

ಶಾಪವಿಮೋಚನೆ ಎಂದಿಗೆ ? ಎಂದು ಈಶ್ವರನ ಬೇಡಿಕೊಳ್ಳಲಾಗಿ ; ವಿಕ್ರ 

ಮಾದಿತ್ಯರಾಯನಿಂದ ಶಾಪವಿಮೋಚನೆಯಾಗುವುದೆಂದು ಈಶ್ವರನು ನಿರೂಪಿ 

ಸಲಾಗಿ, ಹೀಗಿಲ್ಲಿದ್ದೆವು. ಇಂದಿಗೆ ನಿನ್ನಿಂದ ನಮ್ಮ ಶಾಸ ತೀರಿತು ಎಂದು, ರಾಯ 

ನ ಸ್ತುತಿಯ ಮಾಡಿ, ಪುಷ್ಪದಂತನು ರಾಯನಿಗೆ ಜೀವರತ್ನ, ರಸಾಯನ ರತ್ನ, 

ರಸರತ್ನ, ಅದೃಶ್ಯ ರತ್ನ, ಸರ್ವವ ಈವ ರತ್ನ ಎಂಬ ಸಂಚರತ್ನಗಳ ಕೊಟ್ಟು, 

ಅವರಿರ್ವರು ಕೈಲಾಸಕ್ಕೆ ಹೋಗಲಾಗಿ ; ಬಳಿಕ ಅಲ್ಲಿಂದ ರಾಯನು 

ಬಿಲದ್ವಾರದಲ್ಲಿ ಹೊಕ್ಕು, ಈಚೆಗೆ ಬಂದ, ಈ ಪಟ್ಟಣಕ್ಕೆ ಬರುವ ದಾರಿ 

ಯಲ್ಲಿ ಒಬ್ಬ ವೀರ ಶೂಲದಲ್ಲಿರುವುದ ಕಂಡು, ಅವನಿಗೆ ಜೀವರತ್ನವ 

ಕೊಟ್ಟು ಬರುತ್ತಿರಲಾಗಿ ; ಒಬ್ಬ ತರ ಬಹುಕಾಲ ತಪಸ್ಸು ಮಾಡಿ 

ದಾಗ್ಯೂ ರಸವಿದ್ಯೆ, ಅದೃಶ್ಯವಿಧ್ಯ ಸಿದ್ದಿಸದೆ ಇರುವನ ಕಂಡು ವಿಚಾರಿಸಿ 

ಅವನಿಗೆ ರಸರತ್ನ, ಅದೃಶ್ಯರತ್ನ ಎರಡ ರತ್ನವ ಕೊಟ್ಟು ದಾನಶೂರ 

ನೆಂಬ ಹೆಸರ ಉಂಟುಮಾಡಿಕೊಂಡು, ತಾನು ಸರ್ವವ ಈವ ರತ್ನವ ತೆಗೆ 

ದುಕೊಂಡು, ಈ ಪಟ್ಟಣಕ್ಕೆ ಬಂದು, ಸಿಂಹಾಸನಾರೂಢನಾಗಿ, ಸತ್ಕಥಾ 

ಶ್ರವಣದಿಂದ ಸುಖವಾಗಿ ಈ ರಾಜ್ಯವಾಳುತಿದ್ದನು ಕಣಾ! ನಮ್ಮ ವಿಕ್ರಮಾ 

ದಿತ್ಯರಾಯನು ಎಂದು ಪೇಳಲಾಗಿ ;


ಚಿತ್ರಶರ್ಮನು ಕೇಳಿ ವಿಸ್ಮಿತನಾಗಿ ಭೋಜರಾಜನೊಡನೆ ಇಂತೆಂದ 

ನು:-ಎಲೈ ರಾಯನೇ! ಈ ಮೂವತ್ತೆರಡು ಪುತ್ತಯುಕ್ತವಾದ ಸಿಂಹಾ 

ಸನವು ನಮಗಸಾಧ್ಯವೆಂದು ಭೋಜರಾಯನ ಕೈವಿಡಿದು ಕೊಂಡು, ಅರಮ 

ನೆಗೆ ಹೋಗಲಾಗಿ; ಭೋಜರಾಯ ತನಗೆ ಸಾಧ್ಯವಾದಂಥ ವಸ್ತುಅಸಾಧ್ಯ 

ವಾಯಿತೆಂದು ಚಿಂತಿಸುತ್ತಿರುವಷ್ಟಲ್ಲೇ ಕೈಲಾಸದಿಂದ ವೀರಭದ್ರ ಮುಂ 

ತಾದ ಪ್ರಮಥಗಣಗಳು ಬಂದು, ಅಸಿಂಹಾಸನವ ಕೈಲಾಸಕ್ಕೆ ತೆಗೆದು 

ಕೊಂಡು ಹೋಗಲಾಗಿ ; ಭೋಜರಾಯ ಕಂಡು ಚಿತಶರ್ಮನ ಕೂಡೆ


-----------------------------------------------------------೧೩೭



ಇಂತೆಂದನು:-ಕೇಳೈ ಆಗದ ಕಾರ್ಯ ಏನು ಮಾಡಿದರೂ ಅಗಲರಿಯದು. 

ಆಗುವ ಕಾರ ತನಗೆ ತಾನೇ ಆಗುವುದೆಂಬ ಎರಡು ಬಗೆ ನೀತಿಯ ತಿಳಿದಾ 

ಗ್ಯೂ ವ್ಯಾಕುಲ ತಪ್ಪದು ಎನ್ನಲಾಗಿ; ಚಿತ್ರಶರ್ಮನು ಭೋಜರಾಯನ ಚತು 

ರೋಪಾಯದಿಂದೊಡಂಬಡಿಸಿ, ವ್ಯಸನಪಡಲಾಗದೆಂದ ಬಳಿಕ, ರಾಜೇಂದ್ರ 

ಚೂಡಾಮಣಿ ಭೋಜರಾಯನು ಮನಸ್ಸಿಗೆ ನೆಮ್ಮದಿ ಮಾಡಿಕೊಂಡು ಧಾರಾ 

ಪುರದಲ್ಲಿ ಸುರರಾಜ್ಯವ ಗೆಯ್ಯುತ್ತಿದ್ದನು. 


ಎಂದಿಂತು ಪಾರ್ವತಿಗೆ ಪರಮೇಶ್ವರನಿರೂಪಿಸಿದ 1ಬೃಹತ್ಕಥೆ1ಯೆಂಬ 

ಬತ್ತೀಸಪುತ್ತಳಿಯ ಪ್ರಸಂಗದ ಪ್ರಬಂಧವ ಲೋಕಕಾಂತನಾದ ವಿಕ್ರ 

ಮಾದಿತ್ಯರಾಯನ ವೀರತ್ವವ 2ಕನಕ ಪಾಂಡುರಂಗನಾಥನ ಕುಮಾರ 

ಭಾಳಲೋಚನನೆಂಬ ಕರಣ ಕವೀಶ್ವರನು ದೇವನಿಂದ ನಿರ್ಮಿಸಿದಂಥ ಈ 

ಧೈರಾಮೃತವ ಸುಜನರಾದವರು ವೇಳ ಕೇಳಿದರೆ ಇಷ್ಟಾರ್ಥ ಸಿದ್ಧಿಪುದೆಂದು 

ಪೇಳಿದನು.2 


ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ 

ವಾಮಲೋಚನೆಯೆಂಬ ಪುತ್ತಳಿಯು ಹೇಳಿದ ಮೂವತ್ತೆರ 

ಡನೆಯ ಕಥೆಗೆ ಮಂಗಳಂ,


ಬಸಪುತ್ತಳೀಕಥೆ ಸಂಪೂರ್ಣ೦.


............


ಪಾ-1. ಬ್ರಹ್ಮಸತ್ಕಥೆ.


2. ಕ್ಷೇಮೇಂದ್ರಭೂಭುಜಿಂ ಪೇಳ್ದ ಹದಿನೆಂಟನೆಯ ಲಂಬಕದ ಬತ್ತೀ 

ಸಪುತ್ತಳಿ ಕಧಾಪ್ರಬಂಧವ, ಇ೦ಪೊದವಿದ ಬೃಹತ್ಕಥಾರಸದೊಳುಳ್ಳ ಜಗಕ್ಕೆ ನೆಗಳ್ತೆ 

ವೆತ್ತ ಸಂದನುಪಮವಿಕ್ರಮಾರ್ಕನ ಸುವೀರತೆಯ, ಕಡುಭೋಗದೆಳ್ಗೆಯೆಂಬ ಅನನು 

ತ್ತಮಾದ ಪುತ್ತಳಿಯ ಸತ್ಕಥೆಯ ಕನಕಪಾಂಡುರಂಗನಾಥನ ಸುತ ಬಾಳಲೋಚ 

ನ ಕರಂ ಕವಿದೇವನಿಂದ ನೆಗಳ್ಚಿದಂ ಸಲೆ ಧೈರಾಮೃತಮಂ ನೆಗಳ್ತವಡೆದಿರ್ಪ ವಾಮ 

ನೂರಿಕ ಕಥಾದಿನೆಯಂ ಮೇಣಾಶಕುನ ಪ್ರಪಂಚಚಯಮಂ ಬತ್ತೀಸಸತ್ಪುತ್ರಿಕಾ 

ಸ್ತ್ರೀಲ ಸಿಂಹಾಸನದೊಂದು ಸತ್ಕಥೆಗಳಂ ದಕ್ಷಾಧ್ವರಧ್ವಂಸನುಜ್ಜ್ವಲಚಾರಿತ್ರವನೈದೆ 

ನಿರ್ಮಿಸಿದನೀ ಭಾಳೇಕ್ಷದೇವೋತ್ತಮಂ, ಕುಳಿರ್ವೆಲರಂತೆ ನಂದನ ತಮಾಲದ ಕಣ್ಗ 

ಳಂತೆ ಪುಷ್ಪಮಂಡಲನವಗಂಧದಂತೆ ಸುದಿದಿನವಿರಂತೆ ನಿಜಪ್ರಿಯಾಂಗನೋಜ್ವಲ 

ರತಿಯಂತೆ ಚಂದನದಂತೆ ಇದುಯಿನಸೌರಭದಂತೆ ಚಾರುಪುತ್ತಳಿಯ ಕಥಾರಸ 

ದಂತೆ ಜನರ ತಲೆದೂಗಿಸದೇ ನಿರಂತರಂ-ಎಂದು ಒಂದು ಪ್ರತಿಯಲ್ಲಿ ಇದೆ. 


ಇವು ಕೆಟ್ಟು ಹೋದ ಪದ್ಯಂಗಳಂತಿವೆ.

==================================


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ